Monday 1 August 2016

ಏಕರೂಪವೆಂದೊಡನೆ ಭಿನ್ನರಾಗವೇಕೆ?

ನಮ್ಮ ದೇಶದ ಉದ್ದಗಲಕ್ಕೂ ಮೂರು ಹೈವೋಲ್ಟೇಜ್ ತಂತಿಗಳು ಮೈಚಾಚಿಕೊಂಡು ನಿಂತಿವೆ. ಅವುಗಳಲ್ಲಿ ಯಾವುದನ್ನು ಮುಟ್ಟಿದರೂ, ಮುಟ್ಟಿದವರಿಗೆ ಮಾತ್ರವಲ್ಲ, ಇಡೀ ದೇಶಕ್ಕೇ ಕರೆಂಟ್ ಹೊಡೆದುಬಿಡುತ್ತದೆ! ಮೊದಲನೆಯದು, ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ, ಎರಡನೆಯದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನವನ್ನು ಕೊಡಮಾಡಿರುವ ಅನುಚ್ಛೇದ 370ಅನ್ನು ರದ್ದುಗೊಳಿಸುವುದು ಹಾಗೂ ಮೂರನೆಯದು ಏಕರೂಪ ನಾಗರಿಕ ಸಂಹಿತೆ! ಸ್ವಾತಂತ್ರ್ಯೋತ್ತರ ಭಾರತದಲ್ಲಿ ಯಾವೊಬ್ಬ ನೇತಾರನೂ ಈ ಮೂರು ತಂತಿಗಳನ್ನು ಮುಟ್ಟುವ ಧೈರ್ಯ ಮಾಡಿಲ್ಲ. ಮುಟ್ಟಿದ ಮರುಕ್ಷಣವೇ, ಅವನದಷ್ಟೇ ಅಲ್ಲ, ಅವನ ಇಡೀ ಪಕ್ಷದ ಭವಿಷ್ಯವೇ ಸುಟ್ಟು ಕರಕಲಾಗಿಬಿಡುವ ಸಂಭವವಿರುವುದರಿಂದ ಎಲ್ಲರೂ ಈ ತಂತಿಗಳ ಕೆಳಗೆ ಕತ್ತು ಬಗ್ಗಿಸಿಕೊಂಡೇ ನಡೆದಾಡುತ್ತಾರೆ! ಆಗೊಮ್ಮೆ ಈಗೊಮ್ಮೆ ಅದರಿಂದ 'ಚಟಾರ್' ಅಂತ ಒಂದು ಸಣ್ಣ ಕಿಡಿ ಹಾರಿದರೂ ಬೆಚ್ಚಿ ಬೀಳುತ್ತಾರೆ! ಆದರೆ ಈಗ ಇದ್ದಕ್ಕಿದ್ದ ಹಾಗೇ ಮೂರನೆಯ ತಂತಿಯನ್ನು ಮುಟ್ಟುವಂಥ ಸಂದರ್ಭವೊಂದು ಮೋದಿ ಸರ್ಕಾರಕ್ಕೆ ಬಂದೊದಗಿದೆ.

2015ರ ಅಕ್ಟೋಬರ್‍ನಲ್ಲಿ ನ್ಯಾಯಾಧೀಶರುಗಳಾದ ವಿಕ್ರಮಜಿತ್ ಸೇನ್ ಹಾಗೂ ಶಿವಕೀರ್ತಿ ಸಿಂಗ್‍ರನ್ನೊಳಗೊಂಡ ನ್ಯಾಯಪೀಠ ಮೋದಿ ಸರ್ಕಾರವನ್ನು ಮೊತ್ತಮೊದಲ ಬಾರಿ ಈ ಕುರಿತು ಪ್ರಶ್ನಿಸಿತ್ತು. ವೈಯಕ್ತಿಕ ಕಾನೂನುಗಳಿಂದ ಗೊಂದಲಗಳು ಹೆಚ್ಚುತ್ತಿವೆ. ಏಕರೂಪ ನಾಗರಿಕ ಸಂಹಿತೆಯ ಅನುಷ್ಥಾನ ಸಾಧ್ಯವೆನ್ನುವುದಾದರೆ ನೀವೇಕೆ ಅದನ್ನು ಕೈಗೆತ್ತಿಕೊಳ್ಳಬಾರದು?’ ಎಂದು ಪ್ರಶ್ನಿಸಿತ್ತು. ಕ್ರಿಶ್ಚಿಯನ್ನರ ವಿಚ್ಛೇದನದ ಕಾನೂನಿನ ಅಹವಾಲೊಂದನ್ನು ಪರಾಮರ್ಶಿಸುವಾಗ ಅದಕ್ಕೆ ತೊಡಕುಂಟಾಗಿ ಏಕರೂಪ ಸಂಹಿತೆಯ ಅಗತ್ಯ ಎದ್ದುಕಂಡಿತ್ತು. ಪರಿಣಾಮವಾಗಿ ಈಗ ಮೋದಿ ಸರ್ಕಾರ ಕಾನೂನು ಆಯೋಗಕ್ಕೆ ಈ ಕುರಿತು ಪರಿಶೀಲನೆ ನಡೆಸುವಂತೆ ಹೇಳಿದೆ. ಆಯೋಗದ ಮುಖ್ಯಸ್ಥ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಬಲಬೀರ್ ಸಿಂಗ್ ಚೌಹಾಣ್ ತೋಳೇರಿಸಿಕೊಂಡು ನಿಂತಿದ್ದಾರೆ. ಯಾವ ಯಾವ ಶಿಫಾರಸುಗಳನ್ನು ಮುಂದಿಡುತ್ತಾರೋ ಗೊತ್ತಿಲ್ಲ. ಹಾಗೊಂದು ಪಕ್ಷ ಅವರು ಏಕರೂಪ ಸಂಹಿತೆಯನ್ನು ಜಾರಿಗೆ ತರುವುದರ ಔಚಿತ್ಯವನ್ನು ಎತ್ತಿ ಹಿಡಿಯುತ್ತಾರೆ ಎಂದಿಟ್ಟುಕೊಳ್ಳೋಣ. ಆಗೇನಾಗಲಿದೆ ಗೊತ್ತೇ? ಹಿಂದೂ, ಕ್ರೈಸ್ತ, ಜೈನ, ಬೌದ್ಧರುಗಳು ಅಬ್ಬಬ್ಬಾ ಎಂದರೆ ಕುಳಿತಲ್ಲೇ ಸ್ವಲ್ಪ ಕೆಮ್ಮಿಯಾರು ಅಷ್ಟೇ. ಕೆಲವೇ ದಿನಗಳಲ್ಲಿ ದೇಶದ ಕಾನೂನಿನ ಹೊಸರಾಗದ ಶ್ರುತಿಹಿಡಿದು ದನಿಗೂಡಿಸುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಮುಸ್ಲಿಮರು ಹಾಡುವ ಅಪಸ್ವರದ ಭಿನ್ನರಾಗವಿದೆಯಲ್ಲ, ಅದನ್ನು ಕೇಳಲು ಇಡೀ ದೇಶವೇ ಸಜ್ಜಾಗಬೇಕಿದೆ. ಮೊದಲಿಗೆ, ಏಕರೂಪ ನಾಗರಿಕ ಸಂಹಿತೆಯ ಒಳ-ಹೊರಗನ್ನು ಸ್ಥೂಲವಾಗಿ ಅರ್ಥೈಸಿಕೊಂಡುಬಿಡೋಣ.

ನಮ್ಮನ್ನಾಳುತ್ತಿದ್ದ ಬ್ರಿಟಿಷರು 1833ರಲ್ಲಿ Government of India Act ಅನ್ನು ಚಾಲ್ತಿಗೆ ತಂದರು. ಅದರಡಿಯಲ್ಲಿ ಮೊದಲು ಅನುಷ್ಠಾನಕ್ಕೆ ಬಂದಿದು ಏಕರೂಪ ದಂಡ ಸಂಹಿತೆ (Indian Penal Code). ಅದರ ರಚನೆಯಾದಾಗ ಯಾವ ಕೋಲಾಹಲವೂ ಆಗಲಿಲ್ಲ. ಆದರೆ ಏಕರೂಪ ನಾಗರಿಕ ಸಂಹಿತೆಯ ಪ್ರಶ್ನೆ ಬಂದಾಗ ಬ್ರಿಟಿಷರು ತಾಟಸ್ಥ್ಯ ನೀತಿ ತಳೆದುಬಿಟ್ಟರು! ಏಕೆಂದರೆ ಅದರ ಪರಿಧಿಯೊಳಗೆ, ವಿವಾಹ, ವಿಚ್ಛೇದನ, ಉತ್ತರಾಧಿಕಾರ, ಆಸ್ತಿಯ ಪಾಲುದಾರಿಕೆ, ಜೀವನಾಂಶ ಮುಂತಾದ ಕೌಟುಂಬಿಕ ಅಂಶಗಳೆಲ್ಲ ಬರುತ್ತವೆ. ಅಷ್ಟರಲ್ಲಾಗಲೇ ಹಿಂದೂ, ಮುಸ್ಲಿಂ, ಸಿಖ್, ಜೈನ, ಬೌದ್ಧರುಗಳೆಲ್ಲ ತಮ್ಮ ಧರ್ಮಾನುಸಾರ ವೈಯಕ್ತಿಕ ಕಾನೂನುಗಳನ್ನು ರೂಪಿಸಿಕೊಂಡಾಗಿತ್ತು. ಆ ಜೇನುಗೂಡಿಗೆ ತಾನೇಕೆ ಕಲ್ಲೆಸೆಯಬೇಕು ಎಂದು ಸುಮ್ಮನಾಯಿತು ಬ್ರಿಟಿಷ್ ಸರ್ಕಾರ. 1946ರಲ್ಲಿ ನಮ್ಮ ಸಂವಿಧಾನ ರಚನೆಯ ಪ್ರಕ್ರಿಯೆ ಶುರುವಾಯಿತಲ್ಲ, ಆಗ ಬೇರೆಲ್ಲ ವಿಷಯಗಳಲ್ಲಿ ಆದ ಹಾಗೇ ಇದರ ಬಗ್ಗೆಯೂ ಪರ ವಿರೋಧ ಚರ್ಚೆಗಳಾದವು. ಏಕರೂಪ ಕಾಯ್ದೆ ಬೇಕೆಂಬ ಆಸೆಯೇ ಬಹುತೇಕರದ್ದು. ಆದರೆ ಆಯಾ ಧರ್ಮದವರಿಗೆ, ವೈಯಕ್ತಿಕ ಕಾನೂನಿನ ಚೌಕಟ್ಟನ್ನು ಮೀರಿ ಬನ್ನಿ ಎನ್ನುವುದು ಹೇಗೆ ಎಂಬ ಗೊಂದಲ! ಕೊನೆಗೆ ಈ ಕಾಯ್ದೆಯ ಅನುಷ್ಠಾನವನ್ನು ಕಡ್ಡಾಯಗೊಳಿಸದೆ, ಮುಂದೊಮ್ಮೆ ಅಳವಡಿಸಿಕೊಳ್ಳುವ ಗುರಿಯೊಂದಿಗೆ (Directive Principle), ಅನುಚ್ಛೇದ 44ರ ಹೆಸರಿನಡಿ ಸಂವಿಧಾನದೊಳಗೆ ತೂರಿಸಲಾಯಿತು.

ಆದರೆ ನೆಹರೂರಿಗೆ, ಕಡೇಪಕ್ಷ ಹಿಂದೂಗಳನ್ನಾದರೂ ಒಂದೇ ಕಾನೂನಿನಡಿ ತರುವ ಹಂಬಲವಿತ್ತು. ಆದ್ದರಿಂದಲೇ Hindu Code Bills ಎಂಬ ಹೆಸರಿನಲ್ಲಿ ಸಮಸ್ತ ಹಿಂದೂ ಸಮುದಾಯಕ್ಕೆ (ಮುಸ್ಲಿಂ, ಕ್ರಿಶ್ಚಿಯನ್, ಯಹೂದಿ ಹಾಗೂ ಪಾರ್ಸಿಗಳನ್ನು ಹೊರತುಪಡಿಸಿ) ಅನ್ವಯವಾಗುವಂಥ ಕಾನೂನುಗಳನ್ನು ಜಾರಿಗೆ ತರುವ ಪ್ರಯತ್ನಕ್ಕೆ ಕೈ ಹಾಕಿದರು. ಆಗ ಅವರಿಗೆ ಜೊತೆಯಾದವರು ಅಂಬೇಡ್ಕರ್! ವಿಚ್ಛೇದನಕ್ಕೆ ಅನುಮತಿ, ಹೆಣ್ಣುಮಕ್ಕಳಿಗೆ, ವಿಧವೆಯರಿಗೆ ಆಸ್ತಿಯಲ್ಲಿ ಹಕ್ಕು, ಮುಂತಾದ ಹೊಸ ಕ್ರಮಗಳ ಜಾರಿಗೆ ಕಾಂಗ್ರೆಸ್ಸಿಗರಿಂದಲೇ ಭಾರೀ ವಿರೋಧ ವ್ಯಕ್ತವಾಯಿತು. ಆದರೂ 1956ರ ಹೊತ್ತಿಗೆ ಎಲ್ಲ ಕಾನೂನುಗಳೂ ಅಧಿಕೃತವಾಗಿ ಜಾರಿಯಾದವು. ಮೊದಲಿಗೆ ಪ್ರತಿರೋಧ ತೋರಿದರೂ ಐಕ್ಯತೆ, ಸಮಾನತೆಯ ಕಾರಣಗಳನ್ನು ಕೊಟ್ಟಾಗ ಹಿಂದೂಗಳು ಮರುಮಾತಾಡದೆ ಒಪ್ಪಿಕೊಂಡರು! ಇನ್ನು, ಕ್ರಿಶ್ಚಿಯನ್ನರ ಆಚರಣೆ, ಕಾನೂನುಗಳಿಂದ ಯಾವತ್ತೂ ತೊಡಕುಗಳು ಉಂಟಾಗಲಿಲ್ಲ. ಆದರೆ ಮುಸ್ಲಿಮರ ವಿಷಯದಲ್ಲಿ ಮಾತ್ರ ಮೊದಲಿನಿಂದಲೂ ಗೊಂದಲವೇ.

ಹೀಗೇಕೆ? ನೆಹರೂ ಆಗಲೇ ಮುಸ್ಲಿಮರ ಮನವೊಲಿಸಬಹುದಿತ್ತಲ್ಲ, ಅಥವಾ ಬೇರೆ ಯಾರಾದರೂ ನಾಯಕರು ಅವರಿಗೆ ತಿಳಿಸಿಹೇಳಬಹುದಿತ್ತಲ್ಲ ಎಂದು ನಮಗೆ ಅನಿಸುವುದು ಸಹಜ. ಆದರೆ ಮುಸ್ಲಿಮರ ದೃಷ್ಟಿಯಿಂದ ಯೋಚಿಸಿದಾಗ ಮಾತ್ರ ಅವರ ನಿಲುವು, ದ್ವಂದ್ವಗಳು ಅರ್ಥವಾಗಬಹುದೇನೋ. ಮೊದಲಿನಿಂದಲೂ ಭಾರತೀಯ ಮುಸ್ಲಿಮರಿಗೆ ಬೇರೆಯೇ ಪರಿಭಾಷೆ ಹಾಕಿಕೊಟ್ಟು, ಅವರು ಇತರೆ ಭಾರತೀಯರ ಜೊತೆ ಬೆರೆಯದಂತೆ ನೋಡಿಕೊಂಡ ದೊಡ್ಡ ದೊಡ್ಡ ತಲೆಗಳಿದ್ದವು ಎನ್ನುವುದನ್ನು ನಾವು ಆರ್ಥಮಾಡಿಕೊಳ್ಳಬೇಕು. ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಹುಟ್ಟಿಗೆ ಕಾರಣರಾದ ಸರ್ ಸಯ್ಯದ್ ಅಹ್ಮದ್ ಖಾನ್, ಮೊಹಮ್ಮದ್ ಅಲಿ ಜಿನ್ನಾ, ಚೌಧರಿ ರೆಹಮತ್ ಅಲಿ, ಕವಿ ಇಕ್ಬಾಲ್ ಇವರುಗಳ ಪ್ರತ್ಯಕ್ಷ, ಪರೋಕ್ಷ ಕುಮ್ಮಕ್ಕು ಸಾಮಾನ್ಯ ಮುಸ್ಲಿಮರನ್ನು ಪ್ರಚೋದಿಸಿತು. ಮುಸ್ಲಿಂ ಲೀಗ್‍ಅನ್ನು ಹುಟ್ಟುಹಾಕಿ ಭಾರತದ ದೇಹ, ಮನಸ್ಸುಗಳು ತುಂಡಾಗುವಂತೆ ಮಾಡಿತು.

ಇದು ವ್ಯಕ್ತಿಗಳ ಮಾತಾಯಿತು. ಇನ್ನು ಅವರ ಧರ್ಮಗ್ರಂಥಗಳು? ಕಾನೂನಿನ ಗೋಜಲು ಬಗೆಹರಿಯದಿರುವುದೇ ಇಲ್ಲಿ. ಪವಿತ್ರ ಕುರಾನ್‍ನಲ್ಲಿ ಎಲ್ಲ ನಿಯಮಗಳೂ ಅಡಕವಾಗಿಬಿಟ್ಟಿವೆ ಎಂದರೆ ನಂಬುತ್ತೀರಾ? ದಂಡ ಸಂಹಿತೆ, ನಾಗರಿಕ ಸಂಹಿತೆಗಳು ಹೇಳುವ ಶಿಕ್ಷೆ, ನಿಯಮಗಳೆಲ್ಲ ಅಲ್ಲೇ ಲಭ್ಯವಿದೆ. ಒಂದು ಉದಾಹರಣೆಯನ್ನು ಗಮನಿಸಿ. 'ದೇವರ ನ್ಯಾಯಾಲಯದಲ್ಲಿ ಪ್ರವಾದಿಗಳೇ ಮುಖ್ಯ ನ್ಯಾಯಾಧೀಶರು. ಏನೇ ಸಮ್ಮತಿ, ಅಸಮ್ಮತಿಗಳಿರಲಿ, ಅವರನ್ನು ಬಿಟ್ಟು ಅನ್ಯರ ಬಳಿ ಹೋಗತಕ್ಕದ್ದಲ್ಲ.' ಎಂಬರ್ಥದ ಆಯತ್‍ಗಳು ಕುರಾನ್‍ನ ನಾಲ್ಕನೇ ಸುರಾ(ಅಧ್ಯಾಯ)ದಲ್ಲಿವೆ. ಕುರಾನ್ ಹಾಗೂ ಹದಿತ್‍ಗಳನ್ನು (ಪ್ರವಾದಿಗಳ ಆಚರಣೆಗಳ ಸಂಗ್ರಹ) ಸೇರಿಸಿಯೇ ಷರಿಯತ್ ಕಾನೂನನ್ನು ರಚಿಸಿರುವುದು. ದಿನವೂ ಕುರಾನ್‍ ಪಠಣೆ ಮಾಡುವ ಕಟ್ಟಾ ಮುಸ್ಲಿಮರು ಅದನ್ನು ಪಾಲಿಸಲೇಬೇಕು ತಾನೇ? ಪ್ರವಾದಿಗಳ ಮಾತನ್ನು ಉಲ್ಲಂಘಿಸಲಾದೀತೇ? ಷರಿಯತ್ ಅಲ್ಲದೆ ಬೇರೆ ಕಾನೂನನ್ನು ಒಪ್ಪಿಕೊಳ್ಳಲಾದೀತೇ? ವಿಚ್ಛೇದನದ ಬಗ್ಗೆಯೂ ಅಷ್ಟೇ. 65ನೇ ಅಧ್ಯಾಯ ಪೂರ್ತಿ ಅದಕ್ಕೇ ಮೀಸಲಾಗಿದೆ. ಅಕಸ್ಮಾತ್ ಆ ಸಮಯದಲ್ಲಿ ಹೆಂಡತಿ ಗರ್ಭಿಣಿಯಾಗಿದ್ದರೆ ಏನು ಮಾಡಬೇಕು ಎಂಬ ಅಂಶವನ್ನೂ ಬಿಡಿಸಿ ಹೇಳಲಾಗಿದೆ! ದತ್ತು ಸ್ವೀಕಾರ ಆಕ್ಷೇಪಾರ್ಹ ಎಂಬುದನ್ನೂ ತನ್ನ 33ನೇ ಅಧ್ಯಾಯದಲ್ಲಿ ಸ್ಪಷ್ಟವಾಗಿ ಹೇಳುತ್ತದೆ ಕುರಾನ್. ಇನ್ನು ಪಿತ್ರಾರ್ಜಿತ ಆಸ್ತಿ, ಹೆಂಡತಿ, ಮಗ ಹಾಗೂ ಮಗಳಲ್ಲಿ ಹೇಗೆ ಭಾಗವಾಗಬೇಕು ಎಂಬ ಕರಾರುವಾಕ್ ಲೆಕ್ಕಾಚಾರ ನಾಲ್ಕನೇ ಅಧ್ಯಾಯದ ಹನ್ನೊಂದು ಹಾಗೂ ಹನ್ನೆರಡನೇ ಆಯತ್‍ಗಳಲ್ಲಿ ಸಿಗುತ್ತದೆ! ಹೆಣ್ಣು ಮಕ್ಕಳ ಬದುಕನ್ನು ಅನಿಶ್ಚಿತತೆಗೆ ದೂಡುವ ಮೂರು ಬಾರಿ ತಲಾಕ್ ಹೇಳುವ ಕ್ರಮವೂ ಷರಿಯತ್‍ನ ಒಂದು ಭಾಗವೇ. ಒಂದನ್ನು ಮಾತ್ರ ಆಚರಿಸಿ ಮತ್ತೊಂದನ್ನು ಬಿಡುವುದು ಮುಸ್ಲಿಮರಿಗಾದರೂ ಹೇಗೆ ಸಾಧ್ಯ?

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಈ ಎಲ್ಲ ಅಂಶಗಳೂ ಬದಲಾಗುವುದು ಖಂಡಿತ! ಆಗ, ಕುರಾನ್‍ಗೆ ದ್ರೋಹ ಬಗೆಯುತ್ತಿದ್ದೇವೆಂಬ ಭಾವ ಕಾಡುವುದು ಸಹಜವಲ್ಲವೇ? ಆದ್ದರಿಂದಲೇ ಪ್ರತಿ ಸಲವೂ ಈ ವಿಷಯ ಪ್ರಸ್ತಾಪವಾದಾಗ, ಕಾನೂನು ಪಾಲಕ ಉಲೇಮಾಗಳು ಅಧೀರರಾಗುತ್ತಾರೆ. ನೀವೇ ಯೋಚಿಸಿ. ತಲಾಕ್ ಹೇಳುವ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಯಾವ ಗಂಡಸು ತಾನು ಪ್ರೀತಿಸುವ ಹೆಂಡತಿಯನ್ನು ತೊರೆಯುತ್ತಾನೆ? ದೂರದ ಸೌದಿಯಲ್ಲಿ ಶೇಖ್‍ಗಳು ಕೈಗೊಬ್ಬಳು, ಕಾಲಿಗೊಬ್ಬಳನ್ನು ಇಟ್ಟುಕೊಳ್ಳಬಹುದು. ಹಾಗಂತ ಭಾರತೀಯ ಮುಸ್ಲಿಮನೊಬ್ಬನಿಗೆ ಎಷ್ಟು ಜನ ಹೆಂಡತಿಯರಿರುತ್ತಾರೆ?
ದೇಶವನ್ನು ಒಗ್ಗೂಡಿಸಲು ಏಕರೂಪ ನಾಗರಿಕ ಸಂಹಿತೆಯ ಅಗತ್ಯ ಖಂಡಿತ ಇದೆ. ಹಾಗೇ, ಭಾರತದ ಮಟ್ಟಿಗೆ ಷರಿಯತ್ ಕಾನೂನು ಎಷ್ಟು ಪೂರಕ-ಮಾರಕ ಎನ್ನುವುದನ್ನು ಇಡೀ ಮುಸ್ಲಿಂ ಸಮುದಾಯಕ್ಕೆ ಮನದಟ್ಟು ಮಾಡಿಸುವ ಅಗತ್ಯವೂ ಇದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಿಲ್ಲ ಅಷ್ಟೇ! ಆವತ್ತು ಜಿನ್ನಾ ಶುರುಮಾಡಿ ಹೋದ ಕೆಲಸವನ್ನು ಇವತ್ತು ಒವೈಸಿ ಸಹೋದರರು ಮುಂದುವರೆಸುತ್ತಿದ್ದಾರೆ. ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ, ತನ್ನನ್ನು ತಾನೇ ಮುಸ್ಲಿಂ ಧರ್ಮಗುರು ಎಂದು ಕರೆದುಕೊಳ್ಳುವ ಜಾಕಿರ್ ನಾಯಕ್! ಪ್ರತಿಯೊಬ್ಬ ಮುಸ್ಲಿಮನೂ ಭಯೋತ್ಪಾದಕನಾಗಬೇಕು ಎಂದು ಮುಕ್ತವಾಗೇ ಹೇಳಿಕೊಂಡು ತಿರುಗಾಡುವ ಅವನನ್ನು ಹಲವು ದೇಶಗಳು ಕತ್ತು ಹಿಡಿದು ಹೊರದಬ್ಬಿವೆ! ಭಾರತದಲ್ಲಿ ಮಾತ್ರ ಅವನಿಗೆ ಆರತಿ ಎತ್ತಿ ಬರಮಾಡಿಕೊಳ್ಳುವವರ ದಂಡೇ ಇದೆ! ಆ ಸಾಲಿನಲ್ಲಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ ಕಾಂಗ್ರೆಸ್‍ನ ದಿಗ್ವಿಜಯ್ ಸಿಂಗ್! ಮೊನ್ನೆ ಬಾಂಗ್ಲಾದೇಶದ ಢಾಕಾದಲ್ಲಿ ಅಟ್ಟಹಾಸ ಮೆರೆದ ಭಯೋತ್ಪಾದಕರು ಸ್ಫೂರ್ತಿ ಪಡೆದದ್ದು ಜಾಕಿರ್ ನಾಯಕ್‍ನ ಮಾತುಗಳನ್ನು ಕೇಳಿಯೇ ಅಂತೆ! ನಾವೇ ಬೇರೆ ಉಳಿದವರೇ ಬೇರೆ ಎಂಬ ವಿಷಬೀಜವನ್ನು ಕಾಲಕಾಲಕ್ಕೂ ಬಿತ್ತುವ ಇಂಥ ರಕ್ಕಸರನ್ನು ಹತ್ತಿಕ್ಕದೆ ಯಾವ ಕಾನೂನನ್ನು ಆಚರಣೆಗೆ ತರಲು ಸಾಧ್ಯ?


ಪೇಪರಿನ ಮೇಲೆ ನಿಯಮ ರೂಪಿ ಅಕ್ಷರಗಳನ್ನು ಮೂಡಿಸುವುದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ಅದು ಸರಿಯಾಗಿ ಅಚ್ಚೊತ್ತಬೇಕಾಗಿರುವುದು ಹೃದಯಗಳಲ್ಲಿ! ಆಗಲೇ ಈ ಭಿನ್ನರಾಗ ಹೋಗಿ ಮುಸ್ಲಿಮರೂ ಶ್ರುತಿಶುದ್ಧವಾಗಿ ಇತರರೊಡನೆ ದನಿಗೂಡಿಸಲು ಸಾಧ್ಯ! ಹಾಗೆ ಮೊದಲ ಮಧುರ ಸ್ವರವನ್ನು ಹೊರಡಿಸಬಲ್ಲ ಮುಸ್ಲಿಮರು ಯಾರಿದ್ದೀರಿ? ದಯವಿಟ್ಟು ಮುಂದೆ ಬನ್ನಿ!

Monday 27 June 2016

ಗಂಟಲಲ್ಲೇ ಉಳಿದ ಎನ್‍ಎಸ್‍ಜಿ ಎಂಬ ಬಿಸಿತುಪ್ಪ!

ಅದು 1974ರ ಮೇ 18. ಆವತ್ತು ಬುದ್ಧ ಜಯಂತಿ. ಭಾಭಾ ಪರಮಾಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಗೆ ಬೇರೆಯದೇ ಕಾರಣಕ್ಕೆ ಸಡಗರ. ತಮ್ಮ ಪ್ರಯತ್ನ ಕೈಗೂಡುತ್ತದೋ ಇಲ್ಲವೋ ನೋಡಿಬಿಡುವ ಕಾತರ. ಶಕ್ತಿ -1 ಹೆಸರಿನ ಪರಮಾಣು ಬಾಂಬ್ ಅನ್ನು ಸ್ಫೋಟಿಸಲು ಪೋಖ್ರಾನ್‍ನ ಮರುಭೂಮಿಯಲ್ಲಿ ಜಾಗವನ್ನು ಅದಾಗಲೇ ಗುರುತಿಸಿ ಆಗಿತ್ತು. ಮೂರು ವರ್ಷಗಳ ಹಿಂದಷ್ಟೇ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ್ದರೂ, ಸಮಯದಲ್ಲಿ ತನ್ನ ನೆರವಿಗೆಂದು ಸೋವಿಯತ್ ಸರ್ಕಾರ ಕಳಿಸಿದ್ದ ಅಣ್ವಸ್ತ್ರಗಳ ಪಡೆಯನ್ನು ಕಂಡು ಭಾರತ ಅಸೂಯೆ ಪಟ್ಟಿತ್ತು. ತನ್ನ ಹತ್ತಿರ ಅಣ್ವಸ್ತ್ರಗಳಿಲ್ಲವೆಂಬ ಕೊರಗು ಭಾರತವನ್ನು ಕಾಡುತ್ತಲೇ ಇತ್ತು. ಹಾಗಂತ ಅದೇನೂ ಕೈಕಟ್ಟಿಕೊಂಡು ಸುಮ್ಮನೆ ಕೂತಿರಲಿಲ್ಲ.



1954ರಲ್ಲೇ ಡಾ. ಹೋಮಿ ಜಹಾಂಗೀರ್ ಭಾಭಾ ಭಾರತವನ್ನು ಅಣ್ವಸ್ತ್ರಗಳ ರಾಷ್ಟ್ರವನ್ನಾಗಿಸುವ ಕನಸು ಕಾಣತೊಡಗಿದ್ದರು. ಅವರ ಆಶಯದಂತೆಯೇ ನುರಿತ ವಿಜ್ಞಾನಿಗಳ ದಂಡೊಂದು ತಯಾರಾಗುತ್ತಿತ್ತು. ಬಾಂಬ್‍ನ ತಯಾರಿಕೆಯಿಂದ ಹಿಡಿದು, ಪರಮಾಣು ರಿಯಾಕ್ಟರ್ ತಯಾರಿಕೆ, ಅದರ ಇಂಧನ ಪ್ಲುಟೋನಿಯಂ ಅನ್ನು ಸಂಪಾದಿಸುವ ಬಗೆ ಹೇಗೆ ಎಂಬೆಲ್ಲ ಲೆಕ್ಕಾಚಾರಗಳೂ ಅವರ ಮನಸ್ಸಿನಲ್ಲಿ ನಡೆಯುತ್ತಿದ್ದವು. ಪರಮಾಣು ಶಕ್ತಿಯ ಬಗ್ಗೆ ಜನರ ಮನಸ್ಸಿನಲ್ಲಿದ್ದ ಗೊಂದಲವನ್ನು ದೂರ ಮಾಡಲು ಜನರನ್ನುದ್ದೇಶಿಸಿ ರೇಡಿಯೋದಲ್ಲಿ ಮಾತನಾಡಲೂ ಭಾಭಾ ಹಿಂಜರಿಯಲಿಲ್ಲ! ಅದರ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಷ್ಟೇ ಮುತುವರ್ಜಿಯಿಂದ ರಾಜಕಾರಣಿಗಳಿಗೂ ವಿವರಿಸಿದರು. ಪರಿಣಾಮವೇ ಮೊದಲ ಅಣುಪರೀಕ್ಷೆಯ ತಯಾರಿ. ಆಗ ಅವರ ಹೆಗಲಿಗೆ ಹೆಗಲು ಕೊಟ್ಟು ನಿಂತವರು ಖ್ಯಾತ ವಿಜ್ಞಾನಿ ಡಾ. ರಾಜಾರಾಮಣ್ಣ. ಆದರೆ ದುರಾದೃಷ್ಟ. 1966ರ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಭಾಭಾ ಸಾವನ್ನಪ್ಪಿದರು. ಅವರ ಕನಸನ್ನು ಜೀವಂತವಾಗಿರಿಸಿದರು ರಾಜಾರಾಮಣ್ಣ.

ಹೋಮಿ ಸೇತ್ನಾ, ಪಿ.ಕೆ ಅಯ್ಯಂಗಾರ್, ಆರ್ ಚಿದಂಬರಂ ಮುಂತಾದ ವಿಜ್ಞಾನಿಗಳನ್ನು ಬೆನ್ನಿಗಿಟ್ಟುಕೊಂಡು ಅಣು ಪರೀಕ್ಷೆಯ ತಯಾರಿಯಲ್ಲಿ ನಿರತರಾದ ರಾಜಾರಾಮಣ್ಣರಿಗೆ ಬೆಂಬಲವಾಗಿ ನಿಂತರು ಇಂದಿರಾ ಗಾಂಧಿ! ಇಡೀ ಕಾರ್ಯಾಚರಣೆ ಗುಟ್ಟೋ ಗುಟ್ಟು! ಸುಮಾರು 75 ವಿಜ್ಞಾನಿಗಳು, ಇಂದಿರಾ ಗಾಂಧಿ, ಅವರ ಆಪ್ತ ಸಲಹೆಗಾರರು ಹಾಗೂ ಸೈನ್ಯದ ಮುಖ್ಯಸ್ಥರನ್ನು ಬಿಟ್ಟರೆ ಬೇರಾರಿಗೂ ಈ ವಿಷಯ ಗೊತ್ತಿರಲಿಲ್ಲ. ಅಂದಿನ ರಕ್ಷಣಾ ಮಂತ್ರಿ ಜಗಜೀವನರಾಂ ಅವರ ಕಿವಿಗೆ ವಿಷಯ ಬಿದ್ದಿದ್ದೂ ಎಲ್ಲ ಮುಗಿದ ಮೇಲೇ! ಪರೀಕ್ಷೆಗೆ ಬೇಕೆಂದೇ ಬುದ್ಧ ಜಯಂತಿಯನ್ನು ಆರಿಸಿಕೊಂಡಿದ್ದರು. ಭಾರತದ ಉದ್ದೇಶ ಶಾಂತಿ ಸ್ಥಾಪನೆ ಎನ್ನುವುದನ್ನು ಸಾಂಕೇತಿಕವಾಗಿ ಜಗತ್ತಿಗೆ ಸಾರಲು! ಆದ್ದರಿಂದಲೇ ಕಾರ್ಯಾಚರಣೆಗೆ 'ಸ್ಮೈಲಿಂಗ್ ಬುದ್ಧ' ಎಂದೇ ಹೆಸರಿಡಲಾಗಿತ್ತು.



ಆವತ್ತು ನಮ್ಮ ಅಣು ಬಾಂಬ್ ನೆಲದೊಳಗೆ (ಸುಮಾರು 107 ಮೀಟರ್ ಆಳದಲ್ಲಿ) ಸಿಡಿದು 70 ಮೀಟರ್ ವ್ಯಾಸದಷ್ಟು ಭೂಮಿ ಕಂಪಿಸಿ ಕುಸಿಯಿತು ನೋಡಿ, ಆಗ ಅಮೆರಿಕ ಎಚ್ಚೆತ್ತುಕೊಂಡಿತು. ಪಾಕಿಸ್ತಾನದ ಕರುಳಿನಲ್ಲಂತೂ ಮೆಣಸಿನಕಾಯಿ ಕಿವುಚಿದ ಹಾಗಾಯಿತು. ಪರಮಾಣು ಪೂರೈಕೆದಾರರ ಸಂಘ ಅಥವಾ ಎನ್‍ಎಸ್‍ಜಿ ಹುಟ್ಟಿಕೊಂಡಿದ್ದೇ ಆಗ! ಸೋವಿಯತ್ ಒಕ್ಕೂಟ, ಅಮೆರಿಕ, ಫ್ರಾನ್ಸ್, ಜಪಾನ್ ಸೇರಿದಂತೆ ಏಳು ರಾಷ್ಟ್ರಗಳು ಮೊದಲಿಗೆ ಅದರ ಸದಸ್ಯತ್ವ ಪಡೆದವು. ಉಳಿದ ರಾಷ್ಟ್ರಗಳು ಎನ್‍ಎಸ್‍ಜಿ ತಂಡಕ್ಕೆ ಸೇರ್ಪಡೆಯಾಗಬೇಕೆಂದರೆ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ (Non-Proliferation Treaty) ಸಹಿ ಹಾಕುವುದು ಅನಿವಾರ್ಯ ಎಂಬ ನಿಯಮವನ್ನು ತಂದಿದ್ದೂ ಆ ರಾಷ್ಟ್ರಗಳೇ.

ಎನ್‍ಎಸ್‍ಜಿ ತಂಡಕ್ಕೆ ಸೇರಿದರೆ ಅದರದ್ದೇ ಆದ ಲಾಭವಿದೆ. ಆ ರಾಷ್ಟ್ರಗಳು ಅಣ್ವಸ್ತ್ರಗಳ ದುರುಪಯೋಗಕ್ಕಿಳಿಯುವುದಿಲ್ಲ. ತಾವಾಗೇ ಯಾವ ರಾಷ್ಟ್ರಗಳ ಮೇಲೂ ಅಣ್ವಸ್ತ್ರ ಯುದ್ಧ ಘೋಷಿಸುವುದಿಲ್ಲ. ಪರಮಾಣು ತಂತ್ರಜ್ಞಾನವನ್ನು ವಿಜ್ಞಾನ, ವೈದ್ಯಕೀಯ ಮುಂತಾದ ಜನೋಪಯೋಗಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತವೆ. ಆದ್ದರಿಂದಲೇ ಈಗ ವಿಶ್ವದ 48 ದೇಶಗಳು ಎನ್‍ಎಸ್‍ಜಿ ಸೇರಿವೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿ ಪರಮಾಣು ತಂತ್ರಜ್ಞಾನದ ಲಾಭ ಪಡೆಯುತ್ತಿವೆ. ಭಾರತದ ಉದ್ದೇಶವೂ ಅಣ್ವಸ್ತ್ರದ ಸದ್ಬಳಕೆಯೇ ತಾನೇ, ಹಾಗಾದರೆ ನಾವ್ಯಾಕೆ ಆ ಒಪ್ಪಂದಕ್ಕೆ ಸಹಿ ಹಾಕುತ್ತಿಲ್ಲ? ಬಿಡಿಸಲಾಗದ ಒಗಟಿರುವುದೇ ಅಲ್ಲಿ!

ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದದ ಪ್ರಕಾರ 1970ಕ್ಕೆ ಮೊದಲೇ ಅಣ್ವಸ್ತ್ರ ಪರೀಕ್ಷೆ ನಡೆಸಿದ ಐದು ದೇಶಗಳನ್ನು ಬಿಟ್ಟು ಉಳಿದ ದೇಶಗಳು ಯಾವ ಕಾರಣಕ್ಕೂ ಅಣ್ವಸ್ತ್ರಗಳನ್ನು ಹೊಂದುವಂತಿಲ್ಲ! ಅಣ್ವಸ್ತ್ರ ಇಟ್ಟುಕೊಳ್ಳುವುದು ಹಾಗಿರಲಿ, ಒಂದು ಸಣ್ಣ ಪರೀಕ್ಷೆಯನ್ನೂ ನಡೆಸುವ ಹಾಗಿಲ್ಲ! ರಿಯಾಕ್ಟರ್‍ಗಳು, ಅದರಲ್ಲಿ ಬಳಕೆಯಾಗುವ ಇಂಧನ, ಪರಮಾಣು ಕೇಂದ್ರದಲ್ಲಿ ನಡೆಯುವ ಚಟುವಟಿಕೆಗಳೆಲ್ಲದರ ಮೇಲೂ ಈ ಐದು ದೇಶಗಳು ಸದಾ ಕಣ್ಣಿಟ್ಟಿರುತ್ತವೆ. ಅವುಗಳ ಅಣತಿಯಿಲ್ಲದೆ ಬೇರೆ ದೇಶಗಳೊಂದಿಗೆ ಪರಮಾಣು ತಂತ್ರಜ್ಞಾನದ ಅಥವಾ ಇಂಧನದ ಆಮದು, ರಫ್ತು ಯಾವುದೂ ಸಾಧ್ಯವಿಲ್ಲ! ಏನೇ ಮಾಡಿದರೂ ಜಗಜ್ಜಾಹೀರು ಮಾಡಲೇಬೇಕು. ಎಲ್ಲಕ್ಕಿಂತ ಆತಂಕಕಾರಿ ಸಂಗತಿಯೆಂದರೆ ಆ ಐದು ದೇಶಗಳಲ್ಲಿ ಚೀನಾ ಕೂಡ ಸೇರಿದೆ! ಈಗಾಗಲೇ ಒಂದು ಯುದ್ಧದಲ್ಲಿ ನಮಗೆ ಹೀನಾಯ ಸೋಲಿನ ರುಚಿ ತೋರಿಸಿರುವ, ತಾನು ಮಾತ್ರ ಭಾರೀ ಸಾಮರ್ಥ್ಯದ ಅಣ್ವಸ್ತ್ರ ಇಟ್ಟುಕೊಂಡಿರುವ ಚೀನಾದ ಎದುರು ನಾವು ಬರಿಗೈಲಿ ಕೂತಿರಲು ಹೇಗೆ ಸಾಧ್ಯ?

ಜೊತೆಗೆ ಚೀನಾ ಮತ್ತೂ ಒಂದು ಕೆಲಸ ಮಾಡುತ್ತಿದೆ. ಪಾಕಿಸ್ತಾನಕ್ಕೆ ನಿಯಮಿತವಾಗಿ ಪರಮಾಣು ತಂತ್ರಜ್ಞಾನವನ್ನು ರಫ್ತು ಮಾಡುತ್ತಿದೆ. ಪಾಕಿಸ್ತಾನದಲ್ಲಿ ಒಂದೆರಡಲ್ಲ, ಒಟ್ಟು ಆರು ಪರಮಾಣು ರಿಯಾಕ್ಟರ್‍ಗಳನ್ನು ಸ್ಥಾಪಿಸಲು ನೆರವಾಗುತ್ತಿದೆ! ಭಾರತ ಒಂದು ಕ್ಷಿಪಣಿ ಪರೀಕ್ಷೆ ನಡೆಸಿದರೂ ಸಾಕು, ತಾನೂ ನಿಂತನಿಲುವಿನಲ್ಲೇ ಕ್ಷಿಪಣಿ ಉಡಾಯಿಸುವ ಪಾಕಿಸ್ತಾನ ಇನ್ನು ಈ ವಿಷಯದಲ್ಲಿ ಸುಮ್ಮನಿರುತ್ತದೆಯೇ? ಚೀನಾದ ತಂತ್ರಗಾರಿಕೆ ಒಂದು ಕಡೆ, ಪಾಕಿಸ್ತಾನದ ತೀರದ ಹಗೆತನ ಇನ್ನೊಂದು ಕಡೆ. ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿಬಿಟ್ಟರೆ ನಮ್ಮ ಸುರಕ್ಷತೆಯ ಗತಿಯೇನು? ಇದು ಭಾರತದ ವಾದ. ಇದೇ ವಾದವನ್ನೇ ಪಾಕಿಸ್ತಾನವೂ ಮಾಡುತ್ತಿದೆ. ಅದರ ಮಾತಿಗೆ ಪುಷ್ಟಿ ನೀಡುವ ಹಾಗೆ ನಾವು ಎರಡನೆಯ ಸಲವೂ ಅಣು ಪರೀಕ್ಷೆ ಮಾಡಿಬಿಟ್ಟೆವಲ್ಲ! 1998ರಲ್ಲಿ!



ಅದಂತೂ ಇನ್ನೂ ರೋಚಕ ಕಥೆ. ದೇಶದ ಅಭಿವೃದ್ಧಿಯ ಕನಸನ್ನು ಕಂಡ ಮಹಾನುಭಾವ ಪಿ.ವಿ ನರಸಿಂಹರಾವ್‍ಗೆ ಮತ್ತೊಂದು ಪರಮಾಣು ಪರೀಕ್ಷೆ ಮಾಡಿಬಿಡುವ ಆತುರ. ಆದರೆ ಅಮೆರಿಕ ಗದರಿಸಿದ ಕಾರಣಕ್ಕೆ, ಇನ್ನೆಲ್ಲಿ ಆರ್ಥಿಕ ಉದಾರೀಕರಣಕ್ಕೆ ಪೆಟ್ಟು ಬಿದ್ದೀತೋ ಎಂಬ ಕಾರಣಕ್ಕೆ ಕೊನೆ ಕ್ಷಣದಲ್ಲಿ ಸುಮ್ಮನಾದರು. ಆದರೆ ಈ ವಿಷಯವಾಗಿ ಐ.ಕೆ ಗುಜರಾಲ್ ಹಾಗೂ ವಾಜಪೇಯಿಯವರ ಕಿವಿ ಊದಿದರು. ವಾಜಪೇಯಿಯವರು ಅಧಿಕಾರಕ್ಕೆ ಬಂದಾಗ ಭರದ ಸಿದ್ಧತೆ ಶುರುವಾಯಿತು. ಅಮೆರಿಕದ ಬೇಹುಗಾರಿಕಾ ಉಪಗ್ರಹ ತಮ್ಮ ಮೇಲೆ ಕಣ್ಣಿಟ್ಟಿದೆ ಎಂದು ಗೊತ್ತಿದ್ದರೂ ಅದನ್ನು ಯಶಸ್ವಿಯಾಗಿ ಯಾಮಾರಿಸಿದರು. ವಿಜ್ಞಾನಿಗಳೆಲ್ಲ ಸೈನಿಕರ ಸಮವಸ್ತ್ರಗಳನ್ನು ಧರಿಸಿ ಪೋಖ್ರಾನ್‍ನಲ್ಲಿ ಜಮಾಯಿಸಿದರು. ಬಾಂಬ್‍ಗಳ ಸಾಗಾಣಿಕೆ, ಜೋಡಣೆ, ಎಲ್ಲ ನಡೆಯುತ್ತಿದ್ದುದೂ ನಟ್ಟಿರುಳಿನಲ್ಲೇ. ಅಂತೂ ಪರೀಕ್ಷೆ ಮುಗಿಯುವವರೆಗೂ ಯಾರೊಬ್ಬರಿಗೂ ಗೊತ್ತಾಗಲಿಲ್ಲ. ಆಮೇಲೆ ಅಮೆರಿಕದಿಂದ ದಿಗ್ಬಂಧನ, ಉಳಿದ ದೇಶಗಳ ಕಣ್ಣಲ್ಲಿ ಖಳನಾಯಕನೆಂಬ ಪಟ್ಟ! ಚೀನಾ ಹಾಗೂ ಪಾಕಿಸ್ತಾನಗಳಿಗೆ ನಮ್ಮ ವಿರುದ್ಧ ದನಿಯೆತ್ತಲು ಇಷ್ಟೇ ಸಾಕಾಯಿತು. ನಾವು ಪರೀಕ್ಷೆ ನಡೆಸಿದ ಒಂದೇ ತಿಂಗಳೊಳಗೆ ಪಾಕಿಸ್ತಾನವೂ ತನ್ನ ಪರಮಾಣು ಶಕ್ತಿಯನ್ನು ಪ್ರದರ್ಶಿಸಿ ತಾನೇನೂ ಕಡಿಮೆಯಲ್ಲ ಎಂದು ಸಾರಿತು. ಆದರೂ ಮೊದಲಿಗೆ ಶುರುವಿಟ್ಟುಕೊಂಡಿದ್ದು ಭಾರತ, ಆದ್ದರಿಂದ ಅದನ್ನು ಎನ್‍ಎಸ್‍ಜಿ ಗುಂಪಿಗೆ ಸೇರಿಸಿಕೊಳ್ಳಬೇಡಿ ಎಂಬ ವರಾತ ಶುರು ಮಾಡಿತು. ಅದನ್ನು ಸೇರಿಸಿಕೊಂಡರೆ ತನ್ನನ್ನೂ ಸೇರಿಸಿಕೊಳ್ಳಬೇಕಾಗುತ್ತದೆ ಎಂಬ ಧಮಕಿಯನ್ನೂ ಹಾಕಿತು. ಅದರ ಬೆಂಬಲಕ್ಕೆ ನಿಂತಿತು ಚೀನಾ. ಅಂದಿನಿಂದ ಇಂದಿನವರೆಗೂ ಈ ಅಘೋಷಿತ ಯುದ್ಧ ನಡೆಯುತ್ತಲೇ ಬಂದಿದೆ.

ಐದು ರಾಷ್ಟ್ರಗಳನ್ನು ಹೊರತುಪಡಿಸಿದರೆ, ತಮ್ಮ ಬಳಿ ಅಣ್ವಸ್ತ್ರಗಳಿವೆ ಎಂದು ಹೇಳಿಕೊಂಡಿರುವ ದೇಶಗಳು ಮೂರೇ ಮೂರು. ಭಾರತ, ಪಾಕಿಸ್ತಾನ ಹಾಗೂ ಉತ್ತರಕೊರಿಯಾ. ಏನನ್ನೂ ತೋರಿಸಿಕೊಳ್ಳದೆ ಒಳಗೊಳಗೇ ಅಣ್ವಸ್ತ್ರಗಳನ್ನು ಗುಡ್ಡೆಹಾಕಿಕೊಂಡು ಕೂತಿದೆ ಇಸ್ರೇಲ್. ಮಿಕ್ಕ ದೇಶಗಳು ಈ ಉಸಾಬರಿಗೇ ಹೋಗಿಲ್ಲ. ಉಳಿದವುಗಳ ಕಥೆ ಏನೇ ಇರಲಿ, ನಮ್ಮ ವಾದ ಸರಿಯಾಗೇ ಇದೆ. ನಾವು ಸುಮಾರು 7,500 ಕಿಮೀಗಳ ಗಡಿಯನ್ನು ಚೀನಾ ಹಾಗೂ ಪಾಕಿಸ್ತಾನಗಳೊಂದಿಗೆ ಹಂಚಿಕೊಂಡಿದ್ದೇವೆ. ಎರಡೂ ದೇಶಗಳೊಡನೆ ಈ ಹಿಂದೆ ಯುದ್ಧವೂ ನಡೆದಿದೆ. ಹೀಗಿರುವಾಗ, ನಾವು ಶಾಂತಿಪ್ರಿಯರು ಎಂಬ ಕಾರಣಕ್ಕೆ ಅವರೂ ಸುಮ್ಮನಿರುತ್ತಾರೆ ಎಂದು ನೆಚ್ಚಿಕೊಳ್ಳಲು ಹೇಗೆ ಸಾಧ್ಯ?

ಈ ಸತ್ಯವನ್ನೇ ಉಳಿದ ದೇಶಗಳಿಗೆ ಮನವರಿಕೆ ಮಾಡಿಕೊಡುತ್ತಾ ಬಂದಿದೆ ಭಾರತ ಸರ್ಕಾರ. ಅವುಗಳ ಮನಸ್ಥಿತಿಯಲ್ಲಿ ಬದಲಾವಣೆಯೂ ಇದೆ. 2008ರಲ್ಲಿ ಅಮೆರಿಕ ನಮ್ಮೊಡನೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ್ದೇ ಅದಕ್ಕೆ ಸಾಕ್ಷಿ. ಈ ಸಲವಂತೂ ಇನ್ನಿಲ್ಲದ ಪ್ರಯತ್ನ ನಡೆಸಿತು ಮೋದಿ ಸರ್ಕಾರ. ಎನ್‍ಎಸ್‍ಜಿಯ ಅಧ್ಯಕ್ಷ ರಾಫೆಲ್ ಗ್ರಾಸಿ ಇದೇ ತಿಂಗಳು ಭಾರತಕ್ಕೆ ಬಂದು ಮಾತುಕತೆಯಾಡಿ ಹೋದರು. ಒಂದೊಮ್ಮೆ ಭಾರತವನ್ನು ಸೇರಿಸಿಕೊಂಡರೆ ಪಾಕಿಸ್ತಾನವನ್ನೂ ಸೇರಿಸಿಕೊಳ್ಳಬೇಕು ಎಂದು ಚೀನಾ ಎಂದಿನಂತೆ ಪಟ್ಟು ಹಿಡಿಯಿತು. ಉಳಿದ 48 ಸದಸ್ಯ ರಾಷ್ಟ್ರಗಳ ಅಭಿಮತವನ್ನೂ ಕೇಳಿತು. ಟರ್ಕಿಯನ್ನು ಬಿಟ್ಟರೆ ಬಹುತೇಕ ಎಲ್ಲ ರಾಷ್ಟ್ರಗಳೂ ಭಾರತದ ಸೇರ್ಪಡೆಯನ್ನು ಬೆಂಬಲಿಸಿದವು. ಚೀನಾದ ಅಧ್ಯಕ್ಷ ಜಿನ್‍ಪಿಂಗ್‍ರ ಮನವೊಲಿಸಲು ಖುದ್ದು ಮೋದಿಯೇ ಮಾತುಕತೆ ನಡೆಸಿದರು. ಆದರೂ ಅದು ತನ್ನ ಹಟ ಬಿಡಲಿಲ್ಲ. ಪರಿಣಾಮ, ಎನ್‍ಎಸ್‍ಜಿ ಎಂಬ ಬಿಸಿತುಪ್ಪ ನಮ್ಮ ಗಂಟಲಲ್ಲೇ ಉಳಿದಿದೆ.

ಒಂದು ಕೆನ್ನೆಗೆ ಹೊಡೆದರೆ ಇನ್ನೊಂದನ್ನೂ ತೋರಿಸು ಎನ್ನುವುದು ಗಾಂಧಿಯ ಕಾಲಕ್ಕೇ ಮುಗಿಯಿತು. ಈಗ ಒಂದು ಕೆನ್ನೆಗೂ ಏಟು ತಿನ್ನದಿರುವುದೇ ಜಾಣತನ. ಇಂಥ ಪ್ರಯತ್ನಗಳು ಸದಾ ಜಾರಿಯಲ್ಲಿರಬೇಕು. ಫಲಿತಾಂಶ ಇಂದಲ್ಲ ನಾಳೆ ಖಂಡಿತ ಸಿಗುತ್ತದೆ!

ಬ್ರಾಹ್ಮಣನಿಗೆ ಬ್ರಾಹ್ಮಣನೇ ಶತ್ರು!

ಮಾತನ್ನು ಹೇಳಲೇಬೇಕೆನಿಸುತ್ತಿದೆ. ಅವತ್ತು ಮತ್ತೂರನ್ನೆಲ್ಲ ಸುತ್ತು ಹಾಕಿ ವಿಷಯ ಸಂಗ್ರಹ ಮಾಡಿ ದಣಿದು ರಾತ್ರಿ ಟಿವಿ ಮುಂದೆ ಕೂತೆ. ವಿಷಯದ ಪ್ರಸಾರವನ್ನೇ ದತ್ತು ಪಡೆದ ಕೆಲ ಚಾನೆಲ್ಗಳಿವೆಯಲ್ಲ, ಅವು ಏನು ಹೇಳುತ್ತಿವೆಯೋ ನೋಡೋಣವೆಂಬ ಕುತೂಹಲ ನನಗೆ. ನೋಡಿದರೆ, ಮೇಕೆಯ ಒಡೆಯ ಕುಮಾರ ಹಾಗೂ ಅವನ ಮೇಕೆಯ ನೇರಪ್ರಸಾರ! ಅವನಿಗಾದರೂ ವಿಷಯ ಅರ್ಥವಾಗುತ್ತೆ, ಆದರೆ ಪಾಪದ ಮೇಕೆಗೆಲ್ಲಿ ಹಣೆಬರಹ? ಮಧ್ಯಾಹ್ನವಷ್ಟೇ ಕುಮಾರ ಅಲವತ್ತುಕೊಂಡಿದ್ದ. 'ಮೇಕೆಯನ್ನ ಎಲ್ಲರಿಗೂ ತೋರಿಸಿ ತೋರಿಸಿ ಸಾಕಾಗಿದೆ ಮೇಡಂ. ಒಳ್ಳೆ ಕೆಲಸಕ್ಕೆ ಅಂತ ಕೊಟ್ಟಿದ್ದೇ ದೊಡ್ಡ ತಪ್ಪಾಗೋಯ್ತು ನೋಡಿ.' ಅಂತ. ಈಗ ಮತ್ತೆ ಅವನನ್ನು ಎಳೆದುಕೊಂಡು ಬಂದಿದ್ದರು. ಬಹುಶ ಐಶ್ವರ್ಯ ರೈಳನ್ನು ಬಿಟ್ಟರೆ ನಮ್ಮ ಮಾಧ್ಯಮದವರು ಹೀಗೆ ಮುಗಿಬಿದ್ದು ನೋಡಿದ್ದು ಮೇಕೆಯನ್ನೇ ಏನೋ! ಯಾರೋ ಪುಣ್ಯಾತ್ಮರು ಫೋಟೋದಲ್ಲಿದ್ದ ಮೇಕೆಯನ್ನೂ ಜೀವಂತ ಮೇಕೆಯನ್ನೂ ಹೊಂದಿಸಿ ನೋಡುತ್ತಿದ್ದರು. ಅದರ ಬಾಲ, ತಲೆ, ಮೈಬಣ್ಣ ಎಲ್ಲವನ್ನೂ ಇಂಚು ಪಟ್ಟಿ ಹಿಡಿದು ಅಳತೆ ತೆಗೆದಿರುವವರ ಹಾಗೆ ಮಾತನಾಡುತ್ತಿದ್ದರು. ಅಷ್ಟರಲ್ಲೇ ಕಿವಿಗೆ ಅಪ್ಪಳಿಸಿತು ವಿದ್ವಾಂಸರೊಬ್ಬರ ದನಿ. 'ಇದು ಸೋಮಯಾಗ ಅಲ್ಲವೇ ಅಲ್ಲ. ಅದಕ್ಕೆ ಬಾಡಿಗೆ ಮೇಕೆ ತರುವುದು ಸಿಂಧುವಲ್ಲ.' ಎಂದು ಹೇಳಿ, ಜೊತೆಗೆ ಇನ್ನೂ ಏನೇನೋ ಸೇರಿಸುತ್ತಾ, ತಮ್ಮ ಪ್ರಕಾರ ಸೋಮಯಾಗವನ್ನು ಹೇಗೆ ಮಾಡಬೇಕೆಂಬುದನ್ನು ವಿವರಿಸುತ್ತಿದ್ದರು.
ಕೇಳಿ ನಿಜವಾಗಿಯೂ ಮೈ ಉರಿದುಹೋಯಿತು. ಎಲ್ಲರೂ ಸೇರಿ ಬ್ರಾಹ್ಮಣರ ಮೇಲೆ ಮುಗಿಬಿದ್ದಿರುವ ಹೊತ್ತಿನಲ್ಲಿ, ಸತ್ಯಾಸತ್ಯತೆಯನ್ನು ಅರಿಯುವ ಒಂದೇ ಉದ್ದೇಶದಿಂದ ನನ್ನ ಖಾಸಗಿ ಕೆಲಸವನ್ನು ಬದಿಗೊತ್ತಿ ಮತ್ತೂರು ಸುತ್ತಿದ್ದೆ. ಇಲ್ಲಿ ನೋಡಿದರೆ ನಮ್ಮ ವಿದ್ವಾಂಸರುಗಳೇ ಸಾಕ್ಷಾತ್ ವಿಧ್ವಂಸಕರಾಗಿಬಿಟ್ಟಿದ್ದಾರೆ! ತಮ್ಮವರೇ ಮಾಡಿದ ಯಾಗವನ್ನು ಟಿವಿ ಚಾನೆಲ್ಗಳ ಮುಂದೆ ಹಳಿಯುತ್ತಿದ್ದಾರೆ. ತಮ್ಮ ವ್ಯಾಖ್ಯಾನವೇ ಸರಿ ಎಂದು ತೋರಿಸುವ ಉಮೇದು! ತಮ್ಮ ಪಾಂಡಿತ್ಯವನ್ನು ಜಗಜ್ಜಾಹೀರುಗೊಳಿಸುವ ತವಕ! ವೇದಗಳನ್ನು ಓದಿಕೊಂಡಿರದಿದ್ದರೂ, ಯಾವ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂಬ, ನನಗಿರುವ common sense ಅವರ ವಿದ್ವತ್ತಿಗಿಂತ ಎಷ್ಟೋ ವಾಸಿ ಎನಿಸಿಬಿಟ್ಟಿತು! ತಮ್ಮ ಜ್ಞಾನಸಂಪತ್ತನ್ನು ಹರವಿಡಲು ಕೋಳಿಜಗಳಗಳಲ್ಲಿ ಭಾಗವಹಿಸಬೇಕೇ? ಜಗತ್ತಿನೆದುರು ತಮ್ಮವರನ್ನೇ ಮಾತಿನಲ್ಲಿ ಕುಕ್ಕಿ ಹುಳುಕು ತೆಗೆಯಬೇಕೆ? ಇವರೊಬ್ಬರ ಗೆಲುವು ಇಡೀ ಸಮುದಾಯದ ಸೋಲಲ್ಲವೇ? ಹೋಗಲಿ, ಇವರು ತಮ್ಮ ಬುದ್ಧಿ ಖರ್ಚು ಮಾಡಿ ಹೇಳಿದರು ಎಂಬ ಕಾರಣಕ್ಕೆ ಚಾನೆಲ್ಗಳವರು ಇವರು ಹೇಳಿದ ರೀತಿಯಲ್ಲಿ ಯಥಾವತ್ತು ಇನ್ನೊಂದು ಯಾಗ ಮಾಡಿಸಿಬಿಡುತ್ತಾರೆಯೇ? ಟಿವಿ ಚಾನೆಲ್ಗಳ ಟಿಆರ್ಪಿ ಹಸಿವನ್ನು ನೀಗಿಸುವ ಆಹಾರವಾಗಿ ಬಳಕೆಯಾಗುತ್ತಿದ್ದೇವೆಂಬ ಪರಿಜ್ಞಾನವಾದರೂ ಬೇಡವೇ? ವಿಷಯ ಅಂತಲೇ ಅಲ್ಲ. ಉಳಿದವುಗಳಲ್ಲೂ ಅಷ್ಟೇ. ಉದಾಹರಣೆಗೆ, ಸಾಹಿತಿಯೊಬ್ಬರು ಒಂದು ವಿಷಯವಾಗಿ ಏನನ್ನಾದರೂ ಬರೆದರು ಅಂತಿಟ್ಟುಕೊಳ್ಳಿ. ಮರುಕ್ಷಣವೇ ಅದನ್ನು ಮತ್ತೊಬ್ಬ ಸಾಹಿತಿ ಖಂಡಿಸಲನುವಾಗುತ್ತಾರೆ. ವಾಗ್ಮಿಯೊಬ್ಬರು ಒಂದು ಹೇಳಿಕೆ ಕೊಟ್ಟರೆ ನಿಂತನಿಲುವಲ್ಲೇ ಅದಕ್ಕೊಂದು ಟೀಕೆ ಹುಟ್ಟು ಹಾಕುವ ಚತುರ ಬ್ರಾಹ್ಮಣರಿರುತ್ತಾರೆ. ಅಲ್ಲವೇ ಮತ್ತೆ? ಭಗವಂತ ತಲೆಯ ತುಂಬ ಧಾರಾಳವಾಗಿ ತುಂಬಿ ಕಳುಹಿಸಿರುವ ಬುದ್ಧಿ ಖರ್ಚಾಗುವುದು ಬೇಡವೇ? ಬೇರೆಯವರು ಹೇಳಿದ್ದು ಸರಿ ಎಂದು ಒಪ್ಪಿಕೊಂಡರೆ ಇವರು ವರ್ಷಗಟ್ಟಳೆ ಓದಿ ಗಳಿಸಿಕೊಂಡ ವಿದ್ಯೆಗೆ ಅವಮಾನವಲ್ಲವೇ?


ವಾಸ್ತವವಾಗಿ ಬ್ರಾಹ್ಮಣರ ನಡು ಮುರಿಯಲು ಯಾವ ಮುಸ್ಲಿಮನೂ, ಮತಾಂತರಿಯೂ ಬೇಕಿಲ್ಲ. ವಿಧ್ವಂಸಕರೇ ಸಾಕು. ಯಾರಾದರೂ ಮಾಧ್ಯಮದವರೋ ಅಥವಾ ಸೆಕ್ಯುಲರ್ ಮಂದಿಯೋ ಇವರಿಗೆ 'ಕೀ' ಕೊಟ್ಟು ತಿರುಗಿಸಿಬಿಟ್ಟರೆ ಸಾಕು, ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಲೇ ಇರುತ್ತಾರೆ. ಒಗ್ಗಟ್ಟಾಗಿರಬೇಕೆಂಬ, ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಬೇರೆಯವರಿಗೆ ಗೊತ್ತಾಗಬಾರದೆಂಬ ಕನಿಷ್ಠ ಸಾಮಾನ್ಯಜ್ಞಾನವಿಲ್ಲದಿದ್ದ ಮೇಲೆ ಎಷ್ಟು ಪಾಂಡಿತ್ಯವಿದ್ದರೇನು ಬಂತು? ವಿಭೂತಿಯನ್ನು ನೋಡಿದರೆ ನಾಮಕ್ಕೆ ಸಂಕಟ! ನಾಮವನ್ನು ನೋಡಿದರೆ ಮುದ್ರೆಗೆ ಇರುಸುಮುರುಸು! ಮಠಗಳಲ್ಲೂ ಅಷ್ಟೇ. ಮುಖ ನೋಡಿ ಮುಲಾಜಿಲ್ಲದೆ ಮೂರಡಿ ಮೇಲಿನಿಂದ ತೀರ್ಥ ಸುರಿಯುವ ಮಂದಿ ಇವರು! ಇದೆಲ್ಲ ಎಂದಿಗಾದರೂ ಸರಿಹೋದೀತಾ?
ಗಳಿಸಿಕೊಂಡಿರುವ ವಿದ್ಯೆಯನ್ನು ವಿನಿಯೋಗಿಸಲು ಟಿವಿ ಚಾನೆಲ್ಗಳೇ ಆಗಬೇಕೆಂದಿಲ್ಲ. ಈಗಿನ ನಮ್ಮ ಶಿಕ್ಷಣ ಪದ್ಧತಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಾಕು, ಬೇಕಾದಷ್ಟು ಮಾರ್ಗಗಳು ಗೋಚರಿಸುತ್ತವೆ. ಧಾರ್ಮಿಕ ಶಿಕ್ಷಣದ ಗಂಧ-ಗಾಳಿಯೂ ಇಲ್ಲದ ಇಂದಿನ ಪೀಳಿಗೆಗೆ ವೇದಗಳ ಅರಿವು ಮೂಡಿಸಬಹುದಲ್ಲ? ಬೇಸಿಗೆ ರಜೆಯಲ್ಲಿ ವಿಧಿಯಿಲ್ಲದೆ ಸಮ್ಮರ್ ಕ್ಲಾಸುಗಳಿಗೆ ಹೋಗುವ ಮಕ್ಕಳನ್ನು ಒಂದು ಕಡೆ ಗುಡ್ಡೆ ಹಾಕಿಕೊಂಡು ಅವುಗಳಿಗೆ ಶಿಕ್ಷಣ ಕೊಡಬಹುದಲ್ಲ? ಎಲ್ಲಕ್ಕಿಂತ ಹೆಚ್ಚಾಗಿ, ಅಭಿಪ್ರಾಯಭೇದವಿರುವ ವಿಷಯಗಳ ಬಗ್ಗೆ ಒಟ್ಟಾಗಿ ಕೂತು ಚರ್ಚಿಸಿ ಎಲ್ಲರಿಗೂ ಒಪ್ಪಿಗೆಯಾಗುವ ನಿರ್ಣಯಕ್ಕೆ ಬರಬಹುದಲ್ಲ? ಒಬ್ಬರು ಯಾಗ ಮಾಡುವವರೆಗೂ ಕಾದು ಕೂತು, ಆಮೇಲೆ ತೋಳಗಳ ಹಾಗೆ ಅವರ ಮೇಲೆರಗುವ ಅವಶ್ಯಕತೆ ಏನಿದೆ? ನಾಲ್ಕು ದಿನ ಕಳೆದು ವಿವಾದ ತಣ್ಣಗಾದ ಮೇಲೆ, ಮತ್ತೊಂದು ಯಾಗ ನಡೆಯುವವರೆಗೂ ಇವರನ್ನು ಯಾರಾದರೂ ತಿರುಗಿ ನೋಡುತ್ತಾರಾ?
ನಮಗೆ ಮಾದರಿಯಾಗಬಲ್ಲ ಒಂದು ಉದಾಹರಣೆಯನ್ನು ಗಮನಿಸಿ. ನಮ್ಮಲ್ಲಿ ತ್ರಿಮತಸ್ಥರಿರುವ ಹಾಗೆ ಮುಸಿಮರಲ್ಲಿ ನಾಲ್ಕು School Of Thoughtಗಳಿವೆ. ಅವುಗಳೆಂದರೆ, ಇಮಾಮ್ ಹನೀಫ, ಇಮಾಮ್ ಶಫಿ, ಇಮಾಮ್ ಮಲ್ಲಿಕ್ ಹಾಗೂ ಇಮಾಮ್ ಹನ್ಬಲ್‍‍ರದ್ದು. ಕುರಾನ್, ಹದಿಸ್, ಸುನ್ನ ಹಾಗೂ ಶರಿಯಾಗಳು ಎಲ್ಲರಿಗೂ ಏಕಪ್ರಕಾರವಾಗೇ ಅನ್ವಯವಾದರೂ ಸಣ್ಣ ಪುಟ್ಟ ಅಭಿಪ್ರಾಯಭೇದಗಳು ಅವರಲ್ಲೂ ಇವೆ. ಉದಾಹರಣೆಗೆ, ಇಸ್ಲಾಮಿಗೆ ಮತಾಂತರ ಹೊಂದಲಿಚ್ಛಿಸದ ಕಾಫಿರರು ಕರ ಕೊಟ್ಟು (ಅರೇಬಿಕ್ನಲ್ಲಿ ಅದನ್ನು ಜಿಸ್ಯಾಹ್ ಎನ್ನುತ್ತಾರೆ) ಬದುಕಬಹುದು ಎಂಬುದನ್ನು ಇಮಾಮ್ ಹನೀಫ ಮಾತ್ರ ಬೆಂಬಲಿಸುತ್ತಾರೆ. ಉಳಿದವರದ್ದು ಇದಕ್ಕೆ ಕಟ್ಟಾ ವಿರೋಧ. ಅವರ ಪ್ರಕಾರ ಅಂಥ ಕಾಫಿರರಿಗೆ ಬದುಕುವ ಅವಕಾಶವನ್ನೇ ನೀಡಬಾರದು! ಅಭಿಪ್ರಾಯಭೇದವಿದೆಯೆಂದ ಮಾತ್ರಕ್ಕೆ ಅವರು ಒಬ್ಬರನ್ನೊಬ್ಬರು ಖಂಡಿಸುವುದಿಲ್ಲ. ಮತ್ತೂಬ್ಬರದು ತಪ್ಪೆಂದು ಸಾಬೀತು ಮಾಡಲು ಪ್ರಯತ್ನಿಸುವುದಿಲ್ಲ. ಅಷ್ಟ್ಯಾಕೆ, ಇಮಾಮನೊಬ್ಬ ಹೊರಡಿಸುವ ಫತ್ವಾದ ಬಗ್ಗೆ ಬೇರೊಬ್ಬ ಅಪ್ಪಿತಪ್ಪಿಯಾದರೂ ಸೊಲ್ಲೆತ್ತುವುದನ್ನೆಲ್ಲಾದರೂ ಕೇಳಿದ್ದೀರಾ? ಅದರಲ್ಲೆಷ್ಟೇ ತಪ್ಪಿರಲಿ, ಉಳಿದವರು ತೆಪ್ಪಗಿರುತ್ತಾರೆ! ತಮ್ಮವರನ್ನು ಬಿಟ್ಟುಕೊಡುವುದಿಲ್ಲ.
ತೀರ ಮೊನ್ನೆ ನನಗಾದ ಇನ್ನೊಂದು ಅನುಭವ. ಶಿವಮೊಗ್ಗದಿಂದ ರೈಲಿನಲ್ಲಿ ಬಂದು ಅಲ್ಲಿಂದ ಮನೆಗೆ ಬರುವ ಸಲುವಾಗಿ ಕ್ಯಾಬ್ ಹತ್ತಿದೆ. ಹೀಗೇ ಲೋಕಾಭಿರಾಮದ ಮಾತನ್ನಾಡುತ್ತಿದ್ದ ಕ್ಯಾಬ್ ಡ್ರೈವರ್ಗೆ ನಾನು ಬ್ರಾಹ್ಮಣಳೆನ್ನುವುದು ಗೊತ್ತಾಗಿರಬೇಕು. ಕೇಳಿದ, 'ಮೇಡಮ್, ರೈತನಿಂದ ಅನ್ನವಾದರೂ ಸಿಗುತ್ತೆ. ಕುರುಬನಿಂದ ತಿನ್ನಲು ಕುರಿ ಸಿಗುತ್ತೆ. ಬ್ರಾಹ್ಮಣರಿಂದ ಸಮಾಜಕ್ಕೆ ಏನು ಸಿಗುತ್ತೆ?' ನಾನು ಬೇಕಂತಲೇ ಸುಮ್ಮನಾದೆ. ನನ್ನ ಮೌನ ಅವನಿಗೆ ಪುಷ್ಠಿ ನೀಡಿತೇನೋ, ಸುಮಾರು ಹತ್ತು ನಿಮಿಷ ಶೋಷಣೆಯ, ಅಂಬೇಡ್ಕರ್ ಬಗ್ಗೆ ಮಾತನಾಡಿದ. ಕೇಳುವಷ್ಟು ಕೇಳಿ ಕೊನೆಗೊಮ್ಮೆ ರೋಸಿಹೋಗಿ, ‘ಭೂಮಿಯ ಮೇಲಿರುವ ಬ್ರಾಹ್ಮಣರನ್ನೆಲ್ಲ ಅಳಿಸಿ ಹಾಕಿಬಿಟ್ಟರೆ ನಿಮ್ಮ ಸಮಸ್ಯೆಗಳಿಗೆಲ್ಲ ಪರಿಹಾರ ಸಿಕ್ಕಿಬಿಡುತ್ತದಾ?' ಎಂದೆ. ನಿರುತ್ತರನಾದ. ಅಲ್ಲಿಂದ ಮುಂದೆ ನಾನು ಮಾತನಾಡಿದೆ. ಅವನು ಕೇಳಿಸಿಕೊಂಡ. ಅಂಬೇಡ್ಕರ್ರನ್ನು ಹೆಜ್ಜೆಹೆಜ್ಜೆಗೂ ಕೈಹಿಡಿದು ಕಾಪಾಡಿದ್ದು, ಅವರನ್ನು ಬೆಳೆಯಲು ಬಿಟ್ಟಿದ್ದು, ಸಂವಿಧಾನದ ಕರಡು ಪ್ರತಿಯನ್ನು ಬರೆದಿದ್ದೂ ಬ್ರಾಹ್ಮಣರೇ ಎಂಬುದನ್ನೆಲ್ಲ ಸಾದ್ಯಂತವಾಗಿ ವಿವರಿಸಿದೆ. ಮೀಸಲಿನ ದುರ್ಬಳಕೆಯಾಗುತ್ತಿರುವ ಪರಿಯನ್ನು ಹೇಳಿದಾಗಲಂತೂ ಅವನು ಹೇಳಿದ್ದು, 'ಅಯ್ಯೋ, ಇದನ್ನೆಲ್ಲ ಬ್ರಾಹ್ಮಣರು ನೀವು ಓದಿ ನಮಗೆ ಬಿಡಿಸಿ ಹೇಳಬೇಕು. ಇಲ್ಲದಿದ್ದರೆ ಸತ್ಯ ನಮಗೆ ಹೇಗೆ ಗೊತ್ತಾಗುತ್ತೆ?' ಎಂದು. ಅವನು ತಾರಕದಲ್ಲಿ ಕಿರುಚಿ ಮಾಡಿದ್ದ ವಾದಕ್ಕೆ ನನ್ನ ಪ್ರತಿವಾದ ಮೆಲುದನಿಯ ವಿವರಣೆಯೇ ಆಗಿದ್ದರೂ ಬ್ರಾಹ್ಮಣರ ಅಗತ್ಯವನ್ನು ಅವನೇ ಹೆಜ್ಜೆಹೆಜ್ಜೆಗೂ ಅನುಮೋದಿಸುತ್ತಿದ್ದುದು ಸ್ಪಷ್ಟವಾಗಿತ್ತು. ನಾನು ಹೇಳಲು ಹೊರಟಿರುವುದು ಇಷ್ಟೇ. ದುರ್ಬುದ್ಧಿಜೀವಿಗಳು ಎಂದೋ ಬಿತ್ತಿರುವ ವಿಷಬೀಜ ಇಂದು ರಾಕ್ಷಸಾಕಾರವಾಗಿ ಬೆಳೆದು ನಿಂತಿದೆ. ಒಂದು ಸಣ್ಣ ಕಾರಣ ಸಿಕ್ಕರೂ ಸಾಕು, ಬ್ರಾಹ್ಮಣರನ್ನು ಬಡಿದು ಬಾಯಿಗೆ ಹಾಕಿಕೊಳ್ಳಲು ನೂರಾರು ಮಂದಿ ಸಿದ್ಧರಿದ್ದಾರೆ. ಕ್ಯಾಬ್ಡ್ರೈವರ್ನಿಗೆ ಅರ್ಥಮಾಡಿಸುವಷ್ಟು ತಿಳುವಳಿಕೆ ನನಗಿತ್ತು. ಇಲ್ಲದಿದ್ದರೆ ಅವನ ಮಾತಿನಲ್ಲಿದ್ದ ರೋಷ, ಆವೇಶಕ್ಕೆ ಭಯಗೊಳ್ಳುವ ಸಾಧ್ಯತೆಯೇ ಹೆಚ್ಚಿದ್ದಿದ್ದು.
ನೆನಪಿಡಿ, ದಿನಂಪ್ರತಿ ಜನರೊಂದಿಗೆ ಒಡನಾಡುವಾಗ, ಇಂಥ ಸಂದರ್ಭಗಳು ಎದುರಾದಾಗ ನಮ್ಮ ಜೊತೆ ವಿದ್ವಾಂಸರುಗಳಿರುವುದಿಲ್ಲ. ನಮ್ಮ ವಾಗ್ಯುದ್ಧದ ತಯಾರಿಯನ್ನು ನಾವೇ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನಮಗೆ ಬೇಕಾದ ಸತ್ಯಾಂಶಗಳನ್ನು ಒದಗಿಸುವ ಹೊಣೆ ಅವರದ್ದೇ ಆಗಿರುತ್ತದೆ. ಹೊಣೆಯನ್ನು ಈಗೆಷ್ಟು ಮಂದಿ ಸರಿಯಾದ ಅರ್ಥದಲ್ಲಿ ನಿಭಾಯಿಸುತ್ತಿದ್ದಾರೆ? ವೇದಬ್ರಹ್ಮರುಗಳಿಗೂ ಸಂಸ್ಕೃತ ವಿದ್ವಾಂಸರುಗಳಿಗೂ ಇರುವ ಮುನಿಸು ಯಾವತ್ತು ಮರೆಯಾಗುತ್ತದೆ? ಒಮ್ಮತವೆಂಬ ವೈಕುಂಠದ ದ್ವಾರ ತೆರೆದುಕೊಂಡು ನಮಗೆ ಯಾವಾಗ ಮೋಕ್ಷ ಪ್ರಾಪ್ತಿಯಾಗುತ್ತದೆ? ಸೋಮಯಾಗದ ವಿಷಯಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನೇ ನೋಡಿ. ಸಿಕ್ಕಿದ್ದೇ ಅವಕಾಶ ಎಂದು ಭಗವಾನ(ರರು)ಗಳೆಲ್ಲ ತಮ್ಮ ನಾಲಗೆಯ ತೀಟೆ ತೀರಿಸಿಕೊಳ್ಳುತ್ತಿದ್ದಾರೆ. ಯಜ್ಞ-ಯಾಗಾದಿಗಳನ್ನೆಲ್ಲ ಬಹಿಷ್ಕರಿಸಿ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಮುಸ್ಲಿಮರ ವಿಷಯದಲ್ಲಿ ಮೂಕ ಬಸವಗಳಾಗಿಬಿಡುವ ಇವರಿಗೆ ಬ್ರಾಹ್ಮಣರ ವಿಷಯದಲ್ಲಿ ಇಷ್ಟೊಂದು ಸದರ ಹುಟ್ಟಿಕೊಳ್ಳಲು ಕಾರಣರಾರು? ನಮ್ಮ ವೈಮನಸ್ಸೇ ತಾನೆ?

ನಾಮದ ಗೀಟುಗಳನ್ನು, ವಿಭೂತಿ ಪಟ್ಟೆಯ ಗೆರೆಗಳನ್ನು ನೋಡಿ ಹೆಮ್ಮೆಪಟ್ಟುಕೊಳ್ಳುವ ಕಾಲ ಯಾವತ್ತೋ ಮುಗಿದಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, 'ಒಂದಾನೊಂದು ಕಾಲದಲ್ಲಿ, ಬ್ರಾಹ್ಮಣರು ಎಂದು ಕರೆಸಿಕೊಳ್ಳುತ್ತಿದ್ದ ಜನರಿದ್ದರಂತೆ.' ಎಂಬ ಕಥೆ ಹುಟ್ಟಿಕೊಳ್ಳುವುದರಲ್ಲಿ ಆಶ್ಚರ್ಯವಿಲ್ಲ! ತ್ರಿಮತಸ್ಥರೇ, ಇನ್ನಾದರೂ ಒಟ್ಟಾಗಿ!