Tuesday 7 April 2015

‘ಮೈ ಚಾಯ್ಸ್’ನಿಂದ ಸಾಧ್ಯವೇ ಸೈನಾ ಸೃಷ್ಟಿ?

'ಮೈ ಬಾಡಿ, ಮೈ ಮೈಂಡ್, ಮೈ ಚಾಯ್ಸ್'. ಹೀಗೆ ಶುರುವಾಗುತ್ತದೆ ದೀಪಿಕಾ ಪಡುಕೋಣೆಯ 'ಮೈ ಚಾಯ್ಸ್' ಎಂಬ ವೀಡಿಯೋ. ಅದನ್ನು ಚಿತ್ರೀಕರಿಸಿರುವುದು ವೋಗ್ ಇಂಡಿಯಾ ಎಂಬ, ಫ್ಯಾಷನ್‍ಗೆ ಸೀಮಿತವಾದ ಮಾಸಪತ್ರಿಕೆ. ಯೂ ಟ್ಯೂಬ್‍ನಲ್ಲಿ ಲಭ್ಯವಿರುವ ಅದನ್ನು ಒಮ್ಮೆಯಾದರೂ ತಪ್ಪದೆ ನೋಡಿ. ದೀಪಿಕಾ ಭರ್ತಿ ಎರಡೂವರೆ ನಿಮಿಷ ಅದಮ್ಯ ಆತ್ಮವಿಶ್ವಾಸದಿಂದ ಮಾತುಗಳನ್ನಾಡುತ್ತಾಳೆ. ಮಹಿಳಾ ಸಬಲೀಕರಣದ ಆ ದಿಟ್ಟ ಮಾತುಗಳು ಹೇಗಿವೆ ಗೊತ್ತಾ? ಬಿಟ್ಟ ಬಾಣಗಳಂತೆ ಕೇಳುಗರ ಎದೆಯನ್ನು ನೇರವಾಗಿ ನಾಟುತ್ತವೆ. ಆದ್ದರಿಂದಲೇ ವೀಡಿಯೋ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ವೈರಸ್‍ನಂತೆ ಹಬ್ಬಿ ಸಂಚಲನ ಸೃಷ್ಟಿಸಿದ್ದು, ಲಕ್ಷಾಂತರ ಮಂದಿ ಮುಗಿಬಿದ್ದು ಅದನ್ನು ವೀಕ್ಷಿಸಿದ್ದು. ಇಡೀ ಗಂಡು ಜಾತಿಯನ್ನು ಉದ್ದೇಶಿಸಿ ಹೇಳಿರುವ ಅವಳ ಖಡಕ್ ಮಾತುಗಳ ಒಟ್ಟಾರೆ ಸಾರ ಇಷ್ಟು: 'ಇದು ನನ್ನ ದೇಹ, ನನ್ನ ಮನಸ್ಸು, ಆದ್ದರಿಂದ ಎಲ್ಲವೂ ನನ್ನ ಆಯ್ಕೆ. ನನಗೆ ಬೇಕಾದ ಬಟ್ಟೆಯನ್ನು ಹಾಕಿಕೊಳ್ಳುವುದು ನನ್ನ ಆಯ್ಕೆ. ಸಣ್ಣ ಅಥವಾ ದಪ್ಪಗಿರುವುದು ನನ್ನ ಆಯ್ಕೆ. ಮದುವೆಯಾಗುವುದು ಬಿಡುವುದು ನನ್ನ ಆಯ್ಕೆ. ಮದುವೆಗೆ ಮುಂಚಿನ ಸೆಕ್ಸ್, ಮದುವೆಯಾಚೆಗಿನ ಸೆಕ್ಸ್ ಅಥವಾ ಸೆಕ್ಸ್ ಬೇಡವೆನ್ನುವುದು ನನ್ನ ಆಯ್ಕೆ. ತಾತ್ಕಾಲಿಕವಾಗಿ ಪ್ರೀತಿಸುವುದೋ ಶಾಶ್ವತವಾಗಿಯೋ ಎಂಬುದು ನನ್ನ ಆಯ್ಕೆ. ಹುಡುಗನನ್ನು, ಹುಡುಗಿಯನ್ನು ಅಥವಾ ಇಬ್ಬರನ್ನೂ ಪ್ರೀತಿಸುವುದು ನನ್ನ ಆಯ್ಕೆ. ನೆನಪಿಡು, ನೀನು ನನ್ನ ಆಯ್ಕೆ. ನನ್ನ ಹಣೆಯ ಕುಂಕುಮ, ನನ್ನ ಕೈನ ಉಂಗುರ, ನಾನಿಟ್ಟುಕೊಳ್ಳುವ ನಿನ್ನ ಸರ್‍ನೇಮ್ (ಉಪನಾಮ) ಕೇವಲ ಆಭರಣಗಳಿದ್ದಂತೆ. ಅವುಗಳನ್ನು ಬದಲಾಯಿಸಬಹುದು, ಆದರೆ ನಿನ್ನ ಮೇಲಿರುವ ನನ್ನ ಪ್ರೀತಿಯನ್ನಲ್ಲ. ಆದ್ದರಿಂದ ಅದರ ಬೆಲೆ ಉಳಿಸಿಕೋ. ನನಗೆ ಬೇಕಾದ ಹೊತ್ತಿಗೆ ಮನೆಗೆ ಬರುವುದು ನನ್ನ ಆಯ್ಕೆ. ನಿನ್ನ ಮಗುವನ್ನು ಹಡೆಯುವುದು ಬಿಡುವುದು ನನ್ನ ಆಯ್ಕೆ. ನನ್ನ ಸಂತೋಷ ನಿನಗೆ ನೋವು ಮಾಡಬಹುದು, ಅದು ನನ್ನ ಆಯ್ಕೆ. ನನ್ನ ಆಯ್ಕೆಗಳೇ ನನ್ನ ಗುರುತು, ಅವುಗಳಿಂದಲೇ ನಾನು ಅನನ್ಯಳು. ನಾನು ಭಿನ್ನವಾಗಿರಬೇಕೆಂದು ಬಯಸುವವಳು. ಮಿತಿಯೇ ಇಲ್ಲದೆ ನಿರಂತರವಾಗಿ ವಿಸ್ತರಿಸುತ್ತಿರುವ ಈ ಬ್ರಹ್ಮಾಂಡದಂತೆಯೇ ನಾನೂ. ಇದು ನನ್ನ ಆಯ್ಕೆ'.

ಹೀಗೆ ಲಂಗುಲಗಾಮಿಲ್ಲದ ಆಯ್ಕೆಗಳನ್ನು ಬೆಡಗಿ ದೀಪಿಕಾ ಎಗ್ಗಿಲ್ಲದೆ ಹೇಳುತ್ತಾಳೆ. ಈಕೆಯ ಮಾತುಗಳನ್ನು ಕೆಲವರು ಅನುಮೋದಿಸಿದ್ದರೆ ಮತ್ತೆ ಕೆಲವರು ಟೀಕಿಸಿದ್ದಾರೆ. ಅಲ್ಲ, ಇದು ಹುಚ್ಚುತನವಲ್ಲದೆ ಮತ್ತೇನು? ಖ್ಯಾತಿಯ ಉತ್ತುಂಗ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವಂತೆ ಪ್ರೇರೇಪಿಸುತ್ತದಾ? ಹೇಳುವುದಕ್ಕೇನು? ಆಯ್ಕೆಗಳನ್ನು ನಾವೂ ನೀವೂ ಹೇಳಬಹುದು. ಆದರೆ ಅವುಗಳ ಪರಿಣಾಮ? ಸ್ವಲ್ಪ ಯೋಚಿಸಿ. ಬೇಕಾದ ಬಟ್ಟೆ ಹಾಕಿಕೊಂಡು ಬೀದಿಗಿಳಿಯುವುದು, ಹೊತ್ತು-ಗೊತ್ತಿಲ್ಲದೆ ಮನೆಗೆ ಬರುವುದು ನಮ್ಮ ಆಯ್ಕೆಯಾದರೆ, ಹಿಡಿದು ಅತ್ಯಾಚಾರ ಮಾಡುವುದೂ ವಿಕೃತ ಮನಸ್ಸಿನವರ ಆಯ್ಕೆಯೇ! ಅದನ್ನು ಅನ್ಯಾಯ, ದೌರ್ಜನ್ಯ ಎನ್ನುವ ಹಾಗಿಲ್ಲ ಮತ್ತೆ! ಅನ್ಯಾಯವೇ ಆಗಿಲ್ಲದ ಮೇಲೆ ಇನ್ನೆಲ್ಲಿಯ ಶಿಕ್ಷೆ? ಅದೂ ಹೋಗಲಿ, ಮದುವೆಯಾಚೆಗಿನ ಸೆಕ್ಸ್, ಮಕ್ಕಳನ್ನು ಹಡೆಯದಿರುವುದನ್ನೂ ಆಯ್ಕೆ ಎಂದುಬಿಟ್ಟರೆ ಏನಾಗಲಿದೆ ಸಮಾಜದ ಗತಿ? ಮೊದಲೇ ಸಂಬಂಧಗಳು ಹದಗೆಡುತ್ತಿವೆ. ಅಂಥಾದ್ದರಲ್ಲಿ ಮನೆ-ಮಂದಿಯೆಲ್ಲ ಆಯ್ಕೆಯೆಂಬ ಕತ್ತಿಯನ್ನು ಝಳಪಿಸುತ್ತಾ ಒಬ್ಬರ ಮೇಲೊಬ್ಬರು ಮುಗಿಬಿದ್ದರೆ ಹೇಗೆ? ಪ್ರತಿಯೊಂದು ಮನೆಯೂ ಅಕ್ಷರಶಃ ರಣರಂಗವಾಗಿಬಿಡುವುದಿಲ್ಲವೇ? ಹೀಗೆ ಆಯ್ಕೆಯ ಬೆನ್ನು ಹತ್ತಿ ಹೋಗುವವರನ್ನು ಯಾವ ಸಂಕೋಲೆ ಕಟ್ಟಿ ಹಾಕಬಲ್ಲುದು? ಶಿಸ್ತು, ಬದ್ಧತೆಗಳು ಬೆಲೆ ಕಳೆದುಕೊಳ್ಳುವುದಿಲ್ಲವೇ? ಅವೆರಡೂ ಇಲ್ಲದಿದ್ದ ಮೇಲೆ ಏನನ್ನೇ ಸಾಧಿಸಿದರೂ ಏನು ಪ್ರಯೋಜನ? ಒಂದೆಡೆ ಇಂಥ ಅಗ್ಗದ ಹೇಳಿಕೆಗಳನ್ನು ನೀಡಿ ದೀಪಿಕಾ ತನ್ನ ಅಭಿಮಾನಿಗಳನ್ನು ಎತ್ತಲೋ ಕೊಂಡೊಯ್ಯುತ್ತಿದ್ದರೆ ಮತ್ತೊಂದೆಡೆ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಿದ್ದಾಳೆ ಇನ್ನೊಬ್ಬ ಹೆಣ್ಣುಮಗಳು.

ಅವಳೇ ಸೈನಾ ನೆಹವಾಲ್!

ಹೌದು. ಸೈನಾಳ ಸಾಧನೆ ಭಾರತೀಯರಿಗೆ ಹೆಮ್ಮೆಯ ಕೋಡು ಮೂಡಿಸಿದೆ. ಬ್ಯಾಡ್ಮಿಂಟನ್ ಆಟದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ನಮ್ಮ ದೇಶದ ಹೆಣ್ಣುಮಗಳೊಬ್ಬಳು ನಂ.1 ಸ್ಥಾನಕ್ಕೇರಿದ್ದಾಳೆ. ಅವಳೀಗ ವಿಶ್ವಚಾಂಪಿಯನ್! ಹಾಗಂತ ಸೈನಾ ರಾತ್ರೋರಾತ್ರಿ ಸ್ಟಾರ್ ಆಗಿಬಿಡಲಿಲ್ಲ. ಈಗ 25ರ ಹರೆಯದ ಅವಳು ಎಂಟರ ಎಳವೆಯಿಂದಲೇ ಈ ಆಟಕ್ಕೆ ತನ್ನ ನಿಷ್ಠೆಯನ್ನು ಕಾಯಾ ವಾಚಾ ಮನಸಾ ಧಾರೆಯೆರೆದಿದ್ದಾಳೆ.

ಸೈನಾ ಹುಟ್ಟಿದ್ದು ಹರ್ಯಾಣ ರಾಜ್ಯದ ಹಿಸಾರ್ ನಗರದಲ್ಲಿ. ವಿಜ್ಞಾನಿಯಾಗಿದ್ದ ತಂದೆ ಹರವೀರ್ ಸಿಂಗ್, ಕುಟುಂಬದೊಂದಿಗೆ ಹಿಸಾರ್ ಬಿಟ್ಟು ಆಂಧ್ರಪ್ರದೇಶದ ಹೈದರಾಬಾದ್‍ಗೆ ವಲಸೆ ಬಂದರು. ಸೈನಾ ಚಿಕ್ಕ ಹುಡುಗಿಯಾಗಿದ್ದಾಲೇ ಕರಾಟೆಯಲ್ಲಿ ಆಸಕ್ತಿ ತೋರಿ ಬ್ರೌನ್ ಬೆಲ್ಟ್ ಸಂಪಾದಿಸಿಕೊಂಡಿದ್ದಳು. ಆದರೆ ಅದೊಮ್ಮೆ ಹೈದರಾಬಾದಿನ ಲಾಲ್ ಬಹಾದೂರ್ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ಈ ಎಂಟರ ಪೋರಿಯನ್ನು ನೋಡಿದ ತರಬೇತುದಾರ ನಾಣಿ ಪ್ರಸಾದ್ ರಾವ್, 'ಇವಳಲ್ಲಿ ಅದ್ಭುತ ಪ್ರತಿಭೆಯಿದೆ, ತರಬೇತಿ ಕೊಡಿಸಬೇಕು ಎಂದಿದ್ದರೆ ನನ್ನ ಬಳಿ ಅಭ್ಯಾಸಕ್ಕೆ ಕರೆ ತನ್ನಿ' ಎಂದರು. ಆ ಕ್ಷಣದಲ್ಲಿ ತಂದೆ ಮಗಳನ್ನು ನಿನ್ನ ಆಯ್ಕೆ ಏನು ಎಂದು ಕೇಳಲೂ ಇಲ್ಲ, ನನ್ನ ಆಯ್ಕೆ ಇದು ಎಂದು ಮಗಳು ಹೇಳಲೂ ಇಲ್ಲ. ಅಪ್ಪ ಕಲಿಸುವ ಮನಸ್ಸು ಮಾಡಿದರು, ಮಗಳು ಕಲಿತಳು ಅಷ್ಟೇ!


ಅಪ್ಪ ಮಗಳ ಸವಾರಿ ಮನೆಯಿಂದ 20ಕಿಮೀ ದೂರ ಇದ್ದ ಕ್ರೀಡಾಂಗಣಕ್ಕೆ ನಿತ್ಯ ಬೆಳಗಿನ ಜಾವ ಹೊರಡುತ್ತಿತ್ತು. ಸರಿಯಾಗಿ ಆರು ಘಂಟೆಗೆ ಅಲ್ಲಿಗೆ ತಲುಪಿ ಎರಡು ತಾಸು ಕಠಿಣ ಅಭ್ಯಾಸ ನಡೆಸಬೇಕಿತ್ತು. ನಂತರ ಸೈನಾಳ ಶಾಲೆ ಮತ್ತಿತರ ಚಟುವಟಿಕೆಗಳು ಮುಂದುವರೆಯುತ್ತಿದ್ದವು. ಪ್ರತಿದಿನ ಮಗಳನ್ನು ಹಲವಾರು ಕಿಲೋಮೀಟರುಗಳಷ್ಟು ದೂರ ಗಾಡಿಯಲ್ಲಿ ಕರೆದುಕೊಂಡು ಹೋಗುವ ಶ್ರಮ ತಂದೆಯದಾದರೆ ಆ ಕಠಿಣ ತರಬೇತಿಗೆ ಒಗ್ಗಿಕೊಳ್ಳುವ ಸವಾಲು ಸೈನಾಳದಾಗಿತ್ತು. ಗಾಡಿಯ ಹಿಂದಿನ ಸೀಟಿನಲ್ಲಿ ಕುಳಿತು ತೂಕಡಿಸುತ್ತಿದ್ದ ದಣಿದ ಮಗಳು ಇನ್ನೆಲ್ಲಿ ಬಿದ್ದುಬಿಡುತ್ತಾಳೋ ಎಂಬ ಆತಂಕದಿಂದ ಅವಳ ತಾಯಿಯೂ ಜೊತೆಗೂಡುತ್ತಿದ್ದರು. ಸುಮಾರು ಮೂರು ತಿಂಗಳ ಈ ಪಡಿಪಾಟಲು ಅವರು ಕ್ರೀಡಾಂಗಣದ ಹತ್ತಿರದ ಮನೆಯೊಂದಕ್ಕೆ ವಾಸ್ತವ್ಯ ಬದಲಾಯಿಸಿದ ನಂತರವೇ ಮುಗಿದಿದ್ದು. ಬಳಿಕ ಅವಳ ತರಬೇತಿಯ ಅವಧಿ ಹೆಚ್ಚಿ ಸಂಜೆಗೂ ವಿಸ್ತರಿಸಿತು. ಪರಿಣಾಮ, ಸೈನಾ ಆಟದಲ್ಲಿ ಚೆನ್ನಾಗಿ ನುರಿತಳು. ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾದ ತರಬೇತುದಾರ ಆರಿಫ್ ಹಾಗೂ ಖ್ಯಾತ ಆಟಗಾರ ಹಾಗೂ ತರಬೇತುದಾರರಾದ ಪುಲ್ಲೇಲ ಗೋಪಿಚಂದ್‍ರ ಗರಡಿಯಲ್ಲೂ ಪಳಗಿದಳು.

ಒಂದೆಡೆ ಮಗಳ ತರಬೇತಿ ನಡೆಯುತ್ತಿದ್ದರೆ, ಮತ್ತೊಂದೆಡೆ ಹಣವನ್ನು ಹೊಂದಿಸಲು ತಂದೆ ಪರದಾಡುತ್ತಿದ್ದರು. ಅವಳ Racket, ಶೂ ಮತ್ತಿತರೆ ಪರಿಕರಗಳ ಖರ್ಚುಗಳು ಹೆಚ್ಚುತ್ತ ಸಾಗಿದ್ದವು. ಆಗಿನ್ನೂ ಯಾವ ಪ್ರಾಯೋಜಕರೂ ಸಿಕ್ಕಿರಲಿಲ್ಲ. ಹಣ ಬೇಕೆಂದಾಗಲೆಲ್ಲ ತಂದೆ ಏನು ಮಾಡುತ್ತಿದ್ದರು ಗೊತ್ತೇ? ಹಿಂದೆ-ಮುಂದೆ ಆಲೋಚಿಸದೆ ತಮ್ಮ ಪ್ರಾವಿಡೆಂಟ್ ಫಂಡ್‍ನಿಂದ ತೆಗೆದು ಕೊಡುತ್ತಿದ್ದರು. ಮಗಳಿಗೆ ಗೊತ್ತಾದರೆ ಇನ್ನೆಲ್ಲಿ ಅವಳ ಮನಸ್ಸಿನ ಮೇಲೆ ಪರಿಣಾಮವಾಗುತ್ತದೋ ಎಂದು ಅವಳಿಗೆ ಹೇಳುತ್ತಲೂ ಇರಲಿಲ್ಲ. ತಮ್ಮ ಭವಿಷ್ಯದ ಸಲುವಾಗಿ ಇರಿಸಿಕೊಂಡಿದ್ದ ಆಪದ್ಧನಕ್ಕೆ ಹಾಗೆ ಸೀದಾ ಕೈ ಹಾಕಬೇಕಾದರೆ, ಮಗಳ ನಿಷ್ಠೆಯ ಮೇಲೆ ಅವರಿಗೆ ಅದಿನ್ಯಾವ ಪರಿಯ ನಂಬಿಕೆಯಿದ್ದಿರಬೇಕಲ್ಲವೆ? ಅತ್ತ ಅವರು ತಮ್ಮ ಕೈಖಾಲಿ ಮಾಡಿಕೊಳ್ಳುತ್ತಿದ್ದರೆ ಇತ್ತ ಸೈನಾ ಯಶಸ್ಸಿನ ಒಂದೊಂದೇ ಮೆಟ್ಟಿಲುಗಳನ್ನೇರುತ್ತಿದ್ದಳು. 2006ರಲ್ಲಿ 19 ವರ್ಷದ ಒಳಗಿನ ವಯೋಮಾನದವರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದಳು. ಅಲ್ಲಿಂದಾಚೆಗೆ ಅವಳು ಹಿಂತಿರುಗಿ ನೋಡಿದ್ದೇ ಇಲ್ಲ. 2008ರಲ್ಲಿ ಜೂನಿಯರ್ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಪಟ್ಟ ಗಿಟ್ಟಿಸಿದಳು. ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತಳಾದಳು. ಅವುಗಳಲ್ಲಿ ಮುಖ್ಯವಾದದ್ದು 2010ರ ಕಾಮನ್‍ವೆಲ್ತ್ ಕ್ರೀಡಾಕೂಟದ ಚಿನ್ನ ಹಾಗೂ 2012ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಡೆದ ಕಂಚಿನ ಪದಕಗಳು.

ಇಷ್ಟೆಲ್ಲ ಆದರೂ ಸೈನಾಳದ್ದೊಂದು ದೊಡ್ಡ ದೌರ್ಬಲ್ಯವಿತ್ತು. ಅಗ್ರ ಕ್ರಮಾಂಕದ ಚೀನೀ ಪ್ರತಿಸ್ಪರ್ಧಿಗಳ ಎದುರು ನೇರಾನೇರ ಸೆಟ್‍ಗಳಲ್ಲಿ ಸೋತು ಸುಣ್ಣವಾಗಿಬಿಡುತ್ತಿದ್ದಳು. ಸೈನಾ 2013 ಹಾಗೂ 2014ರಲ್ಲಿ ಕೆಲ ಮುಖ್ಯ ಪಂದ್ಯಗಳಲ್ಲಿ ಅವರೆದುರು ಸೋತಾಗ ಇನ್ನು ಅವಳ ಬ್ಯಾಡ್ಮಿಂಟನ್ ಭವಿಷ್ಯ ಮುಗಿಯಿತೆಂದೇ ಎಲ್ಲರೂ ತಿಳಿದಿದ್ದರು. ಅವಳೇ ಹೇಳುವ ಪ್ರಕಾರ ಕಳೆದ ವರ್ಷ ವಿಶ್ವ ಚಾಂಪಿಯನ್‍ಶಿಪ್‍ನ ಪಂದ್ಯವನ್ನು ಸೋತಾಗಲಂತೂ ತನ್ನ ಮೇಲೇ ನಂಬಿಕೆ ಕಳೆದುಕೊಂಡಿದ್ದಳಂತೆ. ಈ ಆಟಕ್ಕೆ ವಿದಾಯ ಹೇಳಿಬಿಡಬೇಕೆಂಬ ತೀರ್ಮಾನವೂ ಮನಸ್ಸಿನಲ್ಲಿ ಹಾದುಹೋಗಿತ್ತಂತೆ. ಹಾಗಂತ, 'ನನ್ನ ಕೈಲಿ ಆಡಲಾಗುತ್ತಿಲ್ಲ, ಮೈ ಚಾಯ್ಸ್’ ಎಂದು ಅವಳು (Racket) ಎಸೆದುಬಿಡಲಿಲ್ಲ. ವರ್ಷಗಳಿಂದ ತನಗಾಗಿ ಅನೇಕ ತ್ಯಾಗಗಳನ್ನು ಮಾಡಿಕೊಂಡು ಬಂದ ತಂದೆ-ತಾಯಿಯರ ನಿರೀಕ್ಷೆಗಳನ್ನು ಹುಸಿ ಮಾಡಲಿಲ್ಲ. ತಾನು ಬಯಸಿದಷ್ಟು ಸಮಯ ತರಬೇತಿ ಹಾಗೂ ತನ್ನೆಡೆ ಹೆಚ್ಚಿನ ಗಮನವನ್ನು ನೀಡದ ಗೋಪಿಚಂದ್‍ರ ಅಕಾಡೆಮಿಯನ್ನು ಕಳೆದ ಸೆಪ್ಟೆಂಬರ್‍ನಲ್ಲಿ ತೊರೆದಳು. ಬೆಂಗಳೂರಿನಲ್ಲಿರುವ ಪ್ರಕಾಶ್ ಪಡುಕೋಣೆಯವರ ಅಕಾಡೆಮಿ ಸೇರಿ ಅಲ್ಲಿ ವಿಮಲ್ ಕುಮಾರ್ ಎಂಬ ತರಬೇತುದಾರರ ಕೈಕೆಳಗೆ ತರಬೇತಿ ಪಡೆಯತೊಡಗಿದಳು. ಫಲಿತಾಂಶ ಈಗ ನಮ್ಮೆದುರಲ್ಲೇ ಇದೆ.

2015ರ ಇಂಡಿಯಾ ಓಪನ್ ಗ್ರಾಂಡ್ ಪ್ರೀ ಗೆದ್ದಿದ್ದೂ ಅಲ್ಲದೆ ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಎಂಬ ಪಟ್ಟವನ್ನೂ ದಕ್ಕಿಸಿಕೊಂಡಿದ್ದಾಳೆ. ಮೈ ಚಾಯ್ಸ್ ಎಂದು ಹೇಳಿ ಶಿಸ್ತಿನ, ಬದ್ಧತೆಯ ಚೌಕಟ್ಟಿನಿಂದ ನುಸುಳಿಕೊಂಡು ಹೊರಬರುವುದು ಸುಲಭ. ಏಕೆಂದರೆ ಮನಸೋ ಇಚ್ಛೆ ಮಾಡಿಕೊಳ್ಳುವ ಆಯ್ಕೆಗಳಿಗೆ ಪರಿಣಾಮದ ಹಂಗಿರುವುದಿಲ್ಲ. ಆದರೆ ಸೈನಾಳಂಥ ಪರಿಣಾಮದ ಸೃಷ್ಟಿಯಾಗಬೇಕಾದರೆ ಹೆಜ್ಜೆ ಹೆಜ್ಜೆಗೂ ದೊರಕುವ ಬಹಳಷ್ಟು ಚಾಯ್ಸ್ ಗಳನ್ನು ಮುಲಾಜಿಲ್ಲದೆ ಬದಿಗೆ ಸರಿಸಬೇಕು. ನಾನು ಎಂಬ ಸ್ವಾರ್ಥಕ್ಕಿಂತ ಹೆಚ್ಚಾಗಿ ನನ್ನ ಜನ, ನನ್ನ ದೇಶಗಳೆಂಬ ಭಾವನೆಗಳೇ ಮುಖ್ಯವಾಗಬೇಕು. ಮೈಮಾಟದ ಅಂದವನ್ನು ಕಾಪಾಡಿಕೊಳ್ಳುವ ಸಲುವಾಗಿ ಜಿಮ್‍ಗೆ ಹೋಗುವ ದೀಪಿಕಾಳಿಗೂ, ದೈಹಿಕ ಕ್ಷಮತೆಯ ಸಲುವಾಗಿ ಕಸರತ್ತುಗಳನ್ನು ಮಾಡುವ ಸೈನಾಳಿಗೂ ಬಹಳ ವ್ಯತ್ಯಾಸವಿದೆ. ಚಿತ್ರೀಕರಣದ ವೇಳೆ ದೀಪಿಕಾಳ ಒಂದು ಶಾಟ್ ತಪ್ಪಾದರೆ ನೂರು ರೀಟೇಕ್‍ಗಳಿಗೆ ಅವಕಾಶವಿದೆ. ಆಕೆ ಏನನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಪಂದ್ಯದಲ್ಲಿ ಸೈನಾಳ ಒಂದು ಶಾಟ್ ತಪ್ಪಾದರೆ ಅದು ಅವಳ ಆತ್ಮವಿಶ್ವಾಸವನ್ನೇ ನುಚ್ಚುನೂರು ಮಾಡಬಹುದು. ಕ್ರೀಡಾ ಜೀವನಕ್ಕೇ ಮುಳುವಾಗಬಹುದು!

ದೀಪಿಕಾಳ ವೀಡಿಯೋಗೆ ಪ್ರತ್ಯುತ್ತರವೆಂಬಂತೆ ಕೆಲ ವಿದ್ಯಾರ್ಥಿಗಳು ಬಹಳ ಮಾರ್ಮಿಕವಾದ ಒಂದು ವೀಡಿಯೋ ಮಾಡಿದ್ದಾರೆ. ಅದರಲ್ಲಿ ಪುರುಷನೊಬ್ಬ ಥೇಟ್ ದೀಪಿಕಾಳಂತೆಯೇ, ನನ್ನ ಬಟ್ಟೆ, ನನ್ನ ಕಾರು, ನನ್ನ ಮನೆ ಎಲ್ಲ ನನ್ನ ಆಯ್ಕೆ ಎನ್ನುವವರೆಗೂ ಎಲ್ಲ ಸರಿಯಾಗಿರುತ್ತದೆ. ಮದುವೆಯಾಚೆಗಿನ ಸೆಕ್ಸ್ ನನ್ನ ಆಯ್ಕೆ ಎನ್ನುತ್ತಿದ್ದಂತೆ ಒಂದು ದೃಶ್ಯ ತೋರಿಸುತ್ತಾರೆ. ಅದು ಮೋಸ ಮಾಡಿದ ಗಂಡನ ಕತ್ತಿನ ಪಟ್ಟಿಯನ್ನು ಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಅವನನ್ನು ಉಗಿದು ಉಪ್ಪಿನಕಾಯಿ ಹಾಕುತ್ತಿರುವ ಹೆಂಡತಿಯ ದೃಶ್ಯ! ಅವಳ ಬೆಂಬಲಕ್ಕೆ ಸುತ್ತಲೂ ಹಲವಾರು ಮಂದಿ. ನನಗೆ ಮೋಸ ಮಾಡಿ ನನ್ನ ಬಾಳನ್ನು ಯಾಕೋ ಹಾಳುಮಾಡಿದೆ ಅಯೋಗ್ಯ ಎಂದು ಕಿರುಚಾಡುತ್ತಿರುವ ಹೆಂಡತಿ. ಅವಳ ಜೊತೆ ಸೇರಿ ಅವನಿಗೆ ಸಹಸ್ರನಾಮಾರ್ಚನೆ ಮಾಡುತ್ತಿರುವ ಮತ್ತೋರ್ವ ಹೆಂಗಸು. ಇದಲ್ಲವೇ ವಾಸ್ತವ?

ಸೆಲೆಬ್ರಿಟಿಗಳ ಅಭಿಮಾನಿಗಳಾಗಿ ಅತಿರೇಕಕ್ಕೆ ಬೀಳುವ ನಾವೂ ಕೊಂಚ ಯೋಚಿಸಬೇಕಿದೆ. ದೀಪಿಕಾಳ ಮಾತುಗಳನ್ನೇ ಅನ್ವಯಿಸುವುದಾದರೆ ಗಡಿಯಲ್ಲಿ ವೈರಿ ಬಂದು ನಿಂತಾಗ ನಮ್ಮ ಯೋಧರು 'ಮೈ ಚಾಯ್ಸ್' ಎಂದು ಬಂದೂಕನ್ನು ಬಿಸುಟರೆ ಏನಾದೀತು? ಆಪರೇಷನ್ ಥಿಯೇಟರಿಗೆ ಕೊಂಡೊಯ್ದ ಪೇಷೆಂಟನ್ನು ನೋಡಿದ ವೈದ್ಯ 'ಮೈ ಚಾಯ್ಸ್' ಎಂದು ಸಲೀಸಾಗಿ ಹೊರ ನಡೆದರೆ? ಸತ್ತವರ ಅಂತಿಮ ಸಂಸ್ಕಾರ ನಡೆಸಿಕೊಡಿ ಎಂದು ಕರೆದಾಗ ಪುರೋಹಿತರು 'ಮೈ ಚಾಯ್ಸ್' ಎಂದು ತಾರಮ್ಮಯ್ಯ ಅಂತ ಕೈಯ್ಯಾಡಿಸಿಬಿಟ್ಟರೆ?

ಖ್ಯಾತಿಯನ್ನು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳು ತಮ್ಮ ನಡೆ-ನುಡಿಗಳ ಬಗ್ಗೆ ಎಚ್ಚರದಿಂದಿರಬೇಕು. ಅವರನ್ನು ಅನುಕರಿಸುವ, ನೆರಳಿನಂತೆ ಅನುಸರಿಸುವ ಸಾವಿರಾರು ಮನಸ್ಸುಗಳಿರುತ್ತವೆ. ನಮಗೆ ಯಾರು ಮಾದರಿಯಾಗುತ್ತಾರೆ? ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಅಸಂಬದ್ಧ ಹೇಳಿಕೆಗಳನ್ನು ನೀಡಿರುವ ದೀಪಿಕಾಳೋ ಅಥವಾ ತನ್ನ ಶ್ರಮ ಏಕಾಗ್ರತೆಗಳಿಂದ ಸಾಧನೆಯ ಶಿಖರವನ್ನೇರಿರುವ ಸೈನಾ ನೆಹವಾಲಳೋ?

ಮೈ ಚಾಯ್ಸ್ ಎನ್ನುವಷ್ಟು ಮತಿಭ್ರಮಣೆ ನಮಗಂತೂ ಆಗಿಲ್ಲ!


Thursday 26 March 2015

ರಾಜಕಾರಣಿಗಳೇ, ಅಧಿಕಾರಿಗಳೆಂದರೆ ಏಕಿಷ್ಟು ಅಗ್ಗ ನಿಮಗೆ?

'ನೀನು ಹಲ್ಕಾ ಕೆಲಸ ಮಾಡ್ಕೊಂಡ್ರೆ ಮಗನೆ, ಸಸ್ಪೆಂಡ್ ಆಗೋದಲ್ಲ, ಜೀವನ ಪೂರ್ತಿ ಊಟ ಸಿಗದಂಗೆ ಮಾಡಿಬಿಡ್ತೀನಿ ಹುಷಾರ್. ನಿಂದು ಗಾಂಚಲಿ ಜಾಸ್ತಿ ಆಗೋಯ್ತು'. ಆಹಾ! ಎಂಥ ಮುತ್ತಿನಂಥ ಮಾತುಗಳು ಇವು! ನಮ್ಮ ಶಾಲಾ ಪರೀಕ್ಷೆಗಳಲ್ಲಿ ಸಂದರ್ಭ ಸಹಿತ ವಿವರಿಸಿ ಎಂಬ ಶೀರ್ಷಿಕೆಯಡಿಯಲ್ಲಿ ಈ ಮಾತನ್ನು ಯಾರು ಯಾರಿಗೆ ಹೇಳಿದರು ಎಂಬ ಪ್ರಶ್ನೆ ಇರುತ್ತಿತ್ತಲ್ಲ, ಅದೀಗ ನೆನಪಾಗುತ್ತಿದೆ. ಇಲ್ಲಿ ಬೈಸಿಕೊಂಡ ನತದೃಷ್ಟ ಯಾರೋ ಗೊತ್ತಿಲ್ಲ, ಆದರೆ ಬೈದ ಮಹಾನುಭಾವ ವರ್ತೂರು ಪ್ರಕಾಶ್ ಎಂಬ ಶಾಸಕ! ಈ ಮಾತುಗಳಿರುವ ಆಡಿಯೋ ಬಹುತೇಕರ ಮೊಬೈಲ್‍ಗಳಲ್ಲಿ ಕೆಲದಿನಗಳಿಂದ ಹರಿದಾಡುತ್ತಿದೆ. ಇದರ ಮುದ್ರಿತ ರೂಪವೂ ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆತ ತನ್ನ ಎಲುಬಿಲ್ಲದ ನಾಲಗೆಯನ್ನು ತನ್ನದೇ ಕೈಕೆಳಗಿನ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹರಿಬಿಟ್ಟಿರುವ ರೀತಿ ಇದು! ಕೇಳಿದೊಡನೆ ಎಂಥಾ ಜಿಗುಪ್ಸೆ ಹುಟ್ಟುತ್ತದಲ್ಲವೆ? ಹಾಗಂತ ಇದು ಆತನಿಗೆ ಮಾತ್ರ ಸೀಮಿತ ಎಂದುಕೊಳ್ಳಬೇಡಿ. ಇನ್ನೊಂದಷ್ಟು ನಮೂನೆಗಳು ಇಲ್ಲಿವೆ ನೋಡಿ.




‘ಬಕ್‍ವಾಸ್ ಕರ್ತೇ ಹೋ? ಚುಪ್ ಬೈಠಿಯೇ ಆಪ್, ಬದ್‍ತಮೀಜ್ ಕಹೀಂ ಕಾ’ ಎಂದು ಸಮಾಜವಾದಿ ಪಕ್ಷದ ಸಚಿವ ಆಜಂ ಖಾನ್ ತುಂಬಿದ ಸಭೆಯಲ್ಲಿ, ಪತ್ರಕರ್ತರೆಲ್ಲರ ಎದುರೇ ತನ್ನ ಕೈಕೆಳಗಿನ ಐಎಎಸ್ ಅಧಿಕಾರಿಯ ಮೇಲೆ ಅಬ್ಬರಿಸಿದ್ದ. ತಾನು ಉತ್ತರಪ್ರದೇಶದ ನಗರಾಭಿವೃದ್ಧಿ ಸಚಿವನೆಂಬ ದರ್ಪ ಆತನ ಕೈಲಿ ಆ ಮಾತುಗಳನ್ನಾಡಿಸಿತ್ತು. ಹಿಂದಿಯಲ್ಲಿ ಬೈದ ಆ ಮಾತುಗಳ ಭಾವಾರ್ಥ, 'ತಲೆಹರಟೆ ಮಾತಾಡುತ್ತೀಯಾ? ತೆಪ್ಪಗಿರು, ಶಿಸ್ತಿಲ್ಲದ ಮನುಷ್ಯ ನೀನು' ಎಂಬುದು. ಆ ಐಎಎಸ್ ಅಧಿಕಾರಿ ಪ್ರತ್ಯುತ್ತರ ನೀಡುವುದು ಹಾಗಿರಲಿ, ತಗ್ಗಿಸಿದ ತಲೆಯನ್ನೂ ಮೇಲೆತ್ತಲಿಲ್ಲ. ಅಂದಹಾಗೆ, ಪಾಪ ಅವರ ತಪ್ಪೇನೂ ಇರಲಿಲ್ಲ. ಅವರ ಇಬ್ಬರು ಸಹೋದ್ಯೋಗಿಗಳು ಅಂದು ಆಜಂ ಖಾನ್ ಕರೆದಿದ್ದ ಸಭೆಯನ್ನು ಬಿಟ್ಟು ಮತ್ತ್ಯಾವುದೋ ಸಭೆಗೆ ಹೋಗಿದ್ದರು. ಅದನ್ನು ಹೇಳಹೋದ ಆ ಅಧಿಕಾರಿ ಆಜಂ ಖಾನ್‍ ಕೈಲಿ ಶಿಸ್ತಿನ ಪಾಠವನ್ನು ಸಾರ್ವಜನಿಕವಾಗಿ ಹೇಳಿಸಿಕೊಳ್ಳಬೇಕಾಯಿತು. ಜೊತೆಗೆ, 'ನಾನು ಶಿಸ್ತಿನ ಮನುಷ್ಯ. ನನ್ನ ಕೈಕೆಳಗಿನ ಅಧಿಕಾರಿಗಳಷ್ಟೇ ಯಾಕೆ, ನಾನೇ ಶಿಸ್ತನ್ನು ಮೀರಿದರೆ ಸ್ವತಃ ನನ್ನನ್ನೂ ದಂಡಿಸಿಕೊಳ್ಳದೆ ಬಿಡುವುದಿಲ್ಲ' ಎಂದು ತನ್ನ ಕೊಳಕು ಮಾತುಗಳನ್ನು ಮಾಧ್ಯಮಗಳೆದುರು ಸಮರ್ಥಿಸಿಕೊಂಡಿದ್ದ! ಆತನ ಶಿಸ್ತು, 'ಕಾರ್ಗಿಲ್ ಯುದ್ಧವನ್ನು ಗೆದ್ದವರು ಹಿಂದೂಗಳಲ್ಲ, ಮುಸ್ಲಿಂ ಸೈನಿಕರು' ಎಂಬ ಹೇಳಿಕೆ ನೀಡಿ ಯೋಧರ ಒಗ್ಗಟ್ಟನ್ನು ಮುರಿಯುವ ಮಟ್ಟದ್ದು. ಅದೂ ಹೋಗಲಿ, ಕಳೆದು ಹೋದ ತನ್ನ ಏಳು ಎಮ್ಮೆಗಳನ್ನು ಹುಡುಕಿಸಿಕೊಳ್ಳಲು ಉತ್ತರಪ್ರದೇಶದ ಪೋಲೀಸರನ್ನು ಹಾಗೂ ಪೋಲೀಸು ನಾಯಿಗಳನ್ನು ಬೀದಿ ಬೀದಿ ಅಲೆಸಿದನಲ್ಲ, ಆಗ ಇಡೀ ದೇಶವೇ ಆ ಭೂಪನನ್ನು ನೋಡಿ ನಕ್ಕಿತ್ತು. ಎಲ್ಲಿಗೆ ಬಂತಪ್ಪಾ ಅಧಿಕಾರದ ದುರುಪಯೋಗ ಎಂದು ವಿಷಾದ ಪಟ್ಟಿತ್ತು! ಅಂಥವನಿಂದ ಐಎಎಸ್ ಅಧಿಕಾರಿಗೆ ಶಿಸ್ತಿನ ಉಪದೇಶ!



ಕಾನ್ಪುರದ ಸಮಾಜವಾದಿ ಪಕ್ಷದ ಪುಢಾರಿ ಇರ್ಫಾನ್ ಸೋಲಂಕಿಯದ್ದು ಮತ್ತೊಂದು ಕಥೆ. 20 ಜನರ ದಂಡು ಕಟ್ಟಿಕೊಂಡು, ಕಾನ್ಪುರದ ವಿದ್ಯುಚ್ಛಕ್ತಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ರಿತು ಮಹೇಶ್ವರಿ ಎಂಬ ಮಹಿಳಾ ಐಎಎಸ್ ಅಧಿಕಾರಿಯ ಕಚೇರಿಗೆ ನುಗ್ಗಿದ್ದ. ಆಕೆಯನ್ನು ಅವಾಚ್ಯವಾಗಿ ನಿಂದಿಸಿ ಅಸಭ್ಯವಾಗಿಯೂ ವರ್ತಿಸಿದ್ದ.

ಮತ್ತೊಂದು ಪ್ರಕರಣದಲ್ಲಿ ಉತ್ತರಪ್ರದೇಶದ ಐಪಿಎಸ್ ಅಧಿಕಾರಿ ಉದಯ್ ಶಂಕರ್ ಜೈಸ್ವಾಲ್, ಕೃಷಿ ಸಚಿವ ಆನಂದ್ ಸಿಂಗ್‍ರ ಪದತಲದಲ್ಲಿ ಚಕ್ಕಳಮಟ್ಟೆ ಹಾಕಿಕೊಂಡು ಕುಳಿತಿದ್ದ ಚಿತ್ರ ಮಾಧ್ಯಮಗಳಲ್ಲೆಲ್ಲ ಪ್ರಸಾರವಾಗಿತ್ತು. ಆ ಅಧಿಕಾರಿ ಅಚ್ಚುಕಟ್ಟಾಗಿ ನೆಲದ ಮೇಲೆ ಕುಳಿತು, ತಮ್ಮ ಕಚೇರಿಗೆ ಸಂಬಂಧಿಸಿದ ಕಾಗದ-ಪತ್ರಗಳನ್ನು ಹರವಿಕೊಂಡು ಫೋನಿನಲ್ಲಿ ಸಂಭಾಷಿಸುತ್ತಿದ್ದರೆ, ಸಚಿವ ಮಹಾಶಯರು ಮೇಲೆ ವಿರಾಜಮಾನರಾಗಿದ್ದರು!

ಇವು ಬೆಳಕಿಗೆ ಬಂದಿರುವ ಕೆಲವು ಉದಾಹರಣೆಗಳಾದರೆ ತೆರೆಮರೆಯಲ್ಲಿ ನಿತ್ಯ ನಡೆಯುವ ಹೀಯಾಳಿಕೆ, ಬೈಗುಳ, ಅಪಮಾನಗಳೆಷ್ಟಿರಬಹುದೋ ಊಹಿಸಿ! ಅಧಿಕಾರಿಗಳನ್ನು ಘಂಟೆಗಟ್ಟಳೆ ತಮ್ಮ ಕಚೇರಿಯ ಹೊರಗೆ ನಿಲ್ಲಿಸಿ ಕಾಯಿಸುವ, ಅವರಿಂದ ತಮ್ಮ ಖಾಸಗಿ ಕೆಲಸಗಳನ್ನು ಮಾಡಿಸಿಕೊಳ್ಳುವ, ಅವರು ತಮ್ಮ ಸ್ವಾಭಿಮಾನವನ್ನು ಬಲಿಕೊಟ್ಟು ಅವುಡುಗಚ್ಚಿ ಎಲ್ಲವನ್ನೂ ಸಹಿಸುವಂತೆ ಮಾಡುವ, ಸೆಟೆದು ನಿಲ್ಲುವವರನ್ನು ಮನಬಂದಂತೆ ಎತ್ತಂಗಡಿ ಅಥವಾ ಅಮಾನತು ಮಾಡುವ ನೂರಾರು ಘಟನೆಗಳ ಹಿಂದೆ ರಾಜಕಾರಣಿಗಳ ಕೈವಾಡವೇ ಅಲ್ಲವೇ ಇರುವುದು? ಪ್ರಾಮಾಣಿಕ ಅಧಿಕಾರಿಗಳ ಮೇಲೆ ನಡೆಯುವ ಹಲ್ಲೆ, ದಾಳಿಗಳಿಗೆ, ಬೆಲೆಯೇ ಇಲ್ಲದಂತೆ ನಿಗೂಢವಾಗಿ ಮುರುಟಿ ಹೋಗುವ ಅವರ ಜೀವಗಳಿಗೆ ಹೊಣೆಯೂ ರಾಜಕಾರಣಿಗಳೇ ತಾನೆ?

ಕಾರ್ಪೋರೇಟ್ ಪ್ರಪಂಚದ ಒಂದೇ ಒಂದು ಉದಾಹರಣೆ ತೆಗೆದುಕೊಳ್ಳಿ. ಪ್ರತಿ ಕಂಪೆನಿಯಲ್ಲೂ ಮಾನವ ಸಂಪನ್ಮೂಲ ವಿಭಾಗವೆಂಬುದೊಂದಿರುತ್ತದೆ. ಕೆಲಸ ಮಾಡದ ಶುದ್ಧಾತಿಶುದ್ಧ ಮುಟ್ಠಾಳನನ್ನೂ ‘ನೀನು ಅಯೋಗ್ಯ’ ಎಂದು ನೇರವಾಗಿ ಬಯ್ಯುವಂತಿಲ್ಲ. ನಿನ್ನ ಕೆಲಸದ ಗುಣಮಟ್ಟ ನಮ್ಮ ನಿರೀಕ್ಷೆಯಷ್ಟಿಲ್ಲ ಎಂಬ ಬೆಣ್ಣೆ ಸವರಿದ ಪ್ರೀತಿಯ ಮಾತುಗಳನ್ನಾಡೇ ಅವನನ್ನು ಸಾಗಹಾಕಬೇಕು. ಆ ಮಗನೆ ಈ ಮಗನೆ ಎಂದು ಏಕವಚನದಲ್ಲಿ ಬೈಯ್ಯುವುದು ಹಾಗಿರಲಿ, ನಮ್ಮ ಮಾತಿನ ಧಾಟಿ ತುಸು ಕಟುವಾಗಿದ್ದು ಅವನ ಮನಸ್ಸಿಗೆ ನೋವಾಗಿಬಿಟ್ಟರೆ ಮಾನವ ಸಂಪನ್ಮೂಲ ವಿಭಾಗದವರು ನಮ್ಮ ಜನ್ಮ ಜಾಲಾಡಿಬಿಡುತ್ತಾರೆ. ಕೆಲಸ ಬರುವುದಿಲ್ಲವೆಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬನ ಮಾನಸಿಕ ಸ್ಥೈರ್ಯವನ್ನು ತುಳಿದುಹಾಕುವ ಯಾವ ಹಕ್ಕೂ ನಮಗಿರುವುದಿಲ್ಲ ಎಂಬುದು ಖಂಡಿತ ಒಪ್ಪಬೇಕಾದ್ದೇ. ಇಂಜಿನಿಯರುಗಳಿಗೆ ಇರುವ ಪರಿಗಣನೆ ಅಧಿಕಾರಿಗಳಿಗೇಕಿಲ್ಲ? ಅವರೂ ಮನುಷ್ಯರೇ ತಾನೆ?

ಏಕೆ ರಾಜಕಾರಣಿಗಳೇ ಈ ಧೋರಣೆ? ನಿಮಗೆ ಅಷ್ಟೊಂದು ಅಗ್ಗವಾ ನಮ್ಮ ಅಧಿಕಾರಿಗಳೆಂದರೆ, ಅದರಲ್ಲೂ ಐಎಎಸ್ ಅಧಿಕಾರಿಗಳೆಂದರೆ? ಅಥವಾ ಐಎಎಸ್ ಅಧಿಕಾರಿಯಾಗುವುದು ರಾಜಕಾರಣಿಯಾದಷ್ಟೇ ಸಲೀಸು ಎಂದುಕೊಂಡುಬಿಟ್ಟಿದ್ದೀರೋ ಹೇಗೆ? ಇಲ್ಲಿ ಕೇಳಿ, ನೀವು ಸ್ಲೇಟು-ಬಳಪ ಕೈಯ್ಯಲ್ಲಿ ಹಿಡಿಯದೇ ಇದ್ದರೂ, ನಿಮ್ಮ ನಾಲಗೆಯಿಂದ ನಾಲ್ಕು ಪದಗಳು ಸರಿಯಾಗಿ ಉದುರದೇ ಇದ್ದರೂ ನೀವು ರಾಜಕಾರಣಿಗಳಾಗಬಹುದು! ನಿಮ್ಮ ಯೋಗ್ಯತೆಯನ್ನಳೆಯುವ ಒಂದೇ ಒಂದು ಸರಳ ಸ್ಪರ್ಧೆ, ಪರೀಕ್ಷೆ,? ಉಹೂಂ. ಇಲ್ಲವೇ ಇಲ್ಲ. ನಿಮಗೆ ಯಾವ ವಿದ್ಯಾರ್ಹತೆಯೂ ಬೇಕಿಲ್ಲ, ವ್ಯಕ್ತಿತ್ವ ಹೀಗೇ ಇರಬೇಕೆಂಬ ಯಾವ ಮಾನದಂಡವೂ ಇಲ್ಲ.  ನಿಮ್ಮ ಭಾಷೆ, ಮ್ಯಾನರಿಸಂ, ವ್ಯವಹರಿಸುವ ರೀತಿಯ ಬಗ್ಗೆ ಕಟ್ಟುಪಾಡುಗಳಿಲ್ಲ. ನಮ್ಮನ್ನು ಆಳುವ ನಿಮ್ಮಿಂದ ಒಟ್ಟಾರೆ ನಮಗಿರುವುದು ಶೂನ್ಯ ನಿರೀಕ್ಷೆಗಳು! ಜಾತಿ, ಹಣ, ಹೆಸರು ಅಥವಾ ತೋಳ್ಬಲಗಳ ಬೆಂಬಲವಿದ್ದರೆ ನೀವು ಬೇಕೆಂದಾಗ ರಾಜಕಾರಣಿಗಳಾಗಬಹುದು! ಗ್ರಹಚಾರವೊಂದು ಸರಿಯಾಗಿರಬೇಕು ಅಷ್ಟೆ. ಅದನ್ನೂ ಹುಟ್ಟುತ್ತಲೇ ಹಣೆಯ ಮೇಲೆ ಬ್ರಹ್ಮನ ಕೈಲೇ ಬರೆಸಿಕೊಂಡು ಬಂದುಬಿಡುವುದರಿಂದ ಅದರಲ್ಲೂ ಶ್ರಮ ಹಾಕುವ ಪ್ರಮೇಯವಿಲ್ಲ! ರಾಜಕಾರಣಿಗಳೆಂಬ ಪಟ್ಟ ಸಿಕ್ಕಿ, ಕೈಗೊಂದು ಪದವಿಯೂ ದಕ್ಕಿಬಿಟ್ಟರಂತೂ ನೀವು ಆಡಿದ್ದೇ ಆಟ! ಅಧಿಕಾರಿಗಳೆಲ್ಲ ನಿಮ್ಮ ಸೇವಕರು ಎಂಬ ಭ್ರಾಂತಿಗೆ ಬೀಳುತ್ತೀರಲ್ಲ, ಜನರ ಸೇವಕರಂತೆ ಕೆಲಸ ಮಾಡಬೇಕಾದವರು ನೀವು ಎಂಬುದನ್ನು ಏಕೆ ಮರೆಯುತ್ತೀರ? ಬದುಕಿರುವಾಗಲಂತೂ ಸರಿಯೇ ಸರಿ, ಸತ್ತ ಮೇಲೂ ಅಧಿಕಾರಿಗಳನ್ನು 'ಅವನು', 'ಇವನು' ಎಂದು ಏಕವಚನದಲ್ಲಿ ಕರೆಯುತ್ತೀರಲ್ಲ, ಅವರ ಪ್ರತಿಭೆಗೆ, ವಿದ್ಯಾರ್ಹತೆಗೆ, ಕಡೇಪಕ್ಷ ಜೀವಕ್ಕೊಂದು ಬೆಲೆಯಾದರೂ ಬೇಡವೆ?

ನಿಮ್ಮ ಕೈಕೆಳಗೆ ದುಡಿಯುವ ಒಬ್ಬೊಬ್ಬ ಐಎಎಸ್ ಅಧಿಕಾರಿಯೂ ಅದೆಷ್ಟು ಕಷ್ಟಪಟ್ಟು ಆ ಮಟ್ಟಕ್ಕೇರಿರುತ್ತಾನೆ ಗೊತ್ತಾ? ಪ್ರತಿ ವರ್ಷ ಲಕ್ಷಾಂತರ ಯುವಕ-ಯುವತಿಯರು ಐಎಎಸ್ ಪಾಸು ಮಾಡುವ ಕನಸು ಕಾಣುತ್ತಾರೆ. ಕನಸೆಂದರೆ ಎಮ್ಮೆ ಅಥವಾ ಹಸುಗಳನ್ನು ಮೇಯಿಸಿಕೊಂಡು ಕಾಣುವ ಹಗಲುಗನಸಲ್ಲ. ಹಟಕ್ಕೆ ಬಿದ್ದು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತಾಸುಗಟ್ಟಳೆ ಓದಿ, ವರ್ಷಗಟ್ಟಳೆ ಹಾಕುವ ಸತತ ಶ್ರಮ ಅದು. ಮೊದಲು ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಆ ಪರೀಕ್ಷೆಯೇ ಕಠಿಣ. ತಲಾ 200 ಅಂಕಗಳ ಎರಡು ಪೇಪರ್. ಇತಿಹಾಸ, ವಿಜ್ಞಾನ, ಪ್ರಚಲಿತ ವಿದ್ಯಮಾನ, ಭೂಗೋಳ, ಸಂವಹನ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ನೈಪುಣ್ಯ, ಹೀಗೆ ಹಲವಾರು ವಿಷಯಗಳ ಕುರಿತು ತಯಾರಿ ನಡೆಸಬೇಕು. ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಗುರುತಿಸಬೇಕು. ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆದುಕೊಳ್ಳಬೇಕು. ಒಟ್ಟಿನಲ್ಲಿ ಆ ಹಂತ ದಾಟಿದ ಮೇಲೆ ಮುಖ್ಯ ಪರೀಕ್ಷೆ! ಒಂಭತ್ತು ಪೇಪರ್‍ಗಳಿರುವ ಮುಖ್ಯ ಪರೀಕ್ಷೆಯ ಒಟ್ಟು ಅಂಕಗಳು 1750! ಪ್ರಬಂಧ, ಸಾಮಾನ್ಯ ವಿಷಯಗಳು, ಐಚ್ಛಿಕ ವಿಷಯಗಳೆಲ್ಲವೂ ಅದರಲ್ಲಿರುತ್ತವೆ. ಆಡಳಿತ, ಸಂವಿಧಾನ, ವಿದೇಶಾಂಗ ವ್ಯವಹಾರ, ತಂತ್ರಜ್ಞಾನಗಳಿಂದ ಹಿಡಿದು ನೈತಿಕತೆ, ಸಮಗ್ರತೆಯವರೆಗಿನ ಎಲ್ಲ ಪಾಠಗಳನ್ನೂ ಓದಬೇಕು. ಇದರ ಜೊತೆಗೆ 275 ಅಂಕಗಳ ಮೌಖಿಕ ಪರೀಕ್ಷೆ ಬೇರೆ. ಒಟ್ಟಿನಲ್ಲಿ ಐಎಎಸ್ ಪರೀಕ್ಷೆಗೆ ಕೂರುವ ಅಭ್ಯರ್ಥಿಗಳು ಭಾರತ ಮಾತ್ರವಲ್ಲ, ಇಡೀ ವಿಶ್ವದ ಆಗುಹೋಗುಗಳ ಬಗ್ಗೆ ತಿಳಿದುಕೊಂಡಿರಬೇಕು. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವವರಂತೂ ಎಲ್ಲ ವಿಷಯಗಳಲ್ಲೂ ಎತ್ತಿದ ಕೈ ಎನ್ನುವಷ್ಟು ಜ್ಞಾನವನ್ನು ಸಂಪಾದಿಸಿಕೊಂಡವರೇ. ಇನ್ನೊಂದು ವಿಷಯ ಗೊತ್ತಾ? ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಅತ್ಯುನ್ನತವಾದದ್ದು ಐಎಎಸ್ ಹಾಗೂ ಐಎಫ್‍ಎಸ್. ಒಮ್ಮೆ ಓರ್ವ ಅಭ್ಯರ್ಥಿ ಐಎಎಸ್ ಅಥವಾ ಐಎಫ್‍ಎಸ್ ಅಧಿಕಾರಿಯಾಗಿ ನಿಯುಕ್ತನಾದರೆ ಅವನು ಮತ್ತೊಮ್ಮೆ ನಾಗರಿಕ ಸೇವಾ ಪರೀಕ್ಷೆಗೆ ಕೂರುವ ಹಾಗಿಲ್ಲ! ಏಕೆಂದರೆ ಐಎಎಸ್‍ ಅಥವಾ ಐಎಫ್‍ಎಸ್‍ಗೆ ಸೇರಲು ಬೇಕಾಗುವಷ್ಟು ಅಂಕಗಳನ್ನು ಗಳಿಸಬಲ್ಲವರು ಗರಿಷ್ಠ ಮಟ್ಟವನ್ನು ಮುಟ್ಟಿದಂತೆ! ಹಾಗಾದರೆ ಅಭ್ಯರ್ಥಿಗಳು ಅದಿನ್ಯಾವ ಮಟ್ಟದ ತಯಾರಿ ನಡೆಸಬೇಕು ಹೇಳಿ? ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದಕ್ಕೆ ಅದೆಷ್ಟು ತರಬೇತಿ, ಏಕಾಗ್ರತೆ, ಪರಿಶ್ರಮಗಳು ಬೇಕು?

ಇಷ್ಟು ಬುದ್ಧಿವಂತರನ್ನ, ಪ್ರತಿಭಾವಂತರನ್ನ ನಿಮ್ಮ ಜೋಳಿಗೆಗೆ ಹಾಕುತ್ತಾರಲ್ಲ, ನೀವು ಅವರನ್ನು ನಡೆಸುಕೊಳ್ಳುವ ರೀತಿ ಸರಿಯಾ? ಅಸಲಿಗೆ ಯಾರು ಯಾರ ಕೈಕೆಳಗಿರಬೇಕು? ನಿಮಗೆ ಅಧಿಕಾರವಿದೆ ಮತ್ತು ನಿಮ್ಮಲ್ಲೂ ಬೆರಳೆಣಿಕೆಯಷ್ಟು ಮಂದಿ ಸಭ್ಯರು, ಬುದ್ಧಿವಂತರಿದ್ದಾರೆ ಎಂಬ ಅಂಶಗಳನ್ನು ಬಿಟ್ಟರೆ ನಿಮಗೂ ಅವರಿಗೂ ಯಾವುದರಲ್ಲಿ ಹೋಲಿಕೆ? ಇಷ್ಟು ಕ್ಷಮತೆಯುಳ್ಳವರು ನಿಮ್ಮ ರಾಜಕೀಯ ಪಗಡೆಯಾಟದ ಕಾಯಿಗಳೇಕಾಗಬೇಕು? ನೀವು ನಡೆಸಿದಂತೆ ನಡೆದರೆ ಸರಿ, ಇಲ್ಲವೆಂದರೆ ಅವರೇಕೆ ಬಲಿಯಾಗಬೇಕು? ಸ್ವಲ್ಪ ಯೋಚಿಸಿ ನೋಡಿ. ನಮ್ಮ ಯುವಕರು ಇಂಜಿನಿಯರ್, ಡಾಕ್ಟರ್ ಹಾಗೂ ಐಎಎಸ್ ಅಧಿಕಾರಿಗಳಾಗ ಬಯಸುತ್ತಾರೆ. ರಾಜಕಾರಣಿಯಾಗ ಬಯಸುವವರ ಪ್ರಮಾಣ ಎಷ್ಟಿದೆ ಹೇಳಿ? ಇದನ್ನೊಂದು ಔದ್ಯೋಗಿಕ ಕ್ಷೇತ್ರ ಎಂದು ಪರಿಗಣಿಸಲು ಬೇಕಾದ ಘನತೆಯನ್ನೇನಾದರೂ ಉಳಿಸಿದ್ದೀರಾ? ಯಾವುದರಲ್ಲಾದರೂ ಮಾದರಿಯಾಗಿ ಯುವಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದೀರಾ? ಬದಲಿಗೆ, ಅಧಿಕಾರಿಗಳನ್ನು ಇಷ್ಟು ಹೀನಮಟ್ಟದಲ್ಲಿ ಕಂಡು ನಮ್ಮ ಕಣ್ಣುಗಳಲ್ಲಿ ಇನ್ನೂ ಕುಸಿದಿದ್ದೀರ. ಡಿ.ಕೆ ರವಿಯವರ ನಿಗೂಢ ಸಾವಿನಿಂದಾಗಿ ಇಡೀ ರಾಜ್ಯವೇ ಒಗ್ಗಟ್ಟಾಗಿ ಬೀದಿಗಿಳಿದದ್ದು ನೋಡಿದರೆ ನಿಮ್ಮ ವರ್ತನೆಯಿಂದ ನಾವೆಷ್ಟು ರೋಸಿಹೋಗಿದ್ದೇವೆ ಎಂಬುದು ಅರ್ಥವಾಗುವುದಿಲ್ಲವೇ?

ಇರುವ ಯಂಕ, ನಾಣಿ, ಸೀನರಲ್ಲಿ ಒಬ್ಬರನ್ನು ಕಣ್ಮುಚ್ಚಿ ಆರಿಸಿ ಕಳಿಸುವ ನಮ್ಮ ತಪ್ಪೂ ಇದರಲ್ಲಿದೆ ಬಿಡಿ. ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ನಾವು ಸರಿಯಾಗಿ ನಿಭಾಯಿಸಿದರೆ ಇಂಥವಕ್ಕೆ ಆಸ್ಪದವೇ ಇರುವುದಿಲ್ಲ. ಇಂದು ಒಬ್ಬ ಅಧಿಕಾರಿಗಾಗಿ ಜನ ಬೀದಿಗಿಳಿದಿದ್ದಾರೆ. ಇದೇ ಜನ ನಾಳೆ ಈ ವ್ಯವಸ್ಥೆ ಬದಲಾಗಬೇಕೆಂಬ ಹಟಕ್ಕಿಳಿದರೆ ಆಶ್ಚರ್ಯವೇನಿಲ್ಲ.

ಈ ಕ್ಷಣಕ್ಕೆ ನಮಗೆ ತೋಚುತ್ತಿರುವ ಒಂದು ಪರಿಹಾರವೇನು ಗೊತ್ತಾ? ನಿಮಗೂ  ಅರ್ಹತಾ ಪರೀಕ್ಷೆಗಳನ್ನಿಡಬೇಕು. ಅದರಲ್ಲಿ ಉತ್ತೀರ್ಣರಾದವರಿಗೆ ಮಾತ್ರ ರಾಜಕಾರಣಿ ಎಂಬ ಹಣೆಪಟ್ಟಿ ಅಂಟಿಸಬೇಕು. ನಮ್ಮ ಹಾಗೆ ಅಂಕಗಳಿಗೆ, ಉನ್ನತ ಶ್ರೇಣಿಗಳಿಗೆ ನೀವೂ ತಿಣುಕಾಡಬೇಕು. ಆಗಲಾದರೂ ಬುದ್ಧಿವಂತರ, ಪರಿಶ್ರಮಿಗಳ, ದಕ್ಷರ ಹಾಗೂ ಪ್ರಾಮಾಣಿಕರ ಬೆಲೆ ನಿಮಗೆ ತಿಳಿಯಬಹುದು!

ಸಗಣಿಯವರೊಂದಿಗಿನ ಸರಸ ಸಾರ್ಥಕವಾದೀತೇ?

ಮಸಾರತ್ ಆಲಮ್! ಈ ಹೆಸರು ಜಮ್ಮು-ಕಾಶ್ಮೀರದ ಜನರಿಗೆ, ಅದರಲ್ಲೂ ಪ್ರತ್ಯೇಕತಾವಾದಿಗಳಿಗೆ ಚಿರಪರಿಚಿತ. ಆದರೆ ದೇಶದ ಉಳಿದ ಭಾಗದ ಜನಕ್ಕೆ ಅಷ್ಟಾಗಿ ಗೊತ್ತಿರಲಿಲ್ಲ. ಜೈಲಿನಲ್ಲಿದ್ದ ಇವನು ಈಗ ಬಿಡುಗಡೆಯಾಗಿ ರಾತ್ರೋರಾತ್ರಿ ಸುದ್ದಿಯಾಗಿಬಿಟ್ಟಿದ್ದಾನೆ. ಅಂದಹಾಗೆ, ಇವನ ಬಿಡುಗಡೆ ಅಷ್ಟೊಂದು ಸಂಚಲನವನ್ನೇಕೆ ಸೃಷ್ಟಿಸಿತು? ನವ ವಧುವರರಂತೆ ಕೈಹಿಡಿದು ಜೊತೆಯಾಗಿ ನಡೆಯಬೇಕಿದ್ದ ಬಿಜೆಪಿ-ಪಿಡಿಪಿ ಪಕ್ಷಗಳು ಮಧುಚಂದ್ರ ಮುಗಿಯುವ ಮುನ್ನವೇ ಮುನಿದಿರುವುದೇಕೆ? ಏಕೆಂದರೆ ಈ ಭೂಪನ ಬಯೋಡೇಟಾ ಹಾಗಿದೆ!

ಮೊತ್ತಮೊದಲ ಬಾರಿ ಇವನು ಜೈಲಿನ ಮುಖ ಕಂಡಿದ್ದು 1990ರಲ್ಲಿ. ಆಗಿನ್ನೂ ಇವನಿಗೆ 22ರ ಹರೆಯ. ಆಗಿನಿಂದ ಮೊನ್ನೆ ಬಿಡುಗಡೆಯಾಗುವ ತನಕ ಸುಮಾರು 17ವರ್ಷಗಳನ್ನು ಜೈಲಿನಲ್ಲೇ ಕಳೆದಿದ್ದಾನೆ. ಭಾರತ ಸರ್ಕಾರ ಇವನ ವಿರುದ್ಧ ಏನಿಲ್ಲವೆಂದರೂ 27 ಪ್ರಕರಣಗಳನ್ನು ದಾಖಲಿಸಿದೆ! ನಾವು ಕಾಲು ತೊಳೆಯಲು ಬಚ್ಚಲಿಗೆ ಹೋಗಿ ಬಂದಷ್ಟೇ ಸಲೀಸಾಗಿ ಇವನು ಜೈಲಿಗೆ ಹೋಗಿ ಬರುತ್ತಾನೆ. ಹೋಗಲಿ ಅನಕ್ಷರಸ್ಥನಾ, ಅಲ್ಲ. ಕಾಶ್ಮೀರದ ಶ್ರೀಮಂತ ಮಿಷನರಿ ಶಾಲೆಯೊಂದರ ವಿಜ್ಞಾನ ವಿದ್ಯಾರ್ಥಿ. ಸಾಮಾನ್ಯಜ್ಞಾನ ಕಡಿಮೆಯಾಗಿ ಅದ್ಯಾವಾಗ ಪ್ರತ್ಯೇಕವಾದದ ಭೂತ ಇವನ ತಲೆಯೊಳಗೆ ಹೊಕ್ಕಿತೋ, ಹಿಜ್ಬುಲ್ ಉಗ್ರ ಸಂಘಟನೆ ಸೇರಿ ಅದರ ಸಕ್ರಿಯ ಸದಸ್ಯನಾಗಿಬಿಟ್ಟ. ಹೇಗಾದರೂ ಮಾಡಿ ಜಮ್ಮು-ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಬೇಕೆಂಬುದೇ ಇವನ ಧ್ಯೇಯವಾಯಿತು. ಆಗಿನ್ನೂ AK-47ಗಳು ಈಗಿನಂತೆ ಸುಲಭವಾಗಿ ಕೈಗೆಟುಕುತ್ತಿರಲಿಲ್ಲ. ಆದರೇನಂತೆ, ಮನಸ್ಸಿನಲ್ಲಿ ಆವೇಶ ತುಂಬಿಕೊಂಡ ಇವನು ಹಾಗೂ ಇವನಂಥ ನೂರಾರು ಮಂದಿ, ಭಾರತೀಯ ಸೈನಿಕರ ಮೇಲೆ ಕಲ್ಲುಗಳನ್ನು, ಸಣ್ಣ ಬಂಡೆಗಳನ್ನು, ಕೆಲವೊಮ್ಮೆ ನಿಗಿನಿಗಿ ಉರಿಯುವ ಕೆಂಡಗಳನ್ನು ಎಸೆದು ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದರು.



ಇವನ ರೋಷಾಗ್ನಿಗೆ ತುಪ್ಪ ಸುರಿಯುವಂಥ ಪ್ರಸಂಗವೊಂದು 2008ರಲ್ಲಿ ನಡೆಯಿತು. ಆಗ ಜಮ್ಮು-ಕಾಶ್ಮೀರ ಸರ್ಕಾರ ಅಮರನಾಥ ದೇಗುಲಕ್ಕೆ ಭೇಟಿ ನೀಡುವ ಹಿಂದೂ ಯಾತ್ರಿಗಳ ತಾತ್ಕಾಲಿಕ ವಾಸ್ತವ್ಯದ ಸಲುವಾಗಿ ಸುಮಾರು 99 ಎಕರೆಗಳಷ್ಟು ಅರಣ್ಯ ಭೂಮಿಯನ್ನು ಮಂಜೂರು ಮಾಡಿತು. ಪ್ರತ್ಯೇಕತಾವಾದಿಗಳು ಇಂಥ ಸುವರ್ಣಾವಕಾಶವನ್ನು ಬಿಟ್ಟಾರೆಯೇ? ಲಕ್ಷಗಟ್ಟಳೆ ಸಂಖ್ಯೆಯಲ್ಲಿ ಸೇರಿ ಹಿಂಸಾತ್ಮಕವಾಗಿ ಪ್ರತಿಭಟಿಸಿದರು. ಪರಿಣಾಮ, ಹಲವರು ಸತ್ತು ನೂರಾರು ಮಂದಿ ಗಾಯಗೊಂಡರು. ಆ ಪ್ರತಿಭಟನೆಗಳಲ್ಲಿ ಪೂರ್ಣವಾಗಿ ತೊಡಗಿಕೊಂಡ ಮಸಾರತ್ ತನ್ನದೇ ಛಾಪು ಮೂಡಿಸಿದ್ದ. ಆದ್ದರಿಂದಲೇ ಪೋಲೀಸರ ಅತಿಥಿಯಾಗಿ ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ.

2010ರ ಜೂನ್‍ನಲ್ಲಿ ಹೊರಬಂದ ಅವನು ಮುಂದೇನು ಎಂದು ಅತ್ತಿತ್ತ ತಿರುಗಿ ನೋಡುವಷ್ಟರಲ್ಲೇ ಮತ್ತೊಂದು ಅವಘಡವೂ ನಡೆದುಹೋಯಿತು. ಜಮ್ಮು-ಕಾಶ್ಮೀರದ ಕೆಲ ಸೇನಾಧಿಕಾರಿಗಳು ಮೂವರು ಪಾಕ್ ನುಸುಳುಕೋರರನ್ನು ಹತ್ಯೆಗೈದ ಸುದ್ದಿ ಎಲ್ಲೆಡೆ ಹಬ್ಬಿತು. ಆದರೆ ಅದು ನಕಲಿ ಕಾರ್ಯಾಚರಣೆ ಎಂದು ತಿಳಿದು ಬಂದದ್ದೇ ತಡ, ಕಣಿವೆಯ ನಾಡು ಹೊತ್ತಿ ಉರಿಯತೊಡಗಿತು. ತನ್ನ ಪಾಡಿಗೆ ತಾನು ಸ್ಟೇಡಿಯಂ ಒಂದರಲ್ಲಿ ಕ್ರಿಕೆಟ್ ಆಡುತ್ತಿದ್ದ ಅಮಾಯಕ ಯುವಕ ಟುಫೈಲ್ ಮಟ್ಟೂ ಪೋಲೀಸರ ಅಶ್ರುವಾಯು ದಾಳಿಗೆ ಬಲಿಯಾದ ಮೇಲಂತೂ ಪರಿಸ್ಥಿತಿ ಮೇರೆ ಮೀರಿತು. ಹಾಗೇ ಮಸಾರತ್‍ನ ಅಟ್ಟಹಾಸವೂ. ಅವನು ತನ್ನ ನೇತೃತ್ವದಲ್ಲಿ, ಪೋಲೀಸರ ಮೇಲೆ ಕಲ್ಲು ತೂರುವ ಒಂದು ದೊಡ್ಡ ಪಡೆಯನ್ನೇ ತಯಾರು ಮಾಡಿಬಿಟ್ಟ. ತೆರೆಮರೆಯಲ್ಲಿದ್ದೇ ಜನರನ್ನು ಹೇಗೆಲ್ಲ ಪ್ರಚೋದಿಸುತ್ತಿದ್ದ ಗೊತ್ತೇ? ತನ್ನ ದೇಶ ವಿರೋಧಿ ಹೇಳಿಕೆಗಳನ್ನು ಭಿತ್ತಿ ಪತ್ರಗಳಲ್ಲಿ ಮುದ್ರಿಸಿ ಹಂಚುತ್ತಿದ್ದ. ಸಿಡಿಗಳಲ್ಲಿ ತುಂಬಿ ಮಸೀದಿಗಳಿಗೆ ಬಂದವರೆಲ್ಲರಿಗೂ ತಲುಪಿಸುತ್ತಿದ್ದ. ಅಷ್ಟೇ ಅಲ್ಲ, ಇವನೊಳಗಿನ ಕಲಾವಿದನೂ ಜಾಗೃತನಾಗಿಬಿಟ್ಟಿದ್ದ. ಕಂಡ ಕಂಡ ಗೋಡೆಗಳ ಮೇಲೆ, 'ಗೋ ಇಂಡಿಯಾ ಗೋ' ಎಂದು ಬರೆದ. 'ಭಾರತವನ್ನು ಹೊಸಕಿ ಹಾಕಿಬಿಡು' ಎಂಬರ್ಥದ ಹಾಡನ್ನೂ ಬರೆದು ಸಾಹಿತಿಯಾದ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಕ್ಕಳು ರಿಂಗಾ ರಿಂಗಾ ರೋಸೆಸ್ ಆಡುವಾಗ ಒಬ್ಬರು ಮತ್ತೊಬ್ಬರ ಕೈಹಿಡಿದು ವೃತ್ತಾಕಾರದಲ್ಲಿ ನಿಲ್ಲುತ್ತಾರಲ್ಲ, ಹಾಗೆ ಪ್ರತಿಭಟನಾಕಾರರನ್ನು ನಿಲ್ಲಿಸಿ ತನ್ನ ಹಾಡು ಹೇಳಿಸಿ, 'ಹೊಸಕಿ ಹಾಕಿಬಿಡು' ಎಂಬ ಪದ ಬರುವಾಗ ಕಾಲನ್ನು ನೆಲಕ್ಕೆ ಅಪ್ಪಳಿಸುವಂತೆ ಹೇಳಿ ಹೊಸ ಸಮೂಹ ನೃತ್ಯ ಪ್ರಕಾರವನ್ನೇ ಹುಟ್ಟು ಹಾಕಿಬಿಟ್ಟ! ಒಟ್ಟಿನಲ್ಲಿ ಪೋಲೀಸರಿಗೆ ಬೇಕಾದವರಲ್ಲಿ ಅಗ್ರನಾದ ಮಸಾರತ್ ತನ್ನ ತಲೆಯ ಮೇಲೆ ಹಲವು ಲಕ್ಷ ರೂಪಾಯಿಗಳ ಇನಾಮನ್ನೂ ಹೊಂದಿದ್ದ. ಅಂತೂ ಇಂತೂ ಬಲೆ ಬೀಸಿ ಅವನನ್ನು ಹಿಡಿಯುವಷ್ಟರಲ್ಲಿ ಪೋಲೀಸರು ಹೈರಾಣಾಗಿದ್ದರು.

ಇದೀಗ ಮಸಾರತ್ ಹೊರಬಂದಿದ್ದಾನೆ. ಹುರಿಯತ್‍‍ನ ಪ್ರತ್ಯೇಕತಾವಾದಿ ಸಯ್ಯದ್ ಗಿಲಾನಿಯ ಕಟ್ಟಾ ಶಿಷ್ಯನಾಗಿರುವ ಇವನು ಅವನ ನಂತರದ ವಾರಸುದಾರ ಎಂದೇ ಬಿಂಬಿಸಲ್ಪಡುತ್ತಿದ್ದಾನೆ. ಇಷ್ಟು ವರ್ಷ ಜೈಲಿನಲ್ಲಿ ಕೊಳೆತಿದ್ದರಿಂದ ಇವನ ಮನಸ್ಥಿತಿ ಬದಲಾಗಿರಬಹುದು ಎಂದು ಯಾರಾದರೂ ಭ್ರಮಿಸಿದ್ದರೆ ಅವರಿಗೆ ತಕ್ಕ ಉತ್ತರವನ್ನೂ ನೀಡಿದ್ದಾನೆ. 'ಸಣ್ಣ ಜೈಲಿನಿಂದ ದೊಡ್ಡ ಜೈಲಿಗೆ ಬಂದಂತಾಗಿದೆ ಅಷ್ಟೇ. ಕಾಶ್ಮೀರದ ಜನತೆಯ ದುಃಖ-ದುಮ್ಮಾನಗಳನ್ನು ಹಂಚಿಕೊಳ್ಳಬಹುದಲ್ಲ ಎನ್ನುವುದಷ್ಟೇ ನನಗಾಗಿರುವ ಸಂತೋಷ' ಎಂಬುದು ಬಿಡುಗಡೆಯಾದ ನಂತರದ ಇವನ ಉವಾಚ! ಆದ್ದರಿಂದಲೇ ದೇಶದೆಲ್ಲೆಡೆ ಕೋಲಾಹಲವೆದ್ದಿರುವುದು. ಇನ್ನು ಇವನ ಬತ್ತಳಿಕೆಯಿಂದ ಯಾವ್ಯಾವ ಬಾಣಗಳು ಹೊರಬರುತ್ತವೋ ಎಂಬ ಚಿಂತೆ ನಮ್ಮ ಬೇಹುಗಾರಿಕಾ ಪಡೆಯನ್ನು ಆವರಿಸಿಕೊಂಡಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.



ಇವನೇನೋ ತನ್ನ ಪ್ರಕೃತಿಗೆ ತಕ್ಕ ಮಾತುಗಳನ್ನೇ ಆಡಿದ್ದಾನೆ. ಆದರೆ ಅಧಿಕಾರಕ್ಕೇರಿದ ಒಂದೇ ವಾರದಲ್ಲಿ ಮುಫ್ತಿ ಮೊಹಮ್ಮದ್ ಸಯೀದ್ ಆತುರಾತುರವಾಗಿ ಇವನನ್ನು ಬಿಡುಗಡೆ ಮಾಡಿದ್ದೇಕೆ? ಅವರು ಹಿಂದೊಮ್ಮೆ, ಅಂದರೆ 1989ರಲ್ಲಿ ಕೇಂದ್ರದ ಗೃಹಖಾತೆಯ ಸಚಿವರಾಗಿದ್ದಾಗಲೂ ಐವರು ಉಗ್ರರನ್ನು ಬಿಡುಗಡೆ ಮಾಡಿದ್ದರು. ಆಗ ಅವರ ಮಗಳನ್ನು ಉಗ್ರರು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡ ಕಾರಣವಿತ್ತು. ಈಗೇನಿತ್ತು? ಅಭ್ಯಾಸ ಬಲವೇ? ತನಗೆ ಬೆಂಬಲ ನೀಡಿರುವ ಮಿತ್ರ ಪಕ್ಷಕ್ಕೆ ಒಂದು ಮಾತೂ ಹೇಳದೆ ಅದರ ಒಪ್ಪಿಗೆಯಿಲ್ಲದೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ತಪ್ಪು ಎಂಬ ಕನಿಷ್ಠ ಅರಿವೂ ಇರಲಿಲ್ಲವೇ ಅವರಿಗೆ? ಎಲ್ಲಾ ಇತ್ತು. ಒಂದು ಮೂಲದ ಪ್ರಕಾರ, ಮುಫ್ತಿ, ಬಿಡುಗಡೆ ಮಾಡಲು ಇನ್ನೂ ಹದಿನೈದು ಪ್ರತ್ಯೇಕತಾವಾದಿಗಳ ಪಟ್ಟಿಯನ್ನು ಸಿದ್ಧಮಾಡಿಟ್ಟುಕೊಂಡಿದ್ದರಂತೆ. ಅದರಲ್ಲಿದ್ದ ಮುಂದಿನ ಹೆಸರು ಕುಖ್ಯಾತ ಉಗ್ರವಾದಿ 'ಆಶಿಕ್ ಹುಸೇನ್ ಫಕ್ತೂ'ದಂತೆ. ಈಗ ಗೃಹ ಸಚಿವ ರಾಜನಾಥ್‍ಸಿಂಗ್ ಹಾಗೂ ನಮ್ಮ ಬೇಹುಗಾರಿಕಾ ಸಂಸ್ಥೆ ಮುಫ್ತಿಯವರಿಗೆ ಖಡಕ್ಕು ಎಚ್ಚರಿಕೆ ಕೊಟ್ಟಿರುವುದರಿಂದ ಆ ಪಟ್ಟಿಯನ್ನು ಅವರು ಸಧ್ಯಕ್ಕೆ ಕೈ ಬಿಟ್ಟಿದ್ದಾರಂತೆ. ಬಿಜೆಪಿಯನ್ನು ಕೇಳದೆ ಇನ್ಯಾರ ಬಿಡುಗಡೆಯನ್ನೂ ಮಾಡುವುದಿಲ್ಲ ಎಂಬ ವಾಗ್ದಾನವನ್ನೂ ಮಾಡಿದ್ದಾರಂತೆ.

ನಮ್ಮ ಬೇಹುಗಾರಿಕಾ ಸಂಸ್ಥೆ ಹಾಗೆ ಎಚ್ಚರಿಕೆ ಕೊಟ್ಟಿರುವುದಕ್ಕೂ ಕಾರಣವಿದೆ. ಈ ಆಶಿಕ್ ಹುಸೇನ್ ಫಕ್ತೂ ದೇಶದ್ರೋಹಿ ಕೆಲಸಗಳಲ್ಲಿ ಮಸಾರತ್‍ನ ತಾತ! ಜಮಾತೆ-ಉಲ್-ಮುಜಾಹಿದ್ದೀನ್‍ನ ಉನ್ನತ ಕಮಾಂಡರ್ ಆದ ಇವನು ಕಳೆದ 22ವರ್ಷಗಳಿಂದ ಶ್ರೀನಗರದ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಮಾನವ ಹಕ್ಕುಗಳ ಹೋರಾಟಗಾರರಾಗಿದ್ದ ವ್ಯಾಂಚೂ ಎಂಬುವರನ್ನು ಕೊಂದ ಆಪಾದನೆ ಇವನ ಮೇಲಿದೆ. ಇವನೇನಾದರೂ ಅಪ್ಪಿತಪ್ಪಿ ಹೊರಬಂದರೆ ಕಾಶ್ಮೀರದ ಕಣಿವೆಯಲ್ಲಿ ಶಾಂತಿ ಎಂಬುದು ಮರೀಚಿಕೆಯಾಗುವುದು ಖಂಡಿತ. ಉಳಿದವರ ಜಾತಕಗಳೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಆದರೂ ಪಿಡಿಪಿ ಪಕ್ಷ ಕದ್ದುಮುಚ್ಚಿ ಇವರನ್ನೆಲ್ಲ ಬಿಡುಗಡೆ ಮಾಡಲು ಹೊರಟಿತ್ತು!

ಇಲ್ಲಿಯತನಕ ಜಮ್ಮು-ಕಾಶ್ಮೀರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಹುತೇಕ ಎಲ್ಲ ಸರ್ಕಾರಗಳ ಹಣೆಬರಹವೂ ಇಷ್ಟೇ. ಅಂಜಿಕೆಗೋ, ಮತಬ್ಯಾಂಕ್‍ನ ಮುಲಾಜಿಗೋ ಒಟ್ಟಿನಲ್ಲಿ ಅವುಗಳ ಒಂದು ಕೈ ಪ್ರತ್ಯೇಕತಾವಾದಿಗಳ ಹೆಗಲ ಮೇಲೆ ಇದ್ದೇ ಇರುತ್ತದೆ. ಅಧಿಕಾರಕ್ಕೇರಿದ ಒಂದೇ ಘಂಟೆಯೊಳಗೆ ಮುಫ್ತಿ ಚುನಾವಣೆಯ ಯಶಸ್ಸಿನ ಸಮಸ್ತ ಶ್ರೇಯಸ್ಸನ್ನೂ ಹುರಿಯತ್ ಹಾಗೂ ಪಾಕಿಸ್ತಾನಗಳಿಗೆ ಧಾರೆಯೆರೆದು ಕೊಟ್ಟುಬಿಟ್ಟರು. ಜೀವವನ್ನು ಕೈಯಲ್ಲಿಟ್ಟುಕೊಂಡು ಕಾದ ಭಾರತೀಯ ಸೇನೆ, ಅಚ್ಚುಕಟ್ಟಾಗಿ ಆಯೋಜಿಸಿದ ಚುನಾವಣಾ ಆಯೋಗ ಹಾಗೂ ನೆರವನ್ನಿತ್ತ ಕೇಂದ್ರ ಸರ್ಕಾರ ಯಾವುದೂ ಅವರ ಕಣ್ಣಿಗೆ ಕಾಣಲಿಲ್ಲ! ಅದರ ನಂತರ ಅವರು ಮಾತನಾಡಿದ್ದು ಅಫ್ಜಲ್ ಗುರುವಿನ ಬಗ್ಗೆ! ಸಂಸತ್ತಿನ ಮೇಲೆ ದಾಳಿ ಮಾಡಿದ್ದ ಅಫ್ಜಲ್‍ಗೆ ಮರಣೋತ್ತರವಾಗಿ ಸಿಗಬೇಕಾದ ನ್ಯಾಯದ ಬಗ್ಗೆ ಮಾತ್ರ ಅವರ ಕನವರಿಕೆ! ಅಷ್ಟು ಬಿಟ್ಟರೆ ಪ್ರತ್ಯೇಕತಾವಾದಿಗಳ ಬಿಡುಗಡೆಯ ಚಿಂತೆ! ಹೌದಲ್ಲ. ಉಳಿದೆಲ್ಲದರ ವ್ಯವಸ್ಥೆ ನಮ್ಮ ತೆರಿಗೆ ಹಣದಿಂದ ಬಿಟ್ಟಿಯಾಗಿ ಆಗುವಾಗ ಅವರೇಕೆ ತಲೆ ಕೆಡಿಸಿಕೊಳ್ಳುತ್ತಾರೆ?

ಉಳಿದ ರಾಜ್ಯಗಳಲ್ಲಿ ನಡೆಸುವಂತೆ ಇಲ್ಲಿ ಸಲೀಸಾಗಿ ಸಮ್ಮಿಶ್ರ ಸರ್ಕಾರ ನಡೆಸುವುದು ಸಾಧ್ಯವಿಲ್ಲ ಎಂಬುದು ಬಿಜೆಪಿಗೂ ಗೊತ್ತಿದೆ. ಆದರೂ ಅದು ಸಗಣಿಯವರೊಂದಿಗೆ ಸರಸಕ್ಕೆ ನಿಂತಿದೆ. ಈಗಾಗಲೇ ಸರಣಿ ಮುಖಭಂಗಗಳನ್ನೂ ಅನುಭವಿಸಿದೆ. ಅದರ ಈ ಅಸಹಜ, ಅನಪೇಕ್ಷಿತ ಮೈತ್ರಿಯ ಹಿಂದೆ ರಾಷ್ಟ್ರೀಯತೆಯ, ಅಭಿವೃದ್ಧಿಯ ಹಲವು ಸದುದ್ದೇಶಗಳಿರಬಹುದು. ಆದರೆ ಈ ಕಣಿವೆ ರಾಜ್ಯದ ತುಂಬೆಲ್ಲ ತುಂಬಿರುವುದು ಓಬೀರಾಯನ ಕಾಲದಿಂದ ಸಿಗುತ್ತಿರುವ ವಿಶೇಷ ಸವಲತ್ತು, ಅನುಚ್ಛೇದ 370 ಎಂದೊಡನೆ ಬೆಚ್ಚಿ ಬೀಳುವ ಪ್ರಾದೇಶಿಕ ರಾಜಕೀಯ ಪಕ್ಷಗಳು, ಅಸಹಾಯಕರಾಗಿ ನೋಡುವ ಕಾಶ್ಮೀರಿ ಪಂಡಿತರು ಹಾಗೂ ನಿದ್ದೆಯಲ್ಲೂ ಪಾಕಿಸ್ತಾನವನ್ನೇ ಕನವರಿಸಿಕೊಳ್ಳುವ ಪ್ರತ್ಯೇಕತಾವಾದಿ ಸಂಘಟನೆಗಳು. ಭಾರತದ ಒಂದು ಅಂಗವೇ ಆಗಬಯಸದ ರಾಜ್ಯದೊಳಗೆ ಭಾರತೀಯತೆಯ ಕಲ್ಪನೆಗಳು ಅಷ್ಟು ಸುಲಭದಲ್ಲಿ ಸಾಕಾರಗೊಳ್ಳುವುದು ಸಾಧ್ಯವೇ? ಹೋಗಲಿ, ಕಾನೂನು ರೀತ್ಯಾ ಏನಾದರೂ ಮಾಡಬೇಕೆಂದರೆ ಇದೊಂಥರಾ 'ಹುಚ್ಚು ಬಿಡದೆ ಮದುವೆಯಾಗುವುದಿಲ್ಲ, ಮದುವೆಯಾಗದೆ ಹುಚ್ಚು ಬಿಡುವುದಿಲ್ಲ' ಎನ್ನುತ್ತಾರಲ್ಲ ಹಾಗೆ. ಸಂವಿಧಾನಕ್ಕೆ ತಿದ್ದುಪಡಿ ತರದೆ ಕಾಶ್ಮೀರಿಗಳ ಮನಸ್ಥಿತಿ ಬದಲಾಗುವುದಿಲ್ಲ, ಅವರ ಮನಸ್ಥಿತಿ ಬದಲಾಗದೆ ಸಂವಿಧಾನಕ್ಕೆ ತಿದ್ದುಪಡಿ ತರುವ ಹಾಗಿಲ್ಲ ಎಂಬಂಥ ಪರಿಸ್ಥಿತಿ.

ಒಟ್ಟಿನಲ್ಲಿ ಈ ಸರಸ ಈಗಿರುವ ವಿರಸಗಳನ್ನು ಕೊನೆಗಾಣಿಸಲಿ ಎಂಬುದೇ ಭಾರತೀಯರೆಲ್ಲರ ಅಪೇಕ್ಷೆ. ಸಾಧ್ಯವಾ ಎಂಬುದನ್ನು ಸಮಯವೇ ಹೇಳಬೇಕು! 

Tuesday 10 March 2015

ಇಂದಿನ ಮಹಿಳೆಗೆ ಮಹಿಳಾವಾದದ ಟೊಳ್ಳು ಸಮರ್ಥನೆ ಬೇಕಿಲ್ಲ!

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ನೆನೆಯಲಿಕ್ಕೇನೋ ಅಸಂಖ್ಯ ಮಹಿಳಾ ಸಾಧಕಿಯರು ಸಿಗುತ್ತಾರೆ. ಆದರೆ ತಮ್ಮ ಬರಹಗಳಲ್ಲಿ ಮಹಿಳೆಯರನ್ನು ಸದಾ ನೈತಿಕತೆಯ, ಮನಸ್ಸಾಕ್ಷಿಯ ಕುರುಹುಗಳನ್ನಾಗಿ ಬಿಂಬಿಸುತ್ತಲೇ ಬಂದಿರುವ, ಅವರ ಮನಸ್ಥಿತಿಯ ಹಲವು ಆಯಾಮಗಳನ್ನು ಯಥಾವತ್ತಾಗಿ ಚಿತ್ರಿಸಿರುವ ಎಸ್.ಎಲ್ ಭೈರಪ್ಪನವರನ್ನು ಈ ಹೊತ್ತು ನೆನೆಯಲೇಬೇಕೆನಿಸುತ್ತಿದೆ. ಅದರಲ್ಲೂ ಮಹಿಳಾವಾದವೆಂಬ ಮೊರೆತ ಮೇರೆ ಮೀರುತ್ತಿರುವ ಇಂದಿನ ದಿನಗಳಲ್ಲಿ ಈ ನೆನಕೆ ಹೆಚ್ಚು ಪ್ರಸ್ತುತವೂ ಹೌದು.

ಹಲವು ವರ್ಷಗಳ ಹಿಂದಿನ ಘಟನೆ ಇದು. ಆಗಿನ್ನೂ ಭೈರಪ್ಪನವರ ವಂಶವೃಕ್ಷವನ್ನು ಓದಿರಲಿಲ್ಲ. ನಮ್ಮ ನೆರೆಮನೆಯಲ್ಲಿ ಪುಟ್ಟ ಹುಡುಗಿಯೊಬ್ಬಳಿದ್ದಳು. ಅಬ್ಬಬ್ಬಾ ಎಂದರೆ ಏಳರ ಪ್ರಾಯ. ಅಸಾಧ್ಯ ಚೂಟಿ. ಮನೆಯಲ್ಲಿದ್ದುದು ಅಪ್ಪ ಹಾಗೂ ಮಗಳಿಬ್ಬರೇ. ತಂದೆ ತಾವು ಬೆಳಿಗ್ಗೆ ಕೆಲಸಕ್ಕೆ ಹೋಗುವ ಹೊತ್ತಿಗೆ ಇಬ್ಬರಿಗೂ ಹೊಟ್ಟೆಗೆ ಏನನ್ನಾದರೂ ಬೇಯಿಸಿ, ಮಗಳನ್ನು ಅಣಿಮಾಡಿ ಅವಳನ್ನು ಹತ್ತಿರದ ಶಾಲೆಗೆ ಬಿಟ್ಟು ಹೋಗುತ್ತಿದ್ದರು. ಶಾಲೆ ಮುಗಿಸಿ ಬರುತ್ತಿದ್ದ ಮಗು ಸಂಬಂಧಿಯೊಬ್ಬರ ಮನೆಯಲ್ಲಿರುತ್ತಿತ್ತು. ತಂದೆ ಕೆಲಸದಿಂದ ಹಿಂದಿರುಗಿ ಬರುವಾಗ ಅವಳನ್ನು ಕರೆತರುತ್ತಿದ್ದರು. ಆ ಮಗುವಿಗಾಗಿ ಅವರು ಪಡುತ್ತಿದ್ದ ಶ್ರಮ, ವಹಿಸುತ್ತಿದ್ದ ಆಸ್ಥೆ ಮತ್ತು ಆ ಮಗು ಅವರಿಗಾಗಿ ಹಂಬಲಿಸುತ್ತಿದ್ದುದನ್ನು ನೋಡುತ್ತಿದ್ದ ನಮಗೆ, ಮಗಳಿಗೆ ಅಪ್ಪ ಹೆಚ್ಚೋ, ಅಪ್ಪನಿಗೆ ಮಗಳೋ ಎಂಬ ಗೊಂದಲ ಉಂಟಾಗುತ್ತಿತ್ತು. ನಂತರ ತಿಳಿದು ಬಂದದ್ದೇನೆಂದರೆ, ಆ ಹುಡುಗಿಯ ತಾಯಿ ಅದಿನ್ನೂ ಚಿಕ್ಕ ಮಗುವಾಗಿದ್ದಾಗಲೇ ಸಂಸಾರವನ್ನು ತೊರೆದು ತಾವು ಪ್ರೀತಿಸಿದವರೊಂದಿಗೆ ಹೊರಟು ಹೋಗಿದ್ದರಂತೆ! ಆಗ ಆ ವಿಷಯ ಅಷ್ಟಾಗಿ ಕಾಡಿರಲಿಲ್ಲ. ಮುಂದೆ ವಂಶವೃಕ್ಷವನ್ನು ಓದಿದಾಗ ಕಾತ್ಯಾಯಿನಿಯ ಜಾಗವನ್ನು ಆ ಮಗುವಿನ ಅಮ್ಮನೇ ಆಕ್ರಮಿಸಿಕೊಂಡಿದ್ದರು. ಕಣ್ಣ ಮುಂದೆ ಆ ಅಪ್ಪ ಮಗಳ ಚಿತ್ರವೇ ಬಂದು ಅವ್ಯಕ್ತವಾದ ವೇದನೆಯಾಗುತ್ತಿತ್ತು. ಕಾತ್ಯಾಯಿನಿಗೇನೋ ಹೌದು ಎನ್ನಬಹುದಾದ ಒಂದು ಕಾರಣವಿತ್ತು. ಈಕೆಗೇನಿತ್ತು ಎಂಬುದು ಆಗ ಅರ್ಥವಾಗಿರಲಿಲ್ಲ. ಈಗ ಅರ್ಥವಾಗುತ್ತಿದೆ. ಇದೊಂದೇ ಅಲ್ಲ, ಇಂಥ ಹಲವು ಅನರ್ಥಗಳಿಗೆ ಎಡೆ ಮಾಡಿಕೊಡುತ್ತಿರುವ ಚಿಂತನೆಗಳು ಹಾಗೂ ಅವು ಹುಟ್ಟಿಸುತ್ತಿರುವ ಹುಸಿ ಸಮರ್ಥನೆಗಳು ಚೆನ್ನಾಗಿಯೇ ಅರ್ಥವಾಗುತ್ತಿದೆ.




ಇಲ್ಲ. ನಾವು ಸ್ವಘೋಷಿತ ಮಹಿಳಾವಾದಿಗಳಲ್ಲ. ವಿಚಾರವಾದಿ ಹೋರಾಟಗಾರ್ತಿಯರೂ ಅಲ್ಲ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಖಂಡ-ತುಂಡವಾಗಿ ಭೈರಪ್ಪನವರ ಬರಹಗಳನ್ನು ಜರಿಯುವ, ಅವರನ್ನು ವಿಕೃತ ಮನಸ್ಸಿನವರು ಎಂದು ಹೇಳುವಷ್ಟು ವಿಪರೀತಿ ಬುದ್ಧಿಯನ್ನು ದೇವರು ನಮಗೆ ದಯಪಾಲಿಸಿಯೂ ಇಲ್ಲ, ಆ ಸೌಭಾಗ್ಯ ನಮಗೆ ಬೇಡವೂ ಬೇಡ. ಆದರೆ ಸಾಮಾನ್ಯ ಮಹಿಳೆಯರಾಗಿ ಆ ಪಾತ್ರಗಳನ್ನು ಮನಸ್ಸಿನಲ್ಲೇ ಜಗಿದು ನುಂಗುವಾಗ, ಅಷ್ಟು ಹೊತ್ತೂ ಆ ಪಾತ್ರಗಳಾಗಿಯೇ ಜೀವಿಸುವಾಗ ನಮ್ಮ ಮನಸ್ಸುಗಳಿಗಿರುವ ನೈತಿಕತೆಯೆಂಬ ಬೇಲಿ ನಮಗರಿವಿಲ್ಲದಂತೆಯೇ ಮತ್ತಷ್ಟು ಬಿಗಿಯಾಗುತ್ತದೆ. ಮನಸ್ಸಾಕ್ಷಿಯನ್ನು ಮೀರಿ ನಡೆಯಬಾರದೆಂಬ ನಾವು ಹಾಕಿಕೊಂಡಿರುವ ನಿಯಮ ಮನಸ್ಸಿನೊಳಗೇ ಮತ್ತಷ್ಟು ಹೆಪ್ಪುಗಟ್ಟುತ್ತದೆ. ಹಾಗಾದರೆ ವಂಶವೃಕ್ಷ, ಅಂಚು, ಕವಲು ಹಾಗೂ ಯಾನಗಳನ್ನೇ ಉದಾಹರಿಸಿ ಸಿಕ್ಕ ಸಿಕ್ಕ ಮೇಜುಗಳನ್ನು ಕುಟ್ಟುವ, ಮೈಕುಗಳಲ್ಲಿ ಗಂಟಲು ಹರಿದುಕೊಳ್ಳುವ ಮಹಿಳಾವಾದಿಗಳಿಗೆ, ಪ್ರಗತಿಪರರಿಗೆ ಹೀಗೇಕನಿಸುವುದಿಲ್ಲ? ಭೈರಪ್ಪನವರದ್ದು ಮಹಿಳೆಯರ ಕುರಿತಾದ ಕ್ರೌರ್ಯ ಮನಸ್ಥಿತಿ ಎಂದೇಕೆ ಬೊಬ್ಬೆ ಹೊಡೆಯುತ್ತಾರೆ? ಮಹಿಳಾವಾದಿಗಳಿಗೆ ಪ್ರಿಯವಾದ ಆ ನಾಲ್ಕೂ ಕಾದಂಬರಿಗಳ ಮಹಿಳಾ ಪಾತ್ರಗಳನ್ನು ಒಮ್ಮೆ ನಮ್ಮ ಹಾಗೂ ಅವರ ದೃಷ್ಟಿಕೋನಗಳಿಂದ ನೋಡಿಯೇಬಿಡೋಣ.

ವಂಶವೃಕ್ಷದ ಪ್ರಮುಖ ಸ್ತ್ರೀ ಪಾತ್ರವಾದ ಕಾತ್ಯಾಯಿನಿ ವಿಧವೆ. ಐದು ವರ್ಷದ ಮಗುವಿನ ತಾಯಿ. ತನ್ನನ್ನೇ ನಂಬಿದ್ದ ವಯೋವೃದ್ಧ ಅತ್ತೆ ಮಾವಂದಿರನ್ನು, ಮನೆಯ ಜವಾಬ್ದಾರಿಗಳೆಲ್ಲವನ್ನೂ, ಕೊನೆಗೆ ತಾನು ಹೆತ್ತ ಮಗನನ್ನೂ ಬಿಟ್ಟು ಓಡಿ ಹೋಗಿ ಬೇರೊಬ್ಬನನ್ನು ಮದುವೆಯಾಗುತ್ತಾಳೆ. ಮಾವ ಶ್ರೀನಿವಾಸ ಶ್ರೋತ್ರಿಯವರು ಬಲವಾಗಿ ನಂಬಿದ್ದ ವಂಶವೃಕ್ಷವನ್ನು ತಾನು ಹೀಗೆ ತೊರೆದು ಹೋಗಿದ್ದು ಕ್ರಮೇಣ ಅವಳ ಮನಸ್ಸನ್ನು ಕಿತ್ತು ತಿನ್ನುತ್ತದೆ. ಹೊಸ ಗಂಡನಿಗೆ ತಕ್ಕ ಹೆಂಡತಿಯಾಗಲಾರದೆ, ಅವನ ಮಕ್ಕಳನ್ನೂ ಹೆರಲಾಗದೆ ಪಾಪ ಪ್ರಜ್ಞೆಯಿಂದ ನರಳಿ ಸಾಯುತ್ತಾಳೆ. ಇಲ್ಲಿ ವಂಶವೃಕ್ಷವೆಂಬುದು ನೆಪವಷ್ಟೆ. ಎಲ್ಲ ಸಂಬಂಧಗಳಿಗೂ ಯಾವುದೋ ಕರ್ತವ್ಯದ ಸಂಕೋಲೆಯೊಂದಿರುತ್ತದೆ, ಇರಲೇಬೇಕು ಎನಿಸುವುದಿಲ್ಲವಾ? ನಮ್ಮ ಮಹಿಳಾವಾದಿಗಳಾಗಿದ್ದರೆ ಏನು ಮಾಡಿಸುತ್ತಿದ್ದರು ಕಾತ್ಯಾಯಿನಿಯ ಕೈಲಿ? ಮತ್ತೆ ಮೂರು ಮಕ್ಕಳನ್ನು ಹಡೆಸಿ ಶ್ರೋತ್ರಿಯರಿಗೆ ಸಡ್ದು ಹೊಡೆಯುವಂತೆ, ಅವರ ಎದುರೇ ಬದುಕಿ ತೋರಿಸುವಂತೆ ಮಾಡುತ್ತಿದ್ದರಾ? ಇಲ್ಲಿ ಪ್ರಶ್ನೆ ವಿಧವಾ ವಿವಾಹದ್ದಲ್ಲವೇ ಅಲ್ಲ. ಆದರೆ ಸಂದರ್ಭದ ವಿವೇಚನೆಯಿಲ್ಲದೆ ಬರೀ ತನ್ನ ದೈಹಿಕ ಕಾಮನೆಯ ಪೂರ್ತಿಗೋಸ್ಕರ ಮನೆಯನ್ನು, ಮಕ್ಕಳನ್ನು ಬಿಟ್ಟು ಹೊರಟುಬಿಡುವುದು ಮಹಿಳಾವಾದವಾ? ಅದು ಆ ಕ್ಷಣಕ್ಕೆ ಸರಿ ಎನಿಸಬಹುದು. ಆಮೇಲಾದರೂ ಆ ಕೊರಗು ಜೀವನಪರ್ಯಂತ ಕಾಡುವುದಿಲ್ಲವಾ? ಅಂಥವರೆಲ್ಲ ಆದರ್ಶ ಮಹಿಳೆಯರಾಗಿಬಿಟ್ಟರೆ, ಗಂಡನನ್ನು ಕಳೆದುಕೊಂಡ ಮೇಲೂ ಜೀವನಪೂರ್ತಿ ಒಂಟಿಯಾಗಿದ್ದು ಮಕ್ಕಳಿಗೋಸ್ಕರ ಹೆಣಗಿ ಅವರನ್ನು ದಡ ಸೇರಿಸುವ ತಾಯಂದಿರು ಮುಟ್ಠಾಳರಾ? ತಮ್ಮ ಆಸೆ, ಕಾಮನೆಗಳನ್ನು ಹತ್ತಿಕ್ಕಿಕೊಂಡು ಮಕ್ಕಳ ಏಳ್ಗೆಯಲ್ಲಿ ಸಾರ್ಥಕ್ಯ ಕಾಣುವ ವಿಧವೆಯರು ತಪ್ಪು ಮಾದರಿಯಾಗುತ್ತಾರಾ ಈ ಆಧುನಿಕ ಸಮಾಜದಲ್ಲಿ?

ಇನ್ನು ಅಂಚು ಕಾದಂಬರಿಯಲ್ಲಿ ಬರುವ ಡಾ.ಅಮೃತಾಳ ಪಾತ್ರ. ಬಹಳ ಬುದ್ಧಿವಂತೆಯಾಗಿದ್ದರೂ ತನ್ನ ಚಿಕ್ಕಮ್ಮನಿಂದಲೇ ಮೋಸ ಹೋಗುವ ಅಮೃತಾ ಹತಾಶಳಾಗಿ ತನ್ನೆರಡು ಮಕ್ಕಳೊಂದಿಗೆ ಬದುಕುತ್ತಿರುತ್ತಾಳೆ. ಅವಳದ್ದು ತನಗಾದ ಅನ್ಯಾಯವನ್ನು ಅರಗಿಸಿಕೊಂಡು ಬದುಕಲಾರದೆ, ಬದುಕನ್ನು ಕೊನೆಗಾಣಿಸಿಕೊಂಡು ಸಾಯಲಾರದೆ ತೊಳಲಾಡುವ ಮಾನಸಿಕ ಸ್ಥಿತಿ. ಅವಳ ಮನೆಯ ರಿಪೇರಿಯ ಕಾರಣಕ್ಕೆ ಜೊತೆಯಾಗುವ ಆರ್ಕಿಟೆಕ್ಟ್ ಸೋಮಶೇಖರ ಮೊದಮೊದಲು ಅವಳನ್ನು ಅರಿಯಲಾಗದೆ ಹೆಣಗಿ, ಕೊನೆಗೆ ಅರಿತು ಜೊತೆಯಾಗುವ ಪರಿಯಲ್ಲಿ ಏನು ಅಭ್ಯಂತರವಿದೆ ಮಹಿಳಾವಾದಿಗಳಿಗೆ? ಇನ್ನೆಲ್ಲಿ ರಿವಾಲ್ವರಿನಿಂದ ಗುಂಡು ಹೊಡೆದುಕೊಂಡು ಸಾಯುತ್ತಾಳೋ, ಇನ್ನೆಲ್ಲಿ ನಡುರಾತ್ರಿಯಲ್ಲಿ ಚಾಮುಂಡಿ ಬೆಟ್ಟ ಹತ್ತಲು ಹೊರಡುತ್ತಾಳೋ ಎಂದು ಹೊತ್ತಲ್ಲದ ಹೊತ್ತಿನಲ್ಲಿ ಓಡೋಡಿ ಬರುವ ಸೋಮಶೇಖರ, ಅವಳನ್ನು ವಿನಾಶದ ಅಂಚಿನಿಂದ ಹೊರಗೆಳೆದು ತಂದು ಜೊತೆಯಾಗಿ ನಿಲ್ಲುತ್ತಾನಲ್ಲ, ಆ ಪ್ರಕ್ರಿಯೆಯಲ್ಲಿ ಯಾವ ಕ್ರೌರ್ಯವಿದೆ? ಅಥವಾ ಮಹಿಳೆಯೋರ್ವಳು ಇಷ್ಟು ಅಧೀರಳಾಗಬಲ್ಲಳು ಎಂದು ತೋರಿಸಿರುವುದು ಇಡೀ ಸ್ತ್ರೀ ಕುಲಕ್ಕೇ ಅವಮಾನವಾ? ಇಂಥ ಮನೋವ್ಯಥೆಯ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತಲೆಲ್ಲ ಇವೆಯಲ್ಲ, ಕಾಣುವುದಿಲ್ಲವಾ ವಿಚಾರವಾದಿಗಳ ಕಣ್ಣಿಗೆ?

ಕವಲು ಕಾದಂಬರಿಗಂತೂ ಮಹಿಳಾ ವಿಮೋಚನೆಯೇ ವಸ್ತು. ತನ್ನ ಕಂಪೆನಿಯ ಮಾಲೀಕನನ್ನೇ ಉಪಾಯವಾಗಿ ಬಲೆಗೆ ಹಾಕಿಕೊಂಡು ಮದುವೆಯಾಗುವ ಮಂಗಳ, ತನ್ನ ಸ್ವಪ್ರತಿಷ್ಠೆಗೋಸ್ಕರ ಗಂಡನನ್ನು ದೂರ ಮಾಡಿಕೊಳ್ಳುವ ಇಳಾ, ಇಬ್ಬರೂ ಮಹಿಳಾವಾದದ ಅಪರಾವತಾರವೇ ಅಲ್ಲವೇ? ತಮ್ಮ ಉದ್ದೇಶ ಸಾಫಲ್ಯಕ್ಕಾಗಿ ಏನನ್ನಾದರೂ ಮಾಡುವ ಇವರಿಬ್ಬರೂ ಕೊನೆಗೆ ಗೆದ್ದೂ ಸೋತಿರುವುದರಲ್ಲಿ ತಪ್ಪೇನಿದೆ? ವರದಕ್ಷಿಣೆ ಕಿರುಕುಳವೆಂದು ಸುಳ್ಳು ಕೇಸುಗಳನ್ನು ಜಡಿದು ಗಂಡನ ಮನೆಯವರ ಬಾಳನ್ನು ನರಕವಾಗಿಸಿರುವ ಎಷ್ಟು ಹೆಣ್ಣುಮಕ್ಕಳಿಲ್ಲ ನಮ್ಮ ನಡುವೆ? ನೆಮ್ಮದಿಯ ಸಂಸಾರಗಳಲ್ಲಿ ಮುಳ್ಳಾಗಿ ನುಸುಳಿ ಹುಳಿ ಹಿಂಡುವ ಮಹಿಳಾಮಣಿಗಳಿಗೆ ಕೊರತೆಯೇ ನಮ್ಮ ಸಮಾಜದಲ್ಲಿ? ತೀರ ಸಭ್ಯ, ಮೃದು ಹೃದಯಿಗಳಾದ ಗಂಡಂದಿರನ್ನು ತಮ್ಮ ತಂದೆ-ತಾಯಿಯರಿಂದಲೇ ದೂರವಿಟ್ಟು ನೋಯಿಸುವ, ಅವರು ದುಡಿಯುವ ಪ್ರತಿ ಕಿಲುಬು ಕಾಸಿನ ಮೇಲೂ ಹಕ್ಕು ಚಲಾಯಿಸುವ ರಾಕ್ಷಸೀರೂಪಿ ಹೆಂಡತಿಯರೇನು ಕಡಿಮೆಯೇ? ಅಂಥವರಿಗೆಲ್ಲ ಹೋಗಿ ಬುದ್ಧಿ ಹೇಳುತ್ತಾರಾ ಮಹಿಳಾವಾದಿಗಳು? ಮಂಗಳೆಯನ್ನು ತನ್ನ ದೈಹಿಕ ಕಾಮನೆಗಾಗಿ ಬಳಸಿಕೊಳ್ಳುವ ಮೇಡಮ್ ಸರಾಫ್‍, ಪುರುಷರ ಮೇಲಿನ ಅವಲಂಬನೆಯನ್ನು ಇಲ್ಲವಾಗಿಸುವಲ್ಲಿ ಇದು ಅವಶ್ಯಕ ಎನ್ನುತ್ತಾಳೆ. Lesbian Feminism ಎನ್ನುವ, ಸುಮಾರು 70ರ ದಶಕದಿಂದಲೇ ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಮಹಿಳಾ ವಿಮೋಚನೆಯ ಕೊಳಕು ಜಾಡ್ಯದ ಬಗ್ಗೆ ಇಷ್ಟು ನೇರವಾಗಿ ಹೇಳಿರುವ ಭೈರಪ್ಪನವರಿಗೆ ವಿಚಾರವಾದಿಗಳಿಂದ ಒಂದಾದರೂ ಶಹಬ್ಬಾಸ್‍ಗಿರಿ ಬೇಡವೇ?

ಇನ್ನು ಯಾನದಲ್ಲಿ ಬರುವ ಫ್ಲೈಯಿಂಗ್ ಆಫೀಸರ್ ಉತ್ತರಾಳ ಪಾತ್ರ. ಪ್ರಯೋಗದ ಸಲುವಾಗಿ ಅಂತರಿಕ್ಷಯಾನ ಕೈಗೊಂಡು ಸಹೋದ್ಯೋಗಿ 'ಯಾದವ್'ನೊಂದಿಗೆ ಪತ್ನಿಯಂತೆ ಜೀವಿಸಬೇಕು ಎಂಬುದು ಉತ್ತರಾಳಿಗೆ ತಿಳಿದು ಬರುತ್ತದೆ. ಬೇರೆ ಜಾತಿಯವನಾದರೂ ಅವನನ್ನು ದೇವಸ್ಥಾನವೊಂದರಲ್ಲಿ ಮದುವೆಯಾಗಿ, ದೈವ ಹಾಗೂ ಮನಸ್ಸುಗಳೆರಡರ ಸಾಕ್ಷಿಯಾಗಿ ಗಂಡನೆಂದು ಸ್ವೀಕರಿಸಿದ ನಂತರವೇ ಅವಳು ಅವನೊಡನೆ ಅಂತರಿಕ್ಷಕ್ಕೆ ಹಾರುವುದು. ನಂತರ ಅಂಥದ್ದೇ ಮತ್ತೊಂದು ಪಯಣ ನಿಷ್ಕರ್ಷೆಯಾದಾಗ ಗಂಡ ಯಾದವ್ ಅವಳ ಜೊತೆ ಬರಲೊಪ್ಪುವುದಿಲ್ಲ. ಗಂಡನಲ್ಲದ ಮತ್ತೊಬ್ಬ ವಿಜ್ಞಾನಿಯನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ಇಡೀ ಯಾನದ ಮೂಲ ಉದ್ದೇಶಕ್ಕೇ ಧಕ್ಕೆ ತರುವ ಮಟ್ಟಕ್ಕೆ ಹೋಗುತ್ತಾಳಲ್ಲ ಉತ್ತರಾ, ಏನಿದೆ ಅಂಥ ತಪ್ಪು ಅವಳ ಪಾತ್ರದಲ್ಲಿ? ನಮ್ಮ ಮಹಿಳಾವಾದಿಗಳಾಗಿದ್ದರೆ ಉತ್ತರಾಳ ಬಾಯಲ್ಲಿ ಸಲೀಸಾಗಿ, 'ಗಂಡ ಯಾನಕ್ಕೆ ಬರದಿದ್ದುದರಿಂದ ಪತ್ನಿ ಮತ್ತೊಬ್ಬರ ಸನಿಹವನ್ನು ಬಯಸುವುದು ತೀರ ಸಹಜ' ಎಂದು ಹೇಳಿಸಿಬಿಡುತ್ತಿದ್ದರೇನೋ!



ಇವಿಷ್ಟೇ ಅಲ್ಲ. ಗೃಹಭಂಗದ ನಂಜಮ್ಮ, ಸಾರ್ಥದ ಚಂದ್ರಿಕೆ, ದಾಟುವಿನ ಸತ್ಯಭಾಮಾ ಹಾಗೂ ಅದೇ ಕಾದಂಬರಿಯಲ್ಲಿನ ಮಾದಿಗರ ಹೆಣ್ಣಾದ ಮಾತಂಗಿ ಎಲ್ಲರೂ ಗಟ್ಟಿಗರೇ. ತಾವು ನಂಬಿದ ತತ್ವಕ್ಕೆ, ತಮ್ಮ ಮನಸ್ಸಿಗೆ ಎಂದೂ ಮೋಸ ಮಾಡಿಕೊಳ್ಳದೆ ಬದುಕನ್ನು ಜಯಿಸಿದವರೇ. ಸ್ವಲ್ಪ ಯೋಚಿಸಿ ನೋಡಿ, ಗಂಡು ಹಾಗೂ ಹೆಣ್ಣುಮಕ್ಕಳ ನಡುವಿನ ತಾರತಮ್ಯ ಇಂದು ನಿನ್ನೆಯದಲ್ಲ. ಅದು ನಮ್ಮ ಅಜ್ಜಿ, ಮುತ್ತಜ್ಜಿಯರು ಮನೆಯ ಹುಡುಗರಿಗೆ ಬಿಸಿಯಾದ ಅನ್ನ ಬಡಿಸಿ ಹೆಣ್ಣುಮಕ್ಕಳಿಗೆ ತಂಗಳು ಹಾಕುವ ಕಾಲದಿಂದಲೇ ಇತ್ತು. ಅವರಿಗೆ ಮಾತ್ರ ಗಟ್ಟಿ ಮೊಸರು, ನಮಗೆ ಮಾತ್ರ ನೀರು ಮಜ್ಜಿಗೆ ಎಂದು ಗೊಣಗಿಕೊಂಡು ಉಂಡೆದ್ದ ಎಷ್ಟು ಹೆಣ್ಣುಮಕ್ಕಳಿಲ್ಲ ನಮ್ಮ ನಡುವೆ? ಈಗ ಓದು-ಬರಹದ, ಕೆಲಸ-ಕಾರ್ಯದ ಸ್ವಾತಂತ್ರ್ಯ ಸಿಕ್ಕಿದೆಯೆಂದು ಮಹಿಳಾ ವಿಮೋಚನೆಯ ಹೆಸರಿನಲ್ಲಿ ಅತಿರೇಕಕ್ಕೆ ತೊಡಗುವುದು ಹಳೆಯ ಲೆಕ್ಕವನ್ನೆಲ್ಲ ಚುಕ್ತಾ ಮಾಡುವ ಪರಿಯಾ? ನಾಲ್ಕಾರು ಮಂದಿ ಅಕ್ಷರಕುಕ್ಷಿಗಳ ಗುಂಪು ವಿಮೋಚನೆಯ ಹೆಸರಿನಲ್ಲಿ ಬೊಬ್ಬಿರಿದರೆ ಸಿಕ್ಕಿಬಿಡುತ್ತದಾ ವಿಮೋಚನೆ? ಸಾಧ್ಯವಾಗಿಬಿಡುತ್ತದಾ ಸಮಾನತೆ? ಹಾಗಾದರೆ ಮಹಿಳಾವಾದಿಗಳು ಇಷ್ಟೊಂದು ಜಾಗಟೆ ಬಾರಿಸುತ್ತಿದ್ದರೂ ಅತ್ಯಾಚಾರಗಳು ಕಡಿಮೆಯೇಕಾಗಿಲ್ಲ? ತೀರ ಸಣ್ಣ ಸಣ್ಣ ಹಸುಳೆಗಳು ಬಲಿಯಾಗುವುದಾದರೂ ಏಕೆ ನಿಂತಿಲ್ಲ? ಸಣ್ಣ-ದೊಡ್ಡ ಮೈಕುಗಳಲ್ಲಿ ಸಮಾನತೆಯ, ವೈಚಾರಿಕತೆಯ ಕಹಳೆ ಮೊಳಗುತ್ತಿದ್ದರೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಆಸಿಡ್ ದಾಳಿಗಳೇಕೆ ನಿಂತಿಲ್ಲ? ಅದೂ ಹೋಗಲಿ, ಅನೈತಿಕ ಸಂಬಂಧಗಳಿಂದಾಗುತ್ತಿರುವ ಕೊಲೆಗಳು ಇಷ್ಟೊಂದು ಹೆಚ್ಚುತ್ತಿರುವುದೇಕೆ?
ಮಹಿಳಾವಾದದ, ವಿಚಾರವಾದದ ಧ್ವಜ ಹಾರಿಸುವವರನ್ನು, ಅವರ ಆವೇಶವನ್ನು ಕಂಡರೆ ನಿಜಕ್ಕೂ ದಿಗಿಲಾಗುತ್ತದೆ. ಏಕೆಂದರೆ ಅವರು ಪ್ರತಿಪಾದಿಸುವ ಸಮಾನತೆ ವಿದ್ಯೆ, ಉದ್ಯೋಗಾವಕಾಶಗಳನ್ನು ಮೀರಿ ಸಂಬಂಧಗಳ ಬುಡ ಕಡಿಯುವ ಮಟ್ಟಕ್ಕೆ ಬೆಳೆದುಬಿಟ್ಟಿದೆ. ಇಂದು ಲಕ್ಷಾಂತರ ಮಂದಿ ಹೆಣ್ಣುಮಕ್ಕಳು ದುಡಿಯಲು ಹೋಗುತ್ತಿದ್ದಾರೆ. ತನ್ನ ಹೆಂಡತಿ ಹೊರಗೆ ದುಡಿಯುತ್ತಾಳಲ್ಲ ಎಂಬ ಕಕ್ಕುಲತೆಯಿಂದ ಮನೆಕೆಲಸದಲ್ಲಿ, ಮಕ್ಕಳ ಲಾಲನೆ-ಪಾಲನೆಯಲ್ಲಿ ಕೈ ಜೋಡಿಸುತ್ತಿರುವ ಗಂಡಸರೆಷ್ಟಿಲ್ಲ ಹೇಳಿ? ಕೆಲಸದ ನಿಮಿತ್ತ ದೇಶ-ವಿದೇಶಗಳಲ್ಲಿ ಒಂಟಿಯಾಗಿ ಸಂಚರಿಸುವ ಹೆಂಡತಿಯರನ್ನು, 'ನೀನು ಹೋಗಿ ಬಾ, ನಾನು ಮನೆ ಕಡೆ ಸಂಭಾಳಿಸುತ್ತೇನೆ' ಎಂದು ಹುರಿದುಂಬಿಸಿ ಕಳುಹಿಸಿಕೊಡುತ್ತಿರುವ ಎಷ್ಟು ಗಂಡಂದಿರಿಲ್ಲ? ಹಾಗೆ ಹೊರಗೆ ಹೊರಟ ಹೆಂಡತಿಯರು ತನ್ನ ಗಂಡ ತನಗೆ ಬೌದ್ಧಿಕ ಮಟ್ಟದಲ್ಲಿ ತಕ್ಕವನಲ್ಲವೆಂತಲೋ ಅಥವಾ ಅನುರೂಪನಲ್ಲವೆಂತಲೋ ಬೇರೊಬ್ಬನ ತೆಕ್ಕೆಗೆ ಬಿದ್ದರೆ? ಪರವಾಗಿಲ್ಲವಂತೆ! ಅದನ್ನೂ ಸಮರ್ಥಿಸಿಕೊಳ್ಳುತ್ತದೆ ನೋಡಿ ಮಹಿಳಾವಾದ! ಸಮಾನತೆ ಎಂದರೆ ಅದೇ ಅಲ್ಲವೇ ಮತ್ತೆ? ಗಂಡು ಮಾಡಬಹುದಾದರೆ ಹೆಣ್ಣೇಕೆ ಮಾಡಬಾರದು? ಗಂಡು ಸಿಗರೇಟ್ ಸೇದಬಹುದು, ವಿಸ್ಕಿ ಕುಡಿಯಬಹುದು ಎಂದಾದರೆ ಹೆಣ್ಣೇಕೆ ವಂಚಿತಳಾಗಬೇಕು? ಗಂಡು ಸೂಳೆಕೇರಿಗೆ ಹೋಗಬಹುದಾದರೆ ಹೆಣ್ಣೇಕೆ ಪರಪುರುಷರ ಸಂಗ ಮಾಡಬಾರದು? ಒಟ್ಟಿನಲ್ಲಿ ಎಲ್ಲಕ್ಕೂ ಜೈ. ಸಮಾನತೆಯ ಹೆಸರಿನಲ್ಲಿ ಸಾಗುತ್ತಿದೆಯಲ್ಲ ಈ ಓಟ, ಇದರಲ್ಲಿ ಹೆಣ್ಣುಮಕ್ಕಳಿಗೆ ಮುನ್ನುಗ್ಗುವ ಅವಕಾಶಗಳೆಷ್ಟಿವೆಯೋ, ಅಮಲೇರಿ ನೈತಿಕವಾಗಿ ಮುಗ್ಗರಿಸುವ ಅಪಾಯವೂ ಅಷ್ಟೇ ಇದೆ. ಹೀಗೆ ಮುಗ್ಗರಿಸಿ ಬೀಳುವ ಮಂದಿಯೆಲ್ಲ ಗೆದ್ದೆವೆಂಬ ಭ್ರಮೆಯಲ್ಲಿ ಬೀಗುವ ವಿಪರೀತ ಬುದ್ಧಿವಂತರೇ! ಇವರನ್ನು ಅಕ್ಷರಶಃ ಉಪಯೋಗಿಸಿಕೊಳ್ಳುವವರು ಯಾರು ಹೇಳಿ? ಮತ್ತದೇ ಗಂಡಸರು! ಹಾಗಾದರೆ ಎಲ್ಲಿ ಬಂತು ಸಮಾನತೆ?

ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಖಂಡಿತ ಬೇಕು, ಜೊತೆಗೆ ಅದರ ಇತಿ-ಮಿತಿ, ಪರಿಣಾಮಗಳ ವಿವೇಚನೆಯೂ. ವಿಮೋಚನೆಯ, ಸಮಾನತೆಯ ಹೆಸರಿನಲ್ಲಿ ಎಲ್ಲವೂ ಕಲಸುಮೇಲೋಗರವಾಗುತ್ತಿರುವ ಈ ದಿನಗಳಲ್ಲಿ ನೈತಿಕತೆಯ ಒಂದು ಸಣ್ಣ ಪಾಠ ಉತ್ತರಾಳ ರೂಪದಲ್ಲಿ ದೊರಕಿದರೆ ಯಾಕಾಗಬಾರದು? ಮನಸ್ಸಾಕ್ಷಿಯನ್ನು ಮರೆತು ಓಡುವ ಮನಸ್ಸುಗಳಿಗೆ ಮಂಗಳೆಯ ರೂಪದ ಕಡಿವಾಣ ಬೀಳುವುದಾದರೆ ಅದರಲ್ಲಿ ತಪ್ಪೇನಿದೆ? ಭೈರಪ್ಪನವರು ಈ ಸಮಾಜದಿಂದ ಆಯ್ದುಕೊಂಡ, ಸಮಾಜಕ್ಕೆ ಹೋಲುವಂಥ ಪಾತ್ರಗಳನ್ನು ಸೃಷ್ಟಿಸಿದ್ದಾರೆಯೇ ಹೊರತು ಎಲ್ಲರೂ ಅದರಂತೆಯೇ ನಡೆದುಕೊಳ್ಳಲೇಬೇಕೆಂಬ ಪ್ರಮಾಣವನ್ನೇನೂ ಮಾಡಿಸಿಕೊಂಡಿಲ್ಲವಲ್ಲ?


ಸಮಾನತೆಯ ಜೋಕಾಲಿಯಲ್ಲಿ ಜೀಕುವಾಗಲೂ ಕೈಗಳು ನೈತಿಕತೆ ಹಾಗೂ ಮನಸ್ಸಾಕ್ಷಿಗಳನ್ನು ಗಟ್ಟಿಯಾಗಿ ಹಿಡಿದಿರಲೇಬೇಕು. ಇಲ್ಲದಿದ್ದರೆ ಆಯತಪ್ಪಿ ಬೀಳುವವರು ನಾವೇ, ನಷ್ಟವೂ ನಮಗೇ. ಅಲ್ಲವೇ?

ಉಕ್ಕಿನ ಹಕ್ಕಿಗಳ ಕಲರವದ ಹಿಂದೆ….

ಮೊನ್ನೆ ಫೆಬ್ರುವರಿ 18ರಿಂದ 22ರವರೆಗೂ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಬರೀ ಉಕ್ಕಿನ ಹಕ್ಕಿಗಳದ್ದೇ ರಾಜ್ಯಭಾರ. ಒಂದೊಂದರದ್ದೂ ಒಂದೊಂದು ಗಾತ್ರ, ಆಕಾರ, ಬಣ್ಣ ಹಾಗೂ ಕ್ಷಮತೆ! ಕೆಲವು ಭಾರತದ ಮಣ್ಣಿನದ್ದೇ ಆದರೂ ಹೆಚ್ಚಿನವು ವಿದೇಶಗಳಿಂದ ವಲಸೆ ಬಂದವು. ಅವು ಸುಮ್ಮನೆ ನೆಲದ ಮೇಲೆ ನಿಂತರೂ ಚಂದ, ಆಗಸದಲ್ಲಿ ಹಾರಾಡಿದರೂ ಚಂದ. ಒಟ್ಟಿನಲ್ಲಿ ಅವು ಮಾಡಿದ ಮೋಡಿ ಹೇಗಿತ್ತು ಅಂತೀರಿ? ನೆತ್ತಿಯ ಮೇಲಿನ ಸುಡುಬಿಸಿಲನ್ನೂ ಲೆಕ್ಕಿಸದೆ ಅವುಗಳನ್ನು ನೋಡಲು ಹೋದ ಲಕ್ಷಗಟ್ಟಳೆ ಜನ ನಿಬ್ಬೆರಗಾದರು. ನೆಲದ ಮೇಲೆ ತಣ್ಣಗೆ ನಿಂತಿದ್ದ ಕೆಲ ಹಕ್ಕಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಆಗಸದಲ್ಲಿ ರಂಗು ಚೆಲ್ಲಿಕೊಂಡು ಹಾರಾಡಿದವುಗಳನ್ನು ಕಂಡು ಚಿಕ್ಕ ಮಕ್ಕಳಂತೆ ಕೇಕೆ ಹಾಕಿ ನಕ್ಕರು. ಅವುಗಳ ಸದ್ದಿನೊಂದಿಗೆ ತಮ್ಮದೂ ದನಿ ಬೆರೆಸಿ ನಲಿದರು. ಅವುಗಳ ಸಾಹಸವನ್ನು ನೋಡಿ ಕೆಲಕ್ಷಣಗಳ ಮಟ್ಟಿಗೆ ತಮ್ಮಿರವನ್ನೇ ಮರೆತರು. ಹೃದಯದ ಬಡಿತವನ್ನು ಏರುಪೇರಾಗಿಸಿಕೊಂಡು ಬೆರಳನ್ನು ಕಚ್ಚಿ ಸುಮ್ಮನೇ ನಿಂತರು. ಹೌದು. ಇಷ್ಟೆಲ್ಲಾ ಭಾವನೆಗಳ ಸಿಂಚನಕ್ಕೆ ಕಾರಣವಾದದ್ದು ಈ ಬಾರಿಯ 'ಏರೋ ಇಂಡಿಯಾ 2015'.




ಇಡೀ ಏಷ್ಯಾ ಖಂಡಕ್ಕೇ ಕೀರ್ತಿ ತರುತ್ತಿರುವ, ನಮ್ಮ ದೇಶದ ಹೆಮ್ಮೆಯ ಏರ್ ಶೋ ಬರೋಬ್ಬರಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಅಂದಹಾಗೆ, 1996ರಲ್ಲಿ ಶುರುವಾದ ಈ ವೈಮಾನಿಕ ಅಭಿಯಾನಕ್ಕೆ ಈ ವರ್ಷ ದಶಕದ ಆವೃತ್ತಿಯ ಸಂಭ್ರಮ. ಪ್ರತಿ ಬಾರಿಯೂ ನಮ್ಮ ಕರ್ನಾಟಕದ ನಗರಿ ಬೆಂಗಳೂರೇ ಇದರ ಆತಿಥ್ಯವಹಿಸುತ್ತಿರುವುದು ನಮ್ಮ ಹೆಮ್ಮೆಯ ಕಿರೀಟಕ್ಕೆ ಮತ್ತೊಂದು ಗರಿಯೇ ಸರಿ! ಇದೊಂಥರಾ ವಿಮಾನಗಳ ಸಂತೆಯಿದ್ದಂತೆ. ನಮ್ಮ ರೈತರು ತಾವು ಬೆಳೆದದ್ದನ್ನೆಲ್ಲಾ ತಂದು ಸಂತೆಯಲ್ಲಿ ಗುಡ್ಡೆ ಹಾಕಿ ಮಾರುವುದಿಲ್ಲವೇ? ಇದೂ ಹಾಗೆಯೇ. ದೇಶ-ವಿದೇಶಗಳಿಂದ ಆಗಮಿಸುವ ವಿಮಾನ ತಯಾರಿಕಾ ಸಂಸ್ಥೆಗಳು ತಮ್ಮ ದೇಶದ ಅತ್ಯಾಧುನಿಕ ಯುದ್ಧವಿಮಾನಗಳು, ಹೆಲಿಕಾಪ್ಟರ್‍ಗಳು ಹಾಗೂ ಕ್ಷಿಪಣಿಗಳನ್ನು ಪ್ರದರ್ಶಿಸುತ್ತವೆ ಹಾಗೂ ಮಾರಾಟಕ್ಕಿಡುತ್ತವೆ. ಅಷ್ಟೇ ಅಲ್ಲ, ಅವುಗಳ ತಾಂತ್ರಿಕ ಕೌಶಲದ ಬಗ್ಗೆ ಜಂಭವನ್ನೂ ಕೊಚ್ಚಿಕೊಳ್ಳುತ್ತವೆ. ಖರೀದಿಯ ಆಸಕ್ತಿಯುಳ್ಳ ವೈಮಾನಿಕ ಪ್ರಪಂಚದ ದೊಡ್ಡಣ್ಣರುಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಬಾರಿಯಂತೂ ಒಟ್ಟು 750ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದವು. 109 ದೇಶಗಳಿಂದ ಪರಿಣಿತರ ತಂಡಗಳು ಆಗಮಿಸಿದ್ದವು. ಉದ್ಯಮಿಗಳ ಸಂಖ್ಯೆಯಂತೂ ಒಂದೂವರೆ ಲಕ್ಷವನ್ನು ಮೀರಿತ್ತು! ಪ್ರಧಾನಿ ಮೋದಿಯವರೇ ಉದ್ಘಾಟಿಸಿದ ಮೇಲೆ ಕಾರ್ಯಕ್ರಮ ಕಳೆಗಟ್ಟದೆ ಇರುತ್ತದೆಯೇ? ಜೊತೆಗೆ 'ಮೇಕ್ ಇನ್ ಇಂಡಿಯಾ' ಎಂಬ ಘೋಷವಾಕ್ಯ ಬೇರೆ. ಅದಕ್ಕೆ ಕಾರಣವೂ ಇದೆ. ಇಂದು ಭಾರತ ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಆಮದೆಂದರೆ ಖಂಡಿತ ಹೆಗ್ಗಳಿಕೆಯಲ್ಲ. ಅತಿಯಾದ ಆರ್ಥಿಕ ಹೊರೆ. ಆದ್ದರಿಂದಲೇ ಅದನ್ನು ಸ್ವಲ್ಪ ಸ್ವಲ್ಪವಾಗಿಯೇ ತಹಬದಿಗೆ ತಂದು ರಫ್ತಿನಲ್ಲಿ ಮೊದಲಿಗರಾಗಬೇಕೆಂಬುದು ಮೋದಿಯವರ ಕನಸು. ಇಲ್ಲಿಯತನಕ ಏನಾಗುತ್ತಿತ್ತೆಂದರೆ ಬಿಡಿ ಭಾಗಗಳು ವಿದೇಶಗಳಲ್ಲಿ ತಯಾರಾಗಿ ಭಾರತಕ್ಕೆ ಬರುತ್ತಿದ್ದವು. ಇಲ್ಲಿ ಅವುಗಳ ಜೋಡಣೆ ಮಾತ್ರ ನಡೆಯುತ್ತಿದ್ದುದು. ಇನ್ನು ಮುಂದೆ ಬಿಡಿ ಭಾಗಗಳಿಂದ ಹಿಡಿದು ಸಮಸ್ತವನ್ನೂ ಭಾರತದಲ್ಲೇ ತಯಾರಿಸಿ ಜೋಡಿಸೋಣ ಎಂದು ಕರೆ ಕೊಟ್ಟಿದ್ದಾರೆ ಮೋದಿ. ಅವರ ಕರೆಗೆ ಹಲವು ದೇಶಗಳು ಸ್ಪಂದಿಸಿವೆ. ಪರಿಣಾಮವೇನಾಗುತ್ತದೋ ಕಾದು ನೋಡಬೇಕು.

ಉದ್ಯಮವಲಯಕ್ಕೆ ಸಂಬಂಧಿಸಿದ ವ್ಯಾವಹಾರಿಕ ವಿಷಯಗಳೇನೇ ಇರಲಿ, ನಮಗಂತೂ ಪ್ರತಿಬಾರಿಯೂ ಏರ್ ಶೋ ಎಂಬುದು ಸಡಗರದ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ. ಆಕಾಶದಲ್ಲಿ ಸಲೀಸಾಗಿ ಪಲ್ಟಿ ಹೊಡೆಯುವ, ವಿವಿಧ ಚಿತ್ತಾರಗಳನ್ನು ರಚಿಸುವ, ಆಕಾರಗಳನ್ನು ಹೆಣೆಯುವ, ಬೆಚ್ಚಿ ಬೀಳಿಸುವಂಥ ಸಾಹಸಗಳನ್ನು ಪ್ರದರ್ಶಿಸುವ ದೇಶಿ, ವಿದೇಶೀ ವೈಮಾನಿಕ ತಂಡಗಳೊಂದಿಗೆ ನಮಗೆ ಅದೇನೋ ಅನನ್ಯ ಬೆಸುಗೆ. ಉದಾಹರಣೆಗೆ ನಮ್ಮ ಹಿಂದೂಸ್ಥಾನ್ ಏರೋನಾಟಿಕ್ಸ್ ಸಂಸ್ಥೆಯ  ತೇಜಸ್ ಹಾಗೂ ಸೂರ್ಯಕಿರಣದ ತಂಡಗಳನ್ನೇ ತೆಗೆದುಕೊಳ್ಳಿ. 1998 ರಿಂದಲೂ ಅವುಗಳ ಸಾಹಸವನ್ನು ನೋಡುತ್ತಲೇ ಬಂದಿದ್ದೇವೆ. 2005 ರಿಂದ ಈ ಗುಂಪಿಗೆ ಸೇರ್ಪಡೆಗೊಂಡ ಸಾರಂಗ್ ತನ್ನ ಚೊಚ್ಚಲ ಪ್ರದರ್ಶನದಲ್ಲೇ ಎಲ್ಲರ ಮನಸೂರೆಗೊಂಡಿತ್ತು. 2007 ರಲ್ಲಂತೂ ಅಭ್ಯಾಸ ನಡೆಸುತ್ತಿರುವಾಗ ಒಂದು ಸಾರಂಗ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಅದರ ಸಹ ಪೈಲಟ್ ಮರಣ ಹೊಂದಿದ್ದ. ಅದಾಗ್ಯೂ ಆ ತಂಡ ತನ್ನ ಪ್ರದರ್ಶನವನ್ನು ರದ್ದು ಮಾಡಿರಲಿಲ್ಲ . ಇವುಗಳಷ್ಟೇ ಅಲ್ಲದೆ ರಷ್ಯಾ ದೇಶದ ಮಿಗ್ ವಿಮಾನ, ಅಮೆರಿಕದ ಎಫ್-15, ಫ್ರಾನ್ಸ್ ದೇಶದ ಮಿರಾಜ್ ಹಾಗೂ ಫಾಲ್ಕನ್, ಇಂಗ್ಲೆಂಡಿನ ಹಾಕ್ ಹಾಗೂ ಜಾಗ್ವರ್‍ಗಳ ದರ್ಪ ದೌಲತ್ತುಗಳನ್ನು ಒಮ್ಮೆ ನೋಡಿದವರು ಇನ್ನೆಂದಿಗೂ ಮರೆಯಲಾರರು. 2011ರ ಎಂಟನೆಯ ಆವೃತ್ತಿಯಲ್ಲಿ ಸೂರ್ಯಕಿರಣ ತನ್ನ ಕೊನೆಯ ಪ್ರದರ್ಶನ ನೀಡಿತು. ಏಕೆಂದರೆ ಅದಕ್ಕೆ ನಿವೃತ್ತಿ ನೀಡಿ ಆ ಮಾದರಿಯ ಬದಲು ಹಾಕ್ ವಿಮಾನಗಳನ್ನು ಬಳಸಿಕೊಳ್ಳುವ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ ಇಂದಿಗೂ ಜನ ಸೂರ್ಯಕಿರಣ್ ತಂಡದ ಪ್ರದರ್ಶನವನ್ನು ನೆನೆಯುತ್ತಾರೆ. ಈ ಬಾರಿಯ ಪ್ರದರ್ಶನಗಳನ್ನು ನೋಡಿದ ಬಹುತೇಕರಿಗೆ ಅನಿಸಿದ್ದು, 'ಛೆ, ಸೂರ್ಯಕಿರಣ ತಂಡವೂ ಇರಬೇಕಾಗಿತ್ತು' ಎಂದೇ. ಇಂಥ ಸಣ್ಣ ಪುಟ್ಟ ನಿರಾಸೆಗಳೇನೇ ಇದ್ದರೂ ಸುಮಾರು ಮೂರು ಲಕ್ಷ ಮಂದಿ ಈ ಬಾರಿಯ ಏರ್ ಶೋ ವೀಕ್ಷಿಸಿ ಆನಂದತುಂದಿಲರಾಗಿದ್ದಾರೆ.


 ಈ ಬಾರಿ ಭಾಗವಹಿಸಿದ್ದ ಕೆಲ ಮುಖ್ಯ ತಂಡಗಳೆಡೆ ಗಮನ ಹರಿಸೋಣ ಬನ್ನಿ. ಭಾರತೀಯ ವಾಯುಸೇನೆಯ ಹೆಮ್ಮೆಯ 'ಸಾರಂಗ್' ಹೆಲಿಕಾಪ್ಟರ್‍‍ಗಳ ತಂಡ ತನ್ನ ಅಮೋಘ ಪ್ರದರ್ಶನವನ್ನು ಎಂದಿನಂತೆ ಈ ಬಾರಿಯೂ ಮುಂದುವರೆಸಿತು. ಆ ತಂಡದಲ್ಲಿದ್ದ ಒಂದು ವಿಶೇಷವೇನು ಗೊತ್ತೇ? ಮೊತ್ತ ಮೊದಲ ಬಾರಿಗೆ ಇಬ್ಬರು ಮಹಿಳೆಯರು ತಂಡದಲ್ಲಿ ಸ್ಥಾನ ಪಡೆದದ್ದು! ಅದೊಂದೇ ಅಲ್ಲದೆ 'ಧ್ರುವ್' ಹೆಲಿಕಾಪ್ಟರ್‍ಗಳೂ ಮನಸೂರೆಗೊಳ್ಳುವ ಕಸರತ್ತು ನಡೆಸಿದವು. ಇನ್ನು ಇಂಗ್ಲೆಂಡಿನ ಏರೋಸೂಪರ್‍ಬ್ಯಾಟಿಕ್ಸ್ ತಂಡ ಬ್ರೆಟ್ಲಿಂಗ್‍ನ 'ವಿಂಗ್ ವಾಕರ್ಸ್' ಮಾಡಿದ ಮೋಡಿಯನ್ನಂತೂ ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ. ಭೂಮಿಯಿಂದ ನೂರಾರು ಅಡಿ ಎತ್ತರಕ್ಕೆ ಚಿಮ್ಮಿದ ಎರಡು ವಿಮಾನಗಳ ಮೇಲೆ ತಲಾ ಒಬ್ಬೊಬ್ಬರಂತೆ ಹತ್ತಿ ನಿಂತ ಲಲನೆಯರು ಕಸರತ್ತುಗಳನ್ನು ಮಾಡಿದ್ದೇ ಮಾಡಿದ್ದು. ಅದೂ ಏಕಕಾಲದಲ್ಲಿ, ಇಬ್ಬರ ನಡುವೆ  ಅಂಗಾಂಗಗಳ ಚಲನೆಯಲ್ಲಿ ಒಂಚೂರೂ ವ್ಯತ್ಯಾಸವಿಲ್ಲದಂತೆ! ಅವರು ನೀಡಿದ ಕರಾರುವಾಕ್ ಪ್ರದರ್ಶನ ಹೇಗಿತ್ತಪ್ಪಾ ಎಂದರೆ ಎರಡು ಬೊಂಬೆಗಳಿಗೆ ಒಂದೇ ಸಮಯಕ್ಕೆ ಕೀಲಿ ಕೊಟ್ಟು ಆಟವಾಡಲು ಬಿಟ್ಟಂತಿತ್ತು! ಅವರೇನೋ ಲೀಲಾಜಾಲವಾಗಿ ಮಾಡುತ್ತಿದ್ದರು, ಆದರೆ ನೆರೆದಿದ್ದ ಜನಸ್ತೋಮಕ್ಕೆ ತನ್ನ ಆಶ್ಚರ್ಯ, ಆತಂಕ ಹಾಗೂ ಮೆಚ್ಚುಗೆಗಳನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಸ್ವೀಡನ್ನಿನ ಏರೋಬ್ಯಾಟಿಕ್ ತಂಡ 'ಸ್ಕ್ಯಾಂಡಿನೇವಿಯನ್ ಏರ್ ಶೋ' ಭಾರತದ ಧ್ವಜದ ತ್ರಿವರ್ಣದ ರಂಗನ್ನು ಗಾಳಿಯಲ್ಲಿ ಚೆಲ್ಲಾಡಿ ಎಲ್ಲರನ್ನೂ ಪುಳಕಿತರನ್ನಾಗಿಸಿದ್ದೂ ಆಯಿತು. ರಷ್ಯನ್ ಏರೋಬ್ಯಾಟಿಕ್ ತಂಡ ‘ಯಾಕೋಲೆವ್’ ಪ್ರದರ್ಶಿಸಿದ ಮೈನವಿರೇಳಿಸುವ ಸಾಹಸವೂ ಕಡಿಮೆಯದ್ದಾಗಿರಲಿಲ್ಲ. ಇನ್ನೇನು, ಈ ಬಾರಿಯೂ ಎಲ್ಲವೂ ಸುಸೂತ್ರವಾಗಿ ಮುಗಿಯಿತು ಎಂದುಕೊಳ್ಳುತ್ತಿದ್ದಾಗಲೇ ಜೆಕ್ ಗಣರಾಜ್ಯದ ತಂಡ 'ರೆಡ್ ಬುಲ್ಸ್' ಒಂದು ಸಣ್ಣ ಅವಘಡವನ್ನೆದುರಿಸಿತು. ಪ್ರದರ್ಶನ ನೀಡುತ್ತಿರುವಾಗ ಸಮತೋಲನ ಕಳೆದುಕೊಂಡ ಅದರ ಎರಡು ವಿಮಾನಗಳ ರೆಕ್ಕೆಗಳು ಪರಸ್ಪರ ಬಡಿದುಕೊಂಡು ನೋಡುಗರಲ್ಲಿ ಗಾಬರಿ ಮೂಡಿಸಿದರೂ ತಕ್ಷಣವೇ ಸಂಭಾಳಿಸಿಕೊಂಡು ಭೂಮಿಗಿಳಿದಿದ್ದರಿಂದ ಯಾವುದೇ ಪ್ರಾಣಾಪಾಯಗಳಾಗಲಿಲ್ಲ. ಒಟ್ಟಾರೆ, ಪ್ರದರ್ಶಿಸಿದವರ ಹಾಗೂ ನೋಡುಗರ ಮನಃಪಟಲಗಳಲ್ಲಿ ಈ ವರ್ಷದ ‘ಏರ್ ಶೋ’ನ ನೆನಪುಗಳು ಬಹುಕಾಲದವರೆಗೆ ಉಳಿಯಲಿವೆ ಎಂಬುದಂತೂ ಸ್ಪಷ್ಟವಾಗಿತ್ತು


ಹಾಗಾದರೆ ಈ ಕಾರ್ಯಕ್ರಮದ ಮೂಲ ಉದ್ದೇಶವೇನು? ಒಂದೆಡೆ ವಿಮಾನ ತಯಾರಕರನ್ನು ಒಟ್ಟು ಮಾಡಿ ಪ್ರದರ್ಶನ ಏರ್ಪಡಿಸಿ, ಮತ್ತೊಂದೆಡೆ ವೈವಿಧ್ಯಮಯ ಸಾಹಸಗಳಿಂದ ಜನರ ಶಹಬ್ಬಾಸ್‍ಗಿರಿ ಪಡೆದರೆ ಕಾರ್ಯಕ್ರಮ ಸಾರ್ಥಕವಾಗಿದೆ ಎಂದರ್ಥವೇ? ಖಂಡಿತ ಇಲ್ಲ. ಸಾರ್ಥಕ್ಯದ ಹಾದಿ ಬಲು ಕಠಿಣವಿದೆ. ಬಲ ಕಳೆದುಕೊಂಡಿರುವ ನಮ್ಮ ರಕ್ಷಣಾ ವಲಯವನ್ನು ಸದೃಢಗೊಳಿಸಬೇಕಿದೆ. ನಮಗೆ ಶಸ್ತ್ರಾಸ್ತ್ರಗಳ, ಯುದ್ಧವಿಮಾನಗಳ ಅಗತ್ಯವಿದೆಯೆಂದು, ಕಿರಾಣಿ ಅಂಗಡಿಯಿಂದ ಸಾಮಾನು ಕೊಂಡಂತೆ ಜಾಗತಿಕೆ ಮಾರುಕಟ್ಟೆಯಿಂದ ಕೊಂಡುಕೊಳ್ಳುವುದರಲ್ಲಿ ಯಾವ ಜಾಣತನವೂ ಇಲ್ಲ. ಮಿಲಿಯಗಟ್ಟಳೆ ಹಣ ವ್ಯಯಿಸಿ ಸಾಲಗಾರರಾಗಿ ಅವುಗಳನ್ನು ಖರೀದಿಸುವುದಕ್ಕಿಂತ ಅವುಗಳ ತಯಾರಿಕೆಯ ತಂತ್ರಜ್ಞಾನವನ್ನು ಅರಿಯುವುದು ಇಂದಿನ ತುರ್ತು ಅಗತ್ಯ. ಆದ್ದರಿಂದಲೇ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೋದಿ ಸರ್ಕಾರ ಒಂದು ಉತ್ತಮ ಕೆಲಸ ಮಾಡಿದೆ. ಹೆಲಿಕಾಪ್ಟರ್‍ಗಳ ಹಾಗೂ ಜಲಾಂತರ್ಗಾಮಿ ಹಡಗುಗಳ ಖರೀದಿಗಾಗಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಕರೆದಿದ್ದ ಜಾಗತಿಕ ಟೆಂಡರನ್ನು ರದ್ದುಗೊಳಿಸಿದೆ. ಆ ಮೂಲಕ ಅದಕ್ಕೆ ವ್ಯಯವಾಗಲಿದ್ದ ಮಿಲಿಯಗಟ್ಟಳೆ ಡಾಲರುಗಳನ್ನು ಉಳಿಸಿದೆ. ಅದರ ಮುಂದುವರಿದ ಭಾಗವೇ ಏರೋ ಇಂಡಿಯಾದಲ್ಲಿ ಮಾರ್ದನಿಸಿದ 'ಮೇಕ್ ಇನ್ ಇಂಡಿಯಾ' ಎಂಬ ಘೋಷಣೆ. ತಾಂತ್ರಿಕ ಕೌಶಲವನ್ನು ಎರವಲು ಪಡೆದು ಎಲ್ಲವನ್ನೂ ನಮ್ಮಲ್ಲಿಯೇ ತಯಾರಿಸಿದರೆ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವುದೇ ಅಲ್ಲದೆ ರಕ್ಷಣಾ ಸಾಮಗ್ರಿಗಳ ಬರವೂ ನೀಗುತ್ತದೆ. ಆದ್ದರಿಂದಲೇ ಈ ವಿಷಯವನ್ನು ನಿಸ್ಸಂಕೋಚವಾಗಿ ಏರೋ ಇಂಡಿಯಾ ಉದ್ಘಾಟನೆಯಲ್ಲಿ ಹೇಳಿದರು ಮೋದಿ. 'ಭಾರತ ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ವಿಶ್ವದಲ್ಲೇ ಮೊದಲ ರಾಷ್ಟ್ರ ಎಂಬುದು ನಿಮ್ಮ ಕಿವಿಗೆ ಇಂಪಾಗಿರುವ ವಿಷಯ ನಿಜ, ಆದರೆ ಅದು ನಮಗೆ ಪ್ರಿಯವಾದದ್ದಲ್ಲ. ಯಾವುದರಲ್ಲಿ ಇರಬಾರದೋ ಅದರಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ನಮಗೆ ರಕ್ಷಣಾ ಸಾಮಗ್ರಿಗಳನ್ನು ಬರಿದೇ ಮಾರುವ ಬದಲಿಗೆ ತಂತ್ರಜ್ಞಾನದಲ್ಲಿ ಪಾಲುದಾರರಾಗಿ ಬನ್ನಿ' ಎಂದು ವಿದೇಶೀ ತಯಾರಕರನ್ನು ಕುರಿತು ಅವರು ಆಡಿದ ನೇರ ಮಾತುಗಳಲ್ಲಿ ಅವರ ಉದ್ದೇಶ ಸ್ಪಷ್ಟವಾಗಿತ್ತು.

ತಮ್ಮ ಮಾತುಗಳಿಗೆ ಇಂಬು ಕೊಡುವಂತೆ ಈ ವರ್ಷದ ಬಜೆಟ್‍ನಲ್ಲೂ ರಕ್ಷಣಾ ಇಲಾಖೆಯ ಅಭಿವೃದ್ಧಿಗೆ ಹೆಚ್ಚು ಹಣವನ್ನು ಮೀಸಲಿಟ್ಟಿದೆ ಮೋದಿ ಸರ್ಕಾರ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇನ್ನೊಂದು ದಶಕದಲ್ಲಿ ನಾವೂ ಅಮೆರಿಕ, ರಷ್ಯಾಗಳಿಗೆ ಪೈಪೋಟಿ ನೀಡುವುದು ಖಂಡಿತ. ಆ ‘ಅಚ್ಛೇ ದಿನಗಳು’ ಬೇಗ ಬರಲಿ ಎಂದು ಹಾರೈಸೋಣ ಅಲ್ಲವೇ?

Thursday 19 February 2015

ಈ ಸಮಯ 'ಸಿರಿಸೇನಾ'ಮಯ!

ಅದು 1987ರ ಜುಲೈ 29. ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಶ್ರೀಲಂಕಾದ ಅಂದಿನ ಅಧ್ಯಕ್ಷ ಜೆ.ಆರ್. ಜಯವರ್ಧನೆ ಅಕ್ಕಪಕ್ಕದಲ್ಲಿ ಕುಳಿತು ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕಿದರು.  ಅದಕ್ಕೆ ಎರಡು ದಿನಗಳ ಹಿಂದಷ್ಟೇ ರಾಜೀವ್ ಎಲ್‍ಟಿಟಿಇನ ಮುಖ್ಯಸ್ಥ ಪ್ರಭಾಕರನ್ ಹಾಗೂ ಅವನ ಕುಟುಂಬವನ್ನು ದೆಹಲಿಗೆ ಕರೆಸಿಕೊಂಡಿದ್ದರು. ಅಲ್ಲಿ ಅವನನ್ನು ಭೇಟಿಯಾಗಿ, ಕುಶಲೋಪರಿ ನಡೆಸಿ ಅಶೋಕ ಹೋಟೆಲ್‍ನಲ್ಲಿ ಅವನಿಗೆ ಹಾಗೂ ಕುಟುಂಬಕ್ಕೆ ವಾಸ್ತವ್ಯ ಕಲ್ಪಿಸಿ ಇಲ್ಲಿ ಒಪ್ಪಂದಕ್ಕೆ ಸಹಿ ಮಾಡಲು ಬಂದಿದ್ದರು. ಒಪ್ಪಂದವಾದ ಮರುದಿನವೇ ಭಾರತದ ಶಾಂತಿ ಪಾಲನಾ ಪಡೆ ಲಂಕೆಗೆ ಬಂದಿಳಿಯಿತು. ಅದಾಗಿ ಸರಿಯಾಗಿ ಮೂರು ದಿನಗಳಿಗೆ, ಅಂದರೆ ಆಗಸ್ಟ್ ಎರಡರಂದು ಪ್ರಭಾಕರನ್‍ನನ್ನು ಶೀಲಂಕಾದ ಜಾಫ್ನಾ ಪಟ್ಟಣಕ್ಕೆ ಕ್ಷೇಮವಾಗಿ ವಾಪಸ್ ಕಳುಹಿಸಲಾಯಿತು. ರಾಜೀವ್ ಎಲ್ಲವೂ ಸುಸೂತ್ರವಾಗಿ ಮುಗಿಯಿತೆಂದು ನಿರಾಳವಾದರು. ತಾನು ಭಾರತ ಹಾಗೂ ಶ್ರೀಲಂಕಾದ ಸಂಬಂಧದ ಹೊಸ ಭಾಷ್ಯ ಬರೆದಿದ್ದೇನೆಂದು ಭಾವಿಸಿದ್ದರೇನೋ, ಆದರೆ ಅವರು ಬರೆದದ್ದು ತಮ್ಮದೇ ಸಾವಿನ ಮುನ್ನುಡಿಯಾಗಿತ್ತು!

ಭಾರತ ಹಾಗೂ ಶ್ರೀಲಂಕಾದ ನಡುವಿನ ಈ ಒಪ್ಪಂದಕ್ಕೆ ಕಾರಣವೂ ಇತ್ತು. 1977ರಿಂದ ಹಿಡಿದು 1987ರವರೆಗೂ ಸುಮಾರು ಒಂದು ದಶಕದ ಕಾಲ ಭಾರತ ಶ್ರೀಲಂಕಾದ ತಮಿಳರಿಗೆ ಬೆಂಬಲ ನೀಡುತ್ತಲೇ ಇತ್ತು. ಶ್ರೀಲಂಕಾ ಸರ್ಕಾರದ ವಿರೋಧದ ನಡುವೆಯೂ ತಮಿಳರ ಪ್ರತ್ಯೇಕತೆಯ ಕೂಗನ್ನು ಪೋಷಿಸಿಕೊಂಡೇ ಬಂದಿತ್ತು. ಹಾಗೆ ಜನ ಸಂಘಟನೆಯಿಂದ ಹಿಡಿದು ಶಸ್ತ್ರಾಸ್ತ್ರಗಳವರೆಗಿನ ತರಬೇತಿಯನ್ನು ನೀಡಿ ಹಾಲೆರೆದು ಪೋಷಿಸಿದ ಕೂಸೇ ಎಲ್‍ಟಿಟಿಇ! ಒಂದೆಡೆ ಬಲಿಷ್ಠವಾಗುತ್ತಿದ್ದ ಎಲ್‍ಟಿಟಿಇ, ಮತ್ತೊಂದೆಡೆ ಅದನ್ನು ಶತಾಯ ಗತಾಯ ಹಣಿಯಲೇಬೇಕೆಂದು ಹೆಣಗುತ್ತಿದ್ದ ಶ್ರೀಲಂಕಾ ಸರ್ಕಾರ. ಮಧ್ಯ ಸಿಲುಕಿ ನಲುಗುತ್ತಿದ್ದವರು ಲಂಕೆಯ ಶ್ರೀಸಾಮಾನ್ಯರು! ಕೊನೆಗೊಮ್ಮೆ ಶ್ರೀಲಂಕಾ ಸರ್ಕಾರ ಎಷ್ಟು ರೋಸಿಹೋಯಿತೆಂದರೆ, ಎಲ್‍ಟಿಟಿಇಯ ಕೇಂದ್ರ ಕಾರ್ಯಸ್ಥಾನವಾದ ಜಾಫ್ನಾ ಪಟ್ಟಣಕ್ಕೆ ಲಗ್ಗೆಯಿಟ್ಟಿತು. ಆಗ ರಾಜೀವ್ ಏನು ಮಾಡಿದರು ಗೊತ್ತೇ? ನಮ್ಮ ವಾಯುಸೇನೆಯ ಹೆಲಿಕಾಪ್ಟರ್‍ ಹಾಗೂ ಯುದ್ಧವಿಮಾನಗಳನ್ನು ಬಳಸಿಕೊಂಡು ಎಲ್‍ಟಿಟಿಇ ತಂಡಕ್ಕೆ ಆಕಾಶದಿಂದಲೇ ಆಹಾರ-ನೀರುಗಳನ್ನು ಸರಬರಾಜು ಮಾಡಿದರು! ಶ್ರೀಲಂಕಾ ಸರ್ಕಾರವೇನಾದರೂ ಮಧ್ಯ ಪ್ರವೇಶಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ನಮ್ಮ ದೇಶದಲ್ಲಿದ್ದ ಶ್ರೀಲಂಕಾದ ರಾಯಭಾರಿಗೆ ಧಮಕಿಯನ್ನೂ ಹಾಕಿದರು. ಇನ್ನು ಪೂರ್ಣ ಪ್ರಮಾಣದ ಯುದ್ಧವಾಗುವುದೊಂದೇ ಬಾಕಿಯಿದ್ದದ್ದು. ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡ ಶ್ರೀಲಂಕಾ ಸರ್ಕಾರ ಇದಕ್ಕೊಂದು ಕೊನೆ ಹಾಡಬೇಕೆಂದು ನಿರ್ಧರಿಸಿತು. ಅದರ ಫಲವೇ ಭಾರತ ಶ್ರೀಲಂಕಾ ಒಪ್ಪಂದ. ಅದರ ಪ್ರಕಾರ ನಿರ್ಧಾರವಾಗಿದ್ದು, ಶ್ರೀಲಂಕಾ ಸರ್ಕಾರ ಜಾಫ್ನಾದಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕು, ಎಲ್‍ಟಿಟಿಇ ತನ್ನ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ತಂದೊಪ್ಪಿಸಬೇಕು ಹಾಗೂ ಶಾಂತಿಯನ್ನು ಕಾಪಾಡಲು ಭಾರತ ಸರ್ಕಾರ ತನ್ನ ಶಾಂತಿ ಪಾಲನಾ ಪಡೆಯನ್ನು ಕಳಿಸಬೇಕು ಎಂದು.



ಒಪ್ಪಂದ ನಡೆಯುವ ಮುನ್ನ ತಮ್ಮ ಗುಂಡು ನಿರೋಧಕ ಕವಚವನ್ನೇ ಪ್ರಭಾಕರನ್‍ಗೆ ಪ್ರೀತಿಯಿಂದ ಕೊಟ್ಟು 'ನಿನ್ನ ಬಗ್ಗೆ ಕಾಳಜಿ ವಹಿಸು' ಎಂದಿದ್ದ ರಾಜೀವ್ ಪ್ರಭಾಕರನ್‍ನನ್ನು ಬಲವಾಗಿ ನಂಬಿದ್ದರು. ಒಪ್ಪಂದ ಮುಗಿಯುವಷ್ಟರಲ್ಲಿ ಇನ್ನೆಲ್ಲಿ ಅವನ ಜೀವಕ್ಕೆ ಸಂಚಕಾರ ಬರುತ್ತದೋ ಎಂದು ಅವನನ್ನು, ಅವನ ಕುಟುಂಬವನ್ನು ಜೋಪಾನ ಮಾಡಿದ್ದರು. ಆದರೆ ಪ್ರಭಾಕರನ್ ರಾಜೀವ್‍ರ ಒಪ್ಪಂದಕ್ಕೆ ಕವಡೆ ಕಾಸಿನ ಬೆಲೆಯನ್ನೂ ಕೊಡಲಿಲ್ಲ ನೋಡಿ, ಆಗಲೇ ಅವರಿಗೆ ತಾವೆಂಥ ಹಾವಿಗೆ ಹಾಲೆರೆದಿದ್ದೇವೆ ಎಂಬುದು ಅರಿವಾಗಿದ್ದು. ಅವನ ಹಾಗೂ ಅವನ ತಂಡದ ಉಪಟಳ ದಿನೇ ದಿನೇ ಹೆಚ್ಚುತ್ತಲೇ ಹೋಯಿತು. 1990ರ ಹೊತ್ತಿಗೆ ಭಾರತದ ಶಾಂತಿ ಪಾಲನಾ ಪಡೆಯ ಒಂದು ಸಾವಿರಕ್ಕೂ ಹೆಚ್ಚು ಸೈನಿಕರು ಹತರಾದರು. ಕೊನೆಗೆ ರಾಜೀವ್‍ಗೆ ಉಳಿದದ್ದು ಒಂದೇ ಮಾರ್ಗ, ಎಲ್‍ಟಿಟಿಇಯನ್ನು ಸದೆಬಡಿಯುವುದು. ಅದನ್ನು ಅವರು ಮನಸ್ಸಿನಲ್ಲೇ ನಿರ್ಧರಿಸಿಕೊಂಡು ಸುಮ್ಮನಿರಬಹುದಿತ್ತು. ಆದರೆ ವಿಧಿಯೆಂಬುದೂ ಒಂದಿದೆಯಲ್ಲ, 1990ರ ಆಗಸ್ಟ್ ತಿಂಗಳಿನಲ್ಲಿ ಸಂಡೇ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ 'ನಾನು ಮುಂದಿನ ಚುನಾವಣೆಯಲ್ಲಿ ಪ್ರಧಾನಿಯಾದರೆ ಎಲ್‍ಟಿಟಿಯ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳುತ್ತೇನೆ' ಎಂದು ಮುಲಾಜಿಲ್ಲದೆ ಹೇಳಿಬಿಟ್ಟರು. ಪ್ರಧಾನಿಯಾಗಲು ಬಿಟ್ಟರೆ ತಾನೇ ನಮ್ಮ ತಂಟೆಗೆ ಬರುವುದು ಎಂದುಕೊಂಡ ಪ್ರಭಾಕರನ್ ಮರುವರ್ಷ ಮೇ ತಿಂಗಳಿನಲ್ಲಿ ಬಾಂಬ್ ದಾಳಿಯೊಂದರಲ್ಲಿ ರಾಜೀವ್‍ರ ಕಥೆಯನ್ನೇ ಮುಗಿಸಿಬಿಟ್ಟ! ಅಲ್ಲಿಗೆ ಭಾರತ ಹಾಗೂ ಶ್ರೀಲಂಕಾದ ನಡುವಿನ ಕೊಂಡಿ ಕಳಚಿಬಿತ್ತು. ರಾಮಾಯಣದ ಭಾಷೆಯಲ್ಲಿ ಹೇಳುವುದಾದರೆ, ಲಂಕೆಯ ರಾವಣ ಭಾರತದ ರಾಮನನ್ನು ಸಂಹರಿಸಿಬಿಟ್ಟಿದ್ದ.

ಹೌದು, ಬೇರೆ ದೇಶಗಳ ಜೊತೆ ಸಂಬಂಧವನ್ನು ಬೆಳೆಸಲು ಆರ್ಥಿಕ, ವಾಣಿಜ್ಯ, ಅಭಿವೃದ್ಧಿಯ ಕಾರಣಗಳಿಗಾಗಿ ತಡಕಾಡುತ್ತೇವೆ. ಆದರೆ ಲಂಕೆಯ ವಿಷಯದಲ್ಲಿ ಅವುಗಳ ಅಗತ್ಯವೇ ಇಲ್ಲ. ರಾಮಾಯಣವೆಂಬ ಕಥೆಯನ್ನು, ರಾಮನೆಂಬ ಆದರ್ಶ ಪುರುಷನನ್ನು ದೇವರೆಂದು ನೆನೆದಾಗಲೊಮ್ಮೆ ಲಂಕೆಯೂ ಕಣ್ಮುಂದೆ ಸುಳಿಯಲೇ ಬೇಕು. ಇಂದಿನ ನೇಪಾಳದ ಜನಕಪುರಿಯಲ್ಲಿ ಜನಿಸಿದ ಸೀತೆ, ಅಯೋಧ್ಯೆಯ ರಾಮನನ್ನು ವರಿಸಿ, ನಾಸಿಕ್‍ನ ಹತ್ತಿರವಿರುವ ಪಂಚವಟಿಯಲ್ಲಿದ್ದಳು ಎನ್ನುವವರೆಗೆ ಮಾತ್ರ ಭಾರತದ ಪಾತ್ರ. ನಂತರ ರಾಮಾಯಣವೆಲ್ಲವೂ ಲಂಕಾಮಯವೇ! ಅವಳನ್ನು ಅಪಹರಿಸಿದ ರಾವಣನನ್ನು ಬೆಂಬೆತ್ತಿ ಹೋದ ವಾನರ ಸೇನೆ ನಿರ್ಮಿಸಿದ ರಾಮ ಸೇತುವನ್ನು, ಲಂಕೆಯಲ್ಲಿರುವ ರಾವಣನ ದೇಗುಲ ಅಥವಾ ಸೀತೆಯ ಅಶೋಕವನವನ್ನು ನೋಡುವಾಗ, ರಾಮಾಯಣ ಬರೀ ಕಾಲ್ಪನಿಕ ಕಥೆ ಎಂದು ವಾದಿಸುವವರು ಕೆಲ ಕ್ಷಣಗಳ ಮಟ್ಟಿಗಾದರೂ ಮೂಗರಾಗಲೇಬೇಕು! ಇಂದಿಗೂ ಲಂಕೆಯ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸುಮಾರು ಮೂವತ್ತು ಜಾಗಗಳಿವೆ! ಐತಿಹ್ಯವೇ ಬೆಸೆದಿರುವ ಈ ತಂತುವನ್ನು ನಾವು ಭಾವರಹಿತವಾಗಿ ಕಡಿದುಕೊಂಡಿದ್ದೇಕೆ ಎಂಬುದು ಮಾತ್ರ ಅರ್ಥವಾಗುವುದಿಲ್ಲ.

ಇರಲಿ, 2009ರಲ್ಲಿ ನಾವು ಲೋಕಸಭಾ ಚುನಾವಣೆಯಲ್ಲಿ ಕಳೆದುಹೋಗಿದ್ದಾಗ ಶ್ರೀಲಂಕಾ ಪ್ರಭಾಕರನ್‍ನನ್ನು ಹೊಡೆದುರುಳಿಸಿತು. ಆಗ ಅದು ಭಾರತದ ಸಹಾಯವನ್ನೇನೂ ಬೇಡಲಿಲ್ಲ. ಅದಕ್ಕೂ ಮುಂಚೆ, ಅಂದರೆ 2005ರಲ್ಲಿ ಮಹಿಂದಾ ರಾಜಪಕ್ಷೆ ಶ್ರೀಲಂಕಾದ ಅಧ್ಯಕ್ಷರಾದ ಮೇಲೆ ಅದು ತಾನು ಭಾರತದ ಗೆಳೆಯ ಎಂದು ಹೇಳಿಕೊಂಡರೂ ಸಾಬೀತು ಮಾಡುವ ಪ್ರಯಾಸವನ್ನೇನೂ ಮಾಡಲಿಲ್ಲ. ನಾವೂ ಅಷ್ಟೇ. ಬೇರೆ ದೇಶಗಳ ಜೊತೆ 'ಟೂ' ಬಿಟ್ಟಷ್ಟೇ ಸಲೀಸಾಗಿ ಇದರ ಜೊತೆಗೂ ಬಿಟ್ಟೆವು. ನಾವು ಇಂಚಿಂಚೇ ಹೊರಬಂದೆವಲ್ಲ, ಚೀನಾ ಮೆಲ್ಲನೆ ಒಳಸರಿಯಿತು. ಲಂಕೆಯಲ್ಲಿ ತನ್ನ ಬಂಡವಾಳವನ್ನು ಧಾರಾಳವಾಗಿ ಹೂಡಿತು. ಅದಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನೆಲ್ಲ ತಾನೇ ಸರಬರಾಜು ಮಾಡಿತು. ರಾಜಪಕ್ಷೆಯವರಿಗಂತೂ ಚೀನಾವೇ ಅಪ್ಯಾಯಮಾನವಾಗಿತ್ತು. ಈ ನಂಟು ಬರೀ ಅವೆರಡು ದೇಶಗಳಿಗೆ ಸೀಮಿತವಾಗಿದ್ದಿದ್ದರೆ ಭಾರತ ಕಳವಳಪಡಬೇಕಾಗಿರಲಿಲ್ಲ. ಆದರೆ ಕಳೆದ ವರ್ಷ ಚೀನಾದ ಜಲಾಂತರ್ಗಾಮಿ ಹಡಗುಗಳು ಎರಡು ಬಾರಿ ಲಂಕೆಯ ಬಂದರಿನಲ್ಲಿ ಲಂಗರು ಹಾಕಿ ನಿಂತವಲ್ಲ, ಆಗ ಭಾರತಕ್ಕೆ ತಳಮಳ ಶುರುವಾಯಿತು. ಆಷ್ಟೇ ಅಲ್ಲ, ಸರ್ವಾಧಿಕಾರಿಯಂತೆ ಆಡತೊಡಗಿದ್ದ ರಾಜಪಕ್ಷೆ ಸಂಪುಟದ ತುಂಬೆಲ್ಲ ತಮ್ಮ ಬಂಧು-ಬಾಂಧವರನ್ನೇ ತುಂಬಿಕೊಂಡಿದ್ದರು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಲಂಕೆಯ ಅಧ್ಯಕ್ಷರಾಗಲು ಇದ್ದ ಎರಡು ಅವಧಿಗಳ ಮಿತಿಯನ್ನೂ ಕಿತ್ತು ಹಾಕಿದ್ದರು. ತಮ್ಮ ಎರಡನೆಯ ಅವಧಿ ಮುಗಿದ ನಂತರವೂ ಅಧಿಕಾರದಲ್ಲೇ ಮುಂದುವರೆಯುವುದು ಅವರ ಹುನ್ನಾರವಾಗಿತ್ತು. ಚೀನಾಗೆ ಬೇಕಾಗಿದ್ದಿದ್ದೂ ಅದೇ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ತಾನೇ?



ಆದರೆ ಕಳೆದ ನವೆಂಬರ್‍ನಲ್ಲಿ ಪವಾಡವೊಂದು ನಡೆದು ಹೋಯಿತು. ರಾಜಪಕ್ಷೆಯ ಸಂಪುಟದಲ್ಲೇ ಆರೋಗ್ಯ ಸಚಿವರಾಗಿದ್ದ ಮೈತ್ರಿಪಾಲ ಸಿರಿಸೇನಾ ತಾನು ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಬಿಟ್ಟರು. ಅವರಿಗೆ ರಾವಣ ಬುದ್ಧಿಕೊಟ್ಟನೋ ರಾಮ ಬುದ್ದಿಕೊಟ್ಟನೋ ಅವರೇ ಹೇಳಬೇಕು. ಆದರೆ ಶ್ರೀಲಂಕಾದ ಕೆಲವು ಸುದ್ದಿ ಮಾಧ್ಯಮಗಳ ಪ್ರಕಾರ ಅವರಿಗೆ ಬುದ್ಧಿ ಕೊಟ್ಟದ್ದು ಭಾರತ ಸರ್ಕಾರದ ಗುಪ್ತಚರ ದಳವಂತೆ! ಅಲ್ಲಿಯ ಬೇಹುಗಾರರೊಬ್ಬರು ಸಿರಿಸೇನಾರ ಮನವೊಲಿಸಿದ್ದೂ ಅಲ್ಲದೆ ಅವರ ಪರವಾಗಿ ಹಲವು ಪ್ರಭಾವಿ ಮಾಜಿ ಅಧ್ಯಕ್ಷರು ಹಾಗೂ ಪ್ರಧಾನಮಂತ್ರಿಗಳನ್ನು ಸಂಘಟಿಸಿದರಂತೆ! ಅದರ ಫಲವೇ ಸಿರಿಸೇನಾರಿಗೆ ದಕ್ಕಿದ ವಿಜಯವಂತೆ. ಹಿಂದೊಮ್ಮೆ ಭಾರತ ಲಂಕೆಯ ಅಂತರಂಗಕ್ಕೆ ನೇರವಾಗಿ ಕೈಹಾಕಿ ಕದಡಿತ್ತು. ಈ ಬಾರಿ ಪರೋಕ್ಷವಾಗಿ ಕೈಯ್ಯಾಡಿಸಿ ತನ್ನ ಕಾರ್ಯ ಸಾಧಿಸಿಕೊಂಡಿದೆ ಎಂಬ ಗುಮಾನಿ ಎಲ್ಲರದೂ. ಇಂಥ ವಿಷಯಗಳನ್ನು ಯಾರೂ ನೇರವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಸೂಚ್ಯವಾಗಿ ತಮ್ಮ ನಡವಳಿಕೆಯಿಂದ ಅರ್ಥ ಮಾಡಿಸುತ್ತಾರೆ. ಚುನಾವಣೆಯ ಫಲಿತಾಂಶ ಪ್ರಕಟವಾದ ಕೆಲ ತಾಸುಗಳಲ್ಲೇ ಭಾರತದ ರಾಯಭಾರಿ ವೈ.ಕೆ ಸಿನ್ಹಾ ಸಿರಿಸೇನಾರನ್ನು ಭೇಟಿಯಾಗಿ ಶುಭಕೋರಿದರೆ, ಚೀನಾದ ರಾಯಭಾರಿಗೆ ಅವಕಾಶ ಸಿಕ್ಕಿದ್ದು ಬರೋಬ್ಬರಿ ಆರು ದಿನಗಳ ನಂತರ!

ಮರ್ಮಾಘಾತವಾಗಿರುವುದು ತಾನು ಸೋಲುತ್ತೇನೆ ಎಂದು ಕನಸಿನಲ್ಲೂ ನಿರೀಕ್ಷಿಸದಿದ್ದ ರಾಜಪಕ್ಷೆಗೆ ಮಾತ್ರವಲ್ಲ, ಇಂಥ ಫಲಿತಾಂಶವನ್ನು ನಿರೀಕ್ಷಿಸದಿದ್ದ ಚೀನಾಕ್ಕೂ. ಸಿರಿಸೇನಾ ತಮ್ಮ ಹಿಂದಿನ ಸರ್ಕಾರ ಕೈಗೊಂಡಿದ್ದ ಅನೇಕ ನಡೆಗಳನ್ನು ಪ್ರಶ್ನಿಸಿದ್ದಾರೆ. ಆಂತರಿಕವಾಗಿ ಅವರೇನೇ ಮಾಡಿಕೊಳ್ಳಲಿ, ನಮ್ಮ ಕಾಳಜಿಯಿರುವುದು ಅವರು ಚೀನಾದೊಂದಿಗೆ ವ್ಯವಹರಿಸುವ ಬಗ್ಗೆ. ಅದು ಅರ್ಥವಾಗಿದೆಯೆಂಬಂತೆ ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಭಾರತವನ್ನೇ ಆಯ್ದುಕೊಂಡು ಬಂದಿದ್ದಾರೆ. ಈಗಿನ ಅವರ ಭೇಟಿ ನಮಗೆ ಬಹಳ ಮುಖ್ಯ. ಒಪ್ಪಂದಗಳಿರುವ ಕಾಗದದ ಮೇಲೆ ಬೀಳುವ ಶಾಯಿಯ ಮೊಹರಿಗಿಂತ ಹೃದಯಗಳಲ್ಲಿ ಅಚ್ಚೊತ್ತುವ ನಂಬಿಕೆ, ವಿಶ್ವಾಸಗಳ ಗುರುತು ಸ್ಥಾಯಿಯಾಗಲಿದೆ.

ಭೂಪಟದಲ್ಲಿರುವಂತೆ ಭಾರತದ ನಕ್ಷೆಯನ್ನು ಬರೆಯಿರಿ ಎಂದಾಗ ನಾವು ಬರೆಯುತ್ತಿದ್ದುದು ಹೇಗೆ ಹೇಳಿ? ಉತ್ತರ, ಪೂರ್ವ, ಪಶ್ಚಿಮಗಳನ್ನು ವಕ್ರರೇಖೆಗಳಲ್ಲಿ ಬಿಡಿಸಲು ತಿಣುಕಾಡಿ, ಕ್ಯಾರಟ್‍ಅನ್ನೋ ಮೂಲಂಗಿಯನ್ನೋ ಹೋಲುವಂತೆ ದಕ್ಷಿಣ ಭಾರತವನ್ನು ಸುಲಭವಾಗಿ ಬಿಡಿಸಿ, ಕೆಳಗೆ ಅದರ ಬಲಕ್ಕೆ ಮಚ್ಚೆಯಂತೆ ಎರಡು ಚುಕ್ಕಿಗಳನ್ನಿಟ್ಟು ಅದರ ಕೆಳಗೆ ನೀರಿನ ಹನಿಯ ಆಕಾರದ ಲಂಕೆಯನ್ನು ಬಿಡಿಸುವುದು. ಯಾವುದನ್ನು ಬರೆಯುವುದು ಕಷ್ಟವಾದರೂ ಲಂಕೆ ಸುಲಭವಾಗಿ ಮೂಡುತ್ತಿತ್ತು ಅಲ್ಲವೇ? ಅದರಲ್ಲಿ ತಪ್ಪಾಗುವುದಿಲ್ಲವೆಂಬ ಖಾತ್ರಿಯೂ ಇರುತ್ತಿತ್ತು. ಅದಿಲ್ಲದ ಭಾರತದ ನಕ್ಷೆ ಎಂದಾದರೂ ನಮಗೆ ಪೂರ್ಣವೆನಿಸುತ್ತಿತ್ತೇ? ನಿಜವಾಗಿಯೂ ಭಾರತಕ್ಕಂಟಿದ ಬಾಲಂಗೋಚಿ ಶ್ರೀಲಂಕಾ ಎನಿಸುವುದು ಅದಕ್ಕೇ.
ನಕ್ಷೆಯಲ್ಲಿ ಬೆಸೆದುಕೊಂಡಿರುವುದು ಈಗ ಹೃದಯಗಳಲ್ಲೂ ಮೂಡಬೇಕಾಗಿದೆ. ಎರಡೂ ರಾಷ್ಟ್ರಗಳ ಕ್ಷೇಮದ, ಅಭಿವೃದ್ಧಿಯ ನೆಪದಲ್ಲಾದರೂ ಇದು ಸಾಧ್ಯವಾದೀತಾ? ಕಾದು ನೋಡೋಣ.

Tuesday 10 February 2015

ಗಂಡೆದೆಯ ಕಾರ್ಯಾಚರಣೆಯನ್ನು ನಡೆಸುವುದು ‘ಬೇಬಿ’ಯಂಥ ತಂಡವೇ!

BABY! ಇದು ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಚಿತ್ರ. ಚಿತ್ರದ ಹೆಸರು ಸೂಚಿಸುವಂತೆ ಇದು ಯಾವ ಮಗುವಿನ ಕಥೆಯೂ ಅಲ್ಲ, ಬದಲಿಗೆ, ಉಗ್ರರನ್ನು ಹಿಡಿಯುವ ಕಮಾಂಡೋಗಳ ತಂಡದ ಹೆಸರು! ಇದು,  ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡ ಇಂಡಿಯನ್ ಮುಜಾಹಿದ್ದೀನ್‍ನ ಉಗ್ರನೊಬ್ಬನನ್ನು ಹಿಡಿಯಲು ಹರಸಾಹಸ ಪಡುವ ಭಾರತೀಯ ಕಮಾಂಡೋಗಳ ಕಥೆ. ಕಾರ್ಯಾಚರಣೆಯೊಂದನ್ನು ಹೆಣೆದು ಯಶಸ್ವಿಗೊಳಿಸಲು ಎಷ್ಟೆಲ್ಲಾ ತಿಣುಕಾಡಬೇಕಾಗುತ್ತದೆ ಎಂಬುದರಿಂದ ಹಿಡಿದು ಉಗ್ರವಾದದ ಹಿಂದಿರುವ ಪಾಕಿಸ್ತಾನದ ಕೈವಾಡದವರೆಗಿನ ಎಲ್ಲವನ್ನೂ ಈ ಚಿತ್ರ ಬಹಳ ಚೆನ್ನಾಗಿ ಬೆತ್ತಲಾಗಿಸುತ್ತದೆ. ಆದ್ದರಿಂದಲೇ ಇದು ಪಾಕಿಸ್ತಾನದಲ್ಲಿ ನಿಷೇಧಿಸಲ್ಪಟ್ಟಿದೆ! ಅದಿರಲಿ, ಮಹತ್ವದ ವಿಷಯವೇನೆಂದರೆ ಈ ಚಿತ್ರದಲ್ಲಿ ಬರುವ ಕಥೆ ಕಾಲ್ಪನಿಕವಾದುದಲ್ಲ. ತಮ್ಮ ಮನೆ-ಮಠ, ಸಂಸಾರ, ಕೊನೆಗೆ ಅಸ್ತಿತ್ವವನ್ನೇ ಒತ್ತೆಯಿಟ್ಟು ಹೋರಾಡುತ್ತಾರಲ್ಲ ಕಮಾಂಡೋಗಳು, ಆ ಪಾತ್ರಗಳನ್ನು ನಮ್ಮಲ್ಲಿ ಹುಚ್ಚು ಆವೇಶ ತುಂಬಲು ಸುಮ್ಮನೆ ಸೃಷ್ಟಿಸಿಲ್ಲ. ನಿಮಗೆ ಗೊತ್ತಿರಲಿ, ಸಿಕ್ಕಿಬೀಳುವ ಪ್ರತಿಯೊಬ್ಬ ಉಗ್ರನ ಹಿಂದೆಯೂ 'ಬೇಬಿ'ಯಂಥ ತಂಡದ ಕೈವಾಡವಿದ್ದೇ ಇರುತ್ತದೆ. ಅಂಥದ್ದೇ ಒಂದು ತಂಡ 2013ರಲ್ಲಿ ರೋಚಕ ಕಾರ್ಯಾಚರಣೆಯೊಂದನ್ನು ನಡೆಸಿತ್ತು. ಪರಿಣಾಮವೇ ಯಾಸಿನ್ ಭಟ್ಕಳ್‍ನ ಬಂಧನ!


ಯಾಸಿನ್ ಭಟ್ಕಳ್‍‍ನ ಜಾತಕ ನಿಮಗೆ ಗೊತ್ತಿದೆಯಲ್ಲವೇ? ಅವನು ಇಂಡಿಯನ್ ಮುಜಾಹಿದ್ದೀನ್ ಎಂಬ ಉಗ್ರ ಸಂಘಟನೆಯ ಮೂಲ ಶಕ್ತಿಯಾಗಿದ್ದುದು ಮಾತ್ರವಲ್ಲ, ತನ್ನ ಮೇಲೆ ಸುಮಾರು ಮೂರೂವರೆ ಕೋಟಿ ರೂಪಾಯಿಗಳ ಇನಾಮು ಹೊಂದಿದ್ದ! ಹನ್ನೆರಡಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಾತಕವೆಸಗಿ, ನೂರಾರು ಜನರ ಸಾವಿಗೆ ಕಾರಣನಾಗಿ, ಇಗೋ ಸೆರೆ ಸಿಕ್ಕ ಎನ್ನುವಷ್ಟರಲ್ಲಿ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುವ ನಿಸ್ಸೀಮನೂ ಆಗಿದ್ದ. ಅಂಥವನನ್ನು ನಮ್ಮ ವಿಶೇಷ ಕಾರ್ಯಾಚರಣೆ ಪಡೆ ಬಂಧಿಸಿದ್ದು ಹೇಗೆ ಎಂಬ ಕುತೂಹಲ ಮೂಡುವುದು ಸಹಜವಲ್ಲವೇ? ಕೆದಕುತ್ತ ಹೋದಾಗ ಉತ್ತರದ ರೂಪದಲ್ಲಿ ಸಿಕ್ಕ, ಓಪನ್ ಎಂಬ ನಿಯತಕಾಲಿಕದ ಲೇಖನದ ಆಯ್ದ ಭಾಗ ನಿಮ್ಮ ಓದಿಗಾಗಿ ಇಲ್ಲಿದೆ.


ಅದು 2013ರ ಆಗಸ್ಟ್ ತಿಂಗಳ 13ನೇ ತಾರೀಖು. ಗುಪ್ತಚರ ದಳದ(IB) ಜಂಟಿ ನಿರ್ದೇಶಕರು ಬಿಹಾರದ ರಾಜಧಾನಿ ಪಾಟ್ನಾದ ತಮ್ಮ ಆಫೀಸಿನಲ್ಲಿ ಒಂದು ಸಭೆ ನಡೆಸುತ್ತಿದ್ದರು. ಏನಾಗಿತ್ತೆಂದರೆ, ಇಶ್ರತ್ ಜಹಾನ್‍ಳ ಎನ್‍ಕೌಂಟರ್ ನಕಲಿಯೆಂದು ಬೊಬ್ಬೆ ಹೊಡೆಯುತ್ತಿದ್ದ ಕೇಂದ್ರೀಯ ತನಿಖಾ ದಳ(CBI), ಆರೋಪವನ್ನೆಲ್ಲ ಗುಪ್ತಚರ ದಳದ ಮೇಲೆ ಹೊರಿಸಿ ಕೈತೊಳೆದುಕೊಂಡು ಬಿಟ್ಟಿತ್ತು. ಆ ವಿಷಯವಾಗಿಯೇ ಜಂಟಿ ನಿರ್ದೇಶಕರು ತಮ್ಮ ಕೈಕೆಳಗಿನ ಅಧಿಕಾರಿಗಳ ಜೊತೆ ಚರ್ಚಿಸುತ್ತಿದ್ದರು. ತಮ್ಮ ಸಿಬ್ಬಂದಿಯ ಕುಗ್ಗಿದ್ದ ಮನೋಬಲವನ್ನು ಹೆಚ್ಚಿಸುವುದರಲ್ಲಿ ಮಗ್ನರಾಗಿದ್ದರು. ಆಗ ಇದ್ದಕ್ಕಿದ್ದಂತೆಯೇ ಆ ಅಧಿಕಾರಿಗಳ ಪೈಕಿ ಒಬ್ಬರ ಫೋನ್ ರಿಂಗಣಿಸಿತು. ಕರೆ ಮಾಡುತ್ತಿರುವವರು ಯಾರೆಂದು ನೋಡಿದೊಡನೆಯೇ ಆತ ರೂಮಿನಿಂದ ಹೊರಗೆ ಓಡಿದರು! ಅತ್ತ ಕಡೆಯವರು ಹೇಳಿದ ವಿಷಯವನ್ನು ಕೇಳಿ ಅವಾಕ್ಕಾದರು. ಅವರಿಗೆ ಕರೆ ಮಾಡಿದ್ದು ಮತ್ತ್ಯಾರೂ ಅಲ್ಲ, ಪಕ್ಕದ ನೇಪಾಳದ ಪೋಖ್ರಾ ಎಂಬ ಊರಿನಲ್ಲಿದ್ದ ಅವರ ರಹಸ್ಯ ಮಾಹಿತಿದಾರ. ಕರೆ ಮಾಡಿದ್ದ ಕಾರಣವೇನು ಗೊತ್ತೇ? ಯಾಸಿನ್ ಭಟ್ಕಳ್‍ನನ್ನು ತಾನು ಈಗಷ್ಟೇ ನೋಡಿದೆ ಎಂದು ಹೇಳಲು! ಅವನ ಪ್ರಕಾರ ಯಾಸಿನ್ ತನ್ನನ್ನು ಡಾಕ್ಟರ್ ಯೂಸುಫ್ ಎಂದು ಪರಿಚಯಿಸಿಕೊಂಡು ತಾನೊಬ್ಬ ಯುನಾನಿ ವೈದ್ಯ ಎಂದು ಹೇಳಿಕೊಳ್ಳುತ್ತಿದ್ದನಂತೆ.ನಾನು ಕಳಿಸಿದ ಫೋಟೋದಲ್ಲಿರುವ ವ್ಯಕ್ತಿಯ ಹಾಗೇ ಕಾಣುತ್ತಾನೆ ಅಲ್ಲವೇ ನೋಡಲು?’ ಎಂದು ಆ ಅಧಿಕಾರಿ ಕೇಳಿದಾಗ ಮಾಹಿತಿದಾರ ಖಡಾಖಂಡಿತವಾಗಿ ಹೇಳಿಬಿಟ್ಟ. 'ಫೋಟೋದಲ್ಲಿರುವಂತೆ ಗಡ್ಡ ಬಿಟ್ಟಿಲ್ಲ, ನುಣ್ಣಗೆ ಬೋಳಿಸಿಕೊಂಡಿದ್ದಾನೆ. ಆದರೆ ಕಣ್ಣುಗಳು ಮಾತ್ರ ಅವೇ. ಸಂಶಯವೇ ಇಲ್ಲ. ತನ್ನ ಹೆಂಡತಿ ದೆಹಲಿಯಲ್ಲಿದ್ದಾಳೆ ಹಾಗೂ ತಂದೆ-ತಾಯಿ ದುಬೈನಲ್ಲಿದ್ದಾರೆ ಎಂದೂ ಹೇಳುತ್ತಾನೆ' ಎಂದು. ಇಷ್ಟು ಕೇಳಿದ್ದೇ, ಅವನಿಗೆ ಧನ್ಯವಾದ ಹೇಳಿ ಮತ್ತೆ ಒಳಗೆ ಓಡಿದರು ಆ ಅಧಿಕಾರಿ.

ವಿಷಯವನ್ನು ತಮ್ಮ ಮೇಲಾಧಿಕಾರಿಗೆ ಹೇಳುತ್ತಿದ್ದಂತೆಯೇ ಅವರು ತಮ್ಮ ಮೇಲಿನವರಿಗೂ ಆಗಲೇ ಸುದ್ದಿ ಮುಟ್ಟಿಸಿದರು. ಅವನೇ ಯಾಸಿನ್ ಎಂಬುದು ಎಲ್ಲರಿಗೂ ಖಾತ್ರಿಯಾಗಿತ್ತು. ಏಕೆಂದರೆ ಯುನಾನಿ ವೈದ್ಯನಾಗಿ ವೇಷ ಮರೆಸಿಕೊಳ್ಳುವುದು ಯಾಸಿನ್‍ನ ಹೆಗ್ಗುರುತಾಗಿತ್ತು. ಅವನ ಹೆಂಡತಿ ಮತ್ತು ತಂದೆ-ತಾಯಿಯರು ಇದ್ದ ಸ್ಥಳದ ಬಗ್ಗೆ ಅವನು ಕೊಟ್ಟಿದ್ದ ಮಾಹಿತಿಯೂ ಸರಿಯಾಗಿಯೇ ಇತ್ತು. ಆದರೂ ದೆಹಲಿಯ ಉನ್ನತಾಧಿಕಾರಿಗಳಿಗೆ ನಂಬಿಕೆ ಬರಲಿಲ್ಲ. ಇಶ್ರತ್‍ಳ ಪ್ರಕರಣದಲ್ಲಿ ಛಡಿಯೇಟು ತಿಂದಿದ್ದವರು ಇದಕ್ಕೆ ಹೇಗೆ ಕೈ ಹಾಕಿಯಾರು? ಆ ಅಧಿಕಾರಿಯೂ ಬಿಡಲಿಲ್ಲ. 'ಸರ್, ಈ ಅವಕಾಶವನ್ನು ಕೈಚೆಲ್ಲುವುದು ಮೂರ್ಖತನವಾದೀತು. ನನ್ನ ಮಾಹಿತಿದಾರ ಹೇಳಿದ್ದನ್ನು ಅಲ್ಲಗಳೆಯುವಂತಿಲ್ಲ, ಹೇಗಾದರೂ ಮಾಡಿ ದೆಹಲಿಯವರನ್ನು ಒಪಿಸಿ' ಎಂದು ದುಂಬಾಲು ಬಿದ್ದರು. ಮತ್ತೊಮ್ಮೆ ದೆಹಲಿಯ ಬಾಗಿಲು ಬಡಿದ ಜಂಟಿ ನಿರ್ದೇಶಕರಿಗೆ ಕೊನೆಗೂ ಹಲವು ಶರತ್ತುಗಳೊಂದಿಗೆ ಒಪ್ಪಿಗೆ ದೊರೆಯಿತು.

ಈ ಕಾರ್ಯಾಚರಣೆ ಎಲ್ಲೂ ಔಪಚಾರಿಕವಾಗಿ ದಾಖಲಾಗುವಂತಿರಲಿಲ್ಲ. ಕಾರ್ಯಾಚರಣೆಗೆ ಹೋಗುವವರು ತಮ್ಮ ಗುರುತಿನ ಚೀಟಿಗಳನ್ನೂ ಕೊಂಡೊಯ್ಯುವಂತಿರಲಿಲ್ಲ. ಜೀವ ಹೋಗಿಬಿಟ್ಟರಂತೂ ಸರಿಯೇ ಸರಿ, ಒಂದೊಮ್ಮೆ ಬದುಕಿ ಯಾರ ಕೈಗಾದರೂ ಸಿಕ್ಕಿ ಜೈಲು ಪಾಲಾದರೆ ತಮ್ಮ ನಿಜ ನಾಮಧೇಯ, ಕೆಲಸ ಇತ್ಯಾದಿಗಳ ಬಗ್ಗೆ ಬಾಯಿ ಬಿಡುವಂತಿರಲಿಲ್ಲ. ಇವರು ಸೋತರೆ, ಜಂಟಿ ನಿರ್ದೇಶಕರ ಕೆಲಸಕ್ಕೂ ಕುತ್ತು ಕಾದಿತ್ತು. ವಿಶೇಷ ಕಾರ್ಯಾಚರಣೆ ಪಡೆಯ ಮುಖ್ಯಸ್ಥರಾಗಿದ್ದ ಆ ಅಧಿಕಾರಿ ಎಲ್ಲದಕ್ಕೂ ಕಣ್ಮುಚ್ಚಿ ಹೂಂ ಎಂದರು. ತಮ್ಮೊಡನೆ ಇನ್ನೂ ನಾಲ್ಕು ಜನರನ್ನು ಸೇರಿಸಿಕೊಂಡು ಐವರ ತಂಡವನ್ನು ಕಟ್ಟಿಕೊಂಡರು. ಜೊತೆಗೆ ಬಿಹಾರ ಹಾಗೂ ನೇಪಾಳದ ಗಡಿಗಳ ಪರಿಚಯವಿದ್ದ ಪೋಲೀಸ್ ಅಧಿಕಾರಿಯೊಬ್ಬರನ್ನು ಜೊತೆಗೆ ಹೊರಡಿಸಿಕೊಂಡರು.

ವಿಶೇಷ ಕಾರ್ಯಾಚರಣೆ ಪಡೆಯೇನೋ ಸಿದ್ಧವಾಯಿತು, ಆದರೆ ಹೋಗಿ ಬರುವ ಖರ್ಚು-ವೆಚ್ಚ? ಒಪ್ಪಿಗೆ ದೊರೆತದ್ದೇ ದೊಡ್ಡ ವಿಷಯ, ಇನ್ನು ಖರ್ಚಿಗೆ ದುಡ್ಡು ಕೇಳಿದರೆ ಕೊಡುತ್ತಾರೆಯೇ ಎಂದು ಅನುಮಾನಿಸಿದ ಅಧಿಕಾರಿ ತಾವೇ ಗೆಳೆಯರ ಬಳಿ 40 ಸಾವಿರ ರೂಪಾಯಿಗಳನ್ನು ಎರವಲು ಪಡೆದರು! ಜೊತೆಗಿದ್ದ ಪೋಲೀಸ್ ಅಧಿಕಾರಿಯೂ 80 ಸಾವಿರ ರೂಪಾಯಿಗಳ ವ್ಯವಸ್ಥೆ ಮಾಡಿದರು. ಅಂದ ಹಾಗೆ, ಕಾರ್ಯಾಚರಣೆಗಿಳಿದಾಗ ತಮ್ಮ ಸಂಬಳದ ಹಣವನ್ನು ಹೀಗೆ ಖರ್ಚು ಮಾಡುವುದು ವಿಶೇಷ ಪಡೆಯ ಅಧಿಕಾರಿಗಳ ಮಾಮೂಲು ಅಭ್ಯಾಸವಂತೆ. ಹಾಗಂತ ಅವರೇನು ಪ್ರತಿ ತಿಂಗಳೂ ಲಕ್ಷಗಟ್ಟಳೆ ಎಣಿಸುವವರಲ್ಲ. ಆದರೆ ಅವರ ಧಮನಿಗಳಲ್ಲಿ ರಕ್ತಕ್ಕಿಂತ ಹೆಚ್ಚಾಗಿ ಹರಿಯುವ ದೇಶಪ್ರೇಮ ಅವರನ್ನು ಬಿಡಬೇಕಲ್ಲ?

ಅಂದು ಆಗಸ್ಟ್ 20ನೇ ತಾರೀಖು. ಆ ತಂಡ ಎರಡು ಜೀಪುಗಳಲ್ಲಿ ನೇಪಾಳದ ಪೋಖ್ರಾಗೆ ಹೊರಟಿತು. ಪೋಲೀಸ್ ಅಧಿಕಾರಿಯನ್ನು ತಮ್ಮ ಜೊತೆ ಸೇರಿಸಿಕೊಂಡಿದ್ದ ವಿಷಯ ಆ ಐವರನ್ನು ಬಿಟ್ಟರೆ ಮತ್ತ್ಯಾರಿಗೂ ಗೊತ್ತಿರಲಿಲ್ಲ. ಪೋಖ್ರಾ ತಲುಪಿದೊಡನೆ ಗುಂಪಿನ ನೇತೃತ್ವ ವಹಿಸಿದ್ದ ಅಧಿಕಾರಿ ಮಾಡಿದ ಮೊತ್ತ ಮೊದಲ ಕೆಲಸ, ಆ ಮಾಹಿತಿದಾರನನ್ನು ಖುದ್ದು ಭೇಟಿಯಾಗಿದ್ದು. ಎಕೆಂದರೆ ಇಲ್ಲಿಯತನಕ ಅವನೊಡನೆ ಮಾತನಾಡಿದ್ದರೇ ವಿನಾ ಅವನನ್ನು ನೋಡಿರಲಿಲ್ಲ. ಅವನು ಸುಳ್ಳು ಮಾಹಿತಿ ನೀಡಿ ಇವರನ್ನು ಸಿಕ್ಕಿಸುವ ಸಾಧ್ಯತೆಯೂ ಬಹಳಷ್ಟಿತ್ತು. ಅವನೊಡನೆ ಮಾತನಾಡಿದ ಮೇಲೇ ಅವರಿಗೆ ನಿರಾಳವಾಗಿದ್ದು. ಇನ್ನು ಮುಂದಿನ ಕೆಲಸ ಯಾಸಿನ್‍ನ ಅಡಗುತಾಣವನ್ನು ಪತ್ತೆ ಮಾಡುವುದು.

ಯಾಸಿನ್‍‍ನನ್ನು ತಲುಪಲು ಅವನಿಗೆ ಆಪ್ತನಾಗಿದ್ದ ಅಬ್ದುಲ್ಲಾ ಎಂಬಾತನ ನೆರವಿನ ಅಗತ್ಯವಿತ್ತು. ಅಬ್ದುಲ್ಲಾನಿಗೆ ಗಾಳ ಹಾಕಲು ಆ ಅಧಿಕಾರಿ ಮತ್ತೆ ಮಾಹಿತಿದಾರನನ್ನೇ ಉಪಯೋಗಿಸಿಕೊಂಡರು. ವೈದ್ಯನ ಬಳಿ ಹೋಗುವವನು ರೋಗಿಯೇ ತಾನೆ? ತನಗೆ ಹುಷಾರಿಲ್ಲವೆಂದೂ, ತಾನು ಯುನಾನಿ ಔಷಧಿಯನ್ನು ಮಾತ್ರ ತೆಗೆದುಕೊಳ್ಳುತ್ತೇನೆಂದೂ ಅವನು ಹೇಳಿದಾಗ ಅಬ್ದುಲ್ಲಾ ಅವನನ್ನು ವೈದ್ಯರ ಬಳಿ ಕರೆದೊಯ್ಯಲು ಒಪ್ಪಿದ. ಇದಕ್ಕಾಗಿಯೇ ಹೊಂಚು ಹಾಕಿ ಕಾದಿದ್ದ ತಂಡ ಅವರಿಬ್ಬರನ್ನು ಹಿಂಬಾಲಿಸಿತು. ಬಾಡಿಗೆ ಮೋಟಾರ್‍ಬೈಕುಗಳ ಮೇಲೆ, ಟೀ ಶರ್ಟ್ ಹಾಗೂ ಬರ್ಮುಡಾಗಳನ್ನು ತೊಟ್ಟು ಹೊರಟ ಇವರನ್ನು ಪೋಲೀಸರು ಎಂದು ದೇವರಾಣೆಗೂ ಹೇಳಲು ಸಾಧ್ಯವಿರಲಿಲ್ಲ. ಕಾರಿನಲ್ಲಿ ಮುಂದೆ ಹೊರಟ ಅಬ್ದುಲ್ಲಾ ಮತ್ತು ಆ ಮಾಹಿತಿದಾರ ಹೋಗಿ ತಲುಪಿದ್ದು ಹೆದ್ದಾರಿಯ ಅಂಚಿನಲ್ಲಿದ್ದ ಮನೆಯೊಂದನ್ನು.

ಆ ಮಾಹಿತಿದಾರನೇನೂ ಸುಮ್ಮನೆ ಹೋಗಿರಲಿಲ್ಲ. ಅವನಿಗೂ ಕೆಲವು ಹೋಂವರ್ಕ್ ಗಳನ್ನು ನೀಡಿ ಕಳಿಸಲಾಗಿತ್ತು. ವೈದ್ಯರ ಧ್ವನಿಯನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ತರುವುದು ಒಂದಾದರೆ, ಅವರ ಹಣೆಯ ಮೇಲೆ ಗಾಯದ ಗುರುತಿದೆಯಾ ಎಂಬುದನ್ನು ಗಮನಿಸುವುದು ಇನ್ನೊಂದು. ಇಷ್ಟೆಲ್ಲ ಮೊದಲ ಭೇಟಿಯಲ್ಲೇ ಸಾಧ್ಯವಾಗುತ್ತದೆಂಬ ಭರವಸೆಯಂತೂ ಇರಲಿಲ್ಲ. ಅಂತೂ ಆಗಸ್ಟ್ 24ರಂದು ವೈದ್ಯರ ಧ್ವನಿಮುದ್ರಣ ಸಿಕ್ಕಿತು. ಅದನ್ನು ಕೇಳಿದೊಡನೆ ಆ ವೈದ್ಯರೇ ಯಾಸಿನ್ ಸಾಹೇಬರು ಎಂಬುದು ಖಾತ್ರಿಯಾಯಿತು. ತಕ್ಷಣವೇ ಜಂಟಿ ನಿರ್ದೇಶಕರಿಗೆ ಫೋನಾಯಿಸಿದರು ಅಧಿಕಾರಿ. 'ನಿಜ ತಾನೆ?' ಎಂಬ ಅವರ ಪ್ರಶ್ನೆಗೆ '200 ಪ್ರತಿಶತ ನಿಜ ಸರ್' ಎಂಬ ಉತ್ತರವನ್ನಿತ್ತರು. ನಿಖರತೆಯ ಪ್ರಾಮುಖ್ಯದ ಅರಿವು ಇಬ್ಬರಿಗೂ ಇತ್ತು. ಬೇರೊಂದು ದೇಶಕ್ಕೆ ಹೋಗಿ, ಬರೀ ಅನುಮಾನದ ಆಧಾರದ ಮೇಲೆ ಯಾರನ್ನೂ ಬಂಧಿಸುವುದು ಸಾಧ್ಯವಿರಲಿಲ್ಲ. ಒಂದು ಪಕ್ಷ ಅವರು ನಿರಪರಾಧಿಯೆಂಬುದು ಸಾಬೀತಾದರೆ ಇವರಿಗೆ ಉಳಿಗಾಲವಿರಲಿಲ್ಲ.

ಯಾಸಿನ್‍ನನ್ನು 'ಎತ್ತಿಹಾಕಿಕೊಂಡು' ಬರಲು ಇವರೇನೋ ತಯಾರಿದ್ದರು, ಅದರೆ ದೆಹಲಿಯವರು ಹೂಂ ಅನ್ನಬೇಕಲ್ಲ? ಬದಲಿಗೆ ನೇಪಾಳ ಸರ್ಕಾರದೊಂದಿಗೆ ತಕ್ಷಣವೇ ಮಾತುಕತೆ ನಡೆಸಿ ಅಲ್ಲಿಯ ಪೋಲೀಸರಿಗೆ ಮಾಹಿತಿ ರವಾನಿಸಿದರು. ಆಗಲೂ ನಮ್ಮ ತಂಡಕ್ಕೆ ಸಿಕ್ಕಿದ್ದು ಬರೀ ಶರತ್ತುಗಳೇ. ನೇಪಾಳದ ಪೋಲೀಸರು ಅವನನ್ನು ಹಿಡಿಯುವ ತನಕ ನಮ್ಮವರು ಮಧ್ಯ ಪ್ರವೇಶಿಸಬಾರದು. ಅವನು ನಿರಪರಾಧಿಯೆಂದು ಸಾಬೀತಾದರೆ ಅವನನ್ನು ಬಿಟ್ಟುಬಿಡಬೇಕು ಇತ್ಯಾದಿ. ಕಾರ್ಯಾಚರಣೆಯನ್ನು ರಾತ್ರಿಯೇ ನಡೆಸಬೇಕು ಎಂಬ ಕಟ್ಟಪ್ಪಣೆ ಬೇರೆ. ಅಂತೂ 28ರ ದಿನಾಂಕ ನಿಗದಿಯಾಯಿತು. ದುರದೃಷ್ಟವೆಂಬಂತೆ ಅಂದು ಸಂಜೆಯಿಂದಲೇ ಧಾರಾಕಾರ ಮಳೆ ಶುರುವಾಯಿತು. ನೇಪಾಳದ ಪೋಲೀಸರು ‘ಇವತ್ತು ಬೇಡ, ಮಳೆಯಿದೆ’ ಎಂದುಬಿಟ್ಟರು. ನಮ್ಮವರ ಹಟದಿಂದ ಅಂತೂ ರಾತ್ರಿ ಎಂಟು ಘಂಟೆಗೆ ಮನೆಯೊಳಗೆ ಹೋದರು. ಅತ್ತ ಅವರು ಹೋದರೆ ಇತ್ತ ಇವರು ಹೊರಗೆ ಚಾತಕ ಪಕ್ಷಿಗಳಂತೆ ಕಾಯುತ್ತ ನಿಂತರು. ಸುಮಾರು ಹತ್ತು ಘಂಟೆಗೆ ನೇಪಾಳದ ಭಾರತೀಯ ದೂತಾವಾಸ ಕಚೇರಿಯಿಂದ ನಮ್ಮ ಪೋಲೀಸರಿಗೆ ಫೋನ್ ಬಂತು. ಮಾತನಾಡಿದ್ದು ಭಾರತೀಯ ಪೋಲೀಸ್ ಅಧಿಕಾರಿಯೇ. 'ಸುಮ್ಮನೆ ನಿರಪರಾಧಿಯನ್ನು ಹಿಡಿದಿದ್ದೀರ. ಅವನೊಬ್ಬ ಸಾಮಾನ್ಯ ಟರ್ಬೈನ್ ಎಂಜಿನಿಯರ್' ಎಂದು ರೇಗಿದರು ಆತ. ಇವರಿಗೂ ರೇಗಿ ಹೋಯಿತು. 'ನೀವು ಐಪಿಎಸ್ ಮಾಡಿರುವುದೇ ನಿಜವಾದರೆ, ಒಬ್ಬ ಯುನಾನಿ ವೈದ್ಯ ತನ್ನನ್ನು ಟರ್ಬೈನ್ ಇಂಜಿನಿಯರ್ ಎಂದು ಹೇಳಿದಾಗಲೇ ನಿಮಗೆ ಅರ್ಥವಾಗಬೇಕು' ಎಂದು ಮಾರುತ್ತರ ನೀಡಿದರು. ಹತ್ತು ನಿಮಿಷಗಳ ನಂತರ ಯಾಸಿನ್‍ನೊಂದಿಗೆ ಹೊರಬಂದರು ಪೋಲೀಸರು. ಕಾದಿದ್ದ ನಮ್ಮವರು ಅವನ ಮೇಲೆರಗುತ್ತಿದ್ದಂತೆಯೇ ಅವನು ತನ್ನ ನಿಜ ಪರಿಚಯವನ್ನು ಹೇಳಿಕೊಂಡ. ಅವನ ಜೊತೆ ಸಿಮಿ ಸಂಘಟನೆಯ ಅಸಾದುಲ್ಲ ಅಖ್ತರ್‍ನೂ ಸೆರೆ ಸಿಕ್ಕ. ಇಬ್ಬರನ್ನೂ ಹಿಡಿದು ಇನ್ನೂ ಸರಿಯಾಗಿ ಗಡಿಯವರೆಗೂ ತಂದಿರಲಿಲ್ಲ, ಅಷ್ಟರಲ್ಲೇ ನಮ್ಮ ಗೃಹ ಸಚಿವಾಲಯ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗಳು ತಾವೇ ಅವನನ್ನು ಹಿಡಿದದ್ದು ಎಂದು ಬೆನ್ನುತಟ್ಟಿಕೊಳ್ಳುವ ಪೈಪೋಟಿಗೆ ಬಿದ್ದಿದ್ದವು!


 ಹೀಗೆ ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಂಡು ಯಾಸಿನ್‍ನನ್ನು ಸೆರೆ ಹಿಡಿದವರಿಗೆ ಸಿಕ್ಕಿದ್ದೇನು ಗೊತ್ತೇ? ಗುಪ್ತಚರ ದಳದ ಜಂಟಿ ನಿರ್ದೇಶಕರಿಗೆ ಒಂದು ಪ್ರಶಸ್ತಿ ಪತ್ರ ಹಾಗೂ ವಿಶೇಷ ಪಡೆಯ ಅಧಿಕಾರಿಗೆ ಒಂದು ಲಕ್ಷ ರೂಪಾಯಿಗಳ ನಗದು! ಮೊದಲು ಆತನಿಗೆ ಮೂರುವರೆ ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದ್ದ ಸುಶೀಲ್ ಶಿಂಧೆಯವರ ಗೃಹ ಸಚಿವಾಲಯ ನಂತರ ಅದನ್ನು ನಾಚಿಕೆಯಿಲ್ಲದೆ ಹಿಂಪಡೆಯಿತು. ಅದು ನೀಡಿದ ಕಾರಣ, ಆತ ಮಾಡಿದ್ದು ತಮ್ಮ ಕರ್ತವ್ಯವನ್ನೇ, ಅದರಲ್ಲೇನೂ ಹೆಚ್ಚುಗಾರಿಕೆಯಿಲ್ಲ ಎಂಬುದು!

ಈಗ ಹೇಳಿ, ಬೆಳಗಿನ ಬಿಸಿಬಿಸಿ ಕಾಫಿ ಹೀರುತ್ತಾ, 'ಆ ಉಗ್ರ ಸೆರೆಸಿಕ್ಕನಂತೆ' ಎಂದು ಪೇಪರಿನಲ್ಲಿ ಓದುವ ನಮಗೆ ಅದೂ ಉಳಿದವುಗಳಂತೆ ಒಂದು ಸುದ್ದಿ ಎನಿಸಿಬಿಡುತ್ತದೆ ಅಲ್ಲವೇ? ಇಂಥ ಸುದ್ದಿಗಳ ರೂವಾರಿಗಳಾಗುವವರ ಗಂಡೆದೆ, ಧೈರ್ಯ, ಸಾಹಸ, ತ್ಯಾಗಗಳು, ನಮ್ಮನ್ನು ಬಹುತೇಕ ತಟ್ಟುವುದೇ ಇಲ್ಲ. ನೀರಜ್ ಪಾಂಡೆಯಂಥ ನಿರ್ದೇಶಕರು ಧೈರ್ಯವಾಗಿ 'ಬೇಬಿ'ಯ ರೂಪದಲ್ಲಿ ಬಿಡಿಸಿ ಹೇಳಿದರೂ ಅದು ನಮ್ಮ ದಪ್ಪ ಚರ್ಮದೊಳಗೆ ಇಳಿಯುವುದಿಲ್ಲ. ಅಲ್ಕಾಳಂಥ ಹೆಣ್ಣುಮಗಳು ಅಪ್ಪನ ಕಳೇಬರದ ಮುಂದೆ ನಿಂತು, 'ನನ್ನನ್ನು ಬಿಟ್ಟು ಹೋದೆಯಲ್ಲ, ಇನ್ಯಾರನ್ನು ಅಪ್ಪಾ ಎನ್ನಲಿ?' ಎಂದು ಅಳುವುದನ್ನು ಬಿಟ್ಟು ಗೂರ್ಖಾ ರೆಜಿಮೆಂಟಿನ ಯುದ್ಧಘೋಷವನ್ನು ಕೂಗುತ್ತಾಳಲ್ಲ ಆಗ ಎಲ್ಲೋ ಕೆಲವೊಮ್ಮೆ ತಟ್ಟುತ್ತದೆ.

ಆದರೆ ನಮ್ಮ ಕಡೆಯಿಂದ ಇಷ್ಟು ಸಂವೇದನೆ ಸಾಕೇ?