Wednesday 27 January 2016

ಮನಸ್ಸು ಹೊರಳಿದರೆ ನಾಲಗೆ ಹೊರಳಲೆಷ್ಟು ಹೊತ್ತು?

ಬಹುಶ ನೀವೆಲ್ಲ ಅಮೆರಿಕದಲ್ಲಿ ನಡೆಯುವ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ ಬಗ್ಗೆ ಕೇಳಿರುತ್ತೀರ. ಕ್ಲಿಷ್ಟವಾದ ಆಂಗ್ಲ ಪದಗಳ ಸ್ಪೆಲ್ಲಿಂಗನ್ನು ಮಕ್ಕಳು ನಾಲಗೆ ಹೊರಳಿಸಿಕೊಂಡು ನಿರರ್ಗಳವಾಗಿ ಹೇಳುವಾಗ ಕೇಳುಗರೆಲ್ಲರಿಗೂ ಮೂಗಿನ ಮೇಲೆ ಬೆರಳಿಡುವಷ್ಟು ಅಚ್ಚರಿ! ಇತ್ತೀಚೆಗಂತೂ ಆ ಸ್ಪರ್ಧೆಯಲ್ಲಿ ಗೆಲ್ಲುವವರು ಹೆಚ್ಚಾಗಿ ಭಾರತೀಯ ಸಂಜಾತರ ಮಕ್ಕಳೇ. ಅವರು ಪ್ರತಿ ಬಾರಿ ಗೆದ್ದಾಗಲೂ ನಮಗೆಲ್ಲ ಹೆಮ್ಮೆ! ಆಗಬೇಕಾದ್ದೇ. ಆದರೆ ಅವರಿಗಿಂತ ಲೀಲಾಜಾಲವಾಗಿ ನಮ್ಮ ಮಕ್ಕಳು ಸಂಸ್ಕೃತವನ್ನಾಡುವಾಗಲೂ ನಮಗೆ ಅಷ್ಟೇ ಹೆಮ್ಮೆಯಾಗುತ್ತದಾ? ಉತ್ತರಿಸಲು ಕಷ್ಟವಾಗುತ್ತದೆ ತಾನೆ? ಅಲ್ಲೇ ಇರುವುದು ಸಮಸ್ಯೆ. ಸಂಸ್ಕೃತವೆಂದರೆ ಅರ್ಥಮಾಡಿಕೊಳ್ಳಲು, ಆಡಲು ಬಹಳ ಕಷ್ಟವಾದ ಭಾಷೆಯೆಂಬ ಭಾವನೆ ನಮ್ಮದು! ಅದು ಬರೀ ಸಂಸ್ಕೃತ ಪಾಠಶಾಲೆಗೆ ಸೀಮಿತವಾಗಿರುವ, ಶಿಖೆ ಬಿಟ್ಟುಕೊಂಡ, ವೈದಿಕ ಧರ್ಮಕ್ಕೆ ಸೇರಿದ ಮಕ್ಕಳು ಮಾತ್ರ ಕಲಿಯಬಹುದಾದ, ಕಲಿಯಬೇಕಾದ ವಿದ್ಯೆಯೆಂಬ ತಪ್ಪು ಕಲ್ಪನೆ! ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಸ್ಕೃತ ಕಲಿತು ಆಗಬೇಕಿರುವುದಾದರೂ ಏನು ಎಂಬ ಅಸಡ್ಡೆಯ ಧೋರಣೆ! ನೂರಕ್ಕೆ ನೂರು ಅಂಕಗಳಿಸುವುದು ಸುಲಭ ಎಂಬ ಕಾರಣಕ್ಕೆ ಹತ್ತನೇ ತರಗತಿಯವರೆಗೂ ಜೊತೆಯಾಗುವ ಸಂಸ್ಕೃತವನ್ನು ಆಮೇಲೆ ನಾವು ನಿರ್ದಾಕ್ಷಿಣ್ಯವಾಗಿ ದೂರ ಮಾಡಿಕೊಳ್ಳುವುದೂ ಇದೇ ಕಾರಣಕ್ಕೆ! ನಾವು ಎಡವುತ್ತಿರುವುದೇ ಇಲ್ಲಿ. ಸಂಸ್ಕೃತದ ಕಲಿಕೆ ಹಿಂದೆಂದಿಗಿಂತಲೂ ಈಗ ಅತ್ಯವಶ್ಯವಾಗಿದೆ. ಯಾಕೆ ಎನ್ನುವುದನ್ನು ಅರ್ಥಮಾಡಿಕೊಳ್ಳೋಣ ಬನ್ನಿ.

ಸಾವಿರಾರು ವರ್ಷಗಳಿಂದ ತಾಳೆಗರಿಯ ಹಸ್ತಪ್ರತಿಗಳ ರೂಪದಲ್ಲಿ ಹುದುಗಿರುವ ಸಂಸ್ಕೃತದ ಜ್ಞಾನಭಂಡಾರ ನಮ್ಮ ಊಹೆಗೂ ಮೀರಿದ್ದು. ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ ಸುಮಾರು 45 ಲಕ್ಷ ತಾಳೆಗರಿಯ ಹಸ್ತಪ್ರತಿಗಳು ಲಭ್ಯವಿದೆ. ಇವುಗಳು ಭಾರತದ ಪಾಂಡಿಚೇರಿ, ತಂಜಾವೂರು, ಮೈಸೂರು, ಕಾಶಿ, ತಿರುಪತಿ ಹಾಗೂ ಜಮ್ಮುವಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿವೆ. ಅದರಲ್ಲಿ ಪುಸ್ತಕರೂಪದಲ್ಲಿ ಹೊರಬಂದಿರುವುದು ಎಷ್ಟಿರಬಹುದು ಹೇಳಿ? ಕೇವಲ 22 ಸಾವಿರ ಮಾತ್ರ! ಅಂದರೆ ಇನ್ನೂ ಲಕ್ಷೋಪಲಕ್ಷ ಪ್ರತಿಗಳಲ್ಲಡಗಿರುವ ರಹಸ್ಯವನ್ನು ಭೇದಿಸುವುದು ಬಾಕಿಯಿದೆ. ಸಾಧಾರಣವಾಗಿ ನಾವುಗಳು ಅಂದುಕೊಂಡಿರುವ ಹಾಗೆ ಸಂಸ್ಕೃತವೆಂದರೆ ಬರೀ ವೇದ, ಉಪನಿಷತ್ತು, ಕಾವ್ಯ, ಸಾಹಿತ್ಯಗಳಲ್ಲ. ಅವುಗಳ ಪಾಲು ಅಬ್ಬಬ್ಬಾ ಎಂದರೆ ಶೇಕಡ 20 ರಷ್ಟಿರಬೇಕು ಅಷ್ಟೇ! ಉಳಿದದ್ದರಲ್ಲಿ ಹೆಚ್ಚಾಗಿರುವುದು ವಿಜ್ಞಾನ ಹಾಗೂ ಗಣಿತಕ್ಕೆ ಸಂಬಂಧಿಸಿದ ಜ್ಞಾನ ಸಂಪತ್ತೇ! ಶಿಲ್ಪಶಾಸ್ತ್ರ, ಸೂರ್ಯಸಿದ್ಧಾಂತ, ಜೀವಶಾಸ್ತ್ರ, ಲೋಹವಿಜ್ಞಾನ, ರತ್ನಶಾಸ್ತ್ರಗಳಿಗೆ ಸಂಬಂಧಿಸಿದ ಯಕ್ಷ ಪ್ರಶ್ನೆಗಳಿಗೆಲ್ಲ ಸಂಸ್ಕೃತದಲ್ಲಿ ಸಿದ್ಧ ಸೂತ್ರವಿದೆ.
ಹಾಗಾದರೆ ಈ ಭಾಷಾ ಸಂಪತ್ತನ್ನು ನಾವೆಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದೇವೆ? ಕೆಳಗಿನ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಭಾರತದಲ್ಲಿ 17 ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. 120 ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ವಿಭಾಗಗಳಿವೆ. ಈಗಾಗಲೇ 70 ಸಾವಿರಕ್ಕೂ ಅಧಿಕ ಸಂಸ್ಕೃತ ಶಿಕ್ಷಕರಿದ್ದಾರೆ. ಇಷ್ಟಿದ್ದರೆ ಸಾಕಲ್ಲ, ಇನ್ನೇನು ಬೇಕು ಅನಿಸುತ್ತದೆ ಅಲ್ಲವೇ? ಇದು ಏನೇನೂ ಸಾಲದು. ನಿಮಗೆ ಗೊತ್ತಿರಲಿ, ಭಾರತವನ್ನು ಹೊರತುಪಡಿಸಿ 40 ದೇಶಗಳು ನಾಮುಂದು ತಾಮುಂದು ಎಂದು ಮುಗಿಬಿದ್ದು ಸಂಸ್ಕೃತವನ್ನು ಕಲಿಯುತ್ತಿವೆ! ವಿದೇಶಗಳ 254 ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತದ ಕಲಿಕೆ ಸಾಂಗವಾಗಿ ಸಾಗಿದೆ! ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈಗಾಗಲೇ 60 ಸಾವಿರ ತಾಳೆಗರಿಗಳ ಪ್ರತಿಗಳನ್ನು ತನ್ನೆದುರು ಹರವಿಕೊಂಡು ಕೂತಿದೆ. ನಮ್ಮ ಛಂದಸ್ಸಿನ ಲಘು ಗುರು (0,1) ಗಳನ್ನು ಕರಾರುವಾಕ್ಕಾಗಿ ಅಳವಡಿಸಿಕೊಂಡು ಸೂಪರ್ ಕಂಪ್ಯೂಟರ್ ತಯಾರಿಸುವುದು ಹೇಗೆ ಎಂದು ಅದು ಒಂದೊಂದೇ ತಾಳೆಗರಿಯನ್ನು ಕೆದಕಿ ನೋಡುತ್ತಿದೆ! ಲಂಡನ್ ಹಾಗೂ ಐರ್ಲ್ಯಾಂಡ್ ದೇಶಗಳ ಬಹಳಷ್ಟು ಶಾಲೆಗಳು ಸಂಸ್ಕೃತ ಕಲಿಕೆಯನ್ನು ಕಡ್ಡಾಯ ಮಾಡಿವೆ. ಹಾಗೆ ಮಾಡುವುದರಿಂದ ಮಿದುಳಿನ ಕಾರ್ಯನಿರ್ವಹಣಾ ಶಕ್ತಿ ಹಾಗೂ ನೆನಪಿನ ಶಕ್ತಿ ಹೆಚ್ಚುತ್ತದೆ ಎಂಬುದು ಅವಕ್ಕೆ ಅರ್ಥವಾಗಿರುವ ಸತ್ಯ. ಇತ್ತೀಚೆಗೆ ನಮ್ಮ ಪ್ರಧಾನಿ ಐರ್ಲ್ಯಾಂಡ್‍ಗೆ ಭೇಟಿ ಕೊಟ್ಟಾಗ ಶಾಲಾ ಮಕ್ಕಳು ಸಂಸ್ಕೃತ ಶ್ಲೋಕ ಪಠಣ ಮಾಡಿ ಅವರನ್ನು ಸ್ವಾಗತಿಸಿದ್ದು ನಿಮಗೆ ನೆನಪಿರಬಹುದು. ಅದೂ ಇರಲಿ, ಜನ್ಮತಃ ಮುಸ್ಲಿಮಳಾದ, ರಷ್ಯಾದ ಖ್ಯಾತ ಪಾಪ್ ಗಾಯಕಿ ಸಾತಿ ಕಜನೋವಾ ಸಲೀಸಾಗಿ ಸಂಸ್ಕೃತದ ಶ್ಲೋಕಗಳನ್ನು ಹಾಡಿದ್ದನ್ನು ನೋಡಿ ಮೋದಿಯವರೇ ಬೆರಗಾದರು! ಮೊದಲೆಲ್ಲ, ತತ್ವಶಾಸ್ತ್ರ, ಭಾಷಾಶಾಸ್ತ್ರ, ಬೌದ್ಧಧರ್ಮ ಅಥವಾ ಏಷ್ಯಾ ಖಂಡದ ಕುರಿತು ಅಧ್ಯಯನ ನಡೆಸುವವರಿಗೆ ಮಾತ್ರ ಸಂಸ್ಕೃತವನ್ನು ಆಳವಾಗಿ ಅಭ್ಯಸಿಸುವ ತುಡಿತವಿತ್ತು. ಈಗಂತೂ ಜನಸಾಮಾನ್ಯರಿಗೂ ಅದನ್ನು ಶತಾಯ ಗತಾಯ ಕಲಿಯಲೇಬೇಕೆಂಬ ಹಟ! ಅವರೆಲ್ಲ ಪೈಪೋಟಿಯ ಮೇಲೆ ಸಂಸ್ಕೃತದ ಮೇಲೆ ಪ್ರಭುತ್ವ ಸಾಧಿಸುತ್ತಿದ್ದಾರೆ. ಜರ್ಮನಿಯಲ್ಲಂತೂ ಆಸಕ್ತ ವಿದ್ಯಾರ್ಥಿಗಳ ಸಂಖ್ಯೆ ವಿಪರೀತ ಹೆಚ್ಚುತ್ತಿರುವುದರಿಂದ ಎಷ್ಟು ತರಗತಿಗಳನ್ನು ನಡೆಸಿದರೂ ಸಾಲದಾಗುತ್ತಿದೆ! ಇವೆಲ್ಲ ವಿದೇಶಗಳ ಕಥೆ. ಆದರೆ ನಾವೇನು ಮಾಡುತ್ತಿದ್ದೇವೆ ಹೇಳಿ? ನಮ್ಮ ಮಕ್ಕಳಿಗೆ ಇಂಟರ್‍ನ್ಯಾಷನಲ್ ಶಾಲೆಗಳಲ್ಲಿ ಅಮೆರಿಕನ್ ಇಂಗ್ಲೀಷ್ ಕಲಿಸುತ್ತಿದ್ದೇವೆ! ಖೇದವಾಗುವುದೇ ಅದಕ್ಕೆ. ಒಂದು ಉದಾಹರಣೆ ನೋಡಿ. ಚೀನಾ ಯೋಗ ಕಲಿಕೆಯನ್ನು ಶುರುಮಾಡಿದ್ದು ಬರೀ ಹನ್ನೊಂದು ವರ್ಷಗಳ ಹಿಂದೆ. ಇವತ್ತು ಅದನ್ನು ಯಾವ ಮಟ್ಟದಲ್ಲಿ ಅಳವಡಿಸಿಕೊಂಡಿದೆಯೆಂದರೆ, ನಮ್ಮ ದೇಶ ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಣೆ ಮಾಡದೆ ಹೋಗಿದ್ದ ಪಕ್ಷದಲ್ಲಿ ಚೀನಾ ಅದನ್ನೂ ತನ್ನ ದೇಶಕ್ಕೇ ಸೇರಿದ್ದು ಎಂದುಬಿಡುತ್ತಿತ್ತೋ ಏನೋ! ಮೊದಲೇ ಐರೋಪ್ಯ ದೇಶಗಳಿಗೆ ಸಂಸ್ಕೃತವೆಂದರೆ ಪ್ರೀತಿ. ತಮ್ಮ ಭಾಷೆಗಳು ಹುಟ್ಟಿಕೊಂಡಿದ್ದೇ ಅದರಿಂದ ಎಂಬ ಕಾರಣಕ್ಕೆ ಅದರ ಬಗ್ಗೆ ಅಪಾರ ಹೆಮ್ಮೆ, ಗೌರವ! ನಾಳೆ ಸಂಸ್ಕೃತದ ವಿಷಯದಲ್ಲಿ ಆ ದೇಶಗಳು ಸ್ವಾಮ್ಯ ಸ್ಥಾಪಿಸಿ, ನಾವು ಕಣ್ಣುಕಣ್ಣು ಬಿಡಬೇಕಾಗಿ ಬಂದರೆ ಆಶ್ಚರ್ಯವೇನಿಲ್ಲ! ಹಿತ್ತಲ ಗಿಡ ಮದ್ದಲ್ಲ ನಿಜ. ಆದರಿದು ಅಂತಿಂಥ ಗಿಡವಲ್ಲ, ಜ್ಞಾನ ಸಂಜೀವಿನಿ ಎಂಬುದು ತಿಳಿದುಬಂದ ಮೇಲಾದರೂ ನಮ್ಮ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕು ತಾನೆ? ಅದರಲ್ಲೂ ಸಂಸ್ಕೃತ ಭಾರತಿಯಂಥ ಲಾಭರಹಿತ, ಸರ್ಕಾರೇತರ ಸಂಸ್ಥೆ ಅಹರ್ನಿಶಿ ಶ್ರಮಿಸುತ್ತಿರುವಾಗ?

ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ 1981ರಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಸಂಸ್ಕೃತ ಭಾರತಿ. ಅದನ್ನು ಹುಟ್ಟುಹಾಕಿದವರು ಶ್ರೀ ಚ ಮೂ ಕೃಷ್ಣ ಶಾಸ್ತ್ರಿ, ಶ್ರೀ ಜನಾರ್ಧನ ಹೆಗಡೆ ಮತ್ತು ಯುವಮಿತ್ರರು. ಅಂದಿನಿಂದಲೂ ಅದು ಸಂಸ್ಕೃತವನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಟೊಂಕ ಕಟ್ಟಿ ನಿಂತಿದೆ. ಅದರ ಪ್ರತಿಫಲವೇ ಇಂದು ದೇಶಾದ್ಯಂತ ಸಂಸ್ಕೃತದ ಕುರಿತು ಒಲವು ಹೆಚ್ಚುತ್ತಿರುವುದು. 39 ದೇಶಗಳಲ್ಲಿ ಸಂಸ್ಕೃತದ ಗಂಧ ಪಸರಿಸುತ್ತಿರುವುದು! ಇಲ್ಲಿಯವರೆಗೂ ಅದು ಸುಮಾರು ಒಂದೂಕಾಲು ಲಕ್ಷ ಶಿಬಿರಗಳನ್ನು ನಡೆಸಿ 95 ಲಕ್ಷಕ್ಕೂಹೆಚ್ಚು ಜನರಿಗೆ ಸಂಸ್ಕೃತದಲ್ಲಿ ಸಂಭಾಷಿಸಲು ಕಲಿಸಿದೆ! ಕೆಲವು ವರ್ಷದ ಹಿಂದೆ ಜಮ್ಮು-ಕಾಶ್ಮೀರದಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿದ್ದು ಕಡಿಮೆ ಸಾಧನೆಯೇನಲ್ಲ! ಅಂದಹಾಗೆ ಶಿಬಿರಗಳು ನಡೆಯುವುದು ಜನಸಾಮಾನ್ಯರಿಗೆ ಮಾತ್ರವಲ್ಲ. ಸಂಸದರಿಗೂ ಶಿಬಿರವನ್ನು ಆಯೋಜಿಸಿದ್ದಾಗ ಎಲ್.ಕೆ. ಅಡ್ವಾಣಿಯವರು ಶಿಬಿರಾರ್ಥಿಯಾಗಿ ಬಂದಿದ್ದರು! ಭಾರತಕ್ಕೆ ಸೇರಿರುವುದು ಹೌದಾ ಎಂಬ ಅನುಮಾನ ಹುಟ್ಟಿಸುವ ಈಶಾನ್ಯ ರಾಜ್ಯಗಳಲ್ಲೂ ಸಂಸ್ಕೃತ ಭಾರತಿ ಸಕ್ರಿಯವಾಗಿದೆ ಎಂದರೆ ನೀವು ನಂಬಲೇಬೇಕು! ಕೇರಳದಲ್ಲಂತೂ ಈ ವರ್ಷದಿಂದ ಒಂದನೇ ತರಗತಿಯಿಂದಲೇ ಸಂಸ್ಕೃತದ ಪಠ್ಯ ಶುರುವಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿರುವ ಉತ್ತರಾಖಂಡ ರಾಜ್ಯ ತನ್ನ ಎರಡನೆಯ ಅಧಿಕೃತ ಭಾಷೆಯಾಗಿ ಸಂಸ್ಕೃತವನ್ನು ಸ್ವೀಕರಿಸಿದೆ. ಸಂಸ್ಕೃತ ಭಾರತಿಯಿಂದ ತರಬೇತಾದ ಸಾವಿರಾರು ಶಿಕ್ಷಕರಿದ್ದಾರೆ. ಸಂಸ್ಕೃತವನ್ನೇ ಸಂವಹನದ ಮಾಧ್ಯಮವನ್ನಾಗಿಸಿಕೊಂಡಿರುವ ಸಾವಿರಾರು ಕುಟುಂಬಗಳಿವೆ. ಹಳ್ಳಿ-ಹಳ್ಳಿಗಳೇ ಸಂಸ್ಕೃತಮಯವಾಗಿವೆ. ಉಳಿದವರಿಗೆ ಸಾಧ್ಯವಾಗಿರುವುದು ನಮಗೇಕಾಗುವುದಿಲ್ಲ? ಹಾಗಂತ ಕಲಿಕೆಯೇನೂ ಕಬ್ಬಿಣದ ಕಡಲೆಯಲ್ಲ. ಕಲಿಕೆಯ ಸಲುವಾಗಿ ಎಷ್ಟೊಂದು ಮಾರ್ಗಗಳನ್ನು ಕಲ್ಪಿಸಿದೆ ಗೊತ್ತೇ ಸಂಸ್ಕೃತ ಭಾರತಿ? ಒಂದರಿಂದ ಏಳನೆಯ ತರಗತಿಯವರೆಗೆ ಕಲಿಸುವ ಸಂಸ್ಕೃತದ ಪಠ್ಯಪುಸ್ತಕಗಳಿವೆ. ವಯಸ್ಕರಿಗೆ, ಆಸಕ್ತರಿಗೆ ಅಂಚೆಯ ಮೂಲಕ ಶಿಕ್ಷಣ ಲಭ್ಯವಿದೆ, ಅದೂ ನಾವು ಇಷ್ಟಪಡುವ ಮಾಧ್ಯಮದಲ್ಲೇ! ಅಷ್ಟೇ ಅಲ್ಲ, ಭಗವದ್ಗೀತೆಯನ್ನು ಸಂಸ್ಕೃತದ ಮೂಲಕ, ಸಂಸ್ಕೃತವನ್ನು ಭಗವದ್ಗೀತೆಯ ಮೂಲಕ ಕಲಿಯುವ ಅವಕಾಶವೂ ಇದೆ. ಹತ್ತೇ ದಿನಗಳಲ್ಲಿ ಸಂಭಾಷಣೆಯನ್ನು ಕಲಿಸುವ ಶಿಬಿರಗಳಂತೂ ಸದಾ ನಡೆಯುತ್ತಲೇ ಇರುತ್ತವೆ. ಇನ್ನೆಷ್ಟು ಪ್ರೋತ್ಸಾಹ, ಸೌಲಭ್ಯಗಳು ಬೇಕು ನಮಗೆ?

2015ರಲ್ಲಿ ಸಂಸ್ಕೃತ ಭಾರತಿ ನೂರಾರು ಜನಪದ ಸಮ್ಮೇಳನಗಳನ್ನು ದೇಶಾದ್ಯಂತ ಹಮ್ಮಿಕೊಂಡಿತ್ತು. ಕರ್ನಾಟಕದಕ್ಷಿಣದಲ್ಲಿಯೇ 25 ಜಿಲ್ಲಾಮಟ್ಟದ ಸಂಸ್ಕೃತ ಸಮ್ಮೇಳನಗಳನ್ನುನಡೆಸಿದೆ. ಅದರ ಮುಂದಿನ ಹಂತವಾಗಿ ಪ್ರಾಂತ ಸಮ್ಮೇಳನವನ್ನು ಬರುವ ಜನವರಿ 9,10ರಂದು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ, ದಕ್ಷಿಣಕರ್ನಾಟಕ ಮಟ್ಟದಲ್ಲಿ ಆಯೋಜಿಸಿದೆ. ಸಂಸ್ಕೃತದ ಪುನಶ್ಚೇತನ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಇದು ನಮಗೆ ಲಭಿಸುತ್ತಿರುವ ಸದಾವಕಾಶವೆಂದರೆ ಅತಿಶಯೋಕ್ತಿಯೇನಲ್ಲ! ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಏನಿಲ್ಲವೆಂದರೂ ಒಂದು ಸಾವಿರ ಜನರು ಹೊರಡಲುದ್ಯುಕ್ತರಾಗಿದ್ದಾರೆ. ಅವರಲ್ಲಿ ಹೆಚ್ಚಾಗಿ ತರುಣರು, ಅದರಲ್ಲೂ ಐಟಿ ಉದ್ಯೋಗಿಗಳು ಆಸಕ್ತರಾಗಿರುವುದು ವಿಶೇಷ! ಘನತೆವೆತ್ತ ರಾಜ್ಯಪಾಲರು, ಇಸ್ರೋದ ಅಧ್ಯಕ್ಷ ಶ್ರೀ ಕಿರಣ್‍ಕುಮಾರ್ ವಿಶೇಷ ಮುತುವರ್ಜಿಯಿಂದ ಭಾಗವಹಿಸುತ್ತಿದ್ದಾರೆ. ಈಗಾಗಲೇ ಸಂಸ್ಕೃತಕ್ಕೆ ಅನುವಾದಗೊಂಡಿರುವ, ಖ್ಯಾತ ಸಾಹಿತಿ ಶ್ರೀ ಎಸ್.ಎಲ್. ಭೈರಪ್ಪನವರ ಕಾದಂಬರಿ 'ದಾಟು' ಅಲ್ಲೇ ಬಿಡುಗಡೆಯಾಗಲಿದೆ. ಚಿಣ್ಣರಿಗೆ ಪಾಠಮಾಡಬಹುದಾದ ಪುಸ್ತಕಗಳ ಲೋಕಾರ್ಪಣೆಯಾಗಲಿದೆ. ಸಮ್ಮೇಳನದ ಕುರಿತ ಹೆಚ್ಚಿನ ವಿವರಗಳಿಗೆ ದಿಲೀಪಶರ್ಮಾ (9538330511)ರನ್ನು ಸಂಪರ್ಕಿಸಬಹುದಾಗಿದೆ. ಮತ್ತೊಂದು ಸ್ವಾರಸ್ಯಕರ ಅಂಶವೆಂದರೆ ಉತ್ತರ ಕರ್ನಾಟಕದ ಅಥಣಿಯಲ್ಲೂ ಅವೇ ದಿನಗಳಲ್ಲಿ ಬೃಹತ್ ಸಮಾವೇಶ ನಡೆಯಲಿದೆ.(ಸಂಪರ್ಕ: ಶ್ರೀ ವಿ.ಜಿ. ಹೆಗಡೆ: 9448252841)

ನಮಗಿನ್ನೂ ಸಂಸ್ಕೃತವನ್ನು ಜಾತಿ ಮತಗಳ ತಕ್ಕಡಿಯಲ್ಲಿಟ್ಟು ತೂಗುವುದರಲ್ಲೇ ಸುಖ! ಡಾ. ಅಂಬೇಡ್ಕರ್ ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಮಾಡಲು ನಡೆಸಿದ ಪ್ರಯತ್ನವನ್ನು ಏಕೆ ಮರೆತಿದ್ದೇವೆ? ಶ್ರೀ ನಸೀರುದ್ದೀನ್ ಅಹಮದ್, ಸರ್ ಮಿರ್ಜಾ ಇಸ್ಮಾಯಿಲ್, ಡಾ. ಶೈದುಲ್ಲ, ಫಕ್ರುದ್ದೀನ್ ಅಲಿ ಅಹಮದ್ ಇವರೆಲ್ಲ ಸಂಸ್ಕೃತದ ಪರವಾಗಿ ನಿಂತವರು, ಧರ್ಮ, ಜಾತಿಗಳೇನೇ ಆಗಿರಲಿ, ಪ್ರತಿ ಭಾರತೀಯನಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ಭಾವೈಕ್ಯತೆಗಳನ್ನು ಹುಟ್ಟುಹಾಕಲು ಸಂಸ್ಕೃತ ಅಗತ್ಯ ಎಂದು ಪ್ರತಿಪಾದಿಸಿದವರು ಎಂಬುದಕ್ಕೆ ನಾವೇಕೆ ಪ್ರಾಮುಖ್ಯ ನೀಡುವುದಿಲ್ಲ?
ಇನ್ನಾದರೂ ನಾವು ಸಂಸ್ಕೃತವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸಂಭಾಷಿಸುವುದನ್ನು ಕಲಿಯುವುದೇ ಅಂತಿಮ ಗುರಿಯಲ್ಲ. ಭಾಷಾಶುದ್ಧತೆ, ವ್ಯಾಕರಣ ಜ್ಞಾನವನ್ನು ಕಲಿತ ಮೇಲೆ ಮುಂದೇನು ಎಂದು ಚಿಂತಿಸಬೇಕಾಗಿಯೂ ಇಲ್ಲ. ಇನ್ನೂ ಯಾರ ಕೈಗೂ ಎಟುಕಿರದ ಶಾಸ್ತ್ರಗ್ರಂಥಗಳ ಹಾಗೂ ಲಕ್ಷಾಂತರ ಹಸ್ತಪ್ರತಿಗಳ ಅಧ್ಯಯನ ಹಾಗೂ ಸಂಶೋಧನೆ ಬಾಕಿಯಿದೆ! ಅವುಗಳ ಹುರುಳನ್ನು ಹೆಕ್ಕಿ ತೆಗೆದು ವಿವಿಧ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳುವ ಕಾರ್ಯವಾಗಬೇಕಿದೆ. ನಮ್ಮ ಸಂಪತ್ತನ್ನು ಅನ್ಯರಿಗೆ ದೋಚಲು ಬಿಡುವುದೇ ಮೊದಲಿನಿಂದಲೂ ನಾವು ಬೆಳೆಸಿಕೊಂಡು ಬಂದಿರುವ ಪರಿಪಾಠ! ಇನ್ನಾದರೂ ಅದಕ್ಕೆ ಕಡಿವಾಣ ಬೀಳಬೇಡವೇ?

ಸಂಸ್ಕೃತ ಬರೀ ಭಾಷೆಯಲ್ಲ, ನಮ್ಮ ನರನಾಡಿಗಳಲ್ಲಿ ಪ್ರವಹಿಸುವ ಸಮೃದ್ಧ ಸಂಸ್ಕೃತಿಯ ಪ್ರತೀಕ. ಇದರ ಹೊಸ ಚೈತನ್ಯದ ಕಹಳೆಗೆ ಪ್ರತಿ ಭಾರತೀಯನೂ ಓಗೊಡಬೇಕು. ಇದನ್ನು ಕಳೆದುಕೊಂಡರೆ ನಮ್ಮ ಪರಂಪರೆಯನ್ನೇ ಕಳೆದುಕೊಂಡಂತಾಗುತ್ತದೆ. ನೀವೇ ನೋಡಿ, ಸರಿಯಾದ ಉಚ್ಛಾರವೇ ಬರದಿದ್ದ ವಿದೇಶೀ ನಾಲಗೆಗಳು ಈಗ ಎಗ್ಗಿಲ್ಲದೆ ಗಾಯತ್ರಿ ಮಂತ್ರವನ್ನು ಜಪಿಸತೊಡಗಿವೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಹೇಗೆ? ಈಗ ನಮ್ಮ ಮನಸ್ಸುಗಳು ಸರಿಯಾದ ದಿಕ್ಕಿನಲ್ಲಿ ಹೊರಳಬೇಕಷ್ಟೇ. ನಾಲಗೆ ಹೊರಳಲೆಷ್ಟು ಹೊತ್ತು? ಅಲ್ಲವೇ?

ನಿರ್ಭೀತಿಯೇ ಮೈವೆತ್ತಿರುವ ಆಸಾಮಿ, ಈ ಸುಬ್ರಮಣಿಯನ್ ಸ್ವಾಮಿ!

ಸುಬ್ರಮಣಿಯನ್ ಸ್ವಾಮಿ! ಹೆಸರನ್ನು ಕೇಳಿದ ತಕ್ಷಣ ಎಂಥವರೂ ಎಚ್ಚೆತ್ತುಕೊಳ್ಳಲೇ ಬೇಕು. ಪ್ರತಿಕ್ರಿಯಿಸಲೇ ಬೇಕು. ಸಿಟ್ಟೋ, ಗೊಂದಲವೋ, ಹೆಮ್ಮೆಯೋ, ಪ್ರೀತಿಯೋ ಒಟ್ಟಿನಲ್ಲಿ ಯಾವುದಾದರೊಂದು ಭಾವವಂತೂ ಹೊಮ್ಮಲೇ ಬೇಕು! ಅವರನ್ನು ಉಪೇಕ್ಷೆ ಮಾಡಿ ತಲೆಯನ್ನೊಮ್ಮೆ ಅಡ್ಡಡ್ಡಲಾಗಿ ಕೊಡವಿಕೊಂಡು ಎದ್ದು ಬಿಡುವುದು ಎಂಥವರಿಗೂ ಸಾಧ್ಯವಿಲ್ಲ! ಮೊನ್ನೆ ಜನವರಿ 23ರಂದು ಮೈಸೂರಿನಲ್ಲಿ ಅವರನ್ನು ಭೇಟಿಯಾಗಲು ದೌಡಾಯಿಸುವಾಗ ಮನಸ್ಸಿನಲ್ಲಿ ಹಲವಾರು ಚಿತ್ರಗಳು. ಟಿವಿ ಚಾನೆಲ್‍ಗಳಲ್ಲಿ ವಾದಕ್ಕೆ ನಿಂತಾಗಲೆಲ್ಲ ಗುಂಡು ಹೊಡೆದ ಹಾಗೆ ಮಾತನಾಡುವ, ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ಮುಖದ ನೀರಿಳಿಸಿಬಿಡುವ ಅವರನ್ನು ನೇರಾನೇರ ಕಂಡು ಮಾತನಾಡುವ ಕಾತುರ. ಎದುರಿಗೆ ಹೋಗಿ ನಿಂತು ಸುರಿಸಿದ ಪ್ರಶ್ನೆಗಳ ಮಳೆಗೆ ಅವರದ್ದು ಸಿಡಿಲಬ್ಬರದ ಉತ್ತರ. ಸೆಕ್ಯುರಿಟಿಯವರ ಕೈಯಲ್ಲಿದ್ದ ಎಕೆ 47 ಬಂದೂಕನ್ನೂ ನಾಚಿಸುವಂಥ ಮಾತಿನ ವರಸೆ!



'ಸರ್, ಸೋನಿಯಾ ಪ್ರಧಾನಿಯಾಗುವುದು ಕಾನೂನಿನ್ವಯ ಸಾಧ್ಯವಿಲ್ಲ ಎನ್ನುವ ವಿಷಯ ನೀವು ಹೇಳುವವರೆಗೂ (ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂರಿಗೆ ಪತ್ರ ಬರೆದು) ಯಾರಿಗೂ ಗೊತ್ತೇ ಇರಲಿಲ್ಲ, ಯಾವ ಸತ್ಯವನ್ನೇ ಆಗಲಿ ನೀವೇ ಶೋಧಿಸಬೇಕು, ನೀವಲ್ಲದೆ ಬೇರೆ ಯಾರೂ ದಿಕ್ಕಿಲ್ಲ ಎನ್ನುವ ಹಾಗಿಬಿಟ್ಟಿದೆಯಲ್ಲ, ಮುಂದೆ ಹೇಗೆ?' ಎಂಬ ಕಳಕಳಿಯ ಪ್ರಶ್ನೆಗೆ ಅವರು ನಗುತ್ತಾ ಕೊಟ್ಟ ಉತ್ತರ - 'ಅಯ್ಯೋ, ನನ್ನ ಕಥೆ ಈಗಲೇ ಮುಗಿದುಹೋಗುತ್ತದೆ ಅಂದುಕೊಂಡುಬಿಟ್ಟಿರೇನು? ಯಾರಿಗೆ ಗೊತ್ತು, ನಾನು ನೂರಿಪ್ಪತ್ತು ವರ್ಷಗಳ ಕಾಲ ಬದುಕಿದರೂ ಬದುಕಬಹುದು' ಎಂದು! 'ನಾನೊಬ್ಬ ಸಾಧಾರಣ ಹಿನ್ನೆಲೆಯಿಂದ ಬಂದಂಥ ಮನುಷ್ಯ. ಉಳಿದವರಿಗೂ ನನಗೂ ಇರುವ ಒಂದೇ ವ್ಯತ್ಯಾಸವೆಂದರೆ ನಾನು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ. ಗಾಂಧೀಜಿಯವರು ಇದ್ದುದೂ ಹಾಗೇ ಅಲ್ಲವೇ?' ಎಂದು ತಿರುಗಿ ಪ್ರಶ್ನಿಸಿದರು ಸ್ವಾಮಿ.

'ಸೋಷಿಯಲಿಸ್ಟ್ ಹಾಗೂ ಸೆಕ್ಯುಲರ್' ಎಂಬ, ಭಾರತಕ್ಕೆ ಅನ್ವಯವೇ ಆಗದ ಪದಗಳನ್ನು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನದಲ್ಲಿ ತೂರಿಸಿದ್ದಾರಲ್ಲ ಇಂದಿರಾ, ಅದನ್ನು ತೆಗೆಯುವುದು ಸಾಧ್ಯವೇ ಇಲ್ಲ ಎನ್ನುತ್ತಾರಲ್ಲ ಸರ್?' ನನ್ನ ಮರುಪ್ರಶ್ನೆ. ಸಂವಿಧಾನದ ರಚನೆಯ ಬುಡವನ್ನೇ ಅಲುಗಾಡಿಸಬಲ್ಲ ಈ ಪದಗಳು ಅಸ್ಪೃಶ್ಯ, ಇವುಗಳನ್ನು ಮುಟ್ಟಲು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ ಎಂಬರ್ಥದ ಮಾತುಗಳನ್ನು ಈ ಹಿಂದೆ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಯೊಬ್ಬರ ಬಾಯಲ್ಲಿ ಕೇಳಿದ್ದೆ. 'ಯಾರು ಹೇಳಿದ್ದು ಹಾಗೆ? ಎಲ್ಲ ಸಾಧ್ಯವಿದೆ. ಮೂರನೇ ಎರಡರಷ್ಟು ಬಹುಮತ ದೊರಕಿಸಿಕೊಳ್ಳಬೇಕು ಅಷ್ಟೇ.' ಬಾಣದಂತೆ ಬಂತು ಅವರ ಪ್ರತ್ಯುತ್ತರ.






'ಸರ್, ರಾಜೀವ್ ಗಾಂಧಿ ಶಾಬಾನು ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಲಯದ ತೀರ್ಪನ್ನೇ ಧಿಕ್ಕರಿಸಿದರು. ಆದರೆ ಅವರ ಆಡಳಿತಾವಧಿಯಲ್ಲೇ ರಾಮಜನ್ಮಭೂಮಿಯ ಶಿಲಾನ್ಯಾಸ ನಡೆದಿದ್ದು. ಹಾಗಾದರೆ ರಾಜೀವ್‍ರ ಆಂತರ್ಯದೊಳಗೆ ನಿಜವಾಗಿಯೂ ಏನಿತ್ತು?' ಮತ್ತೊಂದು ಪ್ರಶ್ನೆ. ಓದುಗ ಮಿತ್ರರೇ, ನಿಮಗೆ ಗೊತ್ತೋ ಇಲ್ಲವೋ, ರಾಜೀವ್ ಹಾಗೂ ಸ್ವಾಮಿ ಬಹಳ ಒಳ್ಳೆಯ ಗೆಳೆಯರಾಗಿದ್ದರು. ತಮ್ಮ ಬದುಕಿನ ಬಹುಪಾಲು ರಹಸ್ಯಗಳನ್ನು ರಾಜೀವ್ ಹಂಚಿಕೊಂಡಿದ್ದು ಸ್ವಾಮಿಯವರೊಂದಿಗೆ ಮಾತ್ರ. 'ಶಾಬಾನು ಪ್ರಕರಣದಲ್ಲಿ ರಾಜೀವ್, ಪಕ್ಷದ ಒತ್ತಡಕ್ಕೆ ಮಣಿದರು. ಆದರೆ ಅದೇ ಕಾಂಗ್ರೆಸ್ ಪಕ್ಷ, ದೂರದರ್ಶನದಲ್ಲಿ ರಾಮಾಯಣದ ಪ್ರಸಾರವಾಗಬಾರದೆಂಬ ನಿರ್ಣಯ ಕೈಗೊಂಡಾಗ, ಅದನ್ನು ಒಪ್ಪದೆ ಹಟ ಹಿಡಿದು ಪ್ರಸಾರ ಮಾಡಿಸಿದವರು ರಾಜೀವ್. ಹಿಂದುತ್ವದ ಕುರಿತು ರಾಜೀವ್‍ರ ಒಲವು ದಿನೇ ದಿನೇ ಹೆಚ್ಚುತ್ತಿದ್ದುದನ್ನು ಕಂಡು ಬೇಸತ್ತಿದ್ದ ಸೋನಿಯಾ ಅವರಿಗೆ ವಿಚ್ಛೇದನ ನೀಡಲು ಬಯಸಿದ್ದರು.' ಎಂದು ಸ್ವಾಮಿ ಹೇಳಿದಾಗ ಕೆಲ ಕ್ಷಣಗಳ ಮಟ್ಟಿಗೆ ಗರಬಡಿದವಳ ಹಾಗೆ ನಿಲ್ಲುವುದರ ಹೊರತಾಗಿ ನನಗೆ ಇನ್ನೇನೂ ಮಾಡಲಾಗಲಿಲ್ಲ!

'ವಾಜಪೇಯಿ ಸರ್ಕಾರವನ್ನು ಒಂದೇ ಒಂದು ಮತದ ಅಂತರದಲ್ಲಿ ಕೆಡವಿದ ಮನುಷ್ಯ ನೀವು, ನಿಮ್ಮಲ್ಲಿ ಸ್ಥಿರತೆಯಿಲ್ಲ, ನೀವು ನಡೆಸುತ್ತಿರುವ ಕಾನೂನಿನ ಸಮರಗಳೆಲ್ಲ ಸೋನಿಯಾ ಮೇಲಿನ ಹಗೆತನದಿಂದ ಮಾತ್ರ ಎನ್ನುವವರನ್ನು ದಾರಿಗೆ ತರುವುದು ಹೇಗೆ ಸರ್? ರಾಷ್ಟ್ರೀಯತೆಯ ಕುರಿತ ನಿಮ್ಮ ನಿಲುವನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ಹೇಗೆ? ನಮ್ಮ ಯಾವ ವಾದವೂ ಅವರಿಗೆ ಒಪ್ಪಿಗೆಯಾಗುವುದಿಲ್ಲವಲ್ಲ?' ನನ್ನ ಬತ್ತಳಿಕೆಯೊಳಗಿನಿಂದ ಮತ್ತೊಂದು ಪ್ರಶ್ನೆ. 'ನೀವು ನನ್ನ ಸಲುವಾಗಿ ಕಾದಾಡಲೇಬೇಡಿ. ಅದು ಕೋಣನ ಮುಂದೆ ಕಿಂದರಿ ಬಾರಿಸುವ ಪ್ರಯತ್ನವಾಗಿಬಿಡುತ್ತದೆ. ಭ್ರಷ್ಟಾಚಾರದ, ರಾಷ್ಟ್ರ-ವಿರೋಧಿಗಳ ವಿರುದ್ಧದ ನನ್ನ ಹೋರಾಟ ತೀರಾ ಯಾರಿಗೂ ಅರ್ಥವಾಗದ ಕಬ್ಬಿಣದ ಕಡಲೆಯೇನಲ್ಲ.' ಅವರ ಉತ್ತರ. ವ್ಯಾಟಿಕನ್, ಸರಾಸಿನ್ ಮತ್ತು ಪಿಕ್‍ಟೆಟ್. ಈ ಮೂರೂ ವಿದೇಶೀ ಬ್ಯಾಂಕ್‍ಗಳಲ್ಲಿ ಸೋನಿಯಾ ಖಾತೆ ಹೊಂದಿದ್ದಾರಲ್ಲ ಸರ್?’ ಎಂದು ಕೇಳಿದ್ದೇ ತಡ, 'ಹೌದು, ಆ ಮಾಹಿತಿಯನ್ನು ಸರ್ಕಾರಕ್ಕೆ ಈಗಾಗಲೇ ರವಾನಿಸಿದ್ದೇನೆ.' ಎಂಬ ಉತ್ತರ ಬಂದಿತು.

ಸತ್ಯವನ್ನು ತಿರುಚಿ ಹೇಳಿ, ಅದೇ ನಿಜವೆಂಬ ಭ್ರಮೆ ಹುಟ್ಟಿಸಿಬಿಡುವ ಮಾಧ್ಯಮಗಳನ್ನು ಹದ್ದುಬಸ್ತಿನಲ್ಲಿಡುವುದು ಸಾಧ್ಯವೇ ಇಲ್ಲವಾ ಸರ್? ಎಂಬ ಪ್ರಶ್ನೆಗೆ ಒಂದು ಉದಾಹರಣೆಯನ್ನೂ ಕೊಟ್ಟರು. ಅವರು ಯಾವುದೋ ಸಂದರ್ಭದಲ್ಲಿ ಮಾತನಾಡುತ್ತ, ರಾವಣ ಬ್ರಾಹ್ಮಣ ಎಂಬ ಅಂಶವನ್ನು ಹೇಳಿದ್ದರಂತೆ. ಅದನ್ನು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ, 'ಸ್ವಾಮಿಯವರು ರಾವಣನನ್ನು ದಲಿತ ಎಂದಿದ್ದಾರೆ, ಅವನು ದಲಿತನಾಗಿದ್ದಕ್ಕೇ ಅಂಥ ಕೆಲಸಕ್ಕೆ ಕೈಹಾಕಿದ' ಎಂದು ತಿರುಚಿ ಬರೆದಿದೆ! ಆಮೇಲೆ ಗೊತ್ತಲ್ಲ, ಎಂದಿನ ಜೋರು ಗಲಾಟೆ, ಜಾತೀಯತೆಯ ಡೌಲು, ಬಾಜಾ-ಬಜಂತ್ರಿಯ ಸಂಭ್ರಮ ನಡೆದಿದೆ! ಇದನ್ನು ಕಂಡ ಸ್ವಾಮಿಯವರು ನ್ಯಾಯಾಲಯದಿಂದ ನೋಟೀಸ್ ಕಳಿಸಿದ್ದೇ ತಡ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ತೆಪ್ಪಗೆ ಕ್ಷಮೆಯಾಚಿಸಿತಂತೆ!



ಮತ್ತೊಂದು ಘಟನೆಯನ್ನೂ ಉದಾಹರಿಸಿದರು ಸ್ವಾಮಿ. ಅವರು ಜಯಲಲಿತಾರ ವಿರುದ್ಧ ಒಂದರಮೇಲೊಂದು ಪ್ರಕರಣವನ್ನು ಜಡಿದಾಗ ಜಯಲಲಿತಾ ಬೆಂಡಾಗಿ ಬಸವಳಿದು ಹೋಗಿದ್ದರು! ಕೊನೆಗೆ, ‘ದಿ ಹಿಂದೂ ಪತ್ರಿಕೆಯ ಮಾಲಿನಿ ಪಾರ್ಥಸಾರಥಿಯವರನ್ನು ಮಧ್ಯವರ್ತಿಯನ್ನಾಗಿ ಅಂದಿನ ಪ್ರಧಾನಿ ನರಸಿಂಹರಾವ್‍‍ರ ಬಳಿ ಕಳುಹಿಸಿದ್ದರು. ಯಾಕಿರಬಹುದು ಹೇಳಿ? ಸ್ವಾಮಿಯವರನ್ನು ಸುಮ್ಮನಾಗಿಸಿ ಎಂಬ ಮನವಿ ಮಾಡಿಕೊಳ್ಳಲು! ನರಸಿಂಹರಾವ್ ಏನು ಮಾಡಿದರಂತೆ ಗೊತ್ತೇ? ಆಕೆಯ ಹತ್ತಿರ ಮಾತು ಶುರುಮಾಡುವ ಮೊದಲು ಸ್ವಾಮಿಯವರನ್ನು ಕರೆಸಿ ತಮ್ಮ ಪಕ್ಕದ ರೂಮಿನಲ್ಲಿ ಕುಳ್ಳಿರಿಸಿ ತಮ್ಮ ಕೋಣೆಯ ಬಾಗಿಲನ್ನು ತೆರೆದೇ ಇಟ್ಟರಂತೆ. ತಮ್ಮ ಮಾತುಗಳು ಸ್ವಾಮಿಯವರಿಗೂ ಕೇಳಲಿ ಎಂಬ ಆಶಯದಿಂದ! ಹೇಗಾದರೂ ಮಾಡಿ ಸ್ವಾಮಿಯನ್ನು ಸುಮ್ಮನಿರಿಸಿ ಎಂದು ಕೇಳಿಕೊಂಡ ಆಕೆಗೆ ನರಸಿಂಹರಾವ್, 'ಈ ಪ್ರಪಂಚದಲ್ಲಿ ಆತನನ್ನು ಹಿಡಿತದಲ್ಲಿಟ್ಟುಕೊಳ್ಳಬಲ್ಲ ಒಬ್ಬೇ ಒಬ್ಬ ವ್ಯಕ್ತಿಯಿದ್ದರೂ ನನಗೆ ತೋರಿಸಿ, ನಾನೇ ಅವರ ಬಳಿ ಮಾತನಾಡುತ್ತೇನೆ.' ಎಂದು ಸೀದಾ ಹೇಳಿಬಿಟ್ಟರಂತೆ!

ಇನ್ನೂ ಹಲವು ವಿಷಯಗಳು ಬಂದು ಹೋದವು. ಮುಸ್ಲಿಂ ಸಂತ್ರಸ್ತರ ಮನೆಗಳಿಗೆ ಮೊಸಳೆ ಕಣ್ಣೀರಿನೊಂದಿಗೆ ಲಗ್ಗೆಯಿಡುತ್ತಿರುವ (ದುರಂತ ಪ್ರವಾಸವೆಂತಲೂ ಕರೆಯಬಹುದು!) ರಾಹುಲ್, ನಾಸ್ತಿಕ ಕರುಣಾನಿಧಿಯ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಮೊಳಗುತ್ತಿರುವ ಮಂತ್ರಗಳ ಮಣಮಣ ಸದ್ದು, ಇತ್ತೀಚೆಗಷ್ಟೇ ಸೋನಿಯಾ-ರಾಹುಲ್‍ರನ್ನು ಕೋರ್ಟಿನ ಮೆಟ್ಟಿಲು ಹತ್ತಿಸಿದ ನ್ಯಾಷನಲ್ ಹೆರಾಲ್ಡ್ ಪ್ರಕರಣ, ಹೀಗೆ. ರಾಮಮಂದಿರ ನಿರ್ಮಾಣದ ಕಥೆಯೇನಾಗಲಿದೆ ಎಂಬುದಕ್ಕೆ ಅವರ ಖಡಕ್ಕು ಉತ್ತರ - 'ಧ್ವಂಸವಾಗಿಹೋಗಿರುವ ನಮ್ಮ 40 ಸಾವಿರ ದೇವಾಲಯಗಳ ಪೈಕಿ ಮೂರನ್ನು (ಅಯೋಧ್ಯೆ, ಕಾಶಿ ಹಾಗೂ ಮಥುರಾ) ಮಾತ್ರ ನಮಗೆ ಹಿಂದಿರುಗಿಸಿ ಎಂದು ಮುಸ್ಲಿಮ್ ಮುಖಂಡರೊಂದಿಗೆ ಮಾತುಕತೆಗಿಳಿದಿದ್ದೇನೆ. ನ್ಯಾಯಾಲಯಕ್ಕೂ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಿ ಆಗಿದೆ. ಪ್ರಕರಣ ನಮ್ಮ ಪರವಾಗೇ ಇತ್ಯರ್ಥವಾಗುವ ನಿರೀಕ್ಷೆಯಿದೆ.' ಎಂಬುದು. 'ಪಾಂಡವರು ದುರ್ಯೋಧನನಿಗೂ ಐದು ಹಳ್ಳಿಗಳನ್ನು ಕೊಡುವುದಾಗಿ ಹೇಳಿದ್ದರು. ತನ್ನ ಮುಠ್ಠಾಳತನದಿಂದಾಗಿ ಎಲ್ಲವನ್ನೂ ಕಳೆದುಕೊಂಡ.' ಎಂದು ಅವರು ಮಾರ್ಮಿಕವಾಗಿ ಹೇಳುವಾಗ ಅವರಿಗೆ ಅವರೇ ಸಾಟಿ ಎನಿಸದೇ ಇರದು!



ಒಟ್ಟಾರೆ ಅವರ ಮಾತುಗಳಲ್ಲಿ ನಮಗೆ ಸಿಕ್ಕ ಸಂದೇಶಗಳು ಐದು. ಮೊದಲನೆಯದಾಗಿ, ನಮ್ಮ ಸನಾತನ ಧರ್ಮದ ಬಗ್ಗೆ ನಮ್ಮಲ್ಲಿರಬೇಕಾದ ಹೆಮ್ಮೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಇಡೀ ಜಗತ್ತಿನಲ್ಲಿ ಒಟ್ಟು 46 ನಾಗರಿಕತೆಗಳನ್ನು ಯುನೆಸ್ಕೋ ಗುರುತಿಸಿದೆ. ಆದರೆ ಅವುಗಳಲ್ಲಿ 45 ನಾಗರಿಕತೆಗಳು (ಗ್ರೀಸ್, ಇರಾನ್, ಇಜಿಪ್ಟ್, ಬ್ಯಾಬಿಲೋನ್, ರೋಮ್ ಮುಂತಾದವು) ಈಗಾಗಲೇ ಸಂಪೂರ್ಣ ನಶಿಸಿ ಹೋಗಿವೆ. ಉಳಿದಿರುವುದು ಯಾವುದು ಹೇಳಿ? ನಮ್ಮ ಭಾರತದ್ದೊಂದೇ! ಇದು ಸಂತೋಷಿಸಬೇಕಾದ ವಿಷಯವೇ ತಾನೇ? ಈ ದೇಶದಲ್ಲಿರುವ ಬಹುತೇಕ ಮುಸ್ಲಿಮರ, ಕ್ರಿಶ್ಚಿಯನ್ನರ ಪೂರ್ವಜರು ಹಿಂದೂಗಳೇ ಆಗಿದ್ದರು ಎನ್ನುವುದು ಈಗ ಗೌಪ್ಯವಾಗೇನೂ ಉಳಿದಿಲ್ಲ. ಡಿಎನ್‍ಎ ಪರೀಕ್ಷೆಗಳು ಹಾಗೂ ಸಂಶೋಧನೆಗಳು ಆ ವಿಷಯವನ್ನು ಈಗಾಗಲೇ ದೃಢಪಡಿಸಿವೆ. ಅದನ್ನು ಸ್ವತಃ ಅವರುಗಳೇ ಒಪ್ಪಿಕೊಳ್ಳುತ್ತಾರಾದರೂ ಮುಕ್ತವಾಗಿ ತಮ್ಮ ತಮ್ಮ ಧರ್ಮಗುರುಗಳ ಎದುರಿನಲ್ಲಿ ಹೇಳಲಾರದ ಸಂಕಷ್ಟದಲ್ಲಿ ಸಿಲುಕಿದ್ದಾರೇನೋ ಎನಿಸುತ್ತದೆ.

ಎರಡನೆಯದು, ನಮ್ಮ ಐತಿಹ್ಯದ ಬಗೆಗಿನ ತಿಳುವಳಿಕೆ. ಮುಸ್ಲಿಮರು ನಮ್ಮನ್ನು 150 ವರ್ಷ ಆಳಿದರು, ಬ್ರಿಟಿಷರು ನಮ್ಮನ್ನು 200 ವರ್ಷ ಹಿಡಿದಿಟ್ಟುಕೊಂಡಿದ್ದರು ಎಂದು ಬೊಬ್ಬೆಹಾಕುವ ನಾವು ನಮ್ಮ ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯ ಬಗ್ಗೆ ಎಷ್ಟು ತಿಳಿದುಕೊಂಡಿದ್ದೇವೆ? ಸಾವಿರ ವರ್ಷಗಳ ಕಾಲ ಆಳಿದ ಚೋಳರ ಸಾಮ್ರಾಜ್ಯದ ಬಗ್ಗೆ ನಮಗೆಷ್ಟು ಗೊತ್ತು? ಎಷ್ಟು ದೇವಾಲಯಗಳಿದ್ದವು, ಎಷ್ಟು ಉಳಿದಿವೆ, ಯಾವ ದೇವಾಲಯದ ಪ್ರಾಮುಖ್ಯತೆ ಎಷ್ಟು ಎಂಬ ವಿಷಯಗಳಲ್ಲಿ ನಮಗೆಷ್ಟು ಆಸಕ್ತಿಯಿದೆ? ಅದನ್ನೆಲ್ಲ ಇನ್ನಾದರೂ ಬೆಳೆಸಿಕೊಳ್ಳಬೇಡವೆ?

ಮೂರನೆಯದು, ಸಂಸ್ಕೃತದ ಮಹತ್ವವನ್ನು ಅರಿಯುವುದು. ನೆಹರೂರ ಅಸಡ್ಡೆಯಿಂದಾಗಿ ಸಂಸ್ಕೃತ ದಶಕಗಳ ಹಿಂದೆಯೇ ಮೂಲೆಗುಂಪಾಯಿತು. ಅಂಬೇಡ್ಕರರ ಹೋರಾಟದ ಹೊರತಾಗಿಯೂ ಅದಕ್ಕೆ ಪ್ರಾಶಸ್ತ್ಯ ಸಿಗಲಿಲ್ಲ. ಇನ್ನಾದರೂ ಅದರ ಅಧ್ಯಯನವನ್ನು ನಡೆಸದೇ ಹೋದಲ್ಲಿ, ಅದು ವಿದೇಶಿಗರ ಸ್ವತ್ತಾಗಿ, ನಾವು ಪಶ್ಚಾತ್ತಾಪಪಡಬೇಕಾಗಿ ಬರುವುದು ಖಂಡಿತ.

ನಾಲ್ಕನೆಯದು, ನಮ್ಮೊಳಗೆ ಜಾಗೃತ ಮನಸ್ಥಿತಿ ಮೂಡಿಸಿಕೊಳ್ಳುವುದು. ನಮ್ಮ ಮನೆ-ಮಠ, ಸಂಸಾರ-ಮಕ್ಕಳೇ ನಮಗೆ ಸರ್ವಸ್ವ! ಅದರಾಚೆಗೆ ಯೋಚಿಸಲು ವ್ಯವಧಾನವೇ ಇಲ್ಲವೇನೋ ಎನ್ನುವ ಹಾಗೆ! ದೇಶದ ಆಗುಹೋಗುಗಳಿಗೂ ನಮಗೂ ಸಂಬಂಧವೇ ಇಲ್ಲವೆನ್ನುವಷ್ಟು ನಿರ್ಲಿಪ್ತತೆ. ಈ ವಿಷಯಕ್ಕೆ ತಲೆ ಕೆಡಿಸಿಕೊಂಡರೆ ನನಗಾಗುವ ಲಾಭವಾದರೂ ಏನು ಎಂಬ ಅಪ್ಪಟ ಸ್ವಾರ್ಥದ ಆಲೋಚನೆ! ಹಾಗಾದರೆ ಈ ದೇಶವೆಂಬುದು ನಮ್ಮ ವಾಸಕ್ಕೆ ಬೇಕಾದ ನೆಲದ ತುಂಡು ಮಾತ್ರವೇ? ಅದನ್ನು ಮೀರಿ ಯೋಚಿಸುವ, ದೇಶದ ಸಲುವಾಗಿ ಒಂದಷ್ಟು ಸಮಯ, ಶ್ರಮವನ್ನು ಮೀಸಲಿಡಲಾರದಷ್ಟು ಭಂಡತನ ಹೊಕ್ಕಿದೆಯೇ ನಮ್ಮೊಳಗೆ? ಹೌದಾದರೆ ನಾಳೆ ಯಾವುದಕ್ಕೂ ಯಾರನ್ನೂ ದೂರುವ ಅಥವಾ ದೂಷಿಸುವ ಹಕ್ಕಿಲ್ಲ ನಮಗೆ!

ಐದನೆಯದು - ವರ್ಣಾಶ್ರಮವನ್ನೇ ಉದಾಹರಿಸಿಕೊಂಡು ಪರಸ್ಪರ ಕತ್ತಿ ಝಳಪಿಸಿಕೊಳ್ಳುವ ಪ್ರಕ್ರಿಯೆಯನ್ನು ಕೊನೆಗಾಣಿಸುವುದು. ದಲಿತ ಎಂಬ ಪದವನ್ನೇ ಬಂಡವಾಳವನ್ನಾಗಿಸಿಕೊಂಡು ರಕ್ತಪಾತಕ್ಕಿಳಿಯುವ ಮಂದಿಗೆ ಬಹುಶ ಕೆಲ ವಿಷಯಗಳು ಗೊತ್ತಿಲ್ಲ. ವಿದೇಶದಲ್ಲಿ ಓದಿ ಡಾಕ್ಟರೇಟ್ ಸಂಪಾದಿಸಿಕೊಂಡು ಬಂದ ಅಂಬೇಡ್ಕರರಿಗೆ ಕಾಂಗ್ರೆಸ್ ಕೊಟ್ಟಿದ್ದು 'ಭೀಮರಾವ್' ಎಂಬ ಏಕವಚನದ ಸ್ಥಾನ-ಮಾನವನ್ನು ಮಾತ್ರ. ಅವರಿಗೆ ಭಾರತರತ್ನ ಪ್ರಶಸ್ತಿ ಸಿಗದ ಹಾಗೆ ನೋಡಿಕೊಂಡವರು ಖುದ್ದು ನೆಹರೂ! ಅದನ್ನು ಮರಣೋತ್ತರವಾಗಿ ಕೊಡಮಾಡಿದ್ದು 1990ರಲ್ಲಿ, ಬಿಜೆಪಿ ಬೆಂಬಲಿತ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ! ಅದೇ ಇಂಗ್ಲೆಂಡಿನಲ್ಲಿ ಓದಲು ಹೋಗಿ ಫೇಲಾಗಿ, 'ಜಂಟಲ್‍ಮ್ಯಾನ್ ಪಾಸ್' ಎಂಬ ಭಿಕ್ಷೆಯ ಸರ್ಟಿಫಿಕೇಟು ಹಿಡಿದು ಬಂದ ನೆಹರೂರನ್ನು ಕಾಂಗ್ರೆಸ್ 'ಪಂಡಿತ್‍ಜೀ' ಎಂದು ಗೌರವಿಸಿತು. ಜವಾಹರಲಾಲ್ ಎಂದು ಕರೆಸಿಕೊಳ್ಳಬೇಕಾದವರು ಪಂಡಿತರಾದರು. ಪಂಡಿತ್‍ಜೀ ಎಂದು ಕರೆಸಿಕೊಳ್ಳಬೇಕಾದವರು ಭೀಮರಾವ್ ಆದರು! ಏನು ಮಾಯೆಯೋ! ಭೀಮರಾವ್ ಮಹಾರ್ ಎಂಬ ಅತಿ ಚುರುಕು ಬುದ್ಧಿಯ ಹುಡುಗನಿಗೆ ಅಂಬೇಡ್ಕರ್ ಎಂಬ ತಮ್ಮ ಹೆಸರನ್ನೇ ಕೊಟ್ಟು ಕಾಪಾಡಿದ, ಅವನ ಏಳ್ಗೆಗೆ ಅಕ್ಷರಶಃ ಕಾರಣರಾದ ಬ್ರಾಹ್ಮಣ ಗುರುಗಳು ಅದೇಕೆ ಯಾರಿಗೂ ನೆನಪೇ ಆಗುವುದಿಲ್ಲವೋ!

ಅಧಿಕಾರಕ್ಕೆ ಬಂದು ಅದಾಗಲೇ ಎರಡು ವರ್ಷವಾಯಿತು, ಮೋದಿ ಸರ್ಕಾರ ಏನು ಮಾಡಿದೆ ಎಂದು ಕೇಳುತ್ತಿರುವವರು, ಛಲ ಬಿಡದ ತ್ರಿವಿಕ್ರಮನಂತೆ ಒಂದೊಂದೇ ಪ್ರಕರಣದ ಬೆನ್ನು ಹತ್ತಿ ನ್ಯಾಯಾಲಯದಲ್ಲಿ ಬಡಿದಾಡುತ್ತಿರುವ ಸ್ವಾಮಿಯವರನ್ನು ನೋಡಿಯೂ ನೋಡದಂತಿರುವವರು ತಮ್ಮನ್ನು ತಾವೇ ಕೇಳಿಕೊಳ್ಳಬೇಕಾದ ಬಹು ಮುಖ್ಯ, ಸಮಯೋಚಿತ ಪ್ರಶ್ನೆ, 'ಈ ಹೊತ್ತು ದೇಶದ ಸಲುವಾಗಿ ನಾವೇನು ಮಾಡುತ್ತಿದ್ದೇವೆ?' ಎಂಬುದು. ಹೆಚ್ಚೇನೂ ಬೇಡ, ಸ್ವಾಮಿಯವರ ಜೊತೆ ಕೈಜೋಡಿಸಿ, ಅವರೊಡನೆ ನಾಲ್ಕು ಹೆಜ್ಜೆಹಾಕಿದರೆ ಆ ಗಂಡೆದೆಯೊಳಗಿರುವ ನಿರ್ಭೀತಿಯಲ್ಲಿ ನಮಗೂ ಪಾಲು ಸಿಗಬಹುದು!