Thursday 26 March 2015

ರಾಜಕಾರಣಿಗಳೇ, ಅಧಿಕಾರಿಗಳೆಂದರೆ ಏಕಿಷ್ಟು ಅಗ್ಗ ನಿಮಗೆ?

'ನೀನು ಹಲ್ಕಾ ಕೆಲಸ ಮಾಡ್ಕೊಂಡ್ರೆ ಮಗನೆ, ಸಸ್ಪೆಂಡ್ ಆಗೋದಲ್ಲ, ಜೀವನ ಪೂರ್ತಿ ಊಟ ಸಿಗದಂಗೆ ಮಾಡಿಬಿಡ್ತೀನಿ ಹುಷಾರ್. ನಿಂದು ಗಾಂಚಲಿ ಜಾಸ್ತಿ ಆಗೋಯ್ತು'. ಆಹಾ! ಎಂಥ ಮುತ್ತಿನಂಥ ಮಾತುಗಳು ಇವು! ನಮ್ಮ ಶಾಲಾ ಪರೀಕ್ಷೆಗಳಲ್ಲಿ ಸಂದರ್ಭ ಸಹಿತ ವಿವರಿಸಿ ಎಂಬ ಶೀರ್ಷಿಕೆಯಡಿಯಲ್ಲಿ ಈ ಮಾತನ್ನು ಯಾರು ಯಾರಿಗೆ ಹೇಳಿದರು ಎಂಬ ಪ್ರಶ್ನೆ ಇರುತ್ತಿತ್ತಲ್ಲ, ಅದೀಗ ನೆನಪಾಗುತ್ತಿದೆ. ಇಲ್ಲಿ ಬೈಸಿಕೊಂಡ ನತದೃಷ್ಟ ಯಾರೋ ಗೊತ್ತಿಲ್ಲ, ಆದರೆ ಬೈದ ಮಹಾನುಭಾವ ವರ್ತೂರು ಪ್ರಕಾಶ್ ಎಂಬ ಶಾಸಕ! ಈ ಮಾತುಗಳಿರುವ ಆಡಿಯೋ ಬಹುತೇಕರ ಮೊಬೈಲ್‍ಗಳಲ್ಲಿ ಕೆಲದಿನಗಳಿಂದ ಹರಿದಾಡುತ್ತಿದೆ. ಇದರ ಮುದ್ರಿತ ರೂಪವೂ ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆತ ತನ್ನ ಎಲುಬಿಲ್ಲದ ನಾಲಗೆಯನ್ನು ತನ್ನದೇ ಕೈಕೆಳಗಿನ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಹರಿಬಿಟ್ಟಿರುವ ರೀತಿ ಇದು! ಕೇಳಿದೊಡನೆ ಎಂಥಾ ಜಿಗುಪ್ಸೆ ಹುಟ್ಟುತ್ತದಲ್ಲವೆ? ಹಾಗಂತ ಇದು ಆತನಿಗೆ ಮಾತ್ರ ಸೀಮಿತ ಎಂದುಕೊಳ್ಳಬೇಡಿ. ಇನ್ನೊಂದಷ್ಟು ನಮೂನೆಗಳು ಇಲ್ಲಿವೆ ನೋಡಿ.




‘ಬಕ್‍ವಾಸ್ ಕರ್ತೇ ಹೋ? ಚುಪ್ ಬೈಠಿಯೇ ಆಪ್, ಬದ್‍ತಮೀಜ್ ಕಹೀಂ ಕಾ’ ಎಂದು ಸಮಾಜವಾದಿ ಪಕ್ಷದ ಸಚಿವ ಆಜಂ ಖಾನ್ ತುಂಬಿದ ಸಭೆಯಲ್ಲಿ, ಪತ್ರಕರ್ತರೆಲ್ಲರ ಎದುರೇ ತನ್ನ ಕೈಕೆಳಗಿನ ಐಎಎಸ್ ಅಧಿಕಾರಿಯ ಮೇಲೆ ಅಬ್ಬರಿಸಿದ್ದ. ತಾನು ಉತ್ತರಪ್ರದೇಶದ ನಗರಾಭಿವೃದ್ಧಿ ಸಚಿವನೆಂಬ ದರ್ಪ ಆತನ ಕೈಲಿ ಆ ಮಾತುಗಳನ್ನಾಡಿಸಿತ್ತು. ಹಿಂದಿಯಲ್ಲಿ ಬೈದ ಆ ಮಾತುಗಳ ಭಾವಾರ್ಥ, 'ತಲೆಹರಟೆ ಮಾತಾಡುತ್ತೀಯಾ? ತೆಪ್ಪಗಿರು, ಶಿಸ್ತಿಲ್ಲದ ಮನುಷ್ಯ ನೀನು' ಎಂಬುದು. ಆ ಐಎಎಸ್ ಅಧಿಕಾರಿ ಪ್ರತ್ಯುತ್ತರ ನೀಡುವುದು ಹಾಗಿರಲಿ, ತಗ್ಗಿಸಿದ ತಲೆಯನ್ನೂ ಮೇಲೆತ್ತಲಿಲ್ಲ. ಅಂದಹಾಗೆ, ಪಾಪ ಅವರ ತಪ್ಪೇನೂ ಇರಲಿಲ್ಲ. ಅವರ ಇಬ್ಬರು ಸಹೋದ್ಯೋಗಿಗಳು ಅಂದು ಆಜಂ ಖಾನ್ ಕರೆದಿದ್ದ ಸಭೆಯನ್ನು ಬಿಟ್ಟು ಮತ್ತ್ಯಾವುದೋ ಸಭೆಗೆ ಹೋಗಿದ್ದರು. ಅದನ್ನು ಹೇಳಹೋದ ಆ ಅಧಿಕಾರಿ ಆಜಂ ಖಾನ್‍ ಕೈಲಿ ಶಿಸ್ತಿನ ಪಾಠವನ್ನು ಸಾರ್ವಜನಿಕವಾಗಿ ಹೇಳಿಸಿಕೊಳ್ಳಬೇಕಾಯಿತು. ಜೊತೆಗೆ, 'ನಾನು ಶಿಸ್ತಿನ ಮನುಷ್ಯ. ನನ್ನ ಕೈಕೆಳಗಿನ ಅಧಿಕಾರಿಗಳಷ್ಟೇ ಯಾಕೆ, ನಾನೇ ಶಿಸ್ತನ್ನು ಮೀರಿದರೆ ಸ್ವತಃ ನನ್ನನ್ನೂ ದಂಡಿಸಿಕೊಳ್ಳದೆ ಬಿಡುವುದಿಲ್ಲ' ಎಂದು ತನ್ನ ಕೊಳಕು ಮಾತುಗಳನ್ನು ಮಾಧ್ಯಮಗಳೆದುರು ಸಮರ್ಥಿಸಿಕೊಂಡಿದ್ದ! ಆತನ ಶಿಸ್ತು, 'ಕಾರ್ಗಿಲ್ ಯುದ್ಧವನ್ನು ಗೆದ್ದವರು ಹಿಂದೂಗಳಲ್ಲ, ಮುಸ್ಲಿಂ ಸೈನಿಕರು' ಎಂಬ ಹೇಳಿಕೆ ನೀಡಿ ಯೋಧರ ಒಗ್ಗಟ್ಟನ್ನು ಮುರಿಯುವ ಮಟ್ಟದ್ದು. ಅದೂ ಹೋಗಲಿ, ಕಳೆದು ಹೋದ ತನ್ನ ಏಳು ಎಮ್ಮೆಗಳನ್ನು ಹುಡುಕಿಸಿಕೊಳ್ಳಲು ಉತ್ತರಪ್ರದೇಶದ ಪೋಲೀಸರನ್ನು ಹಾಗೂ ಪೋಲೀಸು ನಾಯಿಗಳನ್ನು ಬೀದಿ ಬೀದಿ ಅಲೆಸಿದನಲ್ಲ, ಆಗ ಇಡೀ ದೇಶವೇ ಆ ಭೂಪನನ್ನು ನೋಡಿ ನಕ್ಕಿತ್ತು. ಎಲ್ಲಿಗೆ ಬಂತಪ್ಪಾ ಅಧಿಕಾರದ ದುರುಪಯೋಗ ಎಂದು ವಿಷಾದ ಪಟ್ಟಿತ್ತು! ಅಂಥವನಿಂದ ಐಎಎಸ್ ಅಧಿಕಾರಿಗೆ ಶಿಸ್ತಿನ ಉಪದೇಶ!



ಕಾನ್ಪುರದ ಸಮಾಜವಾದಿ ಪಕ್ಷದ ಪುಢಾರಿ ಇರ್ಫಾನ್ ಸೋಲಂಕಿಯದ್ದು ಮತ್ತೊಂದು ಕಥೆ. 20 ಜನರ ದಂಡು ಕಟ್ಟಿಕೊಂಡು, ಕಾನ್ಪುರದ ವಿದ್ಯುಚ್ಛಕ್ತಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದ ರಿತು ಮಹೇಶ್ವರಿ ಎಂಬ ಮಹಿಳಾ ಐಎಎಸ್ ಅಧಿಕಾರಿಯ ಕಚೇರಿಗೆ ನುಗ್ಗಿದ್ದ. ಆಕೆಯನ್ನು ಅವಾಚ್ಯವಾಗಿ ನಿಂದಿಸಿ ಅಸಭ್ಯವಾಗಿಯೂ ವರ್ತಿಸಿದ್ದ.

ಮತ್ತೊಂದು ಪ್ರಕರಣದಲ್ಲಿ ಉತ್ತರಪ್ರದೇಶದ ಐಪಿಎಸ್ ಅಧಿಕಾರಿ ಉದಯ್ ಶಂಕರ್ ಜೈಸ್ವಾಲ್, ಕೃಷಿ ಸಚಿವ ಆನಂದ್ ಸಿಂಗ್‍ರ ಪದತಲದಲ್ಲಿ ಚಕ್ಕಳಮಟ್ಟೆ ಹಾಕಿಕೊಂಡು ಕುಳಿತಿದ್ದ ಚಿತ್ರ ಮಾಧ್ಯಮಗಳಲ್ಲೆಲ್ಲ ಪ್ರಸಾರವಾಗಿತ್ತು. ಆ ಅಧಿಕಾರಿ ಅಚ್ಚುಕಟ್ಟಾಗಿ ನೆಲದ ಮೇಲೆ ಕುಳಿತು, ತಮ್ಮ ಕಚೇರಿಗೆ ಸಂಬಂಧಿಸಿದ ಕಾಗದ-ಪತ್ರಗಳನ್ನು ಹರವಿಕೊಂಡು ಫೋನಿನಲ್ಲಿ ಸಂಭಾಷಿಸುತ್ತಿದ್ದರೆ, ಸಚಿವ ಮಹಾಶಯರು ಮೇಲೆ ವಿರಾಜಮಾನರಾಗಿದ್ದರು!

ಇವು ಬೆಳಕಿಗೆ ಬಂದಿರುವ ಕೆಲವು ಉದಾಹರಣೆಗಳಾದರೆ ತೆರೆಮರೆಯಲ್ಲಿ ನಿತ್ಯ ನಡೆಯುವ ಹೀಯಾಳಿಕೆ, ಬೈಗುಳ, ಅಪಮಾನಗಳೆಷ್ಟಿರಬಹುದೋ ಊಹಿಸಿ! ಅಧಿಕಾರಿಗಳನ್ನು ಘಂಟೆಗಟ್ಟಳೆ ತಮ್ಮ ಕಚೇರಿಯ ಹೊರಗೆ ನಿಲ್ಲಿಸಿ ಕಾಯಿಸುವ, ಅವರಿಂದ ತಮ್ಮ ಖಾಸಗಿ ಕೆಲಸಗಳನ್ನು ಮಾಡಿಸಿಕೊಳ್ಳುವ, ಅವರು ತಮ್ಮ ಸ್ವಾಭಿಮಾನವನ್ನು ಬಲಿಕೊಟ್ಟು ಅವುಡುಗಚ್ಚಿ ಎಲ್ಲವನ್ನೂ ಸಹಿಸುವಂತೆ ಮಾಡುವ, ಸೆಟೆದು ನಿಲ್ಲುವವರನ್ನು ಮನಬಂದಂತೆ ಎತ್ತಂಗಡಿ ಅಥವಾ ಅಮಾನತು ಮಾಡುವ ನೂರಾರು ಘಟನೆಗಳ ಹಿಂದೆ ರಾಜಕಾರಣಿಗಳ ಕೈವಾಡವೇ ಅಲ್ಲವೇ ಇರುವುದು? ಪ್ರಾಮಾಣಿಕ ಅಧಿಕಾರಿಗಳ ಮೇಲೆ ನಡೆಯುವ ಹಲ್ಲೆ, ದಾಳಿಗಳಿಗೆ, ಬೆಲೆಯೇ ಇಲ್ಲದಂತೆ ನಿಗೂಢವಾಗಿ ಮುರುಟಿ ಹೋಗುವ ಅವರ ಜೀವಗಳಿಗೆ ಹೊಣೆಯೂ ರಾಜಕಾರಣಿಗಳೇ ತಾನೆ?

ಕಾರ್ಪೋರೇಟ್ ಪ್ರಪಂಚದ ಒಂದೇ ಒಂದು ಉದಾಹರಣೆ ತೆಗೆದುಕೊಳ್ಳಿ. ಪ್ರತಿ ಕಂಪೆನಿಯಲ್ಲೂ ಮಾನವ ಸಂಪನ್ಮೂಲ ವಿಭಾಗವೆಂಬುದೊಂದಿರುತ್ತದೆ. ಕೆಲಸ ಮಾಡದ ಶುದ್ಧಾತಿಶುದ್ಧ ಮುಟ್ಠಾಳನನ್ನೂ ‘ನೀನು ಅಯೋಗ್ಯ’ ಎಂದು ನೇರವಾಗಿ ಬಯ್ಯುವಂತಿಲ್ಲ. ನಿನ್ನ ಕೆಲಸದ ಗುಣಮಟ್ಟ ನಮ್ಮ ನಿರೀಕ್ಷೆಯಷ್ಟಿಲ್ಲ ಎಂಬ ಬೆಣ್ಣೆ ಸವರಿದ ಪ್ರೀತಿಯ ಮಾತುಗಳನ್ನಾಡೇ ಅವನನ್ನು ಸಾಗಹಾಕಬೇಕು. ಆ ಮಗನೆ ಈ ಮಗನೆ ಎಂದು ಏಕವಚನದಲ್ಲಿ ಬೈಯ್ಯುವುದು ಹಾಗಿರಲಿ, ನಮ್ಮ ಮಾತಿನ ಧಾಟಿ ತುಸು ಕಟುವಾಗಿದ್ದು ಅವನ ಮನಸ್ಸಿಗೆ ನೋವಾಗಿಬಿಟ್ಟರೆ ಮಾನವ ಸಂಪನ್ಮೂಲ ವಿಭಾಗದವರು ನಮ್ಮ ಜನ್ಮ ಜಾಲಾಡಿಬಿಡುತ್ತಾರೆ. ಕೆಲಸ ಬರುವುದಿಲ್ಲವೆಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬನ ಮಾನಸಿಕ ಸ್ಥೈರ್ಯವನ್ನು ತುಳಿದುಹಾಕುವ ಯಾವ ಹಕ್ಕೂ ನಮಗಿರುವುದಿಲ್ಲ ಎಂಬುದು ಖಂಡಿತ ಒಪ್ಪಬೇಕಾದ್ದೇ. ಇಂಜಿನಿಯರುಗಳಿಗೆ ಇರುವ ಪರಿಗಣನೆ ಅಧಿಕಾರಿಗಳಿಗೇಕಿಲ್ಲ? ಅವರೂ ಮನುಷ್ಯರೇ ತಾನೆ?

ಏಕೆ ರಾಜಕಾರಣಿಗಳೇ ಈ ಧೋರಣೆ? ನಿಮಗೆ ಅಷ್ಟೊಂದು ಅಗ್ಗವಾ ನಮ್ಮ ಅಧಿಕಾರಿಗಳೆಂದರೆ, ಅದರಲ್ಲೂ ಐಎಎಸ್ ಅಧಿಕಾರಿಗಳೆಂದರೆ? ಅಥವಾ ಐಎಎಸ್ ಅಧಿಕಾರಿಯಾಗುವುದು ರಾಜಕಾರಣಿಯಾದಷ್ಟೇ ಸಲೀಸು ಎಂದುಕೊಂಡುಬಿಟ್ಟಿದ್ದೀರೋ ಹೇಗೆ? ಇಲ್ಲಿ ಕೇಳಿ, ನೀವು ಸ್ಲೇಟು-ಬಳಪ ಕೈಯ್ಯಲ್ಲಿ ಹಿಡಿಯದೇ ಇದ್ದರೂ, ನಿಮ್ಮ ನಾಲಗೆಯಿಂದ ನಾಲ್ಕು ಪದಗಳು ಸರಿಯಾಗಿ ಉದುರದೇ ಇದ್ದರೂ ನೀವು ರಾಜಕಾರಣಿಗಳಾಗಬಹುದು! ನಿಮ್ಮ ಯೋಗ್ಯತೆಯನ್ನಳೆಯುವ ಒಂದೇ ಒಂದು ಸರಳ ಸ್ಪರ್ಧೆ, ಪರೀಕ್ಷೆ,? ಉಹೂಂ. ಇಲ್ಲವೇ ಇಲ್ಲ. ನಿಮಗೆ ಯಾವ ವಿದ್ಯಾರ್ಹತೆಯೂ ಬೇಕಿಲ್ಲ, ವ್ಯಕ್ತಿತ್ವ ಹೀಗೇ ಇರಬೇಕೆಂಬ ಯಾವ ಮಾನದಂಡವೂ ಇಲ್ಲ.  ನಿಮ್ಮ ಭಾಷೆ, ಮ್ಯಾನರಿಸಂ, ವ್ಯವಹರಿಸುವ ರೀತಿಯ ಬಗ್ಗೆ ಕಟ್ಟುಪಾಡುಗಳಿಲ್ಲ. ನಮ್ಮನ್ನು ಆಳುವ ನಿಮ್ಮಿಂದ ಒಟ್ಟಾರೆ ನಮಗಿರುವುದು ಶೂನ್ಯ ನಿರೀಕ್ಷೆಗಳು! ಜಾತಿ, ಹಣ, ಹೆಸರು ಅಥವಾ ತೋಳ್ಬಲಗಳ ಬೆಂಬಲವಿದ್ದರೆ ನೀವು ಬೇಕೆಂದಾಗ ರಾಜಕಾರಣಿಗಳಾಗಬಹುದು! ಗ್ರಹಚಾರವೊಂದು ಸರಿಯಾಗಿರಬೇಕು ಅಷ್ಟೆ. ಅದನ್ನೂ ಹುಟ್ಟುತ್ತಲೇ ಹಣೆಯ ಮೇಲೆ ಬ್ರಹ್ಮನ ಕೈಲೇ ಬರೆಸಿಕೊಂಡು ಬಂದುಬಿಡುವುದರಿಂದ ಅದರಲ್ಲೂ ಶ್ರಮ ಹಾಕುವ ಪ್ರಮೇಯವಿಲ್ಲ! ರಾಜಕಾರಣಿಗಳೆಂಬ ಪಟ್ಟ ಸಿಕ್ಕಿ, ಕೈಗೊಂದು ಪದವಿಯೂ ದಕ್ಕಿಬಿಟ್ಟರಂತೂ ನೀವು ಆಡಿದ್ದೇ ಆಟ! ಅಧಿಕಾರಿಗಳೆಲ್ಲ ನಿಮ್ಮ ಸೇವಕರು ಎಂಬ ಭ್ರಾಂತಿಗೆ ಬೀಳುತ್ತೀರಲ್ಲ, ಜನರ ಸೇವಕರಂತೆ ಕೆಲಸ ಮಾಡಬೇಕಾದವರು ನೀವು ಎಂಬುದನ್ನು ಏಕೆ ಮರೆಯುತ್ತೀರ? ಬದುಕಿರುವಾಗಲಂತೂ ಸರಿಯೇ ಸರಿ, ಸತ್ತ ಮೇಲೂ ಅಧಿಕಾರಿಗಳನ್ನು 'ಅವನು', 'ಇವನು' ಎಂದು ಏಕವಚನದಲ್ಲಿ ಕರೆಯುತ್ತೀರಲ್ಲ, ಅವರ ಪ್ರತಿಭೆಗೆ, ವಿದ್ಯಾರ್ಹತೆಗೆ, ಕಡೇಪಕ್ಷ ಜೀವಕ್ಕೊಂದು ಬೆಲೆಯಾದರೂ ಬೇಡವೆ?

ನಿಮ್ಮ ಕೈಕೆಳಗೆ ದುಡಿಯುವ ಒಬ್ಬೊಬ್ಬ ಐಎಎಸ್ ಅಧಿಕಾರಿಯೂ ಅದೆಷ್ಟು ಕಷ್ಟಪಟ್ಟು ಆ ಮಟ್ಟಕ್ಕೇರಿರುತ್ತಾನೆ ಗೊತ್ತಾ? ಪ್ರತಿ ವರ್ಷ ಲಕ್ಷಾಂತರ ಯುವಕ-ಯುವತಿಯರು ಐಎಎಸ್ ಪಾಸು ಮಾಡುವ ಕನಸು ಕಾಣುತ್ತಾರೆ. ಕನಸೆಂದರೆ ಎಮ್ಮೆ ಅಥವಾ ಹಸುಗಳನ್ನು ಮೇಯಿಸಿಕೊಂಡು ಕಾಣುವ ಹಗಲುಗನಸಲ್ಲ. ಹಟಕ್ಕೆ ಬಿದ್ದು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತಾಸುಗಟ್ಟಳೆ ಓದಿ, ವರ್ಷಗಟ್ಟಳೆ ಹಾಕುವ ಸತತ ಶ್ರಮ ಅದು. ಮೊದಲು ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು. ಆ ಪರೀಕ್ಷೆಯೇ ಕಠಿಣ. ತಲಾ 200 ಅಂಕಗಳ ಎರಡು ಪೇಪರ್. ಇತಿಹಾಸ, ವಿಜ್ಞಾನ, ಪ್ರಚಲಿತ ವಿದ್ಯಮಾನ, ಭೂಗೋಳ, ಸಂವಹನ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ನೈಪುಣ್ಯ, ಹೀಗೆ ಹಲವಾರು ವಿಷಯಗಳ ಕುರಿತು ತಯಾರಿ ನಡೆಸಬೇಕು. ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ಗುರುತಿಸಬೇಕು. ತಪ್ಪು ಉತ್ತರಗಳಿಗೆ ಅಂಕಗಳನ್ನು ಕಳೆದುಕೊಳ್ಳಬೇಕು. ಒಟ್ಟಿನಲ್ಲಿ ಆ ಹಂತ ದಾಟಿದ ಮೇಲೆ ಮುಖ್ಯ ಪರೀಕ್ಷೆ! ಒಂಭತ್ತು ಪೇಪರ್‍ಗಳಿರುವ ಮುಖ್ಯ ಪರೀಕ್ಷೆಯ ಒಟ್ಟು ಅಂಕಗಳು 1750! ಪ್ರಬಂಧ, ಸಾಮಾನ್ಯ ವಿಷಯಗಳು, ಐಚ್ಛಿಕ ವಿಷಯಗಳೆಲ್ಲವೂ ಅದರಲ್ಲಿರುತ್ತವೆ. ಆಡಳಿತ, ಸಂವಿಧಾನ, ವಿದೇಶಾಂಗ ವ್ಯವಹಾರ, ತಂತ್ರಜ್ಞಾನಗಳಿಂದ ಹಿಡಿದು ನೈತಿಕತೆ, ಸಮಗ್ರತೆಯವರೆಗಿನ ಎಲ್ಲ ಪಾಠಗಳನ್ನೂ ಓದಬೇಕು. ಇದರ ಜೊತೆಗೆ 275 ಅಂಕಗಳ ಮೌಖಿಕ ಪರೀಕ್ಷೆ ಬೇರೆ. ಒಟ್ಟಿನಲ್ಲಿ ಐಎಎಸ್ ಪರೀಕ್ಷೆಗೆ ಕೂರುವ ಅಭ್ಯರ್ಥಿಗಳು ಭಾರತ ಮಾತ್ರವಲ್ಲ, ಇಡೀ ವಿಶ್ವದ ಆಗುಹೋಗುಗಳ ಬಗ್ಗೆ ತಿಳಿದುಕೊಂಡಿರಬೇಕು. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವವರಂತೂ ಎಲ್ಲ ವಿಷಯಗಳಲ್ಲೂ ಎತ್ತಿದ ಕೈ ಎನ್ನುವಷ್ಟು ಜ್ಞಾನವನ್ನು ಸಂಪಾದಿಸಿಕೊಂಡವರೇ. ಇನ್ನೊಂದು ವಿಷಯ ಗೊತ್ತಾ? ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಅತ್ಯುನ್ನತವಾದದ್ದು ಐಎಎಸ್ ಹಾಗೂ ಐಎಫ್‍ಎಸ್. ಒಮ್ಮೆ ಓರ್ವ ಅಭ್ಯರ್ಥಿ ಐಎಎಸ್ ಅಥವಾ ಐಎಫ್‍ಎಸ್ ಅಧಿಕಾರಿಯಾಗಿ ನಿಯುಕ್ತನಾದರೆ ಅವನು ಮತ್ತೊಮ್ಮೆ ನಾಗರಿಕ ಸೇವಾ ಪರೀಕ್ಷೆಗೆ ಕೂರುವ ಹಾಗಿಲ್ಲ! ಏಕೆಂದರೆ ಐಎಎಸ್‍ ಅಥವಾ ಐಎಫ್‍ಎಸ್‍ಗೆ ಸೇರಲು ಬೇಕಾಗುವಷ್ಟು ಅಂಕಗಳನ್ನು ಗಳಿಸಬಲ್ಲವರು ಗರಿಷ್ಠ ಮಟ್ಟವನ್ನು ಮುಟ್ಟಿದಂತೆ! ಹಾಗಾದರೆ ಅಭ್ಯರ್ಥಿಗಳು ಅದಿನ್ಯಾವ ಮಟ್ಟದ ತಯಾರಿ ನಡೆಸಬೇಕು ಹೇಳಿ? ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವುದಕ್ಕೆ ಅದೆಷ್ಟು ತರಬೇತಿ, ಏಕಾಗ್ರತೆ, ಪರಿಶ್ರಮಗಳು ಬೇಕು?

ಇಷ್ಟು ಬುದ್ಧಿವಂತರನ್ನ, ಪ್ರತಿಭಾವಂತರನ್ನ ನಿಮ್ಮ ಜೋಳಿಗೆಗೆ ಹಾಕುತ್ತಾರಲ್ಲ, ನೀವು ಅವರನ್ನು ನಡೆಸುಕೊಳ್ಳುವ ರೀತಿ ಸರಿಯಾ? ಅಸಲಿಗೆ ಯಾರು ಯಾರ ಕೈಕೆಳಗಿರಬೇಕು? ನಿಮಗೆ ಅಧಿಕಾರವಿದೆ ಮತ್ತು ನಿಮ್ಮಲ್ಲೂ ಬೆರಳೆಣಿಕೆಯಷ್ಟು ಮಂದಿ ಸಭ್ಯರು, ಬುದ್ಧಿವಂತರಿದ್ದಾರೆ ಎಂಬ ಅಂಶಗಳನ್ನು ಬಿಟ್ಟರೆ ನಿಮಗೂ ಅವರಿಗೂ ಯಾವುದರಲ್ಲಿ ಹೋಲಿಕೆ? ಇಷ್ಟು ಕ್ಷಮತೆಯುಳ್ಳವರು ನಿಮ್ಮ ರಾಜಕೀಯ ಪಗಡೆಯಾಟದ ಕಾಯಿಗಳೇಕಾಗಬೇಕು? ನೀವು ನಡೆಸಿದಂತೆ ನಡೆದರೆ ಸರಿ, ಇಲ್ಲವೆಂದರೆ ಅವರೇಕೆ ಬಲಿಯಾಗಬೇಕು? ಸ್ವಲ್ಪ ಯೋಚಿಸಿ ನೋಡಿ. ನಮ್ಮ ಯುವಕರು ಇಂಜಿನಿಯರ್, ಡಾಕ್ಟರ್ ಹಾಗೂ ಐಎಎಸ್ ಅಧಿಕಾರಿಗಳಾಗ ಬಯಸುತ್ತಾರೆ. ರಾಜಕಾರಣಿಯಾಗ ಬಯಸುವವರ ಪ್ರಮಾಣ ಎಷ್ಟಿದೆ ಹೇಳಿ? ಇದನ್ನೊಂದು ಔದ್ಯೋಗಿಕ ಕ್ಷೇತ್ರ ಎಂದು ಪರಿಗಣಿಸಲು ಬೇಕಾದ ಘನತೆಯನ್ನೇನಾದರೂ ಉಳಿಸಿದ್ದೀರಾ? ಯಾವುದರಲ್ಲಾದರೂ ಮಾದರಿಯಾಗಿ ಯುವಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದೀರಾ? ಬದಲಿಗೆ, ಅಧಿಕಾರಿಗಳನ್ನು ಇಷ್ಟು ಹೀನಮಟ್ಟದಲ್ಲಿ ಕಂಡು ನಮ್ಮ ಕಣ್ಣುಗಳಲ್ಲಿ ಇನ್ನೂ ಕುಸಿದಿದ್ದೀರ. ಡಿ.ಕೆ ರವಿಯವರ ನಿಗೂಢ ಸಾವಿನಿಂದಾಗಿ ಇಡೀ ರಾಜ್ಯವೇ ಒಗ್ಗಟ್ಟಾಗಿ ಬೀದಿಗಿಳಿದದ್ದು ನೋಡಿದರೆ ನಿಮ್ಮ ವರ್ತನೆಯಿಂದ ನಾವೆಷ್ಟು ರೋಸಿಹೋಗಿದ್ದೇವೆ ಎಂಬುದು ಅರ್ಥವಾಗುವುದಿಲ್ಲವೇ?

ಇರುವ ಯಂಕ, ನಾಣಿ, ಸೀನರಲ್ಲಿ ಒಬ್ಬರನ್ನು ಕಣ್ಮುಚ್ಚಿ ಆರಿಸಿ ಕಳಿಸುವ ನಮ್ಮ ತಪ್ಪೂ ಇದರಲ್ಲಿದೆ ಬಿಡಿ. ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ನಾವು ಸರಿಯಾಗಿ ನಿಭಾಯಿಸಿದರೆ ಇಂಥವಕ್ಕೆ ಆಸ್ಪದವೇ ಇರುವುದಿಲ್ಲ. ಇಂದು ಒಬ್ಬ ಅಧಿಕಾರಿಗಾಗಿ ಜನ ಬೀದಿಗಿಳಿದಿದ್ದಾರೆ. ಇದೇ ಜನ ನಾಳೆ ಈ ವ್ಯವಸ್ಥೆ ಬದಲಾಗಬೇಕೆಂಬ ಹಟಕ್ಕಿಳಿದರೆ ಆಶ್ಚರ್ಯವೇನಿಲ್ಲ.

ಈ ಕ್ಷಣಕ್ಕೆ ನಮಗೆ ತೋಚುತ್ತಿರುವ ಒಂದು ಪರಿಹಾರವೇನು ಗೊತ್ತಾ? ನಿಮಗೂ  ಅರ್ಹತಾ ಪರೀಕ್ಷೆಗಳನ್ನಿಡಬೇಕು. ಅದರಲ್ಲಿ ಉತ್ತೀರ್ಣರಾದವರಿಗೆ ಮಾತ್ರ ರಾಜಕಾರಣಿ ಎಂಬ ಹಣೆಪಟ್ಟಿ ಅಂಟಿಸಬೇಕು. ನಮ್ಮ ಹಾಗೆ ಅಂಕಗಳಿಗೆ, ಉನ್ನತ ಶ್ರೇಣಿಗಳಿಗೆ ನೀವೂ ತಿಣುಕಾಡಬೇಕು. ಆಗಲಾದರೂ ಬುದ್ಧಿವಂತರ, ಪರಿಶ್ರಮಿಗಳ, ದಕ್ಷರ ಹಾಗೂ ಪ್ರಾಮಾಣಿಕರ ಬೆಲೆ ನಿಮಗೆ ತಿಳಿಯಬಹುದು!

ಸಗಣಿಯವರೊಂದಿಗಿನ ಸರಸ ಸಾರ್ಥಕವಾದೀತೇ?

ಮಸಾರತ್ ಆಲಮ್! ಈ ಹೆಸರು ಜಮ್ಮು-ಕಾಶ್ಮೀರದ ಜನರಿಗೆ, ಅದರಲ್ಲೂ ಪ್ರತ್ಯೇಕತಾವಾದಿಗಳಿಗೆ ಚಿರಪರಿಚಿತ. ಆದರೆ ದೇಶದ ಉಳಿದ ಭಾಗದ ಜನಕ್ಕೆ ಅಷ್ಟಾಗಿ ಗೊತ್ತಿರಲಿಲ್ಲ. ಜೈಲಿನಲ್ಲಿದ್ದ ಇವನು ಈಗ ಬಿಡುಗಡೆಯಾಗಿ ರಾತ್ರೋರಾತ್ರಿ ಸುದ್ದಿಯಾಗಿಬಿಟ್ಟಿದ್ದಾನೆ. ಅಂದಹಾಗೆ, ಇವನ ಬಿಡುಗಡೆ ಅಷ್ಟೊಂದು ಸಂಚಲನವನ್ನೇಕೆ ಸೃಷ್ಟಿಸಿತು? ನವ ವಧುವರರಂತೆ ಕೈಹಿಡಿದು ಜೊತೆಯಾಗಿ ನಡೆಯಬೇಕಿದ್ದ ಬಿಜೆಪಿ-ಪಿಡಿಪಿ ಪಕ್ಷಗಳು ಮಧುಚಂದ್ರ ಮುಗಿಯುವ ಮುನ್ನವೇ ಮುನಿದಿರುವುದೇಕೆ? ಏಕೆಂದರೆ ಈ ಭೂಪನ ಬಯೋಡೇಟಾ ಹಾಗಿದೆ!

ಮೊತ್ತಮೊದಲ ಬಾರಿ ಇವನು ಜೈಲಿನ ಮುಖ ಕಂಡಿದ್ದು 1990ರಲ್ಲಿ. ಆಗಿನ್ನೂ ಇವನಿಗೆ 22ರ ಹರೆಯ. ಆಗಿನಿಂದ ಮೊನ್ನೆ ಬಿಡುಗಡೆಯಾಗುವ ತನಕ ಸುಮಾರು 17ವರ್ಷಗಳನ್ನು ಜೈಲಿನಲ್ಲೇ ಕಳೆದಿದ್ದಾನೆ. ಭಾರತ ಸರ್ಕಾರ ಇವನ ವಿರುದ್ಧ ಏನಿಲ್ಲವೆಂದರೂ 27 ಪ್ರಕರಣಗಳನ್ನು ದಾಖಲಿಸಿದೆ! ನಾವು ಕಾಲು ತೊಳೆಯಲು ಬಚ್ಚಲಿಗೆ ಹೋಗಿ ಬಂದಷ್ಟೇ ಸಲೀಸಾಗಿ ಇವನು ಜೈಲಿಗೆ ಹೋಗಿ ಬರುತ್ತಾನೆ. ಹೋಗಲಿ ಅನಕ್ಷರಸ್ಥನಾ, ಅಲ್ಲ. ಕಾಶ್ಮೀರದ ಶ್ರೀಮಂತ ಮಿಷನರಿ ಶಾಲೆಯೊಂದರ ವಿಜ್ಞಾನ ವಿದ್ಯಾರ್ಥಿ. ಸಾಮಾನ್ಯಜ್ಞಾನ ಕಡಿಮೆಯಾಗಿ ಅದ್ಯಾವಾಗ ಪ್ರತ್ಯೇಕವಾದದ ಭೂತ ಇವನ ತಲೆಯೊಳಗೆ ಹೊಕ್ಕಿತೋ, ಹಿಜ್ಬುಲ್ ಉಗ್ರ ಸಂಘಟನೆ ಸೇರಿ ಅದರ ಸಕ್ರಿಯ ಸದಸ್ಯನಾಗಿಬಿಟ್ಟ. ಹೇಗಾದರೂ ಮಾಡಿ ಜಮ್ಮು-ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಬೇಕೆಂಬುದೇ ಇವನ ಧ್ಯೇಯವಾಯಿತು. ಆಗಿನ್ನೂ AK-47ಗಳು ಈಗಿನಂತೆ ಸುಲಭವಾಗಿ ಕೈಗೆಟುಕುತ್ತಿರಲಿಲ್ಲ. ಆದರೇನಂತೆ, ಮನಸ್ಸಿನಲ್ಲಿ ಆವೇಶ ತುಂಬಿಕೊಂಡ ಇವನು ಹಾಗೂ ಇವನಂಥ ನೂರಾರು ಮಂದಿ, ಭಾರತೀಯ ಸೈನಿಕರ ಮೇಲೆ ಕಲ್ಲುಗಳನ್ನು, ಸಣ್ಣ ಬಂಡೆಗಳನ್ನು, ಕೆಲವೊಮ್ಮೆ ನಿಗಿನಿಗಿ ಉರಿಯುವ ಕೆಂಡಗಳನ್ನು ಎಸೆದು ತಮ್ಮ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದರು.



ಇವನ ರೋಷಾಗ್ನಿಗೆ ತುಪ್ಪ ಸುರಿಯುವಂಥ ಪ್ರಸಂಗವೊಂದು 2008ರಲ್ಲಿ ನಡೆಯಿತು. ಆಗ ಜಮ್ಮು-ಕಾಶ್ಮೀರ ಸರ್ಕಾರ ಅಮರನಾಥ ದೇಗುಲಕ್ಕೆ ಭೇಟಿ ನೀಡುವ ಹಿಂದೂ ಯಾತ್ರಿಗಳ ತಾತ್ಕಾಲಿಕ ವಾಸ್ತವ್ಯದ ಸಲುವಾಗಿ ಸುಮಾರು 99 ಎಕರೆಗಳಷ್ಟು ಅರಣ್ಯ ಭೂಮಿಯನ್ನು ಮಂಜೂರು ಮಾಡಿತು. ಪ್ರತ್ಯೇಕತಾವಾದಿಗಳು ಇಂಥ ಸುವರ್ಣಾವಕಾಶವನ್ನು ಬಿಟ್ಟಾರೆಯೇ? ಲಕ್ಷಗಟ್ಟಳೆ ಸಂಖ್ಯೆಯಲ್ಲಿ ಸೇರಿ ಹಿಂಸಾತ್ಮಕವಾಗಿ ಪ್ರತಿಭಟಿಸಿದರು. ಪರಿಣಾಮ, ಹಲವರು ಸತ್ತು ನೂರಾರು ಮಂದಿ ಗಾಯಗೊಂಡರು. ಆ ಪ್ರತಿಭಟನೆಗಳಲ್ಲಿ ಪೂರ್ಣವಾಗಿ ತೊಡಗಿಕೊಂಡ ಮಸಾರತ್ ತನ್ನದೇ ಛಾಪು ಮೂಡಿಸಿದ್ದ. ಆದ್ದರಿಂದಲೇ ಪೋಲೀಸರ ಅತಿಥಿಯಾಗಿ ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ.

2010ರ ಜೂನ್‍ನಲ್ಲಿ ಹೊರಬಂದ ಅವನು ಮುಂದೇನು ಎಂದು ಅತ್ತಿತ್ತ ತಿರುಗಿ ನೋಡುವಷ್ಟರಲ್ಲೇ ಮತ್ತೊಂದು ಅವಘಡವೂ ನಡೆದುಹೋಯಿತು. ಜಮ್ಮು-ಕಾಶ್ಮೀರದ ಕೆಲ ಸೇನಾಧಿಕಾರಿಗಳು ಮೂವರು ಪಾಕ್ ನುಸುಳುಕೋರರನ್ನು ಹತ್ಯೆಗೈದ ಸುದ್ದಿ ಎಲ್ಲೆಡೆ ಹಬ್ಬಿತು. ಆದರೆ ಅದು ನಕಲಿ ಕಾರ್ಯಾಚರಣೆ ಎಂದು ತಿಳಿದು ಬಂದದ್ದೇ ತಡ, ಕಣಿವೆಯ ನಾಡು ಹೊತ್ತಿ ಉರಿಯತೊಡಗಿತು. ತನ್ನ ಪಾಡಿಗೆ ತಾನು ಸ್ಟೇಡಿಯಂ ಒಂದರಲ್ಲಿ ಕ್ರಿಕೆಟ್ ಆಡುತ್ತಿದ್ದ ಅಮಾಯಕ ಯುವಕ ಟುಫೈಲ್ ಮಟ್ಟೂ ಪೋಲೀಸರ ಅಶ್ರುವಾಯು ದಾಳಿಗೆ ಬಲಿಯಾದ ಮೇಲಂತೂ ಪರಿಸ್ಥಿತಿ ಮೇರೆ ಮೀರಿತು. ಹಾಗೇ ಮಸಾರತ್‍ನ ಅಟ್ಟಹಾಸವೂ. ಅವನು ತನ್ನ ನೇತೃತ್ವದಲ್ಲಿ, ಪೋಲೀಸರ ಮೇಲೆ ಕಲ್ಲು ತೂರುವ ಒಂದು ದೊಡ್ಡ ಪಡೆಯನ್ನೇ ತಯಾರು ಮಾಡಿಬಿಟ್ಟ. ತೆರೆಮರೆಯಲ್ಲಿದ್ದೇ ಜನರನ್ನು ಹೇಗೆಲ್ಲ ಪ್ರಚೋದಿಸುತ್ತಿದ್ದ ಗೊತ್ತೇ? ತನ್ನ ದೇಶ ವಿರೋಧಿ ಹೇಳಿಕೆಗಳನ್ನು ಭಿತ್ತಿ ಪತ್ರಗಳಲ್ಲಿ ಮುದ್ರಿಸಿ ಹಂಚುತ್ತಿದ್ದ. ಸಿಡಿಗಳಲ್ಲಿ ತುಂಬಿ ಮಸೀದಿಗಳಿಗೆ ಬಂದವರೆಲ್ಲರಿಗೂ ತಲುಪಿಸುತ್ತಿದ್ದ. ಅಷ್ಟೇ ಅಲ್ಲ, ಇವನೊಳಗಿನ ಕಲಾವಿದನೂ ಜಾಗೃತನಾಗಿಬಿಟ್ಟಿದ್ದ. ಕಂಡ ಕಂಡ ಗೋಡೆಗಳ ಮೇಲೆ, 'ಗೋ ಇಂಡಿಯಾ ಗೋ' ಎಂದು ಬರೆದ. 'ಭಾರತವನ್ನು ಹೊಸಕಿ ಹಾಕಿಬಿಡು' ಎಂಬರ್ಥದ ಹಾಡನ್ನೂ ಬರೆದು ಸಾಹಿತಿಯಾದ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಕ್ಕಳು ರಿಂಗಾ ರಿಂಗಾ ರೋಸೆಸ್ ಆಡುವಾಗ ಒಬ್ಬರು ಮತ್ತೊಬ್ಬರ ಕೈಹಿಡಿದು ವೃತ್ತಾಕಾರದಲ್ಲಿ ನಿಲ್ಲುತ್ತಾರಲ್ಲ, ಹಾಗೆ ಪ್ರತಿಭಟನಾಕಾರರನ್ನು ನಿಲ್ಲಿಸಿ ತನ್ನ ಹಾಡು ಹೇಳಿಸಿ, 'ಹೊಸಕಿ ಹಾಕಿಬಿಡು' ಎಂಬ ಪದ ಬರುವಾಗ ಕಾಲನ್ನು ನೆಲಕ್ಕೆ ಅಪ್ಪಳಿಸುವಂತೆ ಹೇಳಿ ಹೊಸ ಸಮೂಹ ನೃತ್ಯ ಪ್ರಕಾರವನ್ನೇ ಹುಟ್ಟು ಹಾಕಿಬಿಟ್ಟ! ಒಟ್ಟಿನಲ್ಲಿ ಪೋಲೀಸರಿಗೆ ಬೇಕಾದವರಲ್ಲಿ ಅಗ್ರನಾದ ಮಸಾರತ್ ತನ್ನ ತಲೆಯ ಮೇಲೆ ಹಲವು ಲಕ್ಷ ರೂಪಾಯಿಗಳ ಇನಾಮನ್ನೂ ಹೊಂದಿದ್ದ. ಅಂತೂ ಇಂತೂ ಬಲೆ ಬೀಸಿ ಅವನನ್ನು ಹಿಡಿಯುವಷ್ಟರಲ್ಲಿ ಪೋಲೀಸರು ಹೈರಾಣಾಗಿದ್ದರು.

ಇದೀಗ ಮಸಾರತ್ ಹೊರಬಂದಿದ್ದಾನೆ. ಹುರಿಯತ್‍‍ನ ಪ್ರತ್ಯೇಕತಾವಾದಿ ಸಯ್ಯದ್ ಗಿಲಾನಿಯ ಕಟ್ಟಾ ಶಿಷ್ಯನಾಗಿರುವ ಇವನು ಅವನ ನಂತರದ ವಾರಸುದಾರ ಎಂದೇ ಬಿಂಬಿಸಲ್ಪಡುತ್ತಿದ್ದಾನೆ. ಇಷ್ಟು ವರ್ಷ ಜೈಲಿನಲ್ಲಿ ಕೊಳೆತಿದ್ದರಿಂದ ಇವನ ಮನಸ್ಥಿತಿ ಬದಲಾಗಿರಬಹುದು ಎಂದು ಯಾರಾದರೂ ಭ್ರಮಿಸಿದ್ದರೆ ಅವರಿಗೆ ತಕ್ಕ ಉತ್ತರವನ್ನೂ ನೀಡಿದ್ದಾನೆ. 'ಸಣ್ಣ ಜೈಲಿನಿಂದ ದೊಡ್ಡ ಜೈಲಿಗೆ ಬಂದಂತಾಗಿದೆ ಅಷ್ಟೇ. ಕಾಶ್ಮೀರದ ಜನತೆಯ ದುಃಖ-ದುಮ್ಮಾನಗಳನ್ನು ಹಂಚಿಕೊಳ್ಳಬಹುದಲ್ಲ ಎನ್ನುವುದಷ್ಟೇ ನನಗಾಗಿರುವ ಸಂತೋಷ' ಎಂಬುದು ಬಿಡುಗಡೆಯಾದ ನಂತರದ ಇವನ ಉವಾಚ! ಆದ್ದರಿಂದಲೇ ದೇಶದೆಲ್ಲೆಡೆ ಕೋಲಾಹಲವೆದ್ದಿರುವುದು. ಇನ್ನು ಇವನ ಬತ್ತಳಿಕೆಯಿಂದ ಯಾವ್ಯಾವ ಬಾಣಗಳು ಹೊರಬರುತ್ತವೋ ಎಂಬ ಚಿಂತೆ ನಮ್ಮ ಬೇಹುಗಾರಿಕಾ ಪಡೆಯನ್ನು ಆವರಿಸಿಕೊಂಡಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.



ಇವನೇನೋ ತನ್ನ ಪ್ರಕೃತಿಗೆ ತಕ್ಕ ಮಾತುಗಳನ್ನೇ ಆಡಿದ್ದಾನೆ. ಆದರೆ ಅಧಿಕಾರಕ್ಕೇರಿದ ಒಂದೇ ವಾರದಲ್ಲಿ ಮುಫ್ತಿ ಮೊಹಮ್ಮದ್ ಸಯೀದ್ ಆತುರಾತುರವಾಗಿ ಇವನನ್ನು ಬಿಡುಗಡೆ ಮಾಡಿದ್ದೇಕೆ? ಅವರು ಹಿಂದೊಮ್ಮೆ, ಅಂದರೆ 1989ರಲ್ಲಿ ಕೇಂದ್ರದ ಗೃಹಖಾತೆಯ ಸಚಿವರಾಗಿದ್ದಾಗಲೂ ಐವರು ಉಗ್ರರನ್ನು ಬಿಡುಗಡೆ ಮಾಡಿದ್ದರು. ಆಗ ಅವರ ಮಗಳನ್ನು ಉಗ್ರರು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡ ಕಾರಣವಿತ್ತು. ಈಗೇನಿತ್ತು? ಅಭ್ಯಾಸ ಬಲವೇ? ತನಗೆ ಬೆಂಬಲ ನೀಡಿರುವ ಮಿತ್ರ ಪಕ್ಷಕ್ಕೆ ಒಂದು ಮಾತೂ ಹೇಳದೆ ಅದರ ಒಪ್ಪಿಗೆಯಿಲ್ಲದೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ತಪ್ಪು ಎಂಬ ಕನಿಷ್ಠ ಅರಿವೂ ಇರಲಿಲ್ಲವೇ ಅವರಿಗೆ? ಎಲ್ಲಾ ಇತ್ತು. ಒಂದು ಮೂಲದ ಪ್ರಕಾರ, ಮುಫ್ತಿ, ಬಿಡುಗಡೆ ಮಾಡಲು ಇನ್ನೂ ಹದಿನೈದು ಪ್ರತ್ಯೇಕತಾವಾದಿಗಳ ಪಟ್ಟಿಯನ್ನು ಸಿದ್ಧಮಾಡಿಟ್ಟುಕೊಂಡಿದ್ದರಂತೆ. ಅದರಲ್ಲಿದ್ದ ಮುಂದಿನ ಹೆಸರು ಕುಖ್ಯಾತ ಉಗ್ರವಾದಿ 'ಆಶಿಕ್ ಹುಸೇನ್ ಫಕ್ತೂ'ದಂತೆ. ಈಗ ಗೃಹ ಸಚಿವ ರಾಜನಾಥ್‍ಸಿಂಗ್ ಹಾಗೂ ನಮ್ಮ ಬೇಹುಗಾರಿಕಾ ಸಂಸ್ಥೆ ಮುಫ್ತಿಯವರಿಗೆ ಖಡಕ್ಕು ಎಚ್ಚರಿಕೆ ಕೊಟ್ಟಿರುವುದರಿಂದ ಆ ಪಟ್ಟಿಯನ್ನು ಅವರು ಸಧ್ಯಕ್ಕೆ ಕೈ ಬಿಟ್ಟಿದ್ದಾರಂತೆ. ಬಿಜೆಪಿಯನ್ನು ಕೇಳದೆ ಇನ್ಯಾರ ಬಿಡುಗಡೆಯನ್ನೂ ಮಾಡುವುದಿಲ್ಲ ಎಂಬ ವಾಗ್ದಾನವನ್ನೂ ಮಾಡಿದ್ದಾರಂತೆ.

ನಮ್ಮ ಬೇಹುಗಾರಿಕಾ ಸಂಸ್ಥೆ ಹಾಗೆ ಎಚ್ಚರಿಕೆ ಕೊಟ್ಟಿರುವುದಕ್ಕೂ ಕಾರಣವಿದೆ. ಈ ಆಶಿಕ್ ಹುಸೇನ್ ಫಕ್ತೂ ದೇಶದ್ರೋಹಿ ಕೆಲಸಗಳಲ್ಲಿ ಮಸಾರತ್‍ನ ತಾತ! ಜಮಾತೆ-ಉಲ್-ಮುಜಾಹಿದ್ದೀನ್‍ನ ಉನ್ನತ ಕಮಾಂಡರ್ ಆದ ಇವನು ಕಳೆದ 22ವರ್ಷಗಳಿಂದ ಶ್ರೀನಗರದ ಜೈಲಿನಲ್ಲಿ ಕೊಳೆಯುತ್ತಿದ್ದಾನೆ. ಮಾನವ ಹಕ್ಕುಗಳ ಹೋರಾಟಗಾರರಾಗಿದ್ದ ವ್ಯಾಂಚೂ ಎಂಬುವರನ್ನು ಕೊಂದ ಆಪಾದನೆ ಇವನ ಮೇಲಿದೆ. ಇವನೇನಾದರೂ ಅಪ್ಪಿತಪ್ಪಿ ಹೊರಬಂದರೆ ಕಾಶ್ಮೀರದ ಕಣಿವೆಯಲ್ಲಿ ಶಾಂತಿ ಎಂಬುದು ಮರೀಚಿಕೆಯಾಗುವುದು ಖಂಡಿತ. ಉಳಿದವರ ಜಾತಕಗಳೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಆದರೂ ಪಿಡಿಪಿ ಪಕ್ಷ ಕದ್ದುಮುಚ್ಚಿ ಇವರನ್ನೆಲ್ಲ ಬಿಡುಗಡೆ ಮಾಡಲು ಹೊರಟಿತ್ತು!

ಇಲ್ಲಿಯತನಕ ಜಮ್ಮು-ಕಾಶ್ಮೀರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಹುತೇಕ ಎಲ್ಲ ಸರ್ಕಾರಗಳ ಹಣೆಬರಹವೂ ಇಷ್ಟೇ. ಅಂಜಿಕೆಗೋ, ಮತಬ್ಯಾಂಕ್‍ನ ಮುಲಾಜಿಗೋ ಒಟ್ಟಿನಲ್ಲಿ ಅವುಗಳ ಒಂದು ಕೈ ಪ್ರತ್ಯೇಕತಾವಾದಿಗಳ ಹೆಗಲ ಮೇಲೆ ಇದ್ದೇ ಇರುತ್ತದೆ. ಅಧಿಕಾರಕ್ಕೇರಿದ ಒಂದೇ ಘಂಟೆಯೊಳಗೆ ಮುಫ್ತಿ ಚುನಾವಣೆಯ ಯಶಸ್ಸಿನ ಸಮಸ್ತ ಶ್ರೇಯಸ್ಸನ್ನೂ ಹುರಿಯತ್ ಹಾಗೂ ಪಾಕಿಸ್ತಾನಗಳಿಗೆ ಧಾರೆಯೆರೆದು ಕೊಟ್ಟುಬಿಟ್ಟರು. ಜೀವವನ್ನು ಕೈಯಲ್ಲಿಟ್ಟುಕೊಂಡು ಕಾದ ಭಾರತೀಯ ಸೇನೆ, ಅಚ್ಚುಕಟ್ಟಾಗಿ ಆಯೋಜಿಸಿದ ಚುನಾವಣಾ ಆಯೋಗ ಹಾಗೂ ನೆರವನ್ನಿತ್ತ ಕೇಂದ್ರ ಸರ್ಕಾರ ಯಾವುದೂ ಅವರ ಕಣ್ಣಿಗೆ ಕಾಣಲಿಲ್ಲ! ಅದರ ನಂತರ ಅವರು ಮಾತನಾಡಿದ್ದು ಅಫ್ಜಲ್ ಗುರುವಿನ ಬಗ್ಗೆ! ಸಂಸತ್ತಿನ ಮೇಲೆ ದಾಳಿ ಮಾಡಿದ್ದ ಅಫ್ಜಲ್‍ಗೆ ಮರಣೋತ್ತರವಾಗಿ ಸಿಗಬೇಕಾದ ನ್ಯಾಯದ ಬಗ್ಗೆ ಮಾತ್ರ ಅವರ ಕನವರಿಕೆ! ಅಷ್ಟು ಬಿಟ್ಟರೆ ಪ್ರತ್ಯೇಕತಾವಾದಿಗಳ ಬಿಡುಗಡೆಯ ಚಿಂತೆ! ಹೌದಲ್ಲ. ಉಳಿದೆಲ್ಲದರ ವ್ಯವಸ್ಥೆ ನಮ್ಮ ತೆರಿಗೆ ಹಣದಿಂದ ಬಿಟ್ಟಿಯಾಗಿ ಆಗುವಾಗ ಅವರೇಕೆ ತಲೆ ಕೆಡಿಸಿಕೊಳ್ಳುತ್ತಾರೆ?

ಉಳಿದ ರಾಜ್ಯಗಳಲ್ಲಿ ನಡೆಸುವಂತೆ ಇಲ್ಲಿ ಸಲೀಸಾಗಿ ಸಮ್ಮಿಶ್ರ ಸರ್ಕಾರ ನಡೆಸುವುದು ಸಾಧ್ಯವಿಲ್ಲ ಎಂಬುದು ಬಿಜೆಪಿಗೂ ಗೊತ್ತಿದೆ. ಆದರೂ ಅದು ಸಗಣಿಯವರೊಂದಿಗೆ ಸರಸಕ್ಕೆ ನಿಂತಿದೆ. ಈಗಾಗಲೇ ಸರಣಿ ಮುಖಭಂಗಗಳನ್ನೂ ಅನುಭವಿಸಿದೆ. ಅದರ ಈ ಅಸಹಜ, ಅನಪೇಕ್ಷಿತ ಮೈತ್ರಿಯ ಹಿಂದೆ ರಾಷ್ಟ್ರೀಯತೆಯ, ಅಭಿವೃದ್ಧಿಯ ಹಲವು ಸದುದ್ದೇಶಗಳಿರಬಹುದು. ಆದರೆ ಈ ಕಣಿವೆ ರಾಜ್ಯದ ತುಂಬೆಲ್ಲ ತುಂಬಿರುವುದು ಓಬೀರಾಯನ ಕಾಲದಿಂದ ಸಿಗುತ್ತಿರುವ ವಿಶೇಷ ಸವಲತ್ತು, ಅನುಚ್ಛೇದ 370 ಎಂದೊಡನೆ ಬೆಚ್ಚಿ ಬೀಳುವ ಪ್ರಾದೇಶಿಕ ರಾಜಕೀಯ ಪಕ್ಷಗಳು, ಅಸಹಾಯಕರಾಗಿ ನೋಡುವ ಕಾಶ್ಮೀರಿ ಪಂಡಿತರು ಹಾಗೂ ನಿದ್ದೆಯಲ್ಲೂ ಪಾಕಿಸ್ತಾನವನ್ನೇ ಕನವರಿಸಿಕೊಳ್ಳುವ ಪ್ರತ್ಯೇಕತಾವಾದಿ ಸಂಘಟನೆಗಳು. ಭಾರತದ ಒಂದು ಅಂಗವೇ ಆಗಬಯಸದ ರಾಜ್ಯದೊಳಗೆ ಭಾರತೀಯತೆಯ ಕಲ್ಪನೆಗಳು ಅಷ್ಟು ಸುಲಭದಲ್ಲಿ ಸಾಕಾರಗೊಳ್ಳುವುದು ಸಾಧ್ಯವೇ? ಹೋಗಲಿ, ಕಾನೂನು ರೀತ್ಯಾ ಏನಾದರೂ ಮಾಡಬೇಕೆಂದರೆ ಇದೊಂಥರಾ 'ಹುಚ್ಚು ಬಿಡದೆ ಮದುವೆಯಾಗುವುದಿಲ್ಲ, ಮದುವೆಯಾಗದೆ ಹುಚ್ಚು ಬಿಡುವುದಿಲ್ಲ' ಎನ್ನುತ್ತಾರಲ್ಲ ಹಾಗೆ. ಸಂವಿಧಾನಕ್ಕೆ ತಿದ್ದುಪಡಿ ತರದೆ ಕಾಶ್ಮೀರಿಗಳ ಮನಸ್ಥಿತಿ ಬದಲಾಗುವುದಿಲ್ಲ, ಅವರ ಮನಸ್ಥಿತಿ ಬದಲಾಗದೆ ಸಂವಿಧಾನಕ್ಕೆ ತಿದ್ದುಪಡಿ ತರುವ ಹಾಗಿಲ್ಲ ಎಂಬಂಥ ಪರಿಸ್ಥಿತಿ.

ಒಟ್ಟಿನಲ್ಲಿ ಈ ಸರಸ ಈಗಿರುವ ವಿರಸಗಳನ್ನು ಕೊನೆಗಾಣಿಸಲಿ ಎಂಬುದೇ ಭಾರತೀಯರೆಲ್ಲರ ಅಪೇಕ್ಷೆ. ಸಾಧ್ಯವಾ ಎಂಬುದನ್ನು ಸಮಯವೇ ಹೇಳಬೇಕು! 

Tuesday 10 March 2015

ಇಂದಿನ ಮಹಿಳೆಗೆ ಮಹಿಳಾವಾದದ ಟೊಳ್ಳು ಸಮರ್ಥನೆ ಬೇಕಿಲ್ಲ!

ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ನೆನೆಯಲಿಕ್ಕೇನೋ ಅಸಂಖ್ಯ ಮಹಿಳಾ ಸಾಧಕಿಯರು ಸಿಗುತ್ತಾರೆ. ಆದರೆ ತಮ್ಮ ಬರಹಗಳಲ್ಲಿ ಮಹಿಳೆಯರನ್ನು ಸದಾ ನೈತಿಕತೆಯ, ಮನಸ್ಸಾಕ್ಷಿಯ ಕುರುಹುಗಳನ್ನಾಗಿ ಬಿಂಬಿಸುತ್ತಲೇ ಬಂದಿರುವ, ಅವರ ಮನಸ್ಥಿತಿಯ ಹಲವು ಆಯಾಮಗಳನ್ನು ಯಥಾವತ್ತಾಗಿ ಚಿತ್ರಿಸಿರುವ ಎಸ್.ಎಲ್ ಭೈರಪ್ಪನವರನ್ನು ಈ ಹೊತ್ತು ನೆನೆಯಲೇಬೇಕೆನಿಸುತ್ತಿದೆ. ಅದರಲ್ಲೂ ಮಹಿಳಾವಾದವೆಂಬ ಮೊರೆತ ಮೇರೆ ಮೀರುತ್ತಿರುವ ಇಂದಿನ ದಿನಗಳಲ್ಲಿ ಈ ನೆನಕೆ ಹೆಚ್ಚು ಪ್ರಸ್ತುತವೂ ಹೌದು.

ಹಲವು ವರ್ಷಗಳ ಹಿಂದಿನ ಘಟನೆ ಇದು. ಆಗಿನ್ನೂ ಭೈರಪ್ಪನವರ ವಂಶವೃಕ್ಷವನ್ನು ಓದಿರಲಿಲ್ಲ. ನಮ್ಮ ನೆರೆಮನೆಯಲ್ಲಿ ಪುಟ್ಟ ಹುಡುಗಿಯೊಬ್ಬಳಿದ್ದಳು. ಅಬ್ಬಬ್ಬಾ ಎಂದರೆ ಏಳರ ಪ್ರಾಯ. ಅಸಾಧ್ಯ ಚೂಟಿ. ಮನೆಯಲ್ಲಿದ್ದುದು ಅಪ್ಪ ಹಾಗೂ ಮಗಳಿಬ್ಬರೇ. ತಂದೆ ತಾವು ಬೆಳಿಗ್ಗೆ ಕೆಲಸಕ್ಕೆ ಹೋಗುವ ಹೊತ್ತಿಗೆ ಇಬ್ಬರಿಗೂ ಹೊಟ್ಟೆಗೆ ಏನನ್ನಾದರೂ ಬೇಯಿಸಿ, ಮಗಳನ್ನು ಅಣಿಮಾಡಿ ಅವಳನ್ನು ಹತ್ತಿರದ ಶಾಲೆಗೆ ಬಿಟ್ಟು ಹೋಗುತ್ತಿದ್ದರು. ಶಾಲೆ ಮುಗಿಸಿ ಬರುತ್ತಿದ್ದ ಮಗು ಸಂಬಂಧಿಯೊಬ್ಬರ ಮನೆಯಲ್ಲಿರುತ್ತಿತ್ತು. ತಂದೆ ಕೆಲಸದಿಂದ ಹಿಂದಿರುಗಿ ಬರುವಾಗ ಅವಳನ್ನು ಕರೆತರುತ್ತಿದ್ದರು. ಆ ಮಗುವಿಗಾಗಿ ಅವರು ಪಡುತ್ತಿದ್ದ ಶ್ರಮ, ವಹಿಸುತ್ತಿದ್ದ ಆಸ್ಥೆ ಮತ್ತು ಆ ಮಗು ಅವರಿಗಾಗಿ ಹಂಬಲಿಸುತ್ತಿದ್ದುದನ್ನು ನೋಡುತ್ತಿದ್ದ ನಮಗೆ, ಮಗಳಿಗೆ ಅಪ್ಪ ಹೆಚ್ಚೋ, ಅಪ್ಪನಿಗೆ ಮಗಳೋ ಎಂಬ ಗೊಂದಲ ಉಂಟಾಗುತ್ತಿತ್ತು. ನಂತರ ತಿಳಿದು ಬಂದದ್ದೇನೆಂದರೆ, ಆ ಹುಡುಗಿಯ ತಾಯಿ ಅದಿನ್ನೂ ಚಿಕ್ಕ ಮಗುವಾಗಿದ್ದಾಗಲೇ ಸಂಸಾರವನ್ನು ತೊರೆದು ತಾವು ಪ್ರೀತಿಸಿದವರೊಂದಿಗೆ ಹೊರಟು ಹೋಗಿದ್ದರಂತೆ! ಆಗ ಆ ವಿಷಯ ಅಷ್ಟಾಗಿ ಕಾಡಿರಲಿಲ್ಲ. ಮುಂದೆ ವಂಶವೃಕ್ಷವನ್ನು ಓದಿದಾಗ ಕಾತ್ಯಾಯಿನಿಯ ಜಾಗವನ್ನು ಆ ಮಗುವಿನ ಅಮ್ಮನೇ ಆಕ್ರಮಿಸಿಕೊಂಡಿದ್ದರು. ಕಣ್ಣ ಮುಂದೆ ಆ ಅಪ್ಪ ಮಗಳ ಚಿತ್ರವೇ ಬಂದು ಅವ್ಯಕ್ತವಾದ ವೇದನೆಯಾಗುತ್ತಿತ್ತು. ಕಾತ್ಯಾಯಿನಿಗೇನೋ ಹೌದು ಎನ್ನಬಹುದಾದ ಒಂದು ಕಾರಣವಿತ್ತು. ಈಕೆಗೇನಿತ್ತು ಎಂಬುದು ಆಗ ಅರ್ಥವಾಗಿರಲಿಲ್ಲ. ಈಗ ಅರ್ಥವಾಗುತ್ತಿದೆ. ಇದೊಂದೇ ಅಲ್ಲ, ಇಂಥ ಹಲವು ಅನರ್ಥಗಳಿಗೆ ಎಡೆ ಮಾಡಿಕೊಡುತ್ತಿರುವ ಚಿಂತನೆಗಳು ಹಾಗೂ ಅವು ಹುಟ್ಟಿಸುತ್ತಿರುವ ಹುಸಿ ಸಮರ್ಥನೆಗಳು ಚೆನ್ನಾಗಿಯೇ ಅರ್ಥವಾಗುತ್ತಿದೆ.




ಇಲ್ಲ. ನಾವು ಸ್ವಘೋಷಿತ ಮಹಿಳಾವಾದಿಗಳಲ್ಲ. ವಿಚಾರವಾದಿ ಹೋರಾಟಗಾರ್ತಿಯರೂ ಅಲ್ಲ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಖಂಡ-ತುಂಡವಾಗಿ ಭೈರಪ್ಪನವರ ಬರಹಗಳನ್ನು ಜರಿಯುವ, ಅವರನ್ನು ವಿಕೃತ ಮನಸ್ಸಿನವರು ಎಂದು ಹೇಳುವಷ್ಟು ವಿಪರೀತಿ ಬುದ್ಧಿಯನ್ನು ದೇವರು ನಮಗೆ ದಯಪಾಲಿಸಿಯೂ ಇಲ್ಲ, ಆ ಸೌಭಾಗ್ಯ ನಮಗೆ ಬೇಡವೂ ಬೇಡ. ಆದರೆ ಸಾಮಾನ್ಯ ಮಹಿಳೆಯರಾಗಿ ಆ ಪಾತ್ರಗಳನ್ನು ಮನಸ್ಸಿನಲ್ಲೇ ಜಗಿದು ನುಂಗುವಾಗ, ಅಷ್ಟು ಹೊತ್ತೂ ಆ ಪಾತ್ರಗಳಾಗಿಯೇ ಜೀವಿಸುವಾಗ ನಮ್ಮ ಮನಸ್ಸುಗಳಿಗಿರುವ ನೈತಿಕತೆಯೆಂಬ ಬೇಲಿ ನಮಗರಿವಿಲ್ಲದಂತೆಯೇ ಮತ್ತಷ್ಟು ಬಿಗಿಯಾಗುತ್ತದೆ. ಮನಸ್ಸಾಕ್ಷಿಯನ್ನು ಮೀರಿ ನಡೆಯಬಾರದೆಂಬ ನಾವು ಹಾಕಿಕೊಂಡಿರುವ ನಿಯಮ ಮನಸ್ಸಿನೊಳಗೇ ಮತ್ತಷ್ಟು ಹೆಪ್ಪುಗಟ್ಟುತ್ತದೆ. ಹಾಗಾದರೆ ವಂಶವೃಕ್ಷ, ಅಂಚು, ಕವಲು ಹಾಗೂ ಯಾನಗಳನ್ನೇ ಉದಾಹರಿಸಿ ಸಿಕ್ಕ ಸಿಕ್ಕ ಮೇಜುಗಳನ್ನು ಕುಟ್ಟುವ, ಮೈಕುಗಳಲ್ಲಿ ಗಂಟಲು ಹರಿದುಕೊಳ್ಳುವ ಮಹಿಳಾವಾದಿಗಳಿಗೆ, ಪ್ರಗತಿಪರರಿಗೆ ಹೀಗೇಕನಿಸುವುದಿಲ್ಲ? ಭೈರಪ್ಪನವರದ್ದು ಮಹಿಳೆಯರ ಕುರಿತಾದ ಕ್ರೌರ್ಯ ಮನಸ್ಥಿತಿ ಎಂದೇಕೆ ಬೊಬ್ಬೆ ಹೊಡೆಯುತ್ತಾರೆ? ಮಹಿಳಾವಾದಿಗಳಿಗೆ ಪ್ರಿಯವಾದ ಆ ನಾಲ್ಕೂ ಕಾದಂಬರಿಗಳ ಮಹಿಳಾ ಪಾತ್ರಗಳನ್ನು ಒಮ್ಮೆ ನಮ್ಮ ಹಾಗೂ ಅವರ ದೃಷ್ಟಿಕೋನಗಳಿಂದ ನೋಡಿಯೇಬಿಡೋಣ.

ವಂಶವೃಕ್ಷದ ಪ್ರಮುಖ ಸ್ತ್ರೀ ಪಾತ್ರವಾದ ಕಾತ್ಯಾಯಿನಿ ವಿಧವೆ. ಐದು ವರ್ಷದ ಮಗುವಿನ ತಾಯಿ. ತನ್ನನ್ನೇ ನಂಬಿದ್ದ ವಯೋವೃದ್ಧ ಅತ್ತೆ ಮಾವಂದಿರನ್ನು, ಮನೆಯ ಜವಾಬ್ದಾರಿಗಳೆಲ್ಲವನ್ನೂ, ಕೊನೆಗೆ ತಾನು ಹೆತ್ತ ಮಗನನ್ನೂ ಬಿಟ್ಟು ಓಡಿ ಹೋಗಿ ಬೇರೊಬ್ಬನನ್ನು ಮದುವೆಯಾಗುತ್ತಾಳೆ. ಮಾವ ಶ್ರೀನಿವಾಸ ಶ್ರೋತ್ರಿಯವರು ಬಲವಾಗಿ ನಂಬಿದ್ದ ವಂಶವೃಕ್ಷವನ್ನು ತಾನು ಹೀಗೆ ತೊರೆದು ಹೋಗಿದ್ದು ಕ್ರಮೇಣ ಅವಳ ಮನಸ್ಸನ್ನು ಕಿತ್ತು ತಿನ್ನುತ್ತದೆ. ಹೊಸ ಗಂಡನಿಗೆ ತಕ್ಕ ಹೆಂಡತಿಯಾಗಲಾರದೆ, ಅವನ ಮಕ್ಕಳನ್ನೂ ಹೆರಲಾಗದೆ ಪಾಪ ಪ್ರಜ್ಞೆಯಿಂದ ನರಳಿ ಸಾಯುತ್ತಾಳೆ. ಇಲ್ಲಿ ವಂಶವೃಕ್ಷವೆಂಬುದು ನೆಪವಷ್ಟೆ. ಎಲ್ಲ ಸಂಬಂಧಗಳಿಗೂ ಯಾವುದೋ ಕರ್ತವ್ಯದ ಸಂಕೋಲೆಯೊಂದಿರುತ್ತದೆ, ಇರಲೇಬೇಕು ಎನಿಸುವುದಿಲ್ಲವಾ? ನಮ್ಮ ಮಹಿಳಾವಾದಿಗಳಾಗಿದ್ದರೆ ಏನು ಮಾಡಿಸುತ್ತಿದ್ದರು ಕಾತ್ಯಾಯಿನಿಯ ಕೈಲಿ? ಮತ್ತೆ ಮೂರು ಮಕ್ಕಳನ್ನು ಹಡೆಸಿ ಶ್ರೋತ್ರಿಯರಿಗೆ ಸಡ್ದು ಹೊಡೆಯುವಂತೆ, ಅವರ ಎದುರೇ ಬದುಕಿ ತೋರಿಸುವಂತೆ ಮಾಡುತ್ತಿದ್ದರಾ? ಇಲ್ಲಿ ಪ್ರಶ್ನೆ ವಿಧವಾ ವಿವಾಹದ್ದಲ್ಲವೇ ಅಲ್ಲ. ಆದರೆ ಸಂದರ್ಭದ ವಿವೇಚನೆಯಿಲ್ಲದೆ ಬರೀ ತನ್ನ ದೈಹಿಕ ಕಾಮನೆಯ ಪೂರ್ತಿಗೋಸ್ಕರ ಮನೆಯನ್ನು, ಮಕ್ಕಳನ್ನು ಬಿಟ್ಟು ಹೊರಟುಬಿಡುವುದು ಮಹಿಳಾವಾದವಾ? ಅದು ಆ ಕ್ಷಣಕ್ಕೆ ಸರಿ ಎನಿಸಬಹುದು. ಆಮೇಲಾದರೂ ಆ ಕೊರಗು ಜೀವನಪರ್ಯಂತ ಕಾಡುವುದಿಲ್ಲವಾ? ಅಂಥವರೆಲ್ಲ ಆದರ್ಶ ಮಹಿಳೆಯರಾಗಿಬಿಟ್ಟರೆ, ಗಂಡನನ್ನು ಕಳೆದುಕೊಂಡ ಮೇಲೂ ಜೀವನಪೂರ್ತಿ ಒಂಟಿಯಾಗಿದ್ದು ಮಕ್ಕಳಿಗೋಸ್ಕರ ಹೆಣಗಿ ಅವರನ್ನು ದಡ ಸೇರಿಸುವ ತಾಯಂದಿರು ಮುಟ್ಠಾಳರಾ? ತಮ್ಮ ಆಸೆ, ಕಾಮನೆಗಳನ್ನು ಹತ್ತಿಕ್ಕಿಕೊಂಡು ಮಕ್ಕಳ ಏಳ್ಗೆಯಲ್ಲಿ ಸಾರ್ಥಕ್ಯ ಕಾಣುವ ವಿಧವೆಯರು ತಪ್ಪು ಮಾದರಿಯಾಗುತ್ತಾರಾ ಈ ಆಧುನಿಕ ಸಮಾಜದಲ್ಲಿ?

ಇನ್ನು ಅಂಚು ಕಾದಂಬರಿಯಲ್ಲಿ ಬರುವ ಡಾ.ಅಮೃತಾಳ ಪಾತ್ರ. ಬಹಳ ಬುದ್ಧಿವಂತೆಯಾಗಿದ್ದರೂ ತನ್ನ ಚಿಕ್ಕಮ್ಮನಿಂದಲೇ ಮೋಸ ಹೋಗುವ ಅಮೃತಾ ಹತಾಶಳಾಗಿ ತನ್ನೆರಡು ಮಕ್ಕಳೊಂದಿಗೆ ಬದುಕುತ್ತಿರುತ್ತಾಳೆ. ಅವಳದ್ದು ತನಗಾದ ಅನ್ಯಾಯವನ್ನು ಅರಗಿಸಿಕೊಂಡು ಬದುಕಲಾರದೆ, ಬದುಕನ್ನು ಕೊನೆಗಾಣಿಸಿಕೊಂಡು ಸಾಯಲಾರದೆ ತೊಳಲಾಡುವ ಮಾನಸಿಕ ಸ್ಥಿತಿ. ಅವಳ ಮನೆಯ ರಿಪೇರಿಯ ಕಾರಣಕ್ಕೆ ಜೊತೆಯಾಗುವ ಆರ್ಕಿಟೆಕ್ಟ್ ಸೋಮಶೇಖರ ಮೊದಮೊದಲು ಅವಳನ್ನು ಅರಿಯಲಾಗದೆ ಹೆಣಗಿ, ಕೊನೆಗೆ ಅರಿತು ಜೊತೆಯಾಗುವ ಪರಿಯಲ್ಲಿ ಏನು ಅಭ್ಯಂತರವಿದೆ ಮಹಿಳಾವಾದಿಗಳಿಗೆ? ಇನ್ನೆಲ್ಲಿ ರಿವಾಲ್ವರಿನಿಂದ ಗುಂಡು ಹೊಡೆದುಕೊಂಡು ಸಾಯುತ್ತಾಳೋ, ಇನ್ನೆಲ್ಲಿ ನಡುರಾತ್ರಿಯಲ್ಲಿ ಚಾಮುಂಡಿ ಬೆಟ್ಟ ಹತ್ತಲು ಹೊರಡುತ್ತಾಳೋ ಎಂದು ಹೊತ್ತಲ್ಲದ ಹೊತ್ತಿನಲ್ಲಿ ಓಡೋಡಿ ಬರುವ ಸೋಮಶೇಖರ, ಅವಳನ್ನು ವಿನಾಶದ ಅಂಚಿನಿಂದ ಹೊರಗೆಳೆದು ತಂದು ಜೊತೆಯಾಗಿ ನಿಲ್ಲುತ್ತಾನಲ್ಲ, ಆ ಪ್ರಕ್ರಿಯೆಯಲ್ಲಿ ಯಾವ ಕ್ರೌರ್ಯವಿದೆ? ಅಥವಾ ಮಹಿಳೆಯೋರ್ವಳು ಇಷ್ಟು ಅಧೀರಳಾಗಬಲ್ಲಳು ಎಂದು ತೋರಿಸಿರುವುದು ಇಡೀ ಸ್ತ್ರೀ ಕುಲಕ್ಕೇ ಅವಮಾನವಾ? ಇಂಥ ಮನೋವ್ಯಥೆಯ ಹಲವಾರು ಉದಾಹರಣೆಗಳು ನಮ್ಮ ಸುತ್ತಮುತ್ತಲೆಲ್ಲ ಇವೆಯಲ್ಲ, ಕಾಣುವುದಿಲ್ಲವಾ ವಿಚಾರವಾದಿಗಳ ಕಣ್ಣಿಗೆ?

ಕವಲು ಕಾದಂಬರಿಗಂತೂ ಮಹಿಳಾ ವಿಮೋಚನೆಯೇ ವಸ್ತು. ತನ್ನ ಕಂಪೆನಿಯ ಮಾಲೀಕನನ್ನೇ ಉಪಾಯವಾಗಿ ಬಲೆಗೆ ಹಾಕಿಕೊಂಡು ಮದುವೆಯಾಗುವ ಮಂಗಳ, ತನ್ನ ಸ್ವಪ್ರತಿಷ್ಠೆಗೋಸ್ಕರ ಗಂಡನನ್ನು ದೂರ ಮಾಡಿಕೊಳ್ಳುವ ಇಳಾ, ಇಬ್ಬರೂ ಮಹಿಳಾವಾದದ ಅಪರಾವತಾರವೇ ಅಲ್ಲವೇ? ತಮ್ಮ ಉದ್ದೇಶ ಸಾಫಲ್ಯಕ್ಕಾಗಿ ಏನನ್ನಾದರೂ ಮಾಡುವ ಇವರಿಬ್ಬರೂ ಕೊನೆಗೆ ಗೆದ್ದೂ ಸೋತಿರುವುದರಲ್ಲಿ ತಪ್ಪೇನಿದೆ? ವರದಕ್ಷಿಣೆ ಕಿರುಕುಳವೆಂದು ಸುಳ್ಳು ಕೇಸುಗಳನ್ನು ಜಡಿದು ಗಂಡನ ಮನೆಯವರ ಬಾಳನ್ನು ನರಕವಾಗಿಸಿರುವ ಎಷ್ಟು ಹೆಣ್ಣುಮಕ್ಕಳಿಲ್ಲ ನಮ್ಮ ನಡುವೆ? ನೆಮ್ಮದಿಯ ಸಂಸಾರಗಳಲ್ಲಿ ಮುಳ್ಳಾಗಿ ನುಸುಳಿ ಹುಳಿ ಹಿಂಡುವ ಮಹಿಳಾಮಣಿಗಳಿಗೆ ಕೊರತೆಯೇ ನಮ್ಮ ಸಮಾಜದಲ್ಲಿ? ತೀರ ಸಭ್ಯ, ಮೃದು ಹೃದಯಿಗಳಾದ ಗಂಡಂದಿರನ್ನು ತಮ್ಮ ತಂದೆ-ತಾಯಿಯರಿಂದಲೇ ದೂರವಿಟ್ಟು ನೋಯಿಸುವ, ಅವರು ದುಡಿಯುವ ಪ್ರತಿ ಕಿಲುಬು ಕಾಸಿನ ಮೇಲೂ ಹಕ್ಕು ಚಲಾಯಿಸುವ ರಾಕ್ಷಸೀರೂಪಿ ಹೆಂಡತಿಯರೇನು ಕಡಿಮೆಯೇ? ಅಂಥವರಿಗೆಲ್ಲ ಹೋಗಿ ಬುದ್ಧಿ ಹೇಳುತ್ತಾರಾ ಮಹಿಳಾವಾದಿಗಳು? ಮಂಗಳೆಯನ್ನು ತನ್ನ ದೈಹಿಕ ಕಾಮನೆಗಾಗಿ ಬಳಸಿಕೊಳ್ಳುವ ಮೇಡಮ್ ಸರಾಫ್‍, ಪುರುಷರ ಮೇಲಿನ ಅವಲಂಬನೆಯನ್ನು ಇಲ್ಲವಾಗಿಸುವಲ್ಲಿ ಇದು ಅವಶ್ಯಕ ಎನ್ನುತ್ತಾಳೆ. Lesbian Feminism ಎನ್ನುವ, ಸುಮಾರು 70ರ ದಶಕದಿಂದಲೇ ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಮಹಿಳಾ ವಿಮೋಚನೆಯ ಕೊಳಕು ಜಾಡ್ಯದ ಬಗ್ಗೆ ಇಷ್ಟು ನೇರವಾಗಿ ಹೇಳಿರುವ ಭೈರಪ್ಪನವರಿಗೆ ವಿಚಾರವಾದಿಗಳಿಂದ ಒಂದಾದರೂ ಶಹಬ್ಬಾಸ್‍ಗಿರಿ ಬೇಡವೇ?

ಇನ್ನು ಯಾನದಲ್ಲಿ ಬರುವ ಫ್ಲೈಯಿಂಗ್ ಆಫೀಸರ್ ಉತ್ತರಾಳ ಪಾತ್ರ. ಪ್ರಯೋಗದ ಸಲುವಾಗಿ ಅಂತರಿಕ್ಷಯಾನ ಕೈಗೊಂಡು ಸಹೋದ್ಯೋಗಿ 'ಯಾದವ್'ನೊಂದಿಗೆ ಪತ್ನಿಯಂತೆ ಜೀವಿಸಬೇಕು ಎಂಬುದು ಉತ್ತರಾಳಿಗೆ ತಿಳಿದು ಬರುತ್ತದೆ. ಬೇರೆ ಜಾತಿಯವನಾದರೂ ಅವನನ್ನು ದೇವಸ್ಥಾನವೊಂದರಲ್ಲಿ ಮದುವೆಯಾಗಿ, ದೈವ ಹಾಗೂ ಮನಸ್ಸುಗಳೆರಡರ ಸಾಕ್ಷಿಯಾಗಿ ಗಂಡನೆಂದು ಸ್ವೀಕರಿಸಿದ ನಂತರವೇ ಅವಳು ಅವನೊಡನೆ ಅಂತರಿಕ್ಷಕ್ಕೆ ಹಾರುವುದು. ನಂತರ ಅಂಥದ್ದೇ ಮತ್ತೊಂದು ಪಯಣ ನಿಷ್ಕರ್ಷೆಯಾದಾಗ ಗಂಡ ಯಾದವ್ ಅವಳ ಜೊತೆ ಬರಲೊಪ್ಪುವುದಿಲ್ಲ. ಗಂಡನಲ್ಲದ ಮತ್ತೊಬ್ಬ ವಿಜ್ಞಾನಿಯನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ಇಡೀ ಯಾನದ ಮೂಲ ಉದ್ದೇಶಕ್ಕೇ ಧಕ್ಕೆ ತರುವ ಮಟ್ಟಕ್ಕೆ ಹೋಗುತ್ತಾಳಲ್ಲ ಉತ್ತರಾ, ಏನಿದೆ ಅಂಥ ತಪ್ಪು ಅವಳ ಪಾತ್ರದಲ್ಲಿ? ನಮ್ಮ ಮಹಿಳಾವಾದಿಗಳಾಗಿದ್ದರೆ ಉತ್ತರಾಳ ಬಾಯಲ್ಲಿ ಸಲೀಸಾಗಿ, 'ಗಂಡ ಯಾನಕ್ಕೆ ಬರದಿದ್ದುದರಿಂದ ಪತ್ನಿ ಮತ್ತೊಬ್ಬರ ಸನಿಹವನ್ನು ಬಯಸುವುದು ತೀರ ಸಹಜ' ಎಂದು ಹೇಳಿಸಿಬಿಡುತ್ತಿದ್ದರೇನೋ!



ಇವಿಷ್ಟೇ ಅಲ್ಲ. ಗೃಹಭಂಗದ ನಂಜಮ್ಮ, ಸಾರ್ಥದ ಚಂದ್ರಿಕೆ, ದಾಟುವಿನ ಸತ್ಯಭಾಮಾ ಹಾಗೂ ಅದೇ ಕಾದಂಬರಿಯಲ್ಲಿನ ಮಾದಿಗರ ಹೆಣ್ಣಾದ ಮಾತಂಗಿ ಎಲ್ಲರೂ ಗಟ್ಟಿಗರೇ. ತಾವು ನಂಬಿದ ತತ್ವಕ್ಕೆ, ತಮ್ಮ ಮನಸ್ಸಿಗೆ ಎಂದೂ ಮೋಸ ಮಾಡಿಕೊಳ್ಳದೆ ಬದುಕನ್ನು ಜಯಿಸಿದವರೇ. ಸ್ವಲ್ಪ ಯೋಚಿಸಿ ನೋಡಿ, ಗಂಡು ಹಾಗೂ ಹೆಣ್ಣುಮಕ್ಕಳ ನಡುವಿನ ತಾರತಮ್ಯ ಇಂದು ನಿನ್ನೆಯದಲ್ಲ. ಅದು ನಮ್ಮ ಅಜ್ಜಿ, ಮುತ್ತಜ್ಜಿಯರು ಮನೆಯ ಹುಡುಗರಿಗೆ ಬಿಸಿಯಾದ ಅನ್ನ ಬಡಿಸಿ ಹೆಣ್ಣುಮಕ್ಕಳಿಗೆ ತಂಗಳು ಹಾಕುವ ಕಾಲದಿಂದಲೇ ಇತ್ತು. ಅವರಿಗೆ ಮಾತ್ರ ಗಟ್ಟಿ ಮೊಸರು, ನಮಗೆ ಮಾತ್ರ ನೀರು ಮಜ್ಜಿಗೆ ಎಂದು ಗೊಣಗಿಕೊಂಡು ಉಂಡೆದ್ದ ಎಷ್ಟು ಹೆಣ್ಣುಮಕ್ಕಳಿಲ್ಲ ನಮ್ಮ ನಡುವೆ? ಈಗ ಓದು-ಬರಹದ, ಕೆಲಸ-ಕಾರ್ಯದ ಸ್ವಾತಂತ್ರ್ಯ ಸಿಕ್ಕಿದೆಯೆಂದು ಮಹಿಳಾ ವಿಮೋಚನೆಯ ಹೆಸರಿನಲ್ಲಿ ಅತಿರೇಕಕ್ಕೆ ತೊಡಗುವುದು ಹಳೆಯ ಲೆಕ್ಕವನ್ನೆಲ್ಲ ಚುಕ್ತಾ ಮಾಡುವ ಪರಿಯಾ? ನಾಲ್ಕಾರು ಮಂದಿ ಅಕ್ಷರಕುಕ್ಷಿಗಳ ಗುಂಪು ವಿಮೋಚನೆಯ ಹೆಸರಿನಲ್ಲಿ ಬೊಬ್ಬಿರಿದರೆ ಸಿಕ್ಕಿಬಿಡುತ್ತದಾ ವಿಮೋಚನೆ? ಸಾಧ್ಯವಾಗಿಬಿಡುತ್ತದಾ ಸಮಾನತೆ? ಹಾಗಾದರೆ ಮಹಿಳಾವಾದಿಗಳು ಇಷ್ಟೊಂದು ಜಾಗಟೆ ಬಾರಿಸುತ್ತಿದ್ದರೂ ಅತ್ಯಾಚಾರಗಳು ಕಡಿಮೆಯೇಕಾಗಿಲ್ಲ? ತೀರ ಸಣ್ಣ ಸಣ್ಣ ಹಸುಳೆಗಳು ಬಲಿಯಾಗುವುದಾದರೂ ಏಕೆ ನಿಂತಿಲ್ಲ? ಸಣ್ಣ-ದೊಡ್ಡ ಮೈಕುಗಳಲ್ಲಿ ಸಮಾನತೆಯ, ವೈಚಾರಿಕತೆಯ ಕಹಳೆ ಮೊಳಗುತ್ತಿದ್ದರೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಆಸಿಡ್ ದಾಳಿಗಳೇಕೆ ನಿಂತಿಲ್ಲ? ಅದೂ ಹೋಗಲಿ, ಅನೈತಿಕ ಸಂಬಂಧಗಳಿಂದಾಗುತ್ತಿರುವ ಕೊಲೆಗಳು ಇಷ್ಟೊಂದು ಹೆಚ್ಚುತ್ತಿರುವುದೇಕೆ?
ಮಹಿಳಾವಾದದ, ವಿಚಾರವಾದದ ಧ್ವಜ ಹಾರಿಸುವವರನ್ನು, ಅವರ ಆವೇಶವನ್ನು ಕಂಡರೆ ನಿಜಕ್ಕೂ ದಿಗಿಲಾಗುತ್ತದೆ. ಏಕೆಂದರೆ ಅವರು ಪ್ರತಿಪಾದಿಸುವ ಸಮಾನತೆ ವಿದ್ಯೆ, ಉದ್ಯೋಗಾವಕಾಶಗಳನ್ನು ಮೀರಿ ಸಂಬಂಧಗಳ ಬುಡ ಕಡಿಯುವ ಮಟ್ಟಕ್ಕೆ ಬೆಳೆದುಬಿಟ್ಟಿದೆ. ಇಂದು ಲಕ್ಷಾಂತರ ಮಂದಿ ಹೆಣ್ಣುಮಕ್ಕಳು ದುಡಿಯಲು ಹೋಗುತ್ತಿದ್ದಾರೆ. ತನ್ನ ಹೆಂಡತಿ ಹೊರಗೆ ದುಡಿಯುತ್ತಾಳಲ್ಲ ಎಂಬ ಕಕ್ಕುಲತೆಯಿಂದ ಮನೆಕೆಲಸದಲ್ಲಿ, ಮಕ್ಕಳ ಲಾಲನೆ-ಪಾಲನೆಯಲ್ಲಿ ಕೈ ಜೋಡಿಸುತ್ತಿರುವ ಗಂಡಸರೆಷ್ಟಿಲ್ಲ ಹೇಳಿ? ಕೆಲಸದ ನಿಮಿತ್ತ ದೇಶ-ವಿದೇಶಗಳಲ್ಲಿ ಒಂಟಿಯಾಗಿ ಸಂಚರಿಸುವ ಹೆಂಡತಿಯರನ್ನು, 'ನೀನು ಹೋಗಿ ಬಾ, ನಾನು ಮನೆ ಕಡೆ ಸಂಭಾಳಿಸುತ್ತೇನೆ' ಎಂದು ಹುರಿದುಂಬಿಸಿ ಕಳುಹಿಸಿಕೊಡುತ್ತಿರುವ ಎಷ್ಟು ಗಂಡಂದಿರಿಲ್ಲ? ಹಾಗೆ ಹೊರಗೆ ಹೊರಟ ಹೆಂಡತಿಯರು ತನ್ನ ಗಂಡ ತನಗೆ ಬೌದ್ಧಿಕ ಮಟ್ಟದಲ್ಲಿ ತಕ್ಕವನಲ್ಲವೆಂತಲೋ ಅಥವಾ ಅನುರೂಪನಲ್ಲವೆಂತಲೋ ಬೇರೊಬ್ಬನ ತೆಕ್ಕೆಗೆ ಬಿದ್ದರೆ? ಪರವಾಗಿಲ್ಲವಂತೆ! ಅದನ್ನೂ ಸಮರ್ಥಿಸಿಕೊಳ್ಳುತ್ತದೆ ನೋಡಿ ಮಹಿಳಾವಾದ! ಸಮಾನತೆ ಎಂದರೆ ಅದೇ ಅಲ್ಲವೇ ಮತ್ತೆ? ಗಂಡು ಮಾಡಬಹುದಾದರೆ ಹೆಣ್ಣೇಕೆ ಮಾಡಬಾರದು? ಗಂಡು ಸಿಗರೇಟ್ ಸೇದಬಹುದು, ವಿಸ್ಕಿ ಕುಡಿಯಬಹುದು ಎಂದಾದರೆ ಹೆಣ್ಣೇಕೆ ವಂಚಿತಳಾಗಬೇಕು? ಗಂಡು ಸೂಳೆಕೇರಿಗೆ ಹೋಗಬಹುದಾದರೆ ಹೆಣ್ಣೇಕೆ ಪರಪುರುಷರ ಸಂಗ ಮಾಡಬಾರದು? ಒಟ್ಟಿನಲ್ಲಿ ಎಲ್ಲಕ್ಕೂ ಜೈ. ಸಮಾನತೆಯ ಹೆಸರಿನಲ್ಲಿ ಸಾಗುತ್ತಿದೆಯಲ್ಲ ಈ ಓಟ, ಇದರಲ್ಲಿ ಹೆಣ್ಣುಮಕ್ಕಳಿಗೆ ಮುನ್ನುಗ್ಗುವ ಅವಕಾಶಗಳೆಷ್ಟಿವೆಯೋ, ಅಮಲೇರಿ ನೈತಿಕವಾಗಿ ಮುಗ್ಗರಿಸುವ ಅಪಾಯವೂ ಅಷ್ಟೇ ಇದೆ. ಹೀಗೆ ಮುಗ್ಗರಿಸಿ ಬೀಳುವ ಮಂದಿಯೆಲ್ಲ ಗೆದ್ದೆವೆಂಬ ಭ್ರಮೆಯಲ್ಲಿ ಬೀಗುವ ವಿಪರೀತ ಬುದ್ಧಿವಂತರೇ! ಇವರನ್ನು ಅಕ್ಷರಶಃ ಉಪಯೋಗಿಸಿಕೊಳ್ಳುವವರು ಯಾರು ಹೇಳಿ? ಮತ್ತದೇ ಗಂಡಸರು! ಹಾಗಾದರೆ ಎಲ್ಲಿ ಬಂತು ಸಮಾನತೆ?

ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಖಂಡಿತ ಬೇಕು, ಜೊತೆಗೆ ಅದರ ಇತಿ-ಮಿತಿ, ಪರಿಣಾಮಗಳ ವಿವೇಚನೆಯೂ. ವಿಮೋಚನೆಯ, ಸಮಾನತೆಯ ಹೆಸರಿನಲ್ಲಿ ಎಲ್ಲವೂ ಕಲಸುಮೇಲೋಗರವಾಗುತ್ತಿರುವ ಈ ದಿನಗಳಲ್ಲಿ ನೈತಿಕತೆಯ ಒಂದು ಸಣ್ಣ ಪಾಠ ಉತ್ತರಾಳ ರೂಪದಲ್ಲಿ ದೊರಕಿದರೆ ಯಾಕಾಗಬಾರದು? ಮನಸ್ಸಾಕ್ಷಿಯನ್ನು ಮರೆತು ಓಡುವ ಮನಸ್ಸುಗಳಿಗೆ ಮಂಗಳೆಯ ರೂಪದ ಕಡಿವಾಣ ಬೀಳುವುದಾದರೆ ಅದರಲ್ಲಿ ತಪ್ಪೇನಿದೆ? ಭೈರಪ್ಪನವರು ಈ ಸಮಾಜದಿಂದ ಆಯ್ದುಕೊಂಡ, ಸಮಾಜಕ್ಕೆ ಹೋಲುವಂಥ ಪಾತ್ರಗಳನ್ನು ಸೃಷ್ಟಿಸಿದ್ದಾರೆಯೇ ಹೊರತು ಎಲ್ಲರೂ ಅದರಂತೆಯೇ ನಡೆದುಕೊಳ್ಳಲೇಬೇಕೆಂಬ ಪ್ರಮಾಣವನ್ನೇನೂ ಮಾಡಿಸಿಕೊಂಡಿಲ್ಲವಲ್ಲ?


ಸಮಾನತೆಯ ಜೋಕಾಲಿಯಲ್ಲಿ ಜೀಕುವಾಗಲೂ ಕೈಗಳು ನೈತಿಕತೆ ಹಾಗೂ ಮನಸ್ಸಾಕ್ಷಿಗಳನ್ನು ಗಟ್ಟಿಯಾಗಿ ಹಿಡಿದಿರಲೇಬೇಕು. ಇಲ್ಲದಿದ್ದರೆ ಆಯತಪ್ಪಿ ಬೀಳುವವರು ನಾವೇ, ನಷ್ಟವೂ ನಮಗೇ. ಅಲ್ಲವೇ?

ಉಕ್ಕಿನ ಹಕ್ಕಿಗಳ ಕಲರವದ ಹಿಂದೆ….

ಮೊನ್ನೆ ಫೆಬ್ರುವರಿ 18ರಿಂದ 22ರವರೆಗೂ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಬರೀ ಉಕ್ಕಿನ ಹಕ್ಕಿಗಳದ್ದೇ ರಾಜ್ಯಭಾರ. ಒಂದೊಂದರದ್ದೂ ಒಂದೊಂದು ಗಾತ್ರ, ಆಕಾರ, ಬಣ್ಣ ಹಾಗೂ ಕ್ಷಮತೆ! ಕೆಲವು ಭಾರತದ ಮಣ್ಣಿನದ್ದೇ ಆದರೂ ಹೆಚ್ಚಿನವು ವಿದೇಶಗಳಿಂದ ವಲಸೆ ಬಂದವು. ಅವು ಸುಮ್ಮನೆ ನೆಲದ ಮೇಲೆ ನಿಂತರೂ ಚಂದ, ಆಗಸದಲ್ಲಿ ಹಾರಾಡಿದರೂ ಚಂದ. ಒಟ್ಟಿನಲ್ಲಿ ಅವು ಮಾಡಿದ ಮೋಡಿ ಹೇಗಿತ್ತು ಅಂತೀರಿ? ನೆತ್ತಿಯ ಮೇಲಿನ ಸುಡುಬಿಸಿಲನ್ನೂ ಲೆಕ್ಕಿಸದೆ ಅವುಗಳನ್ನು ನೋಡಲು ಹೋದ ಲಕ್ಷಗಟ್ಟಳೆ ಜನ ನಿಬ್ಬೆರಗಾದರು. ನೆಲದ ಮೇಲೆ ತಣ್ಣಗೆ ನಿಂತಿದ್ದ ಕೆಲ ಹಕ್ಕಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಆಗಸದಲ್ಲಿ ರಂಗು ಚೆಲ್ಲಿಕೊಂಡು ಹಾರಾಡಿದವುಗಳನ್ನು ಕಂಡು ಚಿಕ್ಕ ಮಕ್ಕಳಂತೆ ಕೇಕೆ ಹಾಕಿ ನಕ್ಕರು. ಅವುಗಳ ಸದ್ದಿನೊಂದಿಗೆ ತಮ್ಮದೂ ದನಿ ಬೆರೆಸಿ ನಲಿದರು. ಅವುಗಳ ಸಾಹಸವನ್ನು ನೋಡಿ ಕೆಲಕ್ಷಣಗಳ ಮಟ್ಟಿಗೆ ತಮ್ಮಿರವನ್ನೇ ಮರೆತರು. ಹೃದಯದ ಬಡಿತವನ್ನು ಏರುಪೇರಾಗಿಸಿಕೊಂಡು ಬೆರಳನ್ನು ಕಚ್ಚಿ ಸುಮ್ಮನೇ ನಿಂತರು. ಹೌದು. ಇಷ್ಟೆಲ್ಲಾ ಭಾವನೆಗಳ ಸಿಂಚನಕ್ಕೆ ಕಾರಣವಾದದ್ದು ಈ ಬಾರಿಯ 'ಏರೋ ಇಂಡಿಯಾ 2015'.




ಇಡೀ ಏಷ್ಯಾ ಖಂಡಕ್ಕೇ ಕೀರ್ತಿ ತರುತ್ತಿರುವ, ನಮ್ಮ ದೇಶದ ಹೆಮ್ಮೆಯ ಏರ್ ಶೋ ಬರೋಬ್ಬರಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಅಂದಹಾಗೆ, 1996ರಲ್ಲಿ ಶುರುವಾದ ಈ ವೈಮಾನಿಕ ಅಭಿಯಾನಕ್ಕೆ ಈ ವರ್ಷ ದಶಕದ ಆವೃತ್ತಿಯ ಸಂಭ್ರಮ. ಪ್ರತಿ ಬಾರಿಯೂ ನಮ್ಮ ಕರ್ನಾಟಕದ ನಗರಿ ಬೆಂಗಳೂರೇ ಇದರ ಆತಿಥ್ಯವಹಿಸುತ್ತಿರುವುದು ನಮ್ಮ ಹೆಮ್ಮೆಯ ಕಿರೀಟಕ್ಕೆ ಮತ್ತೊಂದು ಗರಿಯೇ ಸರಿ! ಇದೊಂಥರಾ ವಿಮಾನಗಳ ಸಂತೆಯಿದ್ದಂತೆ. ನಮ್ಮ ರೈತರು ತಾವು ಬೆಳೆದದ್ದನ್ನೆಲ್ಲಾ ತಂದು ಸಂತೆಯಲ್ಲಿ ಗುಡ್ಡೆ ಹಾಕಿ ಮಾರುವುದಿಲ್ಲವೇ? ಇದೂ ಹಾಗೆಯೇ. ದೇಶ-ವಿದೇಶಗಳಿಂದ ಆಗಮಿಸುವ ವಿಮಾನ ತಯಾರಿಕಾ ಸಂಸ್ಥೆಗಳು ತಮ್ಮ ದೇಶದ ಅತ್ಯಾಧುನಿಕ ಯುದ್ಧವಿಮಾನಗಳು, ಹೆಲಿಕಾಪ್ಟರ್‍ಗಳು ಹಾಗೂ ಕ್ಷಿಪಣಿಗಳನ್ನು ಪ್ರದರ್ಶಿಸುತ್ತವೆ ಹಾಗೂ ಮಾರಾಟಕ್ಕಿಡುತ್ತವೆ. ಅಷ್ಟೇ ಅಲ್ಲ, ಅವುಗಳ ತಾಂತ್ರಿಕ ಕೌಶಲದ ಬಗ್ಗೆ ಜಂಭವನ್ನೂ ಕೊಚ್ಚಿಕೊಳ್ಳುತ್ತವೆ. ಖರೀದಿಯ ಆಸಕ್ತಿಯುಳ್ಳ ವೈಮಾನಿಕ ಪ್ರಪಂಚದ ದೊಡ್ಡಣ್ಣರುಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಈ ಬಾರಿಯಂತೂ ಒಟ್ಟು 750ಕ್ಕೂ ಹೆಚ್ಚು ಸಂಸ್ಥೆಗಳು ಭಾಗವಹಿಸಿದ್ದವು. 109 ದೇಶಗಳಿಂದ ಪರಿಣಿತರ ತಂಡಗಳು ಆಗಮಿಸಿದ್ದವು. ಉದ್ಯಮಿಗಳ ಸಂಖ್ಯೆಯಂತೂ ಒಂದೂವರೆ ಲಕ್ಷವನ್ನು ಮೀರಿತ್ತು! ಪ್ರಧಾನಿ ಮೋದಿಯವರೇ ಉದ್ಘಾಟಿಸಿದ ಮೇಲೆ ಕಾರ್ಯಕ್ರಮ ಕಳೆಗಟ್ಟದೆ ಇರುತ್ತದೆಯೇ? ಜೊತೆಗೆ 'ಮೇಕ್ ಇನ್ ಇಂಡಿಯಾ' ಎಂಬ ಘೋಷವಾಕ್ಯ ಬೇರೆ. ಅದಕ್ಕೆ ಕಾರಣವೂ ಇದೆ. ಇಂದು ಭಾರತ ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಆಮದೆಂದರೆ ಖಂಡಿತ ಹೆಗ್ಗಳಿಕೆಯಲ್ಲ. ಅತಿಯಾದ ಆರ್ಥಿಕ ಹೊರೆ. ಆದ್ದರಿಂದಲೇ ಅದನ್ನು ಸ್ವಲ್ಪ ಸ್ವಲ್ಪವಾಗಿಯೇ ತಹಬದಿಗೆ ತಂದು ರಫ್ತಿನಲ್ಲಿ ಮೊದಲಿಗರಾಗಬೇಕೆಂಬುದು ಮೋದಿಯವರ ಕನಸು. ಇಲ್ಲಿಯತನಕ ಏನಾಗುತ್ತಿತ್ತೆಂದರೆ ಬಿಡಿ ಭಾಗಗಳು ವಿದೇಶಗಳಲ್ಲಿ ತಯಾರಾಗಿ ಭಾರತಕ್ಕೆ ಬರುತ್ತಿದ್ದವು. ಇಲ್ಲಿ ಅವುಗಳ ಜೋಡಣೆ ಮಾತ್ರ ನಡೆಯುತ್ತಿದ್ದುದು. ಇನ್ನು ಮುಂದೆ ಬಿಡಿ ಭಾಗಗಳಿಂದ ಹಿಡಿದು ಸಮಸ್ತವನ್ನೂ ಭಾರತದಲ್ಲೇ ತಯಾರಿಸಿ ಜೋಡಿಸೋಣ ಎಂದು ಕರೆ ಕೊಟ್ಟಿದ್ದಾರೆ ಮೋದಿ. ಅವರ ಕರೆಗೆ ಹಲವು ದೇಶಗಳು ಸ್ಪಂದಿಸಿವೆ. ಪರಿಣಾಮವೇನಾಗುತ್ತದೋ ಕಾದು ನೋಡಬೇಕು.

ಉದ್ಯಮವಲಯಕ್ಕೆ ಸಂಬಂಧಿಸಿದ ವ್ಯಾವಹಾರಿಕ ವಿಷಯಗಳೇನೇ ಇರಲಿ, ನಮಗಂತೂ ಪ್ರತಿಬಾರಿಯೂ ಏರ್ ಶೋ ಎಂಬುದು ಸಡಗರದ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ. ಆಕಾಶದಲ್ಲಿ ಸಲೀಸಾಗಿ ಪಲ್ಟಿ ಹೊಡೆಯುವ, ವಿವಿಧ ಚಿತ್ತಾರಗಳನ್ನು ರಚಿಸುವ, ಆಕಾರಗಳನ್ನು ಹೆಣೆಯುವ, ಬೆಚ್ಚಿ ಬೀಳಿಸುವಂಥ ಸಾಹಸಗಳನ್ನು ಪ್ರದರ್ಶಿಸುವ ದೇಶಿ, ವಿದೇಶೀ ವೈಮಾನಿಕ ತಂಡಗಳೊಂದಿಗೆ ನಮಗೆ ಅದೇನೋ ಅನನ್ಯ ಬೆಸುಗೆ. ಉದಾಹರಣೆಗೆ ನಮ್ಮ ಹಿಂದೂಸ್ಥಾನ್ ಏರೋನಾಟಿಕ್ಸ್ ಸಂಸ್ಥೆಯ  ತೇಜಸ್ ಹಾಗೂ ಸೂರ್ಯಕಿರಣದ ತಂಡಗಳನ್ನೇ ತೆಗೆದುಕೊಳ್ಳಿ. 1998 ರಿಂದಲೂ ಅವುಗಳ ಸಾಹಸವನ್ನು ನೋಡುತ್ತಲೇ ಬಂದಿದ್ದೇವೆ. 2005 ರಿಂದ ಈ ಗುಂಪಿಗೆ ಸೇರ್ಪಡೆಗೊಂಡ ಸಾರಂಗ್ ತನ್ನ ಚೊಚ್ಚಲ ಪ್ರದರ್ಶನದಲ್ಲೇ ಎಲ್ಲರ ಮನಸೂರೆಗೊಂಡಿತ್ತು. 2007 ರಲ್ಲಂತೂ ಅಭ್ಯಾಸ ನಡೆಸುತ್ತಿರುವಾಗ ಒಂದು ಸಾರಂಗ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಅದರ ಸಹ ಪೈಲಟ್ ಮರಣ ಹೊಂದಿದ್ದ. ಅದಾಗ್ಯೂ ಆ ತಂಡ ತನ್ನ ಪ್ರದರ್ಶನವನ್ನು ರದ್ದು ಮಾಡಿರಲಿಲ್ಲ . ಇವುಗಳಷ್ಟೇ ಅಲ್ಲದೆ ರಷ್ಯಾ ದೇಶದ ಮಿಗ್ ವಿಮಾನ, ಅಮೆರಿಕದ ಎಫ್-15, ಫ್ರಾನ್ಸ್ ದೇಶದ ಮಿರಾಜ್ ಹಾಗೂ ಫಾಲ್ಕನ್, ಇಂಗ್ಲೆಂಡಿನ ಹಾಕ್ ಹಾಗೂ ಜಾಗ್ವರ್‍ಗಳ ದರ್ಪ ದೌಲತ್ತುಗಳನ್ನು ಒಮ್ಮೆ ನೋಡಿದವರು ಇನ್ನೆಂದಿಗೂ ಮರೆಯಲಾರರು. 2011ರ ಎಂಟನೆಯ ಆವೃತ್ತಿಯಲ್ಲಿ ಸೂರ್ಯಕಿರಣ ತನ್ನ ಕೊನೆಯ ಪ್ರದರ್ಶನ ನೀಡಿತು. ಏಕೆಂದರೆ ಅದಕ್ಕೆ ನಿವೃತ್ತಿ ನೀಡಿ ಆ ಮಾದರಿಯ ಬದಲು ಹಾಕ್ ವಿಮಾನಗಳನ್ನು ಬಳಸಿಕೊಳ್ಳುವ ಯೋಜನೆಯನ್ನು ಜಾರಿಗೆ ತರಲಾಯಿತು. ಆದರೆ ಇಂದಿಗೂ ಜನ ಸೂರ್ಯಕಿರಣ್ ತಂಡದ ಪ್ರದರ್ಶನವನ್ನು ನೆನೆಯುತ್ತಾರೆ. ಈ ಬಾರಿಯ ಪ್ರದರ್ಶನಗಳನ್ನು ನೋಡಿದ ಬಹುತೇಕರಿಗೆ ಅನಿಸಿದ್ದು, 'ಛೆ, ಸೂರ್ಯಕಿರಣ ತಂಡವೂ ಇರಬೇಕಾಗಿತ್ತು' ಎಂದೇ. ಇಂಥ ಸಣ್ಣ ಪುಟ್ಟ ನಿರಾಸೆಗಳೇನೇ ಇದ್ದರೂ ಸುಮಾರು ಮೂರು ಲಕ್ಷ ಮಂದಿ ಈ ಬಾರಿಯ ಏರ್ ಶೋ ವೀಕ್ಷಿಸಿ ಆನಂದತುಂದಿಲರಾಗಿದ್ದಾರೆ.


 ಈ ಬಾರಿ ಭಾಗವಹಿಸಿದ್ದ ಕೆಲ ಮುಖ್ಯ ತಂಡಗಳೆಡೆ ಗಮನ ಹರಿಸೋಣ ಬನ್ನಿ. ಭಾರತೀಯ ವಾಯುಸೇನೆಯ ಹೆಮ್ಮೆಯ 'ಸಾರಂಗ್' ಹೆಲಿಕಾಪ್ಟರ್‍‍ಗಳ ತಂಡ ತನ್ನ ಅಮೋಘ ಪ್ರದರ್ಶನವನ್ನು ಎಂದಿನಂತೆ ಈ ಬಾರಿಯೂ ಮುಂದುವರೆಸಿತು. ಆ ತಂಡದಲ್ಲಿದ್ದ ಒಂದು ವಿಶೇಷವೇನು ಗೊತ್ತೇ? ಮೊತ್ತ ಮೊದಲ ಬಾರಿಗೆ ಇಬ್ಬರು ಮಹಿಳೆಯರು ತಂಡದಲ್ಲಿ ಸ್ಥಾನ ಪಡೆದದ್ದು! ಅದೊಂದೇ ಅಲ್ಲದೆ 'ಧ್ರುವ್' ಹೆಲಿಕಾಪ್ಟರ್‍ಗಳೂ ಮನಸೂರೆಗೊಳ್ಳುವ ಕಸರತ್ತು ನಡೆಸಿದವು. ಇನ್ನು ಇಂಗ್ಲೆಂಡಿನ ಏರೋಸೂಪರ್‍ಬ್ಯಾಟಿಕ್ಸ್ ತಂಡ ಬ್ರೆಟ್ಲಿಂಗ್‍ನ 'ವಿಂಗ್ ವಾಕರ್ಸ್' ಮಾಡಿದ ಮೋಡಿಯನ್ನಂತೂ ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ. ಭೂಮಿಯಿಂದ ನೂರಾರು ಅಡಿ ಎತ್ತರಕ್ಕೆ ಚಿಮ್ಮಿದ ಎರಡು ವಿಮಾನಗಳ ಮೇಲೆ ತಲಾ ಒಬ್ಬೊಬ್ಬರಂತೆ ಹತ್ತಿ ನಿಂತ ಲಲನೆಯರು ಕಸರತ್ತುಗಳನ್ನು ಮಾಡಿದ್ದೇ ಮಾಡಿದ್ದು. ಅದೂ ಏಕಕಾಲದಲ್ಲಿ, ಇಬ್ಬರ ನಡುವೆ  ಅಂಗಾಂಗಗಳ ಚಲನೆಯಲ್ಲಿ ಒಂಚೂರೂ ವ್ಯತ್ಯಾಸವಿಲ್ಲದಂತೆ! ಅವರು ನೀಡಿದ ಕರಾರುವಾಕ್ ಪ್ರದರ್ಶನ ಹೇಗಿತ್ತಪ್ಪಾ ಎಂದರೆ ಎರಡು ಬೊಂಬೆಗಳಿಗೆ ಒಂದೇ ಸಮಯಕ್ಕೆ ಕೀಲಿ ಕೊಟ್ಟು ಆಟವಾಡಲು ಬಿಟ್ಟಂತಿತ್ತು! ಅವರೇನೋ ಲೀಲಾಜಾಲವಾಗಿ ಮಾಡುತ್ತಿದ್ದರು, ಆದರೆ ನೆರೆದಿದ್ದ ಜನಸ್ತೋಮಕ್ಕೆ ತನ್ನ ಆಶ್ಚರ್ಯ, ಆತಂಕ ಹಾಗೂ ಮೆಚ್ಚುಗೆಗಳನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಸ್ವೀಡನ್ನಿನ ಏರೋಬ್ಯಾಟಿಕ್ ತಂಡ 'ಸ್ಕ್ಯಾಂಡಿನೇವಿಯನ್ ಏರ್ ಶೋ' ಭಾರತದ ಧ್ವಜದ ತ್ರಿವರ್ಣದ ರಂಗನ್ನು ಗಾಳಿಯಲ್ಲಿ ಚೆಲ್ಲಾಡಿ ಎಲ್ಲರನ್ನೂ ಪುಳಕಿತರನ್ನಾಗಿಸಿದ್ದೂ ಆಯಿತು. ರಷ್ಯನ್ ಏರೋಬ್ಯಾಟಿಕ್ ತಂಡ ‘ಯಾಕೋಲೆವ್’ ಪ್ರದರ್ಶಿಸಿದ ಮೈನವಿರೇಳಿಸುವ ಸಾಹಸವೂ ಕಡಿಮೆಯದ್ದಾಗಿರಲಿಲ್ಲ. ಇನ್ನೇನು, ಈ ಬಾರಿಯೂ ಎಲ್ಲವೂ ಸುಸೂತ್ರವಾಗಿ ಮುಗಿಯಿತು ಎಂದುಕೊಳ್ಳುತ್ತಿದ್ದಾಗಲೇ ಜೆಕ್ ಗಣರಾಜ್ಯದ ತಂಡ 'ರೆಡ್ ಬುಲ್ಸ್' ಒಂದು ಸಣ್ಣ ಅವಘಡವನ್ನೆದುರಿಸಿತು. ಪ್ರದರ್ಶನ ನೀಡುತ್ತಿರುವಾಗ ಸಮತೋಲನ ಕಳೆದುಕೊಂಡ ಅದರ ಎರಡು ವಿಮಾನಗಳ ರೆಕ್ಕೆಗಳು ಪರಸ್ಪರ ಬಡಿದುಕೊಂಡು ನೋಡುಗರಲ್ಲಿ ಗಾಬರಿ ಮೂಡಿಸಿದರೂ ತಕ್ಷಣವೇ ಸಂಭಾಳಿಸಿಕೊಂಡು ಭೂಮಿಗಿಳಿದಿದ್ದರಿಂದ ಯಾವುದೇ ಪ್ರಾಣಾಪಾಯಗಳಾಗಲಿಲ್ಲ. ಒಟ್ಟಾರೆ, ಪ್ರದರ್ಶಿಸಿದವರ ಹಾಗೂ ನೋಡುಗರ ಮನಃಪಟಲಗಳಲ್ಲಿ ಈ ವರ್ಷದ ‘ಏರ್ ಶೋ’ನ ನೆನಪುಗಳು ಬಹುಕಾಲದವರೆಗೆ ಉಳಿಯಲಿವೆ ಎಂಬುದಂತೂ ಸ್ಪಷ್ಟವಾಗಿತ್ತು


ಹಾಗಾದರೆ ಈ ಕಾರ್ಯಕ್ರಮದ ಮೂಲ ಉದ್ದೇಶವೇನು? ಒಂದೆಡೆ ವಿಮಾನ ತಯಾರಕರನ್ನು ಒಟ್ಟು ಮಾಡಿ ಪ್ರದರ್ಶನ ಏರ್ಪಡಿಸಿ, ಮತ್ತೊಂದೆಡೆ ವೈವಿಧ್ಯಮಯ ಸಾಹಸಗಳಿಂದ ಜನರ ಶಹಬ್ಬಾಸ್‍ಗಿರಿ ಪಡೆದರೆ ಕಾರ್ಯಕ್ರಮ ಸಾರ್ಥಕವಾಗಿದೆ ಎಂದರ್ಥವೇ? ಖಂಡಿತ ಇಲ್ಲ. ಸಾರ್ಥಕ್ಯದ ಹಾದಿ ಬಲು ಕಠಿಣವಿದೆ. ಬಲ ಕಳೆದುಕೊಂಡಿರುವ ನಮ್ಮ ರಕ್ಷಣಾ ವಲಯವನ್ನು ಸದೃಢಗೊಳಿಸಬೇಕಿದೆ. ನಮಗೆ ಶಸ್ತ್ರಾಸ್ತ್ರಗಳ, ಯುದ್ಧವಿಮಾನಗಳ ಅಗತ್ಯವಿದೆಯೆಂದು, ಕಿರಾಣಿ ಅಂಗಡಿಯಿಂದ ಸಾಮಾನು ಕೊಂಡಂತೆ ಜಾಗತಿಕೆ ಮಾರುಕಟ್ಟೆಯಿಂದ ಕೊಂಡುಕೊಳ್ಳುವುದರಲ್ಲಿ ಯಾವ ಜಾಣತನವೂ ಇಲ್ಲ. ಮಿಲಿಯಗಟ್ಟಳೆ ಹಣ ವ್ಯಯಿಸಿ ಸಾಲಗಾರರಾಗಿ ಅವುಗಳನ್ನು ಖರೀದಿಸುವುದಕ್ಕಿಂತ ಅವುಗಳ ತಯಾರಿಕೆಯ ತಂತ್ರಜ್ಞಾನವನ್ನು ಅರಿಯುವುದು ಇಂದಿನ ತುರ್ತು ಅಗತ್ಯ. ಆದ್ದರಿಂದಲೇ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೋದಿ ಸರ್ಕಾರ ಒಂದು ಉತ್ತಮ ಕೆಲಸ ಮಾಡಿದೆ. ಹೆಲಿಕಾಪ್ಟರ್‍ಗಳ ಹಾಗೂ ಜಲಾಂತರ್ಗಾಮಿ ಹಡಗುಗಳ ಖರೀದಿಗಾಗಿ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಕರೆದಿದ್ದ ಜಾಗತಿಕ ಟೆಂಡರನ್ನು ರದ್ದುಗೊಳಿಸಿದೆ. ಆ ಮೂಲಕ ಅದಕ್ಕೆ ವ್ಯಯವಾಗಲಿದ್ದ ಮಿಲಿಯಗಟ್ಟಳೆ ಡಾಲರುಗಳನ್ನು ಉಳಿಸಿದೆ. ಅದರ ಮುಂದುವರಿದ ಭಾಗವೇ ಏರೋ ಇಂಡಿಯಾದಲ್ಲಿ ಮಾರ್ದನಿಸಿದ 'ಮೇಕ್ ಇನ್ ಇಂಡಿಯಾ' ಎಂಬ ಘೋಷಣೆ. ತಾಂತ್ರಿಕ ಕೌಶಲವನ್ನು ಎರವಲು ಪಡೆದು ಎಲ್ಲವನ್ನೂ ನಮ್ಮಲ್ಲಿಯೇ ತಯಾರಿಸಿದರೆ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವುದೇ ಅಲ್ಲದೆ ರಕ್ಷಣಾ ಸಾಮಗ್ರಿಗಳ ಬರವೂ ನೀಗುತ್ತದೆ. ಆದ್ದರಿಂದಲೇ ಈ ವಿಷಯವನ್ನು ನಿಸ್ಸಂಕೋಚವಾಗಿ ಏರೋ ಇಂಡಿಯಾ ಉದ್ಘಾಟನೆಯಲ್ಲಿ ಹೇಳಿದರು ಮೋದಿ. 'ಭಾರತ ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ವಿಶ್ವದಲ್ಲೇ ಮೊದಲ ರಾಷ್ಟ್ರ ಎಂಬುದು ನಿಮ್ಮ ಕಿವಿಗೆ ಇಂಪಾಗಿರುವ ವಿಷಯ ನಿಜ, ಆದರೆ ಅದು ನಮಗೆ ಪ್ರಿಯವಾದದ್ದಲ್ಲ. ಯಾವುದರಲ್ಲಿ ಇರಬಾರದೋ ಅದರಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ನಮಗೆ ರಕ್ಷಣಾ ಸಾಮಗ್ರಿಗಳನ್ನು ಬರಿದೇ ಮಾರುವ ಬದಲಿಗೆ ತಂತ್ರಜ್ಞಾನದಲ್ಲಿ ಪಾಲುದಾರರಾಗಿ ಬನ್ನಿ' ಎಂದು ವಿದೇಶೀ ತಯಾರಕರನ್ನು ಕುರಿತು ಅವರು ಆಡಿದ ನೇರ ಮಾತುಗಳಲ್ಲಿ ಅವರ ಉದ್ದೇಶ ಸ್ಪಷ್ಟವಾಗಿತ್ತು.

ತಮ್ಮ ಮಾತುಗಳಿಗೆ ಇಂಬು ಕೊಡುವಂತೆ ಈ ವರ್ಷದ ಬಜೆಟ್‍ನಲ್ಲೂ ರಕ್ಷಣಾ ಇಲಾಖೆಯ ಅಭಿವೃದ್ಧಿಗೆ ಹೆಚ್ಚು ಹಣವನ್ನು ಮೀಸಲಿಟ್ಟಿದೆ ಮೋದಿ ಸರ್ಕಾರ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇನ್ನೊಂದು ದಶಕದಲ್ಲಿ ನಾವೂ ಅಮೆರಿಕ, ರಷ್ಯಾಗಳಿಗೆ ಪೈಪೋಟಿ ನೀಡುವುದು ಖಂಡಿತ. ಆ ‘ಅಚ್ಛೇ ದಿನಗಳು’ ಬೇಗ ಬರಲಿ ಎಂದು ಹಾರೈಸೋಣ ಅಲ್ಲವೇ?