Thursday 19 February 2015

ಈ ಸಮಯ 'ಸಿರಿಸೇನಾ'ಮಯ!

ಅದು 1987ರ ಜುಲೈ 29. ಭಾರತದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಶ್ರೀಲಂಕಾದ ಅಂದಿನ ಅಧ್ಯಕ್ಷ ಜೆ.ಆರ್. ಜಯವರ್ಧನೆ ಅಕ್ಕಪಕ್ಕದಲ್ಲಿ ಕುಳಿತು ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕಿದರು.  ಅದಕ್ಕೆ ಎರಡು ದಿನಗಳ ಹಿಂದಷ್ಟೇ ರಾಜೀವ್ ಎಲ್‍ಟಿಟಿಇನ ಮುಖ್ಯಸ್ಥ ಪ್ರಭಾಕರನ್ ಹಾಗೂ ಅವನ ಕುಟುಂಬವನ್ನು ದೆಹಲಿಗೆ ಕರೆಸಿಕೊಂಡಿದ್ದರು. ಅಲ್ಲಿ ಅವನನ್ನು ಭೇಟಿಯಾಗಿ, ಕುಶಲೋಪರಿ ನಡೆಸಿ ಅಶೋಕ ಹೋಟೆಲ್‍ನಲ್ಲಿ ಅವನಿಗೆ ಹಾಗೂ ಕುಟುಂಬಕ್ಕೆ ವಾಸ್ತವ್ಯ ಕಲ್ಪಿಸಿ ಇಲ್ಲಿ ಒಪ್ಪಂದಕ್ಕೆ ಸಹಿ ಮಾಡಲು ಬಂದಿದ್ದರು. ಒಪ್ಪಂದವಾದ ಮರುದಿನವೇ ಭಾರತದ ಶಾಂತಿ ಪಾಲನಾ ಪಡೆ ಲಂಕೆಗೆ ಬಂದಿಳಿಯಿತು. ಅದಾಗಿ ಸರಿಯಾಗಿ ಮೂರು ದಿನಗಳಿಗೆ, ಅಂದರೆ ಆಗಸ್ಟ್ ಎರಡರಂದು ಪ್ರಭಾಕರನ್‍ನನ್ನು ಶೀಲಂಕಾದ ಜಾಫ್ನಾ ಪಟ್ಟಣಕ್ಕೆ ಕ್ಷೇಮವಾಗಿ ವಾಪಸ್ ಕಳುಹಿಸಲಾಯಿತು. ರಾಜೀವ್ ಎಲ್ಲವೂ ಸುಸೂತ್ರವಾಗಿ ಮುಗಿಯಿತೆಂದು ನಿರಾಳವಾದರು. ತಾನು ಭಾರತ ಹಾಗೂ ಶ್ರೀಲಂಕಾದ ಸಂಬಂಧದ ಹೊಸ ಭಾಷ್ಯ ಬರೆದಿದ್ದೇನೆಂದು ಭಾವಿಸಿದ್ದರೇನೋ, ಆದರೆ ಅವರು ಬರೆದದ್ದು ತಮ್ಮದೇ ಸಾವಿನ ಮುನ್ನುಡಿಯಾಗಿತ್ತು!

ಭಾರತ ಹಾಗೂ ಶ್ರೀಲಂಕಾದ ನಡುವಿನ ಈ ಒಪ್ಪಂದಕ್ಕೆ ಕಾರಣವೂ ಇತ್ತು. 1977ರಿಂದ ಹಿಡಿದು 1987ರವರೆಗೂ ಸುಮಾರು ಒಂದು ದಶಕದ ಕಾಲ ಭಾರತ ಶ್ರೀಲಂಕಾದ ತಮಿಳರಿಗೆ ಬೆಂಬಲ ನೀಡುತ್ತಲೇ ಇತ್ತು. ಶ್ರೀಲಂಕಾ ಸರ್ಕಾರದ ವಿರೋಧದ ನಡುವೆಯೂ ತಮಿಳರ ಪ್ರತ್ಯೇಕತೆಯ ಕೂಗನ್ನು ಪೋಷಿಸಿಕೊಂಡೇ ಬಂದಿತ್ತು. ಹಾಗೆ ಜನ ಸಂಘಟನೆಯಿಂದ ಹಿಡಿದು ಶಸ್ತ್ರಾಸ್ತ್ರಗಳವರೆಗಿನ ತರಬೇತಿಯನ್ನು ನೀಡಿ ಹಾಲೆರೆದು ಪೋಷಿಸಿದ ಕೂಸೇ ಎಲ್‍ಟಿಟಿಇ! ಒಂದೆಡೆ ಬಲಿಷ್ಠವಾಗುತ್ತಿದ್ದ ಎಲ್‍ಟಿಟಿಇ, ಮತ್ತೊಂದೆಡೆ ಅದನ್ನು ಶತಾಯ ಗತಾಯ ಹಣಿಯಲೇಬೇಕೆಂದು ಹೆಣಗುತ್ತಿದ್ದ ಶ್ರೀಲಂಕಾ ಸರ್ಕಾರ. ಮಧ್ಯ ಸಿಲುಕಿ ನಲುಗುತ್ತಿದ್ದವರು ಲಂಕೆಯ ಶ್ರೀಸಾಮಾನ್ಯರು! ಕೊನೆಗೊಮ್ಮೆ ಶ್ರೀಲಂಕಾ ಸರ್ಕಾರ ಎಷ್ಟು ರೋಸಿಹೋಯಿತೆಂದರೆ, ಎಲ್‍ಟಿಟಿಇಯ ಕೇಂದ್ರ ಕಾರ್ಯಸ್ಥಾನವಾದ ಜಾಫ್ನಾ ಪಟ್ಟಣಕ್ಕೆ ಲಗ್ಗೆಯಿಟ್ಟಿತು. ಆಗ ರಾಜೀವ್ ಏನು ಮಾಡಿದರು ಗೊತ್ತೇ? ನಮ್ಮ ವಾಯುಸೇನೆಯ ಹೆಲಿಕಾಪ್ಟರ್‍ ಹಾಗೂ ಯುದ್ಧವಿಮಾನಗಳನ್ನು ಬಳಸಿಕೊಂಡು ಎಲ್‍ಟಿಟಿಇ ತಂಡಕ್ಕೆ ಆಕಾಶದಿಂದಲೇ ಆಹಾರ-ನೀರುಗಳನ್ನು ಸರಬರಾಜು ಮಾಡಿದರು! ಶ್ರೀಲಂಕಾ ಸರ್ಕಾರವೇನಾದರೂ ಮಧ್ಯ ಪ್ರವೇಶಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ನಮ್ಮ ದೇಶದಲ್ಲಿದ್ದ ಶ್ರೀಲಂಕಾದ ರಾಯಭಾರಿಗೆ ಧಮಕಿಯನ್ನೂ ಹಾಕಿದರು. ಇನ್ನು ಪೂರ್ಣ ಪ್ರಮಾಣದ ಯುದ್ಧವಾಗುವುದೊಂದೇ ಬಾಕಿಯಿದ್ದದ್ದು. ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡ ಶ್ರೀಲಂಕಾ ಸರ್ಕಾರ ಇದಕ್ಕೊಂದು ಕೊನೆ ಹಾಡಬೇಕೆಂದು ನಿರ್ಧರಿಸಿತು. ಅದರ ಫಲವೇ ಭಾರತ ಶ್ರೀಲಂಕಾ ಒಪ್ಪಂದ. ಅದರ ಪ್ರಕಾರ ನಿರ್ಧಾರವಾಗಿದ್ದು, ಶ್ರೀಲಂಕಾ ಸರ್ಕಾರ ಜಾಫ್ನಾದಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕು, ಎಲ್‍ಟಿಟಿಇ ತನ್ನ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ತಂದೊಪ್ಪಿಸಬೇಕು ಹಾಗೂ ಶಾಂತಿಯನ್ನು ಕಾಪಾಡಲು ಭಾರತ ಸರ್ಕಾರ ತನ್ನ ಶಾಂತಿ ಪಾಲನಾ ಪಡೆಯನ್ನು ಕಳಿಸಬೇಕು ಎಂದು.



ಒಪ್ಪಂದ ನಡೆಯುವ ಮುನ್ನ ತಮ್ಮ ಗುಂಡು ನಿರೋಧಕ ಕವಚವನ್ನೇ ಪ್ರಭಾಕರನ್‍ಗೆ ಪ್ರೀತಿಯಿಂದ ಕೊಟ್ಟು 'ನಿನ್ನ ಬಗ್ಗೆ ಕಾಳಜಿ ವಹಿಸು' ಎಂದಿದ್ದ ರಾಜೀವ್ ಪ್ರಭಾಕರನ್‍ನನ್ನು ಬಲವಾಗಿ ನಂಬಿದ್ದರು. ಒಪ್ಪಂದ ಮುಗಿಯುವಷ್ಟರಲ್ಲಿ ಇನ್ನೆಲ್ಲಿ ಅವನ ಜೀವಕ್ಕೆ ಸಂಚಕಾರ ಬರುತ್ತದೋ ಎಂದು ಅವನನ್ನು, ಅವನ ಕುಟುಂಬವನ್ನು ಜೋಪಾನ ಮಾಡಿದ್ದರು. ಆದರೆ ಪ್ರಭಾಕರನ್ ರಾಜೀವ್‍ರ ಒಪ್ಪಂದಕ್ಕೆ ಕವಡೆ ಕಾಸಿನ ಬೆಲೆಯನ್ನೂ ಕೊಡಲಿಲ್ಲ ನೋಡಿ, ಆಗಲೇ ಅವರಿಗೆ ತಾವೆಂಥ ಹಾವಿಗೆ ಹಾಲೆರೆದಿದ್ದೇವೆ ಎಂಬುದು ಅರಿವಾಗಿದ್ದು. ಅವನ ಹಾಗೂ ಅವನ ತಂಡದ ಉಪಟಳ ದಿನೇ ದಿನೇ ಹೆಚ್ಚುತ್ತಲೇ ಹೋಯಿತು. 1990ರ ಹೊತ್ತಿಗೆ ಭಾರತದ ಶಾಂತಿ ಪಾಲನಾ ಪಡೆಯ ಒಂದು ಸಾವಿರಕ್ಕೂ ಹೆಚ್ಚು ಸೈನಿಕರು ಹತರಾದರು. ಕೊನೆಗೆ ರಾಜೀವ್‍ಗೆ ಉಳಿದದ್ದು ಒಂದೇ ಮಾರ್ಗ, ಎಲ್‍ಟಿಟಿಇಯನ್ನು ಸದೆಬಡಿಯುವುದು. ಅದನ್ನು ಅವರು ಮನಸ್ಸಿನಲ್ಲೇ ನಿರ್ಧರಿಸಿಕೊಂಡು ಸುಮ್ಮನಿರಬಹುದಿತ್ತು. ಆದರೆ ವಿಧಿಯೆಂಬುದೂ ಒಂದಿದೆಯಲ್ಲ, 1990ರ ಆಗಸ್ಟ್ ತಿಂಗಳಿನಲ್ಲಿ ಸಂಡೇ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ 'ನಾನು ಮುಂದಿನ ಚುನಾವಣೆಯಲ್ಲಿ ಪ್ರಧಾನಿಯಾದರೆ ಎಲ್‍ಟಿಟಿಯ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳುತ್ತೇನೆ' ಎಂದು ಮುಲಾಜಿಲ್ಲದೆ ಹೇಳಿಬಿಟ್ಟರು. ಪ್ರಧಾನಿಯಾಗಲು ಬಿಟ್ಟರೆ ತಾನೇ ನಮ್ಮ ತಂಟೆಗೆ ಬರುವುದು ಎಂದುಕೊಂಡ ಪ್ರಭಾಕರನ್ ಮರುವರ್ಷ ಮೇ ತಿಂಗಳಿನಲ್ಲಿ ಬಾಂಬ್ ದಾಳಿಯೊಂದರಲ್ಲಿ ರಾಜೀವ್‍ರ ಕಥೆಯನ್ನೇ ಮುಗಿಸಿಬಿಟ್ಟ! ಅಲ್ಲಿಗೆ ಭಾರತ ಹಾಗೂ ಶ್ರೀಲಂಕಾದ ನಡುವಿನ ಕೊಂಡಿ ಕಳಚಿಬಿತ್ತು. ರಾಮಾಯಣದ ಭಾಷೆಯಲ್ಲಿ ಹೇಳುವುದಾದರೆ, ಲಂಕೆಯ ರಾವಣ ಭಾರತದ ರಾಮನನ್ನು ಸಂಹರಿಸಿಬಿಟ್ಟಿದ್ದ.

ಹೌದು, ಬೇರೆ ದೇಶಗಳ ಜೊತೆ ಸಂಬಂಧವನ್ನು ಬೆಳೆಸಲು ಆರ್ಥಿಕ, ವಾಣಿಜ್ಯ, ಅಭಿವೃದ್ಧಿಯ ಕಾರಣಗಳಿಗಾಗಿ ತಡಕಾಡುತ್ತೇವೆ. ಆದರೆ ಲಂಕೆಯ ವಿಷಯದಲ್ಲಿ ಅವುಗಳ ಅಗತ್ಯವೇ ಇಲ್ಲ. ರಾಮಾಯಣವೆಂಬ ಕಥೆಯನ್ನು, ರಾಮನೆಂಬ ಆದರ್ಶ ಪುರುಷನನ್ನು ದೇವರೆಂದು ನೆನೆದಾಗಲೊಮ್ಮೆ ಲಂಕೆಯೂ ಕಣ್ಮುಂದೆ ಸುಳಿಯಲೇ ಬೇಕು. ಇಂದಿನ ನೇಪಾಳದ ಜನಕಪುರಿಯಲ್ಲಿ ಜನಿಸಿದ ಸೀತೆ, ಅಯೋಧ್ಯೆಯ ರಾಮನನ್ನು ವರಿಸಿ, ನಾಸಿಕ್‍ನ ಹತ್ತಿರವಿರುವ ಪಂಚವಟಿಯಲ್ಲಿದ್ದಳು ಎನ್ನುವವರೆಗೆ ಮಾತ್ರ ಭಾರತದ ಪಾತ್ರ. ನಂತರ ರಾಮಾಯಣವೆಲ್ಲವೂ ಲಂಕಾಮಯವೇ! ಅವಳನ್ನು ಅಪಹರಿಸಿದ ರಾವಣನನ್ನು ಬೆಂಬೆತ್ತಿ ಹೋದ ವಾನರ ಸೇನೆ ನಿರ್ಮಿಸಿದ ರಾಮ ಸೇತುವನ್ನು, ಲಂಕೆಯಲ್ಲಿರುವ ರಾವಣನ ದೇಗುಲ ಅಥವಾ ಸೀತೆಯ ಅಶೋಕವನವನ್ನು ನೋಡುವಾಗ, ರಾಮಾಯಣ ಬರೀ ಕಾಲ್ಪನಿಕ ಕಥೆ ಎಂದು ವಾದಿಸುವವರು ಕೆಲ ಕ್ಷಣಗಳ ಮಟ್ಟಿಗಾದರೂ ಮೂಗರಾಗಲೇಬೇಕು! ಇಂದಿಗೂ ಲಂಕೆಯ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸುಮಾರು ಮೂವತ್ತು ಜಾಗಗಳಿವೆ! ಐತಿಹ್ಯವೇ ಬೆಸೆದಿರುವ ಈ ತಂತುವನ್ನು ನಾವು ಭಾವರಹಿತವಾಗಿ ಕಡಿದುಕೊಂಡಿದ್ದೇಕೆ ಎಂಬುದು ಮಾತ್ರ ಅರ್ಥವಾಗುವುದಿಲ್ಲ.

ಇರಲಿ, 2009ರಲ್ಲಿ ನಾವು ಲೋಕಸಭಾ ಚುನಾವಣೆಯಲ್ಲಿ ಕಳೆದುಹೋಗಿದ್ದಾಗ ಶ್ರೀಲಂಕಾ ಪ್ರಭಾಕರನ್‍ನನ್ನು ಹೊಡೆದುರುಳಿಸಿತು. ಆಗ ಅದು ಭಾರತದ ಸಹಾಯವನ್ನೇನೂ ಬೇಡಲಿಲ್ಲ. ಅದಕ್ಕೂ ಮುಂಚೆ, ಅಂದರೆ 2005ರಲ್ಲಿ ಮಹಿಂದಾ ರಾಜಪಕ್ಷೆ ಶ್ರೀಲಂಕಾದ ಅಧ್ಯಕ್ಷರಾದ ಮೇಲೆ ಅದು ತಾನು ಭಾರತದ ಗೆಳೆಯ ಎಂದು ಹೇಳಿಕೊಂಡರೂ ಸಾಬೀತು ಮಾಡುವ ಪ್ರಯಾಸವನ್ನೇನೂ ಮಾಡಲಿಲ್ಲ. ನಾವೂ ಅಷ್ಟೇ. ಬೇರೆ ದೇಶಗಳ ಜೊತೆ 'ಟೂ' ಬಿಟ್ಟಷ್ಟೇ ಸಲೀಸಾಗಿ ಇದರ ಜೊತೆಗೂ ಬಿಟ್ಟೆವು. ನಾವು ಇಂಚಿಂಚೇ ಹೊರಬಂದೆವಲ್ಲ, ಚೀನಾ ಮೆಲ್ಲನೆ ಒಳಸರಿಯಿತು. ಲಂಕೆಯಲ್ಲಿ ತನ್ನ ಬಂಡವಾಳವನ್ನು ಧಾರಾಳವಾಗಿ ಹೂಡಿತು. ಅದಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನೆಲ್ಲ ತಾನೇ ಸರಬರಾಜು ಮಾಡಿತು. ರಾಜಪಕ್ಷೆಯವರಿಗಂತೂ ಚೀನಾವೇ ಅಪ್ಯಾಯಮಾನವಾಗಿತ್ತು. ಈ ನಂಟು ಬರೀ ಅವೆರಡು ದೇಶಗಳಿಗೆ ಸೀಮಿತವಾಗಿದ್ದಿದ್ದರೆ ಭಾರತ ಕಳವಳಪಡಬೇಕಾಗಿರಲಿಲ್ಲ. ಆದರೆ ಕಳೆದ ವರ್ಷ ಚೀನಾದ ಜಲಾಂತರ್ಗಾಮಿ ಹಡಗುಗಳು ಎರಡು ಬಾರಿ ಲಂಕೆಯ ಬಂದರಿನಲ್ಲಿ ಲಂಗರು ಹಾಕಿ ನಿಂತವಲ್ಲ, ಆಗ ಭಾರತಕ್ಕೆ ತಳಮಳ ಶುರುವಾಯಿತು. ಆಷ್ಟೇ ಅಲ್ಲ, ಸರ್ವಾಧಿಕಾರಿಯಂತೆ ಆಡತೊಡಗಿದ್ದ ರಾಜಪಕ್ಷೆ ಸಂಪುಟದ ತುಂಬೆಲ್ಲ ತಮ್ಮ ಬಂಧು-ಬಾಂಧವರನ್ನೇ ತುಂಬಿಕೊಂಡಿದ್ದರು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಲಂಕೆಯ ಅಧ್ಯಕ್ಷರಾಗಲು ಇದ್ದ ಎರಡು ಅವಧಿಗಳ ಮಿತಿಯನ್ನೂ ಕಿತ್ತು ಹಾಕಿದ್ದರು. ತಮ್ಮ ಎರಡನೆಯ ಅವಧಿ ಮುಗಿದ ನಂತರವೂ ಅಧಿಕಾರದಲ್ಲೇ ಮುಂದುವರೆಯುವುದು ಅವರ ಹುನ್ನಾರವಾಗಿತ್ತು. ಚೀನಾಗೆ ಬೇಕಾಗಿದ್ದಿದ್ದೂ ಅದೇ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ತಾನೇ?



ಆದರೆ ಕಳೆದ ನವೆಂಬರ್‍ನಲ್ಲಿ ಪವಾಡವೊಂದು ನಡೆದು ಹೋಯಿತು. ರಾಜಪಕ್ಷೆಯ ಸಂಪುಟದಲ್ಲೇ ಆರೋಗ್ಯ ಸಚಿವರಾಗಿದ್ದ ಮೈತ್ರಿಪಾಲ ಸಿರಿಸೇನಾ ತಾನು ಮುಂದಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿಬಿಟ್ಟರು. ಅವರಿಗೆ ರಾವಣ ಬುದ್ಧಿಕೊಟ್ಟನೋ ರಾಮ ಬುದ್ದಿಕೊಟ್ಟನೋ ಅವರೇ ಹೇಳಬೇಕು. ಆದರೆ ಶ್ರೀಲಂಕಾದ ಕೆಲವು ಸುದ್ದಿ ಮಾಧ್ಯಮಗಳ ಪ್ರಕಾರ ಅವರಿಗೆ ಬುದ್ಧಿ ಕೊಟ್ಟದ್ದು ಭಾರತ ಸರ್ಕಾರದ ಗುಪ್ತಚರ ದಳವಂತೆ! ಅಲ್ಲಿಯ ಬೇಹುಗಾರರೊಬ್ಬರು ಸಿರಿಸೇನಾರ ಮನವೊಲಿಸಿದ್ದೂ ಅಲ್ಲದೆ ಅವರ ಪರವಾಗಿ ಹಲವು ಪ್ರಭಾವಿ ಮಾಜಿ ಅಧ್ಯಕ್ಷರು ಹಾಗೂ ಪ್ರಧಾನಮಂತ್ರಿಗಳನ್ನು ಸಂಘಟಿಸಿದರಂತೆ! ಅದರ ಫಲವೇ ಸಿರಿಸೇನಾರಿಗೆ ದಕ್ಕಿದ ವಿಜಯವಂತೆ. ಹಿಂದೊಮ್ಮೆ ಭಾರತ ಲಂಕೆಯ ಅಂತರಂಗಕ್ಕೆ ನೇರವಾಗಿ ಕೈಹಾಕಿ ಕದಡಿತ್ತು. ಈ ಬಾರಿ ಪರೋಕ್ಷವಾಗಿ ಕೈಯ್ಯಾಡಿಸಿ ತನ್ನ ಕಾರ್ಯ ಸಾಧಿಸಿಕೊಂಡಿದೆ ಎಂಬ ಗುಮಾನಿ ಎಲ್ಲರದೂ. ಇಂಥ ವಿಷಯಗಳನ್ನು ಯಾರೂ ನೇರವಾಗಿ ಒಪ್ಪಿಕೊಳ್ಳುವುದಿಲ್ಲ. ಆದರೆ ಸೂಚ್ಯವಾಗಿ ತಮ್ಮ ನಡವಳಿಕೆಯಿಂದ ಅರ್ಥ ಮಾಡಿಸುತ್ತಾರೆ. ಚುನಾವಣೆಯ ಫಲಿತಾಂಶ ಪ್ರಕಟವಾದ ಕೆಲ ತಾಸುಗಳಲ್ಲೇ ಭಾರತದ ರಾಯಭಾರಿ ವೈ.ಕೆ ಸಿನ್ಹಾ ಸಿರಿಸೇನಾರನ್ನು ಭೇಟಿಯಾಗಿ ಶುಭಕೋರಿದರೆ, ಚೀನಾದ ರಾಯಭಾರಿಗೆ ಅವಕಾಶ ಸಿಕ್ಕಿದ್ದು ಬರೋಬ್ಬರಿ ಆರು ದಿನಗಳ ನಂತರ!

ಮರ್ಮಾಘಾತವಾಗಿರುವುದು ತಾನು ಸೋಲುತ್ತೇನೆ ಎಂದು ಕನಸಿನಲ್ಲೂ ನಿರೀಕ್ಷಿಸದಿದ್ದ ರಾಜಪಕ್ಷೆಗೆ ಮಾತ್ರವಲ್ಲ, ಇಂಥ ಫಲಿತಾಂಶವನ್ನು ನಿರೀಕ್ಷಿಸದಿದ್ದ ಚೀನಾಕ್ಕೂ. ಸಿರಿಸೇನಾ ತಮ್ಮ ಹಿಂದಿನ ಸರ್ಕಾರ ಕೈಗೊಂಡಿದ್ದ ಅನೇಕ ನಡೆಗಳನ್ನು ಪ್ರಶ್ನಿಸಿದ್ದಾರೆ. ಆಂತರಿಕವಾಗಿ ಅವರೇನೇ ಮಾಡಿಕೊಳ್ಳಲಿ, ನಮ್ಮ ಕಾಳಜಿಯಿರುವುದು ಅವರು ಚೀನಾದೊಂದಿಗೆ ವ್ಯವಹರಿಸುವ ಬಗ್ಗೆ. ಅದು ಅರ್ಥವಾಗಿದೆಯೆಂಬಂತೆ ತಮ್ಮ ಮೊದಲ ವಿದೇಶ ಪ್ರವಾಸಕ್ಕೆ ಭಾರತವನ್ನೇ ಆಯ್ದುಕೊಂಡು ಬಂದಿದ್ದಾರೆ. ಈಗಿನ ಅವರ ಭೇಟಿ ನಮಗೆ ಬಹಳ ಮುಖ್ಯ. ಒಪ್ಪಂದಗಳಿರುವ ಕಾಗದದ ಮೇಲೆ ಬೀಳುವ ಶಾಯಿಯ ಮೊಹರಿಗಿಂತ ಹೃದಯಗಳಲ್ಲಿ ಅಚ್ಚೊತ್ತುವ ನಂಬಿಕೆ, ವಿಶ್ವಾಸಗಳ ಗುರುತು ಸ್ಥಾಯಿಯಾಗಲಿದೆ.

ಭೂಪಟದಲ್ಲಿರುವಂತೆ ಭಾರತದ ನಕ್ಷೆಯನ್ನು ಬರೆಯಿರಿ ಎಂದಾಗ ನಾವು ಬರೆಯುತ್ತಿದ್ದುದು ಹೇಗೆ ಹೇಳಿ? ಉತ್ತರ, ಪೂರ್ವ, ಪಶ್ಚಿಮಗಳನ್ನು ವಕ್ರರೇಖೆಗಳಲ್ಲಿ ಬಿಡಿಸಲು ತಿಣುಕಾಡಿ, ಕ್ಯಾರಟ್‍ಅನ್ನೋ ಮೂಲಂಗಿಯನ್ನೋ ಹೋಲುವಂತೆ ದಕ್ಷಿಣ ಭಾರತವನ್ನು ಸುಲಭವಾಗಿ ಬಿಡಿಸಿ, ಕೆಳಗೆ ಅದರ ಬಲಕ್ಕೆ ಮಚ್ಚೆಯಂತೆ ಎರಡು ಚುಕ್ಕಿಗಳನ್ನಿಟ್ಟು ಅದರ ಕೆಳಗೆ ನೀರಿನ ಹನಿಯ ಆಕಾರದ ಲಂಕೆಯನ್ನು ಬಿಡಿಸುವುದು. ಯಾವುದನ್ನು ಬರೆಯುವುದು ಕಷ್ಟವಾದರೂ ಲಂಕೆ ಸುಲಭವಾಗಿ ಮೂಡುತ್ತಿತ್ತು ಅಲ್ಲವೇ? ಅದರಲ್ಲಿ ತಪ್ಪಾಗುವುದಿಲ್ಲವೆಂಬ ಖಾತ್ರಿಯೂ ಇರುತ್ತಿತ್ತು. ಅದಿಲ್ಲದ ಭಾರತದ ನಕ್ಷೆ ಎಂದಾದರೂ ನಮಗೆ ಪೂರ್ಣವೆನಿಸುತ್ತಿತ್ತೇ? ನಿಜವಾಗಿಯೂ ಭಾರತಕ್ಕಂಟಿದ ಬಾಲಂಗೋಚಿ ಶ್ರೀಲಂಕಾ ಎನಿಸುವುದು ಅದಕ್ಕೇ.
ನಕ್ಷೆಯಲ್ಲಿ ಬೆಸೆದುಕೊಂಡಿರುವುದು ಈಗ ಹೃದಯಗಳಲ್ಲೂ ಮೂಡಬೇಕಾಗಿದೆ. ಎರಡೂ ರಾಷ್ಟ್ರಗಳ ಕ್ಷೇಮದ, ಅಭಿವೃದ್ಧಿಯ ನೆಪದಲ್ಲಾದರೂ ಇದು ಸಾಧ್ಯವಾದೀತಾ? ಕಾದು ನೋಡೋಣ.

Tuesday 10 February 2015

ಗಂಡೆದೆಯ ಕಾರ್ಯಾಚರಣೆಯನ್ನು ನಡೆಸುವುದು ‘ಬೇಬಿ’ಯಂಥ ತಂಡವೇ!

BABY! ಇದು ಇತ್ತೀಚೆಗೆ ಬಿಡುಗಡೆಯಾದ ಹಿಂದಿ ಚಿತ್ರ. ಚಿತ್ರದ ಹೆಸರು ಸೂಚಿಸುವಂತೆ ಇದು ಯಾವ ಮಗುವಿನ ಕಥೆಯೂ ಅಲ್ಲ, ಬದಲಿಗೆ, ಉಗ್ರರನ್ನು ಹಿಡಿಯುವ ಕಮಾಂಡೋಗಳ ತಂಡದ ಹೆಸರು! ಇದು,  ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡ ಇಂಡಿಯನ್ ಮುಜಾಹಿದ್ದೀನ್‍ನ ಉಗ್ರನೊಬ್ಬನನ್ನು ಹಿಡಿಯಲು ಹರಸಾಹಸ ಪಡುವ ಭಾರತೀಯ ಕಮಾಂಡೋಗಳ ಕಥೆ. ಕಾರ್ಯಾಚರಣೆಯೊಂದನ್ನು ಹೆಣೆದು ಯಶಸ್ವಿಗೊಳಿಸಲು ಎಷ್ಟೆಲ್ಲಾ ತಿಣುಕಾಡಬೇಕಾಗುತ್ತದೆ ಎಂಬುದರಿಂದ ಹಿಡಿದು ಉಗ್ರವಾದದ ಹಿಂದಿರುವ ಪಾಕಿಸ್ತಾನದ ಕೈವಾಡದವರೆಗಿನ ಎಲ್ಲವನ್ನೂ ಈ ಚಿತ್ರ ಬಹಳ ಚೆನ್ನಾಗಿ ಬೆತ್ತಲಾಗಿಸುತ್ತದೆ. ಆದ್ದರಿಂದಲೇ ಇದು ಪಾಕಿಸ್ತಾನದಲ್ಲಿ ನಿಷೇಧಿಸಲ್ಪಟ್ಟಿದೆ! ಅದಿರಲಿ, ಮಹತ್ವದ ವಿಷಯವೇನೆಂದರೆ ಈ ಚಿತ್ರದಲ್ಲಿ ಬರುವ ಕಥೆ ಕಾಲ್ಪನಿಕವಾದುದಲ್ಲ. ತಮ್ಮ ಮನೆ-ಮಠ, ಸಂಸಾರ, ಕೊನೆಗೆ ಅಸ್ತಿತ್ವವನ್ನೇ ಒತ್ತೆಯಿಟ್ಟು ಹೋರಾಡುತ್ತಾರಲ್ಲ ಕಮಾಂಡೋಗಳು, ಆ ಪಾತ್ರಗಳನ್ನು ನಮ್ಮಲ್ಲಿ ಹುಚ್ಚು ಆವೇಶ ತುಂಬಲು ಸುಮ್ಮನೆ ಸೃಷ್ಟಿಸಿಲ್ಲ. ನಿಮಗೆ ಗೊತ್ತಿರಲಿ, ಸಿಕ್ಕಿಬೀಳುವ ಪ್ರತಿಯೊಬ್ಬ ಉಗ್ರನ ಹಿಂದೆಯೂ 'ಬೇಬಿ'ಯಂಥ ತಂಡದ ಕೈವಾಡವಿದ್ದೇ ಇರುತ್ತದೆ. ಅಂಥದ್ದೇ ಒಂದು ತಂಡ 2013ರಲ್ಲಿ ರೋಚಕ ಕಾರ್ಯಾಚರಣೆಯೊಂದನ್ನು ನಡೆಸಿತ್ತು. ಪರಿಣಾಮವೇ ಯಾಸಿನ್ ಭಟ್ಕಳ್‍ನ ಬಂಧನ!


ಯಾಸಿನ್ ಭಟ್ಕಳ್‍‍ನ ಜಾತಕ ನಿಮಗೆ ಗೊತ್ತಿದೆಯಲ್ಲವೇ? ಅವನು ಇಂಡಿಯನ್ ಮುಜಾಹಿದ್ದೀನ್ ಎಂಬ ಉಗ್ರ ಸಂಘಟನೆಯ ಮೂಲ ಶಕ್ತಿಯಾಗಿದ್ದುದು ಮಾತ್ರವಲ್ಲ, ತನ್ನ ಮೇಲೆ ಸುಮಾರು ಮೂರೂವರೆ ಕೋಟಿ ರೂಪಾಯಿಗಳ ಇನಾಮು ಹೊಂದಿದ್ದ! ಹನ್ನೆರಡಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಾತಕವೆಸಗಿ, ನೂರಾರು ಜನರ ಸಾವಿಗೆ ಕಾರಣನಾಗಿ, ಇಗೋ ಸೆರೆ ಸಿಕ್ಕ ಎನ್ನುವಷ್ಟರಲ್ಲಿ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುವ ನಿಸ್ಸೀಮನೂ ಆಗಿದ್ದ. ಅಂಥವನನ್ನು ನಮ್ಮ ವಿಶೇಷ ಕಾರ್ಯಾಚರಣೆ ಪಡೆ ಬಂಧಿಸಿದ್ದು ಹೇಗೆ ಎಂಬ ಕುತೂಹಲ ಮೂಡುವುದು ಸಹಜವಲ್ಲವೇ? ಕೆದಕುತ್ತ ಹೋದಾಗ ಉತ್ತರದ ರೂಪದಲ್ಲಿ ಸಿಕ್ಕ, ಓಪನ್ ಎಂಬ ನಿಯತಕಾಲಿಕದ ಲೇಖನದ ಆಯ್ದ ಭಾಗ ನಿಮ್ಮ ಓದಿಗಾಗಿ ಇಲ್ಲಿದೆ.


ಅದು 2013ರ ಆಗಸ್ಟ್ ತಿಂಗಳ 13ನೇ ತಾರೀಖು. ಗುಪ್ತಚರ ದಳದ(IB) ಜಂಟಿ ನಿರ್ದೇಶಕರು ಬಿಹಾರದ ರಾಜಧಾನಿ ಪಾಟ್ನಾದ ತಮ್ಮ ಆಫೀಸಿನಲ್ಲಿ ಒಂದು ಸಭೆ ನಡೆಸುತ್ತಿದ್ದರು. ಏನಾಗಿತ್ತೆಂದರೆ, ಇಶ್ರತ್ ಜಹಾನ್‍ಳ ಎನ್‍ಕೌಂಟರ್ ನಕಲಿಯೆಂದು ಬೊಬ್ಬೆ ಹೊಡೆಯುತ್ತಿದ್ದ ಕೇಂದ್ರೀಯ ತನಿಖಾ ದಳ(CBI), ಆರೋಪವನ್ನೆಲ್ಲ ಗುಪ್ತಚರ ದಳದ ಮೇಲೆ ಹೊರಿಸಿ ಕೈತೊಳೆದುಕೊಂಡು ಬಿಟ್ಟಿತ್ತು. ಆ ವಿಷಯವಾಗಿಯೇ ಜಂಟಿ ನಿರ್ದೇಶಕರು ತಮ್ಮ ಕೈಕೆಳಗಿನ ಅಧಿಕಾರಿಗಳ ಜೊತೆ ಚರ್ಚಿಸುತ್ತಿದ್ದರು. ತಮ್ಮ ಸಿಬ್ಬಂದಿಯ ಕುಗ್ಗಿದ್ದ ಮನೋಬಲವನ್ನು ಹೆಚ್ಚಿಸುವುದರಲ್ಲಿ ಮಗ್ನರಾಗಿದ್ದರು. ಆಗ ಇದ್ದಕ್ಕಿದ್ದಂತೆಯೇ ಆ ಅಧಿಕಾರಿಗಳ ಪೈಕಿ ಒಬ್ಬರ ಫೋನ್ ರಿಂಗಣಿಸಿತು. ಕರೆ ಮಾಡುತ್ತಿರುವವರು ಯಾರೆಂದು ನೋಡಿದೊಡನೆಯೇ ಆತ ರೂಮಿನಿಂದ ಹೊರಗೆ ಓಡಿದರು! ಅತ್ತ ಕಡೆಯವರು ಹೇಳಿದ ವಿಷಯವನ್ನು ಕೇಳಿ ಅವಾಕ್ಕಾದರು. ಅವರಿಗೆ ಕರೆ ಮಾಡಿದ್ದು ಮತ್ತ್ಯಾರೂ ಅಲ್ಲ, ಪಕ್ಕದ ನೇಪಾಳದ ಪೋಖ್ರಾ ಎಂಬ ಊರಿನಲ್ಲಿದ್ದ ಅವರ ರಹಸ್ಯ ಮಾಹಿತಿದಾರ. ಕರೆ ಮಾಡಿದ್ದ ಕಾರಣವೇನು ಗೊತ್ತೇ? ಯಾಸಿನ್ ಭಟ್ಕಳ್‍ನನ್ನು ತಾನು ಈಗಷ್ಟೇ ನೋಡಿದೆ ಎಂದು ಹೇಳಲು! ಅವನ ಪ್ರಕಾರ ಯಾಸಿನ್ ತನ್ನನ್ನು ಡಾಕ್ಟರ್ ಯೂಸುಫ್ ಎಂದು ಪರಿಚಯಿಸಿಕೊಂಡು ತಾನೊಬ್ಬ ಯುನಾನಿ ವೈದ್ಯ ಎಂದು ಹೇಳಿಕೊಳ್ಳುತ್ತಿದ್ದನಂತೆ.ನಾನು ಕಳಿಸಿದ ಫೋಟೋದಲ್ಲಿರುವ ವ್ಯಕ್ತಿಯ ಹಾಗೇ ಕಾಣುತ್ತಾನೆ ಅಲ್ಲವೇ ನೋಡಲು?’ ಎಂದು ಆ ಅಧಿಕಾರಿ ಕೇಳಿದಾಗ ಮಾಹಿತಿದಾರ ಖಡಾಖಂಡಿತವಾಗಿ ಹೇಳಿಬಿಟ್ಟ. 'ಫೋಟೋದಲ್ಲಿರುವಂತೆ ಗಡ್ಡ ಬಿಟ್ಟಿಲ್ಲ, ನುಣ್ಣಗೆ ಬೋಳಿಸಿಕೊಂಡಿದ್ದಾನೆ. ಆದರೆ ಕಣ್ಣುಗಳು ಮಾತ್ರ ಅವೇ. ಸಂಶಯವೇ ಇಲ್ಲ. ತನ್ನ ಹೆಂಡತಿ ದೆಹಲಿಯಲ್ಲಿದ್ದಾಳೆ ಹಾಗೂ ತಂದೆ-ತಾಯಿ ದುಬೈನಲ್ಲಿದ್ದಾರೆ ಎಂದೂ ಹೇಳುತ್ತಾನೆ' ಎಂದು. ಇಷ್ಟು ಕೇಳಿದ್ದೇ, ಅವನಿಗೆ ಧನ್ಯವಾದ ಹೇಳಿ ಮತ್ತೆ ಒಳಗೆ ಓಡಿದರು ಆ ಅಧಿಕಾರಿ.

ವಿಷಯವನ್ನು ತಮ್ಮ ಮೇಲಾಧಿಕಾರಿಗೆ ಹೇಳುತ್ತಿದ್ದಂತೆಯೇ ಅವರು ತಮ್ಮ ಮೇಲಿನವರಿಗೂ ಆಗಲೇ ಸುದ್ದಿ ಮುಟ್ಟಿಸಿದರು. ಅವನೇ ಯಾಸಿನ್ ಎಂಬುದು ಎಲ್ಲರಿಗೂ ಖಾತ್ರಿಯಾಗಿತ್ತು. ಏಕೆಂದರೆ ಯುನಾನಿ ವೈದ್ಯನಾಗಿ ವೇಷ ಮರೆಸಿಕೊಳ್ಳುವುದು ಯಾಸಿನ್‍ನ ಹೆಗ್ಗುರುತಾಗಿತ್ತು. ಅವನ ಹೆಂಡತಿ ಮತ್ತು ತಂದೆ-ತಾಯಿಯರು ಇದ್ದ ಸ್ಥಳದ ಬಗ್ಗೆ ಅವನು ಕೊಟ್ಟಿದ್ದ ಮಾಹಿತಿಯೂ ಸರಿಯಾಗಿಯೇ ಇತ್ತು. ಆದರೂ ದೆಹಲಿಯ ಉನ್ನತಾಧಿಕಾರಿಗಳಿಗೆ ನಂಬಿಕೆ ಬರಲಿಲ್ಲ. ಇಶ್ರತ್‍ಳ ಪ್ರಕರಣದಲ್ಲಿ ಛಡಿಯೇಟು ತಿಂದಿದ್ದವರು ಇದಕ್ಕೆ ಹೇಗೆ ಕೈ ಹಾಕಿಯಾರು? ಆ ಅಧಿಕಾರಿಯೂ ಬಿಡಲಿಲ್ಲ. 'ಸರ್, ಈ ಅವಕಾಶವನ್ನು ಕೈಚೆಲ್ಲುವುದು ಮೂರ್ಖತನವಾದೀತು. ನನ್ನ ಮಾಹಿತಿದಾರ ಹೇಳಿದ್ದನ್ನು ಅಲ್ಲಗಳೆಯುವಂತಿಲ್ಲ, ಹೇಗಾದರೂ ಮಾಡಿ ದೆಹಲಿಯವರನ್ನು ಒಪಿಸಿ' ಎಂದು ದುಂಬಾಲು ಬಿದ್ದರು. ಮತ್ತೊಮ್ಮೆ ದೆಹಲಿಯ ಬಾಗಿಲು ಬಡಿದ ಜಂಟಿ ನಿರ್ದೇಶಕರಿಗೆ ಕೊನೆಗೂ ಹಲವು ಶರತ್ತುಗಳೊಂದಿಗೆ ಒಪ್ಪಿಗೆ ದೊರೆಯಿತು.

ಈ ಕಾರ್ಯಾಚರಣೆ ಎಲ್ಲೂ ಔಪಚಾರಿಕವಾಗಿ ದಾಖಲಾಗುವಂತಿರಲಿಲ್ಲ. ಕಾರ್ಯಾಚರಣೆಗೆ ಹೋಗುವವರು ತಮ್ಮ ಗುರುತಿನ ಚೀಟಿಗಳನ್ನೂ ಕೊಂಡೊಯ್ಯುವಂತಿರಲಿಲ್ಲ. ಜೀವ ಹೋಗಿಬಿಟ್ಟರಂತೂ ಸರಿಯೇ ಸರಿ, ಒಂದೊಮ್ಮೆ ಬದುಕಿ ಯಾರ ಕೈಗಾದರೂ ಸಿಕ್ಕಿ ಜೈಲು ಪಾಲಾದರೆ ತಮ್ಮ ನಿಜ ನಾಮಧೇಯ, ಕೆಲಸ ಇತ್ಯಾದಿಗಳ ಬಗ್ಗೆ ಬಾಯಿ ಬಿಡುವಂತಿರಲಿಲ್ಲ. ಇವರು ಸೋತರೆ, ಜಂಟಿ ನಿರ್ದೇಶಕರ ಕೆಲಸಕ್ಕೂ ಕುತ್ತು ಕಾದಿತ್ತು. ವಿಶೇಷ ಕಾರ್ಯಾಚರಣೆ ಪಡೆಯ ಮುಖ್ಯಸ್ಥರಾಗಿದ್ದ ಆ ಅಧಿಕಾರಿ ಎಲ್ಲದಕ್ಕೂ ಕಣ್ಮುಚ್ಚಿ ಹೂಂ ಎಂದರು. ತಮ್ಮೊಡನೆ ಇನ್ನೂ ನಾಲ್ಕು ಜನರನ್ನು ಸೇರಿಸಿಕೊಂಡು ಐವರ ತಂಡವನ್ನು ಕಟ್ಟಿಕೊಂಡರು. ಜೊತೆಗೆ ಬಿಹಾರ ಹಾಗೂ ನೇಪಾಳದ ಗಡಿಗಳ ಪರಿಚಯವಿದ್ದ ಪೋಲೀಸ್ ಅಧಿಕಾರಿಯೊಬ್ಬರನ್ನು ಜೊತೆಗೆ ಹೊರಡಿಸಿಕೊಂಡರು.

ವಿಶೇಷ ಕಾರ್ಯಾಚರಣೆ ಪಡೆಯೇನೋ ಸಿದ್ಧವಾಯಿತು, ಆದರೆ ಹೋಗಿ ಬರುವ ಖರ್ಚು-ವೆಚ್ಚ? ಒಪ್ಪಿಗೆ ದೊರೆತದ್ದೇ ದೊಡ್ಡ ವಿಷಯ, ಇನ್ನು ಖರ್ಚಿಗೆ ದುಡ್ಡು ಕೇಳಿದರೆ ಕೊಡುತ್ತಾರೆಯೇ ಎಂದು ಅನುಮಾನಿಸಿದ ಅಧಿಕಾರಿ ತಾವೇ ಗೆಳೆಯರ ಬಳಿ 40 ಸಾವಿರ ರೂಪಾಯಿಗಳನ್ನು ಎರವಲು ಪಡೆದರು! ಜೊತೆಗಿದ್ದ ಪೋಲೀಸ್ ಅಧಿಕಾರಿಯೂ 80 ಸಾವಿರ ರೂಪಾಯಿಗಳ ವ್ಯವಸ್ಥೆ ಮಾಡಿದರು. ಅಂದ ಹಾಗೆ, ಕಾರ್ಯಾಚರಣೆಗಿಳಿದಾಗ ತಮ್ಮ ಸಂಬಳದ ಹಣವನ್ನು ಹೀಗೆ ಖರ್ಚು ಮಾಡುವುದು ವಿಶೇಷ ಪಡೆಯ ಅಧಿಕಾರಿಗಳ ಮಾಮೂಲು ಅಭ್ಯಾಸವಂತೆ. ಹಾಗಂತ ಅವರೇನು ಪ್ರತಿ ತಿಂಗಳೂ ಲಕ್ಷಗಟ್ಟಳೆ ಎಣಿಸುವವರಲ್ಲ. ಆದರೆ ಅವರ ಧಮನಿಗಳಲ್ಲಿ ರಕ್ತಕ್ಕಿಂತ ಹೆಚ್ಚಾಗಿ ಹರಿಯುವ ದೇಶಪ್ರೇಮ ಅವರನ್ನು ಬಿಡಬೇಕಲ್ಲ?

ಅಂದು ಆಗಸ್ಟ್ 20ನೇ ತಾರೀಖು. ಆ ತಂಡ ಎರಡು ಜೀಪುಗಳಲ್ಲಿ ನೇಪಾಳದ ಪೋಖ್ರಾಗೆ ಹೊರಟಿತು. ಪೋಲೀಸ್ ಅಧಿಕಾರಿಯನ್ನು ತಮ್ಮ ಜೊತೆ ಸೇರಿಸಿಕೊಂಡಿದ್ದ ವಿಷಯ ಆ ಐವರನ್ನು ಬಿಟ್ಟರೆ ಮತ್ತ್ಯಾರಿಗೂ ಗೊತ್ತಿರಲಿಲ್ಲ. ಪೋಖ್ರಾ ತಲುಪಿದೊಡನೆ ಗುಂಪಿನ ನೇತೃತ್ವ ವಹಿಸಿದ್ದ ಅಧಿಕಾರಿ ಮಾಡಿದ ಮೊತ್ತ ಮೊದಲ ಕೆಲಸ, ಆ ಮಾಹಿತಿದಾರನನ್ನು ಖುದ್ದು ಭೇಟಿಯಾಗಿದ್ದು. ಎಕೆಂದರೆ ಇಲ್ಲಿಯತನಕ ಅವನೊಡನೆ ಮಾತನಾಡಿದ್ದರೇ ವಿನಾ ಅವನನ್ನು ನೋಡಿರಲಿಲ್ಲ. ಅವನು ಸುಳ್ಳು ಮಾಹಿತಿ ನೀಡಿ ಇವರನ್ನು ಸಿಕ್ಕಿಸುವ ಸಾಧ್ಯತೆಯೂ ಬಹಳಷ್ಟಿತ್ತು. ಅವನೊಡನೆ ಮಾತನಾಡಿದ ಮೇಲೇ ಅವರಿಗೆ ನಿರಾಳವಾಗಿದ್ದು. ಇನ್ನು ಮುಂದಿನ ಕೆಲಸ ಯಾಸಿನ್‍ನ ಅಡಗುತಾಣವನ್ನು ಪತ್ತೆ ಮಾಡುವುದು.

ಯಾಸಿನ್‍‍ನನ್ನು ತಲುಪಲು ಅವನಿಗೆ ಆಪ್ತನಾಗಿದ್ದ ಅಬ್ದುಲ್ಲಾ ಎಂಬಾತನ ನೆರವಿನ ಅಗತ್ಯವಿತ್ತು. ಅಬ್ದುಲ್ಲಾನಿಗೆ ಗಾಳ ಹಾಕಲು ಆ ಅಧಿಕಾರಿ ಮತ್ತೆ ಮಾಹಿತಿದಾರನನ್ನೇ ಉಪಯೋಗಿಸಿಕೊಂಡರು. ವೈದ್ಯನ ಬಳಿ ಹೋಗುವವನು ರೋಗಿಯೇ ತಾನೆ? ತನಗೆ ಹುಷಾರಿಲ್ಲವೆಂದೂ, ತಾನು ಯುನಾನಿ ಔಷಧಿಯನ್ನು ಮಾತ್ರ ತೆಗೆದುಕೊಳ್ಳುತ್ತೇನೆಂದೂ ಅವನು ಹೇಳಿದಾಗ ಅಬ್ದುಲ್ಲಾ ಅವನನ್ನು ವೈದ್ಯರ ಬಳಿ ಕರೆದೊಯ್ಯಲು ಒಪ್ಪಿದ. ಇದಕ್ಕಾಗಿಯೇ ಹೊಂಚು ಹಾಕಿ ಕಾದಿದ್ದ ತಂಡ ಅವರಿಬ್ಬರನ್ನು ಹಿಂಬಾಲಿಸಿತು. ಬಾಡಿಗೆ ಮೋಟಾರ್‍ಬೈಕುಗಳ ಮೇಲೆ, ಟೀ ಶರ್ಟ್ ಹಾಗೂ ಬರ್ಮುಡಾಗಳನ್ನು ತೊಟ್ಟು ಹೊರಟ ಇವರನ್ನು ಪೋಲೀಸರು ಎಂದು ದೇವರಾಣೆಗೂ ಹೇಳಲು ಸಾಧ್ಯವಿರಲಿಲ್ಲ. ಕಾರಿನಲ್ಲಿ ಮುಂದೆ ಹೊರಟ ಅಬ್ದುಲ್ಲಾ ಮತ್ತು ಆ ಮಾಹಿತಿದಾರ ಹೋಗಿ ತಲುಪಿದ್ದು ಹೆದ್ದಾರಿಯ ಅಂಚಿನಲ್ಲಿದ್ದ ಮನೆಯೊಂದನ್ನು.

ಆ ಮಾಹಿತಿದಾರನೇನೂ ಸುಮ್ಮನೆ ಹೋಗಿರಲಿಲ್ಲ. ಅವನಿಗೂ ಕೆಲವು ಹೋಂವರ್ಕ್ ಗಳನ್ನು ನೀಡಿ ಕಳಿಸಲಾಗಿತ್ತು. ವೈದ್ಯರ ಧ್ವನಿಯನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿ ತರುವುದು ಒಂದಾದರೆ, ಅವರ ಹಣೆಯ ಮೇಲೆ ಗಾಯದ ಗುರುತಿದೆಯಾ ಎಂಬುದನ್ನು ಗಮನಿಸುವುದು ಇನ್ನೊಂದು. ಇಷ್ಟೆಲ್ಲ ಮೊದಲ ಭೇಟಿಯಲ್ಲೇ ಸಾಧ್ಯವಾಗುತ್ತದೆಂಬ ಭರವಸೆಯಂತೂ ಇರಲಿಲ್ಲ. ಅಂತೂ ಆಗಸ್ಟ್ 24ರಂದು ವೈದ್ಯರ ಧ್ವನಿಮುದ್ರಣ ಸಿಕ್ಕಿತು. ಅದನ್ನು ಕೇಳಿದೊಡನೆ ಆ ವೈದ್ಯರೇ ಯಾಸಿನ್ ಸಾಹೇಬರು ಎಂಬುದು ಖಾತ್ರಿಯಾಯಿತು. ತಕ್ಷಣವೇ ಜಂಟಿ ನಿರ್ದೇಶಕರಿಗೆ ಫೋನಾಯಿಸಿದರು ಅಧಿಕಾರಿ. 'ನಿಜ ತಾನೆ?' ಎಂಬ ಅವರ ಪ್ರಶ್ನೆಗೆ '200 ಪ್ರತಿಶತ ನಿಜ ಸರ್' ಎಂಬ ಉತ್ತರವನ್ನಿತ್ತರು. ನಿಖರತೆಯ ಪ್ರಾಮುಖ್ಯದ ಅರಿವು ಇಬ್ಬರಿಗೂ ಇತ್ತು. ಬೇರೊಂದು ದೇಶಕ್ಕೆ ಹೋಗಿ, ಬರೀ ಅನುಮಾನದ ಆಧಾರದ ಮೇಲೆ ಯಾರನ್ನೂ ಬಂಧಿಸುವುದು ಸಾಧ್ಯವಿರಲಿಲ್ಲ. ಒಂದು ಪಕ್ಷ ಅವರು ನಿರಪರಾಧಿಯೆಂಬುದು ಸಾಬೀತಾದರೆ ಇವರಿಗೆ ಉಳಿಗಾಲವಿರಲಿಲ್ಲ.

ಯಾಸಿನ್‍ನನ್ನು 'ಎತ್ತಿಹಾಕಿಕೊಂಡು' ಬರಲು ಇವರೇನೋ ತಯಾರಿದ್ದರು, ಅದರೆ ದೆಹಲಿಯವರು ಹೂಂ ಅನ್ನಬೇಕಲ್ಲ? ಬದಲಿಗೆ ನೇಪಾಳ ಸರ್ಕಾರದೊಂದಿಗೆ ತಕ್ಷಣವೇ ಮಾತುಕತೆ ನಡೆಸಿ ಅಲ್ಲಿಯ ಪೋಲೀಸರಿಗೆ ಮಾಹಿತಿ ರವಾನಿಸಿದರು. ಆಗಲೂ ನಮ್ಮ ತಂಡಕ್ಕೆ ಸಿಕ್ಕಿದ್ದು ಬರೀ ಶರತ್ತುಗಳೇ. ನೇಪಾಳದ ಪೋಲೀಸರು ಅವನನ್ನು ಹಿಡಿಯುವ ತನಕ ನಮ್ಮವರು ಮಧ್ಯ ಪ್ರವೇಶಿಸಬಾರದು. ಅವನು ನಿರಪರಾಧಿಯೆಂದು ಸಾಬೀತಾದರೆ ಅವನನ್ನು ಬಿಟ್ಟುಬಿಡಬೇಕು ಇತ್ಯಾದಿ. ಕಾರ್ಯಾಚರಣೆಯನ್ನು ರಾತ್ರಿಯೇ ನಡೆಸಬೇಕು ಎಂಬ ಕಟ್ಟಪ್ಪಣೆ ಬೇರೆ. ಅಂತೂ 28ರ ದಿನಾಂಕ ನಿಗದಿಯಾಯಿತು. ದುರದೃಷ್ಟವೆಂಬಂತೆ ಅಂದು ಸಂಜೆಯಿಂದಲೇ ಧಾರಾಕಾರ ಮಳೆ ಶುರುವಾಯಿತು. ನೇಪಾಳದ ಪೋಲೀಸರು ‘ಇವತ್ತು ಬೇಡ, ಮಳೆಯಿದೆ’ ಎಂದುಬಿಟ್ಟರು. ನಮ್ಮವರ ಹಟದಿಂದ ಅಂತೂ ರಾತ್ರಿ ಎಂಟು ಘಂಟೆಗೆ ಮನೆಯೊಳಗೆ ಹೋದರು. ಅತ್ತ ಅವರು ಹೋದರೆ ಇತ್ತ ಇವರು ಹೊರಗೆ ಚಾತಕ ಪಕ್ಷಿಗಳಂತೆ ಕಾಯುತ್ತ ನಿಂತರು. ಸುಮಾರು ಹತ್ತು ಘಂಟೆಗೆ ನೇಪಾಳದ ಭಾರತೀಯ ದೂತಾವಾಸ ಕಚೇರಿಯಿಂದ ನಮ್ಮ ಪೋಲೀಸರಿಗೆ ಫೋನ್ ಬಂತು. ಮಾತನಾಡಿದ್ದು ಭಾರತೀಯ ಪೋಲೀಸ್ ಅಧಿಕಾರಿಯೇ. 'ಸುಮ್ಮನೆ ನಿರಪರಾಧಿಯನ್ನು ಹಿಡಿದಿದ್ದೀರ. ಅವನೊಬ್ಬ ಸಾಮಾನ್ಯ ಟರ್ಬೈನ್ ಎಂಜಿನಿಯರ್' ಎಂದು ರೇಗಿದರು ಆತ. ಇವರಿಗೂ ರೇಗಿ ಹೋಯಿತು. 'ನೀವು ಐಪಿಎಸ್ ಮಾಡಿರುವುದೇ ನಿಜವಾದರೆ, ಒಬ್ಬ ಯುನಾನಿ ವೈದ್ಯ ತನ್ನನ್ನು ಟರ್ಬೈನ್ ಇಂಜಿನಿಯರ್ ಎಂದು ಹೇಳಿದಾಗಲೇ ನಿಮಗೆ ಅರ್ಥವಾಗಬೇಕು' ಎಂದು ಮಾರುತ್ತರ ನೀಡಿದರು. ಹತ್ತು ನಿಮಿಷಗಳ ನಂತರ ಯಾಸಿನ್‍ನೊಂದಿಗೆ ಹೊರಬಂದರು ಪೋಲೀಸರು. ಕಾದಿದ್ದ ನಮ್ಮವರು ಅವನ ಮೇಲೆರಗುತ್ತಿದ್ದಂತೆಯೇ ಅವನು ತನ್ನ ನಿಜ ಪರಿಚಯವನ್ನು ಹೇಳಿಕೊಂಡ. ಅವನ ಜೊತೆ ಸಿಮಿ ಸಂಘಟನೆಯ ಅಸಾದುಲ್ಲ ಅಖ್ತರ್‍ನೂ ಸೆರೆ ಸಿಕ್ಕ. ಇಬ್ಬರನ್ನೂ ಹಿಡಿದು ಇನ್ನೂ ಸರಿಯಾಗಿ ಗಡಿಯವರೆಗೂ ತಂದಿರಲಿಲ್ಲ, ಅಷ್ಟರಲ್ಲೇ ನಮ್ಮ ಗೃಹ ಸಚಿವಾಲಯ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗಳು ತಾವೇ ಅವನನ್ನು ಹಿಡಿದದ್ದು ಎಂದು ಬೆನ್ನುತಟ್ಟಿಕೊಳ್ಳುವ ಪೈಪೋಟಿಗೆ ಬಿದ್ದಿದ್ದವು!


 ಹೀಗೆ ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಂಡು ಯಾಸಿನ್‍ನನ್ನು ಸೆರೆ ಹಿಡಿದವರಿಗೆ ಸಿಕ್ಕಿದ್ದೇನು ಗೊತ್ತೇ? ಗುಪ್ತಚರ ದಳದ ಜಂಟಿ ನಿರ್ದೇಶಕರಿಗೆ ಒಂದು ಪ್ರಶಸ್ತಿ ಪತ್ರ ಹಾಗೂ ವಿಶೇಷ ಪಡೆಯ ಅಧಿಕಾರಿಗೆ ಒಂದು ಲಕ್ಷ ರೂಪಾಯಿಗಳ ನಗದು! ಮೊದಲು ಆತನಿಗೆ ಮೂರುವರೆ ಲಕ್ಷ ರೂಪಾಯಿಗಳ ಬಹುಮಾನ ಘೋಷಿಸಿದ್ದ ಸುಶೀಲ್ ಶಿಂಧೆಯವರ ಗೃಹ ಸಚಿವಾಲಯ ನಂತರ ಅದನ್ನು ನಾಚಿಕೆಯಿಲ್ಲದೆ ಹಿಂಪಡೆಯಿತು. ಅದು ನೀಡಿದ ಕಾರಣ, ಆತ ಮಾಡಿದ್ದು ತಮ್ಮ ಕರ್ತವ್ಯವನ್ನೇ, ಅದರಲ್ಲೇನೂ ಹೆಚ್ಚುಗಾರಿಕೆಯಿಲ್ಲ ಎಂಬುದು!

ಈಗ ಹೇಳಿ, ಬೆಳಗಿನ ಬಿಸಿಬಿಸಿ ಕಾಫಿ ಹೀರುತ್ತಾ, 'ಆ ಉಗ್ರ ಸೆರೆಸಿಕ್ಕನಂತೆ' ಎಂದು ಪೇಪರಿನಲ್ಲಿ ಓದುವ ನಮಗೆ ಅದೂ ಉಳಿದವುಗಳಂತೆ ಒಂದು ಸುದ್ದಿ ಎನಿಸಿಬಿಡುತ್ತದೆ ಅಲ್ಲವೇ? ಇಂಥ ಸುದ್ದಿಗಳ ರೂವಾರಿಗಳಾಗುವವರ ಗಂಡೆದೆ, ಧೈರ್ಯ, ಸಾಹಸ, ತ್ಯಾಗಗಳು, ನಮ್ಮನ್ನು ಬಹುತೇಕ ತಟ್ಟುವುದೇ ಇಲ್ಲ. ನೀರಜ್ ಪಾಂಡೆಯಂಥ ನಿರ್ದೇಶಕರು ಧೈರ್ಯವಾಗಿ 'ಬೇಬಿ'ಯ ರೂಪದಲ್ಲಿ ಬಿಡಿಸಿ ಹೇಳಿದರೂ ಅದು ನಮ್ಮ ದಪ್ಪ ಚರ್ಮದೊಳಗೆ ಇಳಿಯುವುದಿಲ್ಲ. ಅಲ್ಕಾಳಂಥ ಹೆಣ್ಣುಮಗಳು ಅಪ್ಪನ ಕಳೇಬರದ ಮುಂದೆ ನಿಂತು, 'ನನ್ನನ್ನು ಬಿಟ್ಟು ಹೋದೆಯಲ್ಲ, ಇನ್ಯಾರನ್ನು ಅಪ್ಪಾ ಎನ್ನಲಿ?' ಎಂದು ಅಳುವುದನ್ನು ಬಿಟ್ಟು ಗೂರ್ಖಾ ರೆಜಿಮೆಂಟಿನ ಯುದ್ಧಘೋಷವನ್ನು ಕೂಗುತ್ತಾಳಲ್ಲ ಆಗ ಎಲ್ಲೋ ಕೆಲವೊಮ್ಮೆ ತಟ್ಟುತ್ತದೆ.

ಆದರೆ ನಮ್ಮ ಕಡೆಯಿಂದ ಇಷ್ಟು ಸಂವೇದನೆ ಸಾಕೇ?

                                                                                                                                                                    

Thursday 5 February 2015

ಒಬಾಮಾ 'ಬರಾಕ್' ಒಪ್ಪಿದ್ದೇಕೆ?

ಅದು 1994ರ ಮೇ ತಿಂಗಳು. ನಮ್ಮ ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್ ಅಮೆರಿಕಕ್ಕೆ ಭೇಟಿಯಿತ್ತಿದ್ದರು. ಕೈಬೀಸಿಕೊಂಡು ಹಾಗೆ ಹೋಗಿ ಹೀಗೆ ಬರುವ ಉದ್ದೇಶ ಅವರದ್ದಾಗಿರಲಿಲ್ಲ. ಆರ್ಥಿಕವಾಗಿ ಭಾರತವನ್ನು ಸಬಲಗೊಳಿಸುವ, ಅದಕ್ಕಾಗಿ ವಿಶ್ವದ ದೊಡ್ಡಣ್ಣ ಅಮೆರಿಕದೊಂದಿಗೆ ಕೈಜೋಡಿಸುವ ದೊಡ್ಡದೊಂದು ಕನಸು ಅವರಿಗಿತ್ತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದವರು ಬಿಲ್ ಕ್ಲಿಂಟನ್. ಅವರು ನರಸಿಂಹರಾವ್‍ರ ದೂರದರ್ಶಿತ್ವವುಳ್ಳ ಆಶೋತ್ತರಗಳಿಂದ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ ಸಕಾರತ್ಮಕವಾಗಿಯೇ ಸ್ಪಂದಿಸಿದ್ದರು. ಹೀಗೆ, ಭಾರತದ ಪಾಲಿಗೆ ಅವಕಾಶಗಳ ಬಾಗಿಲು ತೆಗೆಯುವುದು ಖಚಿತವಾಗುತ್ತಿದ್ದಂತೆ ನೆಮ್ಮದಿಯಾಗಿ ಹಿಂದಿರುಗಿದ್ದರು ನರಸಿಂಹರಾವ್!

ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ತಮ್ಮ ಭೇಟಿಯನ್ನು ಸಾರ್ಥಕಗೊಳಿಸಿದ ಕ್ಲಿಂಟನ್‍ರಿಗೆ ಹೇಗೆ ಧನ್ಯವಾದ ಅರ್ಪಿಸುವುದು ಎಂಬ ಯೋಚನೆಯಲ್ಲಿ ಬಿದ್ದರು. ಆಗ ಅವರಿಗೆ ನೆನಪಾಗಿದ್ದೇ 1995ರ ಗಣರಾಜ್ಯೋತ್ಸವದ ಸಂದರ್ಭ! ಕ್ಲಿಂಟನ್‍ರನ್ನೇಕೆ ಮುಖ್ಯ ಅತಿಥಿಯಾಗಿ ಕರೆಸಬಾರದು ಎಂಬ ಆಲೋಚನೆ ಬಂದದ್ದೇ ತಡ, ಅದನ್ನು ತಮ್ಮ ವಿದೇಶಾಂಗ ಕಾರ್ಯದರ್ಶಿ ಕೃಷ್ಣನ್ ಶ್ರೀನಿವಾಸನ್‍ರ ಗಮನಕ್ಕೆ ತಂದರು. ಹೀಗೆ ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಲು ಅಮೆರಿಕಕ್ಕೆ ಮೊತ್ತ ಮೊದಲ ಆಹ್ವಾನ ಹೋಗಿದ್ದು 1994ರ ವರ್ಷಾಂತ್ಯದಲ್ಲಿ! ಬಹುಶಃ ನರಸಿಂಹರಾವ್‍ರಿಗಿದ್ದ ಸಂಭ್ರಮ ಕ್ಲಿಂಟನ್‍ರಿಗಿರಲಿಲ್ಲವೇನೋ. ಜೊತೆಗೆ ಸರಿ ಸುಮಾರು ಅದೇ ಸಮಯಕ್ಕೆ (ಜನವರಿ 26ರ ಆಸುಪಾಸು) ಅಮೆರಿಕದ ಅಧ್ಯಕ್ಷರು ತಮ್ಮ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಪರಿಪಾಠ ವರ್ಷಗಳಿಂದ ಚಾಲ್ತಿಯಲ್ಲಿದೆ. ಅದೇ ಕಾರಣವನ್ನು ಮುಂದೊಡ್ಡಿ ನರಸಿಂಹರಾವ್‍ರ ಆಹ್ವಾನವನ್ನು ಕ್ಲಿಂಟನ್ ನಯವಾಗಿ ತಿರಸ್ಕರಿಸಿದರು! ಪುರಸ್ಕರಿಸಲೇಬೇಕಾದ ಅನಿವಾರ್ಯತೆಯನ್ನು ಆಗಿನ ಕಾಲಕ್ಕೆ ಭಾರತ ಒಂದು ದೇಶವಾಗಿ ಇನ್ನೂ ಸೃಷ್ಟಿಸಿರಲಿಲ್ಲ ಎಂಬುದೂ ಅಷ್ಟೇ ಸತ್ಯ ಬಿಡಿ.

ಪಾಪ, ನರಸಿಂಹರಾವ್ ಅಂದು ಅದೆಷ್ಟು ನಿರಾಶರಾದರೋ! ನಿಮಗೆ ಗೊತ್ತಿರಲಿ, ಭಾರತ ಹಾಗೂ ಅಮೆರಿಕದ ಆರ್ಥಿಕ ಸಂಬಂಧಗಳಿಗೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟ ಮೊತ್ತ ಮೊದಲ ಪ್ರಧಾನಿ ನರಸಿಂಹರಾವ್! ಇಂದು ಲಕ್ಷಾಂತರ ಭಾರತೀಯರು ಒಂದು ಕಾಲನ್ನು ಇಲ್ಲಿ, ಮತ್ತೊಂದು ಕಾಲನ್ನು ಅಮೆರಿಕದಲ್ಲಿ ಇಟ್ಟಿರುವುದಕ್ಕೆ, ಪ್ರತಿ ಡಾಲರ್ ಗಳಿಸಿದಾಗಲೂ x ‍‍‍65 ರೂಪಾಯಿ ಎಂದು ಮನಸ್ಸಿನಲ್ಲೇ ಗುಣಾಕಾರ ಹಾಕಿಕೊಳ್ಳುವುದಕ್ಕೂ ಅವರೇ ಕಾರಣ! ಅಂಥ ಬುದ್ಧಿವಂತ ಹಾಗೂ ದೂರದೃಷ್ಟಿಯುಳ್ಳವರಾಗಿದ್ದ ಮಾಜಿ ಪ್ರಧಾನಿಯನ್ನು ಅವರದ್ದೇ ಆದ ಕಾಂಗ್ರೆಸ್ ಪಕ್ಷ ಸ್ಮರಿಸದೇ ಇದ್ದರೂ ಪರವಾಗಿಲ್ಲ, ನಾವುಗಳಂತೂ ಈಗ ಖಂಡಿತ ನೆನೆಯಲೇಬೇಕು.

ಏಕೆಂದರೆ…

ಇಪ್ಪತ್ತು ವರುಷಗಳ ತರುವಾಯ ಇತಿಹಾಸ ಮರುಕಳಿಸಿದೆ! ನರಸಿಂಹರಾವ್‍ರ ಜಾಡನ್ನೇ ಅನುಸರಿಸಿದ ಭಾರತದ ಮತ್ತೋರ್ವ ಪ್ರಧಾನಿ ಅಮೆರಿಕಕ್ಕೆ ಆಹ್ವಾನ ನೀಡಿ, ಅವರು ಅದನ್ನು ಸ್ವೀಕರಿಸಿ ಭಾರತಕ್ಕೆ ಬಂದೂ ಆಗಿದೆ. ಬರಾಕ್ ಒಬಾಮಾರ ಉಪಸ್ಥಿತಿಯಲ್ಲಿ ನಡೆದ ನಿನ್ನೆಯ ಗಣರಾಜ್ಯೋತ್ಸವ ಎಷ್ಟು ಅದ್ಧೂರಿಯಾತ್ತಲ್ಲವೇ? ಎಲ್ಲೆಲ್ಲೂ ಶಿಸ್ತು, ಭಾವೈಕ್ಯತೆ, ದೇಶಪ್ರೇಮಗಳ ರಂಗು ರಂಗಿನ ಸಿಂಚನ. ಹಾಗೇ, ಮರಣೋತ್ತರವಾಗಿ ನೀಡಲಾದ ಅಶೋಕ ಚಕ್ರವನ್ನು ಪಡೆಯಲು ಬಂದ ವೀರಯೋಧರ ಮಡದಿಯರನ್ನು ನೋಡಿದಾಗ ಹೃದಯ ಭಾರವಾಗಿ, ಗಂಟಲ ಸೆರೆಯುಬ್ಬಿ ಬಂದು ಕಣ್ಣಂಚಿನಲ್ಲಿ ನೀರಾಡಿದ್ದರೂ ಆಶ್ಚರ್ಯವಿಲ್ಲ! ಹೆಮ್ಮೆಯಿಂದ ಎದೆಯುಬ್ಬಿಸಿ ಪಥಸಂಚಲನ ಮಾಡಿದ ನಮ್ಮ ಸೇನಾ ತುಕಡಿಗಳ ಸ್ಫೂರ್ತಿ ಇಮ್ಮಡಿಯಾಗಿದ್ದರೆ, ನೋಡಿ ಆನಂದಿಸಿದ ನಮ್ಮ ಅಭಿಮಾನ ನೂರ್ಮಡಿಯಾಗಿತ್ತು. ಹೌದು. ಅಂತಹುದೇ ಸಂತಸ ಒಬಾಮಾರ ಮುಖದ ಮೇಲೂ ಮಿನುಗುತ್ತಿತ್ತು. ಮೋದಿಯವರು ತಮ್ಮನ್ನು ಸ್ವಾಗತಿಸಿದ ಪರಿಯನ್ನು, ತಮ್ಮೊಡನೆ ನಡೆಸಿದ 'ಚಾಯ್ ಪೆ ಚರ್ಚಾ'ಗಳನ್ನು ಮುಕ್ತವಾಗಿ ಶ್ಲಾಘಿಸಿದ ಒಬಾಮಾರಿಗೆ ಭಾರತದ ಈ ಭೇಟಿ ಅವಿಸ್ಮರಣೀಯವಾಗಲಿದೆ!


ಒಬಾಮಾರ ಈ ಭೇಟಿಯಲ್ಲಿ ಎರಡು ಪ್ರಥಮಗಳಿವೆ. ಮೊದಲನೆಯದು, ನಮ್ಮ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಬರುತ್ತಿರುವ ಅಮೆರಿಕದ ಮೊತ್ತಮೊದಲ ಅಧ್ಯಕ್ಷರೆಂಬುದು. ಎರಡನೆಯದು, ತಮ್ಮ ಅಧಿಕಾರಾವಧಿಯಲ್ಲಿ ಭಾರತಕ್ಕೆ ಎರಡನೆಯ ಬಾರಿ ಭೇಟಿ ನೀಡುತ್ತಿರುವ ಮೊತ್ತಮೊದಲ ಅಧ್ಯಕ್ಷರೆಂಬುದು. ಒಬಾಮಾರಿಗೆ ಪ್ರತಿ ವರ್ಷದಂತೆಯೇ ಈ ಬಾರಿಯೂ ತಮ್ಮ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವಿತ್ತು. ಅದನ್ನೇ ನೆಪವಾಗಿಸಿಕೊಂಡು ಮೋದಿಯವರ ಆಹ್ವಾನವನ್ನು ತಿರಸ್ಕರಿಸಬಹುದಾಗಿತ್ತಲ್ಲ? ಅವರು ಹಾಗೆ ಮಾಡಲಿಲ್ಲ. ಆಹ್ವಾನವನ್ನು ಸ್ವೀಕರಿಸಿದವರೇ, ತಮ್ಮ ಭಾಷಣದ ವೇಳಾಪಟ್ಟಿಯನ್ನು ಇದೇ ಜನವರಿ ತಿಂಗಳ 20ಕ್ಕೆ ಬದಲಾಯಿಸಿಕೊಂಡರು. ಅದನ್ನು ಮುಗಿಸಿಕೊಂಡು ಕೊಟ್ಟ ಮಾತಿನಂತೆಯೇ ಇಲ್ಲಿಗೆ ಬಂದಿಳಿದಿದ್ದಾರೆ. ಹಾಗಾದರೆ ಅವರನ್ನು ಇಲ್ಲಿಗೆ ಕರೆತಂದದ್ದು ಏನು? ಮೋದಿಯವರ ವರ್ಚಸ್ಸಾ? ಬದಲಾಗುತ್ತಿರುವ ರಾಜಕೀಯ ವಿದ್ಯಮಾನಗಳಾ? ವಿಶ್ಲೇಷಿಸೋಣ.

ನಮ್ಮ ದೇಶದ ಕಾರ್ಯಕ್ರಮಗಳಿಗೆ ಅನ್ಯ ದೇಶದ ಗಣ್ಯರನ್ನು ಆಹ್ವಾನಿಸುವಾಗ ಎರಡು ಮುಖ್ಯ ಮಾನದಂಡಗಳು ಗಣನೆಗೆ ಬರುತ್ತವೆ. ಒಂದು, ಆ ಗಣ್ಯರ ಬರುವಿಕೆಯಿಂದ ದೇಶದೊಳಗೆ ಕ್ಷೋಭೆಯ ವಾತಾವರಣ ಉಂಟಾಗುತ್ತದಾ ಎಂಬುದು. ಎರಡನೆಯದು, ಆ ದೇಶದೊಂದಿಗೆ ದೀರ್ಘಕಾಲೀನ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಲು ಸಾಧ್ಯವಾ ಎಂಬುದು. ಆದ್ದರಿಂದಲೇ ನಾವು ಜಪಾನಿನ ಪ್ರಧಾನಿ ಶಿಂಜೋ ಅಬೆಯವರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿದ್ದೇವೆಯೇ ಹೊರತು ಚೀನಾ ಅಥವಾ ಪಾಕಿಸ್ತಾನವನ್ನು ಕರೆಯುವ ತಂಟೆಗೆ ಹೋಗಿಲ್ಲ! ಇನ್ನು ಅಮೆರಿಕದ ವಿಷಯದಲ್ಲಿ ಮೊದಲನೆಯ ಅಂಶ ಅನ್ವಯವಾಗುವುದಿಲ್ಲವಾದರೂ ರಾಜತಾಂತ್ರಿಕ ಸಂಬಂಧಗಳು ಮೊದಲಿನಿಂದಲೂ ಒಂದೇ ತೆರನಾಗಿಲ್ಲ.

1994ರಲ್ಲಿ ನರಸಿಂಹರಾವ್ ಆರಂಭಿಸಿದ ಭರ್ಜರಿ ಇನ್ನಿಂಗ್ಸ್ ಮುಂದಿನ ಪ್ರಧಾನಿ ಐ.ಕೆ ಗುಜರಾಲ್‍ರ ಅವಧಿಯಲ್ಲಿ ಸ್ವಲ್ಪ ಮಂಕಾಗಿತ್ತು. ನಂತರ ಅಧಿಕಾರಕ್ಕೇರಿದ ವಾಜಪೇಯಿವರು ನಾಲ್ಕು ಬಾರಿ ಅಮೆರಿಕಕ್ಕೆ ಭೇಟಿ ನೀಡಿ ತಂತ್ರಜ್ಞಾನಕ್ಕೆ ಒತ್ತು ಕೊಟ್ಟರು. ಆದರೆ 1998ರ ಪೋಖ್ರಾನ್ ಅಣು ಪರೀಕ್ಷೆಯಿಂದಾಗಿ ಅಮೆರಿಕ ನಮ್ಮ ಮೇಲೆ ಆರ್ಥಿಕ ದಿಗ್ಬಂಧನ ಹೇರಿಬಿಟ್ಟಿತು. ಆಗ ಇಡೀ ವಿಶ್ವದ ಎಲ್ಲ ರಾಷ್ಟ್ರಗಳೂ ನಮ್ಮನ್ನು ಖಂಡಿಸಿದರೂ ನಮ್ಮ ಜೊತೆ ನಿಂತಿದ್ದು ಇಸ್ರೇಲ್ ಮಾತ್ರ! ಇನ್ನು, ವಾಜಪೇಯಿಯವರ ನಂತರ ಬಂದ ‘ಮೌನ’ಮೋಹನ ಸಿಂಗ್‍ರು ಸುಮಾರು ಎಂಟು ಬಾರಿ ತಮ್ಮ ‘ಪುಷ್ಪಕ ವಿಮಾನ’ದಲ್ಲಿ ಅಮೆರಿಕ ಪ್ರವಾಸ ಮಾಡಿದರೂ ಒಂದೊಂದರದ್ದೂ ಒಂದೊಂದು ಕಥೆ! ಅದನ್ನು ಈಗ ಹೇಳಿ ಪ್ರಯೋಜನವಿಲ್ಲ ಬಿಡಿ. ಒಟ್ಟಾರೆ ಕಳೆದ ದಶಕದಲ್ಲಿ ನಮ್ಮನ್ನು ನಾವು ಬೆನ್ನೆಲುಬೇ ಇಲ್ಲದಂತೆ ಬಿಂಬಿಸಿಕೊಂಡ ರೀತಿಯನ್ನು ನೋಡಿದ ಅಮೆರಿಕ ಏನು ಮಾಡಿತ್ತು ಗೊತ್ತೇ? ಚೀನಾಕ್ಕೆ ನೇರವಾಗೇ 'ದಕ್ಷಿಣ ಏಷ್ಯಾ ಪೂರ್ತಿ ನಿನ್ನದೇ' ಎಂದು ಹೇಳಿಬಿಟ್ಟಿತ್ತು.

ಆ ಮಾತಿಗೇ ಕಾದು ನಿಂತಿದ್ದ ಚೀನಾ ಸರಸರನೆ ತನ್ನ ಕುತಂತ್ರದ ಸರಪಳಿ ಹೆಣೆಯತೊಡಗಿತು. ಭಾರತವನ್ನು ಸುತ್ತುವರೆಯಲು ನೌಕಾನೆಲೆಗಳನ್ನು ಸ್ಥಾಪಿಸಿದ್ದೇ ಅಲ್ಲದೆ ನಮ್ಮ ನೆರೆಯ ಪಾಕಿಸ್ತಾನ, ನೇಪಾಳ ಹಾಗೂ ಇತರೆ ದೇಶಗಳೊಂದಿಗೂ ಸಂಬಂಧವನ್ನು ಬಲಗೊಳಿಸಿಕೊಂಡಿತು. ಚೀನಾ ಬರೀ ಏಷ್ಯಾದಲ್ಲಿ ಪ್ರಬಲವಾಗಲು ಹವಣಿಸಿದ್ದರೆ ಅಮೆರಿಕ ಸುಮ್ಮನಿರುತ್ತಿತ್ತೇನೋ, ಆದರೆ ತನ್ನ ನಂ. 1 ಸ್ಥಾನಕ್ಕೇ ಕುತ್ತು ತರಲು ತಯಾರಾಗಿದ್ದನ್ನು ನೋಡಿ ಅದು ಕೆರಳಿತು. ಮುಖ್ಯವಾಗಿ ದಕ್ಷಿಣ ಚೀನಾ ಸಮುದ್ರವನ್ನು, ಅದರಲ್ಲಿರುವ ತೈಲ ನಿಕ್ಷೇಪವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂಬ ಚೀನಾದ ಹವಣಿಕೆಯನ್ನು ಅದು ನಿಷ್ಫಲಗೊಳಿಸಲೇಬೇಕಿತ್ತು! ಆದ್ದರಿಂದ 2010ರಿಂದಲೇ ಚೀನಾವನ್ನು ಹತ್ತಿಕ್ಕಲು ಶುರುಮಾಡಿತು. ಸಿಂಗಪೂರ್, ವಿಯೆಟ್ನಾಂ, ಫಿಲಿಪ್ಪೀನ್ಸ್ ಹಾಗೂ ಥಾಯ್ಲೆಂಡ್‍ಗಳಿಗೆ ತನ್ನ ಸೇನೆಯನ್ನು ಕಳಿಸಿ ಚೀನಾಕ್ಕೆ ಪರೋಕ್ಷವಾಗಿ ಬೆದರಿಕೆಯೊಡ್ಡಿತು. ಕಳೆದ ವರ್ಷ ಆಯ್ಕೆಯಾದ ಭಾರತದ ಹೊಸ ಪ್ರಧಾನಿಗಳನ್ನು ಅರಿತ ಮೇಲೆ ಅದಕ್ಕೂ ತುಸು ನೆಮ್ಮದಿಯಾಗಿರಬೇಕು. ಪರಿಣಾಮವೇ, ಭಾರತದ ಈ ಭೇಟಿ!

ಹಾಗಾದರೆ ಇದರಲ್ಲಿ ನಮ್ಮ ಲಾಭವೇನೂ ಇಲ್ಲವೇ? ಇದೆ. ಆರ್ಥಿಕ, ವ್ಯಾಪಾರ ವಲಯಗಳಲ್ಲಿ ಬಹಳಷ್ಟು ಒಪ್ಪಂದಗಳು ನಡೆದಿವೆ. ಸೌರಶಕ್ತಿಯ ಬಳಕೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸರಬರಾಜು ಹಾಗೂ ಬೇಹುಗಾರಿಕೆಯ ವಲಯಗಳಲ್ಲೂ ಮಹತ್ತರವಾದ ಮೈಲುಗಲ್ಲುಗಳು ಸೃಷ್ಟಿಯಾಗಿವೆ. ಎಲ್ಲಕ್ಕಿಂತ ಮುಖ್ಯವಾದ ಗೆಲುವು ದಕ್ಕಿರುವುದು ಪರಮಾಣು ಒಪ್ಪಂದದಲ್ಲಿ. 2008ರಲ್ಲಿ ನಡೆದಿದ್ದ ಒಪ್ಪಂದದನ್ವಯ ಅಮೆರಿಕ ಭಾರತಕ್ಕೆ ಅಣು ರಿಯಾಕ್ಟರ್‍ಗಳನ್ನು ಪೂರೈಸಬೇಕಿತ್ತು. ಆದರೆ ನಮ್ಮ ಎರಡು ಶರತ್ತುಗಳನ್ನು ಅದು ಒಪ್ಪಿರಲಿಲ್ಲ. ಮೊದಲನೆಯದು, ಏನಾದರೂ ಅವಗಢವಾದ ಪಕ್ಷದಲ್ಲಿ ಭಾರತಕ್ಕೆ ಅಣು ರಿಯಾಕ್ಟರ್‍ಗಳನ್ನು ಸರಬರಾಜು ಮಾಡುವ ಸಂಸ್ಥೆಯ ಹೊಣೆ ಎಷ್ಟಿರುತ್ತದೆಯೋ ಆ ರಿಯಾಕ್ಟರ್‍ಗಳ ಬಿಡಿ ಭಾಗಗಳನ್ನು ಪೂರೈಸುವವರ ಹೊಣೆಗಾರಿಕೆಯೂ ಅಷ್ಟೇ ಇರುತ್ತದೆ ಎಂಬುದು. ಇದರಿಂದಾಗಿ ಅಮೆರಿಕದ ಮೇಲೆ ಬೀಳುವ ವಿಮೆಯ ಹಣದ ಭಾರ ಅಪಾರ. ಎರಡನೆಯದು, ನಮಗೆ ಸರಬರಾಜಾಗುವ ಅಣು ಇಂಧನ ಅಥವಾ ಇತರೆ ಕಚ್ಚಾ ವಸ್ತುಗಳ ಮೇಲೆ ಅಮೆರಿಕ ಬೇಹುಗಾರಿಕೆ ನಡೆಸುವಂತಿಲ್ಲ ಎಂಬುದು. ಈಗ ಒಬಾಮಾ ಅವುಗಳನ್ನು ಒಪ್ಪಿದ್ದಾರೆ!

ಹಾಗೆಂದು ನಾವು ಅತಿಯಾಗಿ ಸಂಭ್ರಮ ಪಡುವಂತೆಯೂ ಇಲ್ಲ. ಒಂದು ಕೈಯಲ್ಲಿ ಮಗುವನ್ನು ಚಿವುಟಿ, ಮತ್ತೊಂದು ಕೈಯ್ಯಲ್ಲಿ ತೊಟ್ಟಿಲನ್ನು ತೂಗುವುದರಲ್ಲಿ ಅಮೆರಿಕ ನಿಸ್ಸೀಮ! ನಾವು ಎಷ್ಟೆಷ್ಟು ಕೇಳಿಕೊಂಡರೂ ಅದು ಪಾಪಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಸರಬರಾಜನ್ನು ನಿಲ್ಲಿಸುವುದಿಲ್ಲ. ಭಾರತ ಹಾಗೂ ರಷ್ಯಾದ ಮಿತೃತ್ವಕ್ಕೆ ಸಡ್ದು ಹೊಡೆಯಲು 1954ರಲ್ಲಿ ಪಾಪಿಸ್ತಾನದ ಕೈ ಹಿಡಿದ ಅಮೆರಿಕಕ್ಕೆ ಇನ್ನೂ ಅದಕ್ಕೆ ವಿಚ್ಛೇದನ ಕೊಡಲು ಸಾಧ್ಯವಾಗಿಲ್ಲ! ‘ಆಂತರಿಕ ಭಯೋತ್ಪಾದನೆಯ ನಿಗ್ರಹಕ್ಕೆ’ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಪಾಕ್ ಭಿಕ್ಷೆ ಬೇಡಿದಾಗಲೆಲ್ಲ ಅದರ ಜೋಳಿಗೆಗೆ ಹೊಸ ಆಯುಧಗಳನ್ನು ಸುರಿಯುತ್ತದೆ. ಅವು ಬಲಿತೆಗೆದುಕೊಳ್ಳುವುದು ಭಾರತೀಯ ಸೈನಿಕರು ಹಾಗೂ ನಾಗರಿಕರನ್ನು ಎಂಬುದು ಗೊತ್ತಿದ್ದೂ! ಹಾಗೇ, ಅಫಘಾನಿಸ್ತಾನದಲ್ಲಿರುವ ತನ್ನ ಪಡೆಯನ್ನೂ ಅದು ಹಿಂಪಡೆದುಕೊಳ್ಳುವುದಿಲ್ಲ. ತಾನಾಯಿತು ತನ್ನ ಪಾಡಾಯಿತು ಎಂದು ಸುಮ್ಮನಿರುವುದು ಅದರ ಜಾಯಮಾನದಲ್ಲೇ ಇಲ್ಲ. ಯಾರ ಮನೆ ಬೇಳೆ ಬೆಂದಿದೆ ಯಾರದ್ದು ಬೆಂದಿಲ್ಲ ಎಂಬ ಮಾಹಿತಿ ಅದಕ್ಕೆ ಬೇಕೇ ಬೇಕು.

ಈ ಮಿತಿಗಳ ನಡುವೆಯೂ ಎರಡೂ ದೇಶಗಳ ಸಂಬಂಧ ಹೊಸದಾಗಿ ಚಿಗುರುತ್ತಿದೆ. ನಮ್ಮ ತಾಳಕ್ಕೆ ತಕ್ಕಂತೆ ಹೇಗೆ ಅಮೆರಿಕ ಕುಣಿಯುವುದಿಲ್ಲವೋ, ಅದರ ತಾಳಕ್ಕೆ ತಕ್ಕಂತೆ ನಾವು ಕುಣಿಯುವ ಅಗತ್ಯವೂ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುತ್ತಿದೆ ಮೋದಿ ಸರ್ಕಾರ. ಇಲ್ಲಿ ಒಂದು ವಿಷಯವನ್ನು ನಾವು ಗಮನಿಸಬೇಕು. ಎಲ್ಲ ದೇಶಗಳ ನೇತಾರರಿಗೂ ಅಂತಿಮವಾಗಿ ಮುಖ್ಯವಾಗುವುದು ತಮ್ಮ ದೇಶದ ಹಿತಾಸಕ್ತಿಯೇ. ಅದಕ್ಕೆ ಧಕ್ಕೆ ತರುವವರನ್ನು ಜಾಣ್ಮೆಯಿಂದ ನಿಭಾಯಿಸುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಇಷ್ಟು ದಶಕಗಳ ಬಳಿಕ ಅಂಥ ಚತುರ ಕಲೆಗಾರಿಕೆಯ ನೇತಾರ ನಮಗೆ ಸಿಕ್ಕಿದ್ದಾರೆ. ಜಿನ್‍ಪಿಂಗ್ ಬಂದು ಹೋದ ಬೆನ್ನಲ್ಲೇ ಒಬಾಮಾ ಬಂದಿದ್ದಾರೆ. ಇನ್ನುಳಿದಿರುವುದು ಸಂದರ್ಭಾನುಸಾರ ನಮ್ಮ ಹಿತಾಸಕ್ತಿಯನ್ನು ಪೋಷಿಸಿಕೊಂಡು ಹೋಗುವುದಷ್ಟೇ!



ನಮ್ಮ ಪ್ರಧಾನಿ ರಾಜನೀತಿಯ ಹದವನ್ನರಿತು ವಿದೇಶಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುತ್ತಿದ್ದಾರೆ. ಇಲ್ಲಿಗೆ ಬರಲು ಒಬಾಮಾರಿಗೆ ಸಾಕಷ್ಟು ರಾಜತಾಂತ್ರಿಕ ಕಾರಣಗಳಿರಬಹುದು. ಆದರೆ ಅವರ ಬಾಯಿಂದಲೇ ‘ಯೂ ಆರ್ ಎ ಮ್ಯಾನ್ ಆಫ್ ಆಕ್ಷನ್’ ಎಂದು ಮುಕ್ತವಾಗಿ ಹೊಗಳಿಸಿಕೊಂಡ ನಮ್ಮ ಪ್ರಭಾವಿ ಪ್ರಧಾನಿಗಳೂ ಒಂದು ಮುಖ್ಯ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ!
ಪರಮಾಣು ಒಪ್ಪಂದದ ಹೆಗ್ಗಳಿಗೆ ತಮಗೇ ಸೇರಬೇಕು ಎಂದು ಕಾಂಗ್ರೆಸ್ ಮಂದಿ ಬಾಯಿಮಾಡುತ್ತಿದ್ದಾರೆ. 2008ರಲ್ಲಿ ಇದೇ ಒಪ್ಪಂದಕ್ಕೆ ಸಹಿ ಮಾಡಬೇಡಿ ಎಂದು ಸೋನಿಯಾ ಹಟ ಹಿಡಿದಿದ್ದನ್ನು, ಬೇಸತ್ತ ಮನಮೋಹನ್ ಸಿಂಗ್ ರಾಜೀನಾಮೆಯ ಧಮಕಿ ನೀಡಿದ್ದನ್ನು ಕಾಂಗ್ರೆಸ್ ಮರೆತಿದೆಯೇ? ಅಂದು ಸೋನಿಯಾರ ವಿರೋಧದ ನಡುವೆಯೂ ನಡೆದ ಒಪ್ಪಂದ ನಂತರ ಅಲ್ಲೇ ಕಾಲು ಮುರಿದುಕೊಂಡು ಕುಳಿತಿತೇಕೆ?

ವಿದೇಶೀ ವಿಶ್ವವಿದ್ಯಾಲಯಗಳ ಪದವಿ, ಬಿರುದುಗಳಿಂದ ಸಾಧಿಸಲಾಗದ್ದನ್ನು ಪ್ರಭಾವಿ ವ್ಯಕ್ತಿತ್ವದಿಂದ ಸಾಧಿಸಬಹುದು! ಅಮ್ಮನ ಸೆರಗಿನಲ್ಲಿ ಅವಿತುಕೊಳ್ಳುವವರಿಂದ ಇಂಥ ಫಲಿತಾಂಶಗಳನ್ನು ನಿರೀಕ್ಷಿಸಲು ಸಾಧ್ಯವೇ?