Sunday 4 May 2014

ದೇಶವನ್ನೇ ಹೊನ್ನಶೂಲಕ್ಕೇರಿಸುವ ಅಕ್ಷಯ ತದಿಗೆ!

ಮತ್ತೊಂದು ಅಕ್ಷಯ ತದಿಗೆ ಹಾದುಹೋಗಿದೆ. ಮಾಮೂಲಿನಂತೆ ಬಾರಿಯೂ ಕಂಡದ್ದು ಚಿನ್ನ ಕೊಳ್ಳುವ ಸಡಗರವೇ. ಕೈಯಲ್ಲಿ ದುಡ್ಡಿಲ್ಲದಿದ್ದರೂ ಸರಿ, ಹೇಗಾದರೂ ಗುದ್ದಾಡಿ ಕೆಲವೇ ಕೆಲವು ಗ್ರಾಂಗಳನ್ನಾದರೂ ಕೊಳ್ಳಲೇಬೇಕು. ಯಥೇಚ್ಛ ದುಡ್ಡಿದ್ದರಂತೂ ಮುಗಿದೇ ಹೋಯಿತು. ಪ್ರತಿಷ್ಠಿತ ಚಿನ್ನದ ಮಳಿಗೆಗಳಿಗೆ ಬೆಳ್ಳಂಬೆಳಿಗ್ಗೆಯೇ ಲಗ್ಗೆಯಿಟ್ಟು ಉದ್ದ ಕ್ಯೂನಲ್ಲಿ ತಾಸುಗಟ್ಟಲೆ ನಿಂತು ಸಾಧ್ಯವಾದಷ್ಟೂ ತೂಕದ ಒಡವೆಯನ್ನೋ, ಕಾಸನ್ನೋ, ಬಿಸ್ಕತ್ತನ್ನೋ ಕೈಲಿ ಹಿಡಿದೇ ಬರಬೇಕು. ಬೆಳಗಿನಿಂದ ಸಂಜೆಯವರೆಗಿನ ಸಮಯ ಪೂರ್ತಿ ವ್ಯಯವಾದರೂ ಸರಿಯೇ, ಲಕ್ಷ್ಮೀದೇವಿಯ ಆವಾಹನೆ ರೂಪದಲ್ಲೇ ಆಗಬೇಕು. ತಂದ ಚಿನ್ನವನ್ನು ಪೂಜಿಸಿ ಮನೆಯ ತಿಜೋರಿಯಲ್ಲೋ ಬ್ಯಾಂಕ್ ಲಾಕರ್ನಲ್ಲೋ ಇಡಬೇಕು. ಆಮೇಲೆ ಅದು ಮೊಟ್ಟೆ ಇಡುತ್ತದೋ, ಮರಿ ಹಾಕುತ್ತದೋ ಒಟ್ಟಿನಲ್ಲಿ ಹೇಗೋ ಅಕ್ಷಯ ಆಗಿಯೇ ತೀರುತ್ತದೆ ಎಂಬ ಸಮಾಧಾನವನ್ನೂ ತಂದುಕೊಳ್ಳಬೇಕು.

ನಿಜವಾಗಿಯೂ ವಿಧ್ಯುಕ್ತವಾಗಿ ಚಿನ್ನದ ಖರೀದಿಗೆ ಮೀಸಲಾಗಿರುವುದೇ ಅಕ್ಷಯ ತದಿಗೆ? ಅಲ್ಲ ಎನ್ನುತ್ತವೆ ನಮ್ಮ ಪುರಾಣದ ಪುರಾವೆಗಳು. ಯಾವುದೇ ಶುಭ ಕಾರ್ಯಗಳಿಗಾದರೂ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಡುವ ಮೂರೂವರೆ ಮುಹೂರ್ತಗಳಲ್ಲಿ ಇದೂ ಒಂದು. ಮೊದಲನೆಯದು ಚೈತ್ರ ಮಾಸ ಶುದ್ಧ ಪಾಡ್ಯವಾದರೆ, ಎರಡನೆಯದು ವೈಶಾಖ ಮಾಸ ಶುದ್ಧ ತದಿಗೆ (ಅಕ್ಷಯ ತದಿಗೆ). ಮೂರನೆಯದು ಅಶ್ವಿನ ಮಾಸ ಶುದ್ಧ ದಶಮಿ (ವಿಜಯದಶಮಿ)ಯಾದರೆ, ಕೊನೆಯ ಅರ್ಧ ಕಾರ್ತಿಕ ಮಾಸ ಶುದ್ಧ ಪಾಡ್ಯ. ಮೂರೂವರೆ ಮುಹೂರ್ತಗಳಲ್ಲಿ ಅಕ್ಷಯ ತದಿಗೆಗೆ ಬಹಳ ಪ್ರಾಶಸ್ತ್ಯವಿದೆ. ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವಿನ ಆರನೆಯ ಅವತಾರವಾದ ಪರಶುರಾಮನ ಜನನವಾದದ್ದು ದಿನವಂತೆ. ಗಂಗೆ ಧರೆಗಿಳಿದದ್ದು, ಯುಧಿಷ್ಠಿರನಿಗೆ ಅಕ್ಷಯಪಾತ್ರೆ ಲಭ್ಯವಾದದ್ದೂ ಇದೇ ದಿನ ಎಂಬ ಪ್ರತೀತಿಯೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಚಲಿತದಲ್ಲಿರುವುದು ಕೃಷ್ಣ-ಸುದಾಮರ ಕಥೆ. ತನ್ನ ಜೀವದ ಗೆಳೆಯನಾದ ಕೃಷ್ಣನನ್ನು ಭೇಟಿಯಾಗಲು ಹೋಗುವ ಸುದಾ, ನನಗಾಗಿ ಏನು ತಂದಿದ್ದೀ ಎಂದು ಕೇಳುವ ಕೃಷ್ಣನಿಗೆ ತಾನು ಒಯ್ದಿದ್ದ ಒಣ ಅವಲಕ್ಕಿಯನ್ನಷ್ಟೇ ಕೊಟ್ಟು ತನ್ನ ಬಡತನದ ಬಗ್ಗೆ ಒಂದೂ ಮಾತನಾಡದೆ ಮನೆಗೆ ಹಿಂದಿರುಗುತ್ತಾನೆ. ಆದರೆ ಮನೆಗೆ ಬರುವಷ್ಟರಲ್ಲಿ, ಕೃಷ್ಣನ ಕೃಪಾಕಟಾಕ್ಷದಿಂದ ಅವನ ಗುಡಿಸಲು ಅರಮನೆಯಾಗಿ, ಅಷ್ಟೈಶ್ವರ್ಯಗಳಿಂದ ತುಂಬಿರುತ್ತದೆ. ಆದ್ದರಿಂದ ಪ್ರಾಂಜಲ ಮನಸಿನಿಂದ ಕೈಗೊಳ್ಳುವ ಯಾವುದೇ ಶುಭಕಾರ್ಯವನ್ನಾದರೂ ಸರಿಯೇ, ಪಂಚಾಂಗವನ್ನೂ ನೋಡದೆ ಕಣ್ಮುಚ್ಚಿ ಶುರುಮಾಡಬಹುದಾದ ದಿನವಿದು.

ಆದರೆ, ಕೈಗೊಂಡ ಕಾರ್ಯಗಳು ಸಿದ್ಧಿಸಿ ಯಶಸ್ಸು ನೆಮ್ಮದಿ ಸಂತೋಷಗಳು ಅಕ್ಷಯವಾಗುತ್ತವೆಂದು ಸೂಚಿಸುವ ದಿನಕ್ಕೂ ಚಿನ್ನದ ಖರೀದಿಗೂ ತಳಕು ಹಾಕಿದ್ದು ಅದ್ಯಾವ ಅಕ್ಕಸಾಲಿಗನೋ, ಲಕ್ಷ್ಮೀದೇವಿಯೇ ಹೇಳಬೇಕು! ಅಲ್ಲಿಯವರೆಗೂ ಇದ್ದೂ ಇರದಂತಿದ್ದ ಇದು ಕ್ರಮೇಣ ದೊಡ್ಡ ಆಚರಣೆಯಾಗಿ, ಈಗ ಚಿನ್ನ ಕೊಳ್ಳಲೇಬೇಕೆಂಬುದು ಅಲಿಖಿತ ನಿಯಮವೇ ಆಗಿಹೋಗಿದೆ. ಕಳೆದ ದಶಕದಿಂದೀಚೆಗಂತೂ ಸಣ್ಣ ದೊಡ್ಡ ಪಟ್ಟಣಗಳಲ್ಲೆಲ್ಲಾ ವಿಪರೀತ ಎನ್ನುವಷ್ಟು ಹೆಚ್ಚಾಗಿರುವ ಇದರ ಗೀಳಿನಿಂದ ಜನಸಾಮಾನ್ಯರು ಖರೀದಿಸಿದ ಚಿನ್ನ ಅಕ್ಷಯವಾಗುತ್ತಿದೆಯೋ ಇಲ್ಲವೋ ಆದರೆ ಚಿನ್ನದಂಗಡಿಗಳ ಗಲ್ಲಾಪೆಟ್ಟಿಗೆಗಳಂತೂ ಭರ್ಜರಿಯಾಗಿ ತುಂಬುತ್ತಿವೆ. ಒಂದಿಡೀ ವರ್ಷದ ವ್ಯಾಪಾರ ಒಂದೇ ದಿನದಲ್ಲಿ ಆಗುವುದಾದರೆ ಬರೀ ತದಿಗೆಯೇನು, ಚತುರ್ಥಿ, ಪಂಚಮಿಗಳ ಕುರಿತೂ ಅವರು ಕಥೆ ಹೆಣೆಯಲು ಸಿದ್ಧ. ಕೈಜೋಡಿಸಲು ಕೆಲ ಮಾಧ್ಯಮ ದಲ್ಲಾಳಿಗಳು ಹೇಗೂ ಇದ್ದಾರೆ. ಸ್ಟುಡಿಯೋದಲ್ಲಿ  ಜ್ಯೋತಿಷಿಗಳನ್ನು ಕುಳ್ಳಿರಿಸಿ, ನಮ್ಮ ರಾಶಿಗನುಗುಣವಾಗಿ ಎಷ್ಟು ಖರೀದಿಸಿದರೆ ಶ್ರೇಷ್ಠವೆಂಬುದನ್ನೂ ಬೇಕಾದರೆ ಹೇಳಿಸುತ್ತಾರೆ. ನಮ್ಮ ಹಿರಿಯರ ಆಚರಣೆಗಳನ್ನು ಗೊಡ್ಡುಸಂಪ್ರದಾಯವೆಂದು ಉಪೇಕ್ಷಿಸುವ ನಾವು ಇವರ ಮಾತು ಕೇಳುವ ಸಲುವಾಗಿ, ಮಿದುಳಿಗೆ ಬೀಗ ಹಾಕಿ ಕಿವಿಗಳನ್ನು ಎರವಲು ನೀಡಿದರೆ ಸಾಕು!

ನಾವು ಭಾರತೀಯರು ಅಪ್ಪಟ ಮೈದಾಸರು. ವಿಶ್ವದ ಚಿನ್ನ ಖರೀದಿದಾರರ ಪಟ್ಟಿಯಲ್ಲಿ ಕಳೆದ ವರ್ಷದವರೆಗೂ ನಮ್ಮದೇ ಅಗ್ರಸ್ಥಾನ. ವರ್ಷವರ್ಷವೂ ಹೆಚ್ಚುತ್ತಿದ್ದ ನಮ್ಮ ಬೇಡಿಕೆ ಒಂದಿಡೀ ದಶಕದ ದಾಖಲೆಯನ್ನು ಮುರಿದದ್ದು ಕಳೆದ ವರ್ಷ. ಕಳೆದ ಜೂನ್ನಲ್ಲಿ ನಡೆದ ಆಭರಣ ಚಿನ್ನದ ಖರೀದಿ ಸುಮಾರು 188 ಟನ್ಗಳಷ್ಟು. ಕಾಸು, ಬಿಸ್ಕತ್ತುಗಳ ಮೂಲವಾದ ಅಪರಂಜಿಯ ಖರೀದಿ ಸುಮಾರು 122 ಟನ್ಗಳಷ್ಟು. ಶೇರುಗಳ ರೂಪದಲ್ಲಿ ಹರಿದಾಡಿದ ಚಿನ್ನ 20,000 ಟನ್ಗಳಿಗೂ ಹೆಚ್ಚು. ಹಾಗೆಂದು ಇದು ಹೆಮ್ಮೆಯ ವಿಷಯ ಖಂಡಿತ ಅಲ್ಲ. ಒಂದು ಗುಲಗಂಜಿಯಷ್ಟು ಚಿನ್ನವೂ ನಮ್ಮಲ್ಲಿ ಲಭ್ಯವಿರದಿದ್ದರೂ ಬರೀ ಆಮದು ಮಾಡಿಕೊಳ್ಳುತ್ತಾ ಹೋದದ್ದಕ್ಕೆ ನಾವು ಭಾರೀ ಬೆಲೆಯನ್ನೇ ತೆತ್ತಿದ್ದೇವೆ.

ಹೇಗೆಂದು ಅರ್ಥ ಮಾಡಿಕೊಳ್ಳಲು ಸರಳವಾದುದೊಂದು ವ್ಯಾಖ್ಯಾನವಿದೆ. ವಿಶ್ವ ಮಾರುಕಟ್ಟೆಯಲ್ಲಿ ನಾವು ಏನನ್ನೇ ಆಮದು ಅಥವಾ ರಫ್ತು ಮಾಡಿದರೂ ಅದು ಫೋರೆಕ್ಸ್ ಎಂದು ಕರೆಯಲಾಗುವ ವಿದೇಶೀ ವಿನಿಮಯದ ಲೆಕ್ಕಕ್ಕೆ ಜಮೆಯಾಗುತ್ತಾ ಹೋಗುತ್ತದೆ. ನಾವು ಹೆಚ್ಚು ಹೆಚ್ಚು ರಫ್ತು ಮಾಡಿದಷ್ಟೂ ನಮ್ಮ ಇಡುಗಂಟು ಹೇಗೆ ಹೆಚ್ಚುತ್ತದೋ ಹೆಚ್ಚು ಆಮದು ಮಾಡಿಕೊಂಡಷ್ಟೂ ಕುಸಿಯುತ್ತದೆ. 2012 ರಲ್ಲಿ 860 ಟನ್ಗಳಷ್ಟು ಚಿನ್ನವನ್ನು ಆಮದು ಮಾಡಿಕೊಂಡ ನಾವು 2013ರಲ್ಲಿ 974 ಟನ್ಗಳಿಗೆ ಜಿಗಿದೆವು. ಪರಿಣಾಮ, 50 ಬಿಲಿಯನ್ ಡಾಲರ್ಗಳಷ್ಟು ಹೊರೆಯನ್ನು ಚಿನ್ನದ ಖರೀದಿಯೊಂದೇ ಸೃಷ್ಟಿಸಿಬಿಟ್ಟಿತು. ಹಾಗಾಗಿ ಇತರೆ ಪ್ರಮುಖ ಅಗತ್ಯಗಳಾದ ಕಚ್ಚಾ ತೈಲ, ನೈಸರ್ಗಿಕ ಅನಿಲ ಹಾಗೂ ಗೊಬ್ಬರಗಳನ್ನು ಕೊಳ್ಳಲು ಕಣ್ಣು ಬಾಯಿ ಬಿಡುವಂತಾಯಿತು.

ಅಪಾಯವನ್ನರಿತ ಹಣಕಾಸು ಮಂತ್ರಿ ಚಿದಂಬರಂ ಕಳೆದ ಜೂನ್ನಲ್ಲಿ ಆರ್ತರಾಗಿ ಜನರಲ್ಲಿ ಮೊರೆಯಿಟ್ಟರು.'ದಯವಿಟ್ಟು ಚಿನ್ನ ಖರೀದಿಸುವುದನ್ನು ಕಡಿಮೆಮಾಡಿ, ನೀವು ರುಪಾಯಿಯಲ್ಲಿ ಕೊಳ್ಳುವುದನ್ನು ನಾವು ಡಾಲರ್ ಕೊಟ್ಟು ತರಬೇಕಾಗಿದೆ, ಅರ್ಥಮಾಡಿಕೊಳ್ಳಿಎಂದು ತಿಳಿಹೇಳಲು ಪ್ರಯತ್ನಿಸಿದರು. ‘ಚಿನ್ನ ನಮ್ಮ ಸಂಸ್ಕೃತಿಯ ಭಾಗವೇ ಆಗಿರುವುದರಿಂದ ನಾವು ಆಮದನ್ನು ನಿಷೇಧಿಸಲಾರೆವು, ಆದರೆ ನೀವು ಖರೀದಿಸಲೇಬೇಕೆಂದಾದರೆ 20ಗ್ರಾಂ ಖರೀದಿಸುವಲ್ಲಿ 10ಗ್ರಾಂ ಮಾತ್ರ ಖರೀದಿಸಿ ಸಹಕರಿಸಿಎಂದು ಮನವಿ ಮಾಡಿಕೊಂಡರು. ತಮ್ಮ ಗ್ರಾಹಕರಿಗೆ ಬುದ್ಧಿ ಹೇಳುವಂತೆ ಬ್ಯಾಂಕ್ಗಳನ್ನೂ ವಿನಂತಿಸಿದರು. ಬರಿಯ ಬಾಯಿ ಮಾತಿನಿಂದ ಪ್ರಯೋಜನವಿಲ್ಲವೆಂದರಿತು ಕಳೆದ ಇಪ್ಪತ್ತು ತಿಂಗಳಲ್ಲಿ ಚಿನ್ನದ ಮೇಲಿನ ಆಮದು ಶುಲ್ಕವನ್ನು ನಾಲ್ಕು ಬಾರಿ ಏರಿಸಿ ಈಗ ಶೇಕಡ 10ಕ್ಕೆ ತಂದು ನಿಲ್ಲಿಸಿದ್ದಾರೆ. ಪರಿಣಾಮ, ಚಿನ್ನದ ಬೆಲೆ ಹೆಚ್ಚಿದೆ. ಹಾಗಂತ ಚಿನ್ನದ ಒಳಹರಿವು ನಿಂತಿಲ್ಲ. ಆಮದು ಶುಲ್ಕ ಹೆಚ್ಚಾದಷ್ಟೂ ಕಳ್ಳ ಸಾಗಾಣಿಕೆಯೂ ಹೆಚ್ಚಿದೆ. 2011ರಲ್ಲಿ ಆಮದು ಶುಲ್ಕ ಶೇಕಡ 3 ಇದ್ದಾಗ 2 ಕೆ.ಜಿಯಷ್ಟು ಚಿನ್ನ ಕಸ್ಟಮ್ಸ್ ಅಧಿಕಾರಿಗಳ ವಶವಾಗಿತ್ತು. 2012ರಲ್ಲಿ ಆಮದು ಶುಲ್ಕ ಶೇಕಡ 5 ಆದಾಗ 6.8 ಕೆ.ಜಿಯಷ್ಟು ಚಿನ್ನ ವಶವಾಗಿತ್ತು. 2013 ರಲ್ಲಿ ಶುಲ್ಕ ಮತ್ತೂ ಹೆಚ್ಚಿದಂತೆ ಸುಮಾರು 352 ಕೆ.ಜಿ ಚಿನ್ನ ವಶವಾಗಿತ್ತು.

ಬಾರಿಯ ಅಕ್ಷಯ ತದಿಗೆ ಕಳೆದ ಬಾರಿಯಷ್ಟು ಭರ್ಜರಿಯಾಗಿ ನಡೆದಿಲ್ಲ. ಚಿನ್ನದ ಬೆಲೆಯ ಹೆಚ್ಚಳ ಒಂದು ಕಾರಣವಾದರೆ ಮಹಾಚುನಾವಣೆಯ ಬಿಸಿ ಮತ್ತೊಂದು ಕಾರಣ. ಎಲ್ಲೆಡೆ ಇದ್ದ ಸರ್ಪಗಾವಲು ಕಳ್ಳಮಾಲು ಒಳ ಬರುವುದಕ್ಕೂ ಕಡಿವಾಣ ಹಾಕಿದೆ. ತನ್ನ ಕೈಲಾದ ನಿರ್ಬಂಧವನ್ನೇನೋ ಸರ್ಕಾರ ಹೇರಿದೆ, ಆದರೆ ನಾವು ಎಂದಿಗೆ ನಮ್ಮ ಲೋಭಕ್ಕೆ ಕಡಿವಾಣ ಹಾಕಿಕೊಳ್ಳುವುದು? ನಮ್ಮಂಥ ಸಾಮಾನ್ಯರಿಗೆ, ಹಾಕಿಕೊಳ್ಳುವ ಒಡವೆಗಳಿಂದ ಹಿಡಿದು ಕಟ್ಟಿಸಿಕೊಳ್ಳುವ ಹಲ್ಲಿನವರೆಗೂ ಬಂಗಾರವೇ ಬೇಕು. ಇನ್ನು ಶ್ರೀಮಂತ ವರ್ಗಕ್ಕೆ, ಗಣಿಯಿಂದ ತೆಗೆದ ಲಕ್ಷ್ಮಿಯನ್ನು ಮನೆಯ ನೆಲಮಾಳಿಗೆ, ಸಂದೂಕಗಳಲ್ಲಿ ಹೂತಿಡುವ ಧಣಿಗಳಿಗೆ ತಾವು ಊಟ ಮಾಡುವ ತಟ್ಟೆ-ಲೋಟಗಳು, ಕೂರುವ ಕುರ್ಚಿಗಳೂ ಬಂಗಾರದ್ದೇ ಆಗಬೇಕು! ಬಂಗಾರದೊಡವೆಗಳು ಸ್ತ್ರೀಯರಿಗೆ ಮಾತ್ರ ಭೂಷಣವೆನ್ನುತ್ತಿದ್ದ ಕಾಲವೊಂದಿತ್ತು. ಈಗ ಭೇದವಿಲ್ಲ. ಉದಾಹರಣೆಗೆ, ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿಯವರನ್ನೊಮ್ಮೆ ನೋಡಿಬಿಟ್ಟರೆ ಒಂದು ಸಣ್ಣ ಚಿನ್ನದಂಗಡಿಯನ್ನೇ ನೋಡಿದಂತಾಗುತ್ತದೆ. ಅವರಾದರೂ ಬೇಕು, ಕೆಲವು ರಿಯಲ್ ಎಸ್ಟೇಟ್ ಉದ್ದಿಮೆದಾರರಂತೂ ಕೈಯ್ಯ ಹತ್ತೂ ಬೆರಳುಗಳಿಗೆ ತರಹೇವಾರಿ ಉಂಗುರ, ಕತ್ತನ್ನೇ ಬಗ್ಗಿಸಿಬಿಡುವ ತೂಕದ ಸರಗಳು ಹಾಗೂ ಕೈಗೆ ತಿಹಾರ್ ಜೈಲಿನ ಕೋಳವನ್ನೂ ಮೀರಿಸುವ ಕಡಗಗಳನ್ನು ಹಾಕಿಕೊಳ್ಳುತ್ತಾರೆ. ತಲೆಯ ಮೇಲೆ ಚಿನ್ನದ ಕಿರೀಟವಿಟ್ಟು ಕೈಗೊಂದು ಗದೆ ಕೊಟ್ಟುಬಿಟ್ಟರೆ ಹಿರಣ್ಯಕಶಿಪು ಅಥವಾ ಹಿರಣ್ಯಾಕ್ಷನನ್ನೇ ಪ್ರತ್ಯಕ್ಷ ನೋಡಿದ ಅನುಭವ!

ಪ್ರತಿಷ್ಠೆಗೆ, ತೋರಿಕೆಗೆ ಚಿನ್ನವನ್ನು ಹೊತ್ತು ತರುವ ನಾವು ಬೇಕೆನಿಸಿದಾಗ ಒಡವೆಗಳನ್ನು ಧರಿಸಿ ರಸ್ತೆಗಿಳಿಯುವುದು ಸಾಧ್ಯವೇ? ಮನೆಯಲ್ಲಿಟ್ಟುಕೊಳ್ಳುವುದೂ ಸುರಕ್ಷಿತವಲ್ಲವೆಂದು, ಠೇವಣಿ ತುಂಬಿ, ಪ್ರತಿ ವರ್ಷ ಬಡ್ಡಿದರವನ್ನೂ ಪಾವತಿಸಿ ಬ್ಯಾಂಕ್ಲಾಕರ್ಗಳಲ್ಲಿಡುತ್ತೇವೆ. ಪದೇ ಪದೇ ಲಾಕರ್ನಿಂದ ತರುವ ತಲೆನೋವೇಕೆಂದು ನಕಲಿ ಆಭರಣಗಳನ್ನು ಧರಿಸುವ ಉಪಾಯವನ್ನೂ ಕಂಡುಕೊಂಡಿದ್ದೇವೆ. ಹೋಗಲಿ, ಬದುಕಿದ್ದಾಗ ಭದ್ರವಾಗಿಟ್ಟದ್ದನ್ನು ಸತ್ತ ಮೇಲಾದರೂ ಕೊಂಡೊಯ್ಯುತ್ತೇವಾ? ಪ್ರಾಣಪಕ್ಷಿ ಹಾರಿದೊಡನೆ ನಡೆವ ಮೊದಲ ಕೆಲಸವೇ ಮೈಮೇಲಿನ ಒಡವೆಗಳನ್ನು ತೆಗೆಯುವುದು. ನಯವಾಗಿ ತೆಗೆಯಲಾಗದಿದ್ದರೆ ಕತ್ತರಿಸುವುದು!

ಎಲ್ಲರಿಗೂ ಕುವ ಹೂಡಿಕೆ ದರದಲ್ಲಿ ಲಭ್ಯವಾಗುವ, ಆಪತ್ಕಾಲದಲ್ಲಿ ನಮ್ಮ ಸ್ವಾಭಿಮಾನವನ್ನುಳಿಸಿ ನೆರವಾಗುವ ಚಿನ್ನ ನಮಗೆ ಆಸರೆಯಾಗಬಲ್ಲುದೆಂಬುದು ದಿಟ. ಹಾಗೆಂದೇ ನಾವು ಅದನ್ನು ಕೊಳ್ಳುವಾಗ ಬಹಳಷ್ಟು ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. 22ಕ್ಯಾರಟ್ ಶುದ್ಧತೆಯಿರುತ್ತದೆ ಎಂದು 916 ಗುರುತನ್ನು ತೋರಿಸಿ ಅಂಗಡಿಯವರು ಕೊಡುವ ಆಭರಣಗಳನ್ನು ಕೊಂಡು ತಂದಾಗ ಅಥವಾ ಹಳೆ ಒಡವೆಯನ್ನು ಕೊಟ್ಟು ಹೊಸದನ್ನು ಖರೀದಿಸುವಾಗ, ಶುದ್ಧತೆಯ ಬಗ್ಗೆ, 'ವೇಸ್ಟೇಜ್' ಬಗ್ಗೆ ನಾವು ಪ್ರಶ್ನಿಸುವುದಿಲ್ಲ. ಒಂದು ಬ್ರ್ಯಾಂಡೆಡ್ ಅಂಗಡಿಯಿಂದ 24ಕ್ಯಾರಟ್ ಶುದ್ಧತೆಯ ಚಿನ್ನದ ಕಾಸು ಖರೀದಿಸಿದರೆ ಅದನ್ನು ತಿರುಗಿ ಅಂಗಡಿಗೇ ಮಾರಬೇಕೇ ವಿನ ಬೇರೆಯವರು ಕೊಳ್ಳುವುದಿಲ್ಲ. ಹಾಗೆ ಕೊಳ್ಳುವಾಗಲೂ ಅವರು ಅಂದಿನ ಬೆಲೆಯಲ್ಲಿ ಶೇಕಡ 9ರಿಂದ 10ರಷ್ಟು ಹಣವನ್ನು ಕಡಿತ ಮಾಡಿಕೊಳ್ಳುತ್ತಾರಲ್ಲ ಎಂಬ ಲೆಕ್ಕಾಚಾರವೂ ನಮ್ಮನ್ನು ಬಾಧಿಸುವುದಿಲ್ಲ.
ಎಲ್ಲರೂ ಶೇರು ದಲ್ಲಾಳಿಗಳೋ ಅರ್ಥಶಾಸ್ತ್ರಜ್ಞರೋ ಆಗುವುದು ಬೇಡ. ಆದರೆ ನಮ್ಮ ಮೇಲಷ್ಟೇ ಅಲ್ಲದೆ ನಮ್ಮ ದೇಶದ ಆರ್ಥಿಕ ಸ್ಥಿತಿಗತಿಯ ಮೇಲೂ ಮಟ್ಟದ ಹಿಡಿತ ಹೊಂದಿರುವ ಚಿನ್ನದ ಬಗ್ಗೆ ಒಂದಷ್ಟು ಆಳವಾಗಿ ತಿಳಿದುಕೊಳ್ಳದಿದ್ದರೆ ಹೇಗೆ? ಆಯವ್ಯಯ ಮಂಡಿಸುವವರಿಗೆ ಮತ್ತು ಎಂಬಿಎ ಓದುವವರಿಗೇ ಎಲ್ಲಾ ಗುಣಾಕಾರ ಭಾಗಾಕಾರಗಳನ್ನು ಮೀಸಲಿಟ್ಟರೆ ನಮ್ಮ ಪಾಲಿನ ಲೆಕ್ಕವನ್ನು ಯಾರು ಮಾಡಬೇಕು?

ದೇಶ ನಮಗೇನು ಕೊಟ್ಟಿದೆ ಎಂದು ಕೇಳಿಕೊಳ್ಳುತ್ತಲೇ ನಿತ್ಯ ಹಾಸಿಗೆಯಿಂದೇಳುವ ನಾವೂ ದೇಶಕ್ಕೆ ಹೊರೆಯಾಗದೆ ಕೊಡಬೇಕಾದುದು ಬಹಳಷ್ಟಿದೆಯೆನಿಸುವುದಿಲ್ಲವೇ? ಒಂದುವೇಳೆ ಹಾಗನಿಸದಿದ್ದರೆ ಖಂಡಿ ನಮ್ಮಲ್ಲೇನೋ ಐಬಿದೆ! 

1 comment:

  1. ವಾಣಿಜ್ಯ ಲಾಭಕ್ಕೋಸ್ಕರ ಅಕ್ಷಯ ತದಿಗೆಗೆ ಕತೆ ಕಟ್ಟಿ ಹಬ್ಬಿಸಿದ್ದನ್ನು ಜನರು ನಂಬಿ ಚಿನ್ನ ಕೊಳ್ಳುವುದು ನೋಡಿದರೆ ಬೇಸರವೆನಿಸುತ್ತದೆ. ಇನ್ನು ಚಿನ್ನ ಕೊಂಡು ಕೂಡಿಹಾಕಿಕೊಳ್ಳುವ ಭಾರತೀಯರ ಮನಃಸ್ಥಿತಿ ಬದಲಾಗುವುದಿಲ್ಲವೇನೋ! ಅಲ್ಲಿಯವರೆಗೂ ದೇಶದ ಆರ್ಥಿಕತೆಗೆ ತೊಂದರೆಯಿದ್ದೇ ಇದೆ.

    ReplyDelete