Saturday 8 November 2014

ಎದ್ದೇಳಿ ಸಿದ್ಧರಾಮಯ್ಯನವರೇ, ನಮ್ಮ ಮಾನ, ಪ್ರಾಣಗಳ 'ರಕ್ಷಣೆ ಭಾಗ್ಯ' ಕರುಣಿಸಿ!


ನಿಮಗೆ ಹೀಗೊಂದು ಪತ್ರ ಬರೆಯಲೇಬೇಕಾಗಿದೆ. ನಮ್ಮ ತಲ್ಲಣಗಳನ್ನು ವಿವರಿಸಿ ಬಹಳಷ್ಟು ಪ್ರಶ್ನೆಗಳನ್ನು ಕೇಳಲೇಬೇಕಾಗಿದೆ. ಗಮನವಿಟ್ಟು ಕೇಳಿ ಸಿದ್ಧರಾಮಯ್ಯನವರೇ, ನೀವು ದಯಪಾಲಿಸಿರುವ ಶಾದಿ ಭಾಗ್ಯ, ಅನ್ನ ಭಾಗ್ಯ ಹಾಗೂ ಕ್ಷೀರ ಭಾಗ್ಯಗಳು ನಮಗೆ ಅನ್ವಯಿಸುವುದಿಲ್ಲ. ಏಕೆಂದರೆ ನಾವು ನಿಮ್ಮ ನೆಚ್ಚಿನ ಹಿಂದುಳಿದ ವರ್ಗದವರಲ್ಲ. ನಿಮಗೆ ಬಹಳ ಬೇಕಾಗಿರುವ ಅಲ್ಪಸಂಖ್ಯಾತರೂ ಅಲ್ಲ. ಯಾವುದೇ ಮೀಸಲಾತಿಯಿಲ್ಲದ, ಬಹುಸಂಖ್ಯಾತ ವರ್ಗದ ಸಾಮಾನ್ಯ ಹೆಣ್ಣುಮಕ್ಕಳು ನಾವು. ನಮ್ಮ ಮನೆಗಳಲ್ಲೂ ಪುಟ್ಟ ಕಂದಮ್ಮಗಳಿದ್ದಾರೆ. ಶಾಲೆ, ಕಾಲೇಜಿಗೆ ಹೋಗುವ ಬಾಲೆಯರಿದ್ದಾರೆ. ನಿಮ್ಮ ನೆಚ್ಚಿನ ಇತರೆ ಜಾತಿಯ, ಧರ್ಮದ ಹೆಣ್ಣುಮಕ್ಕಳಿಗಿರುವಂತೆ ನಮಗೂ ಮಾನ, ಪ್ರಾಣಗಳಿವೆ. ಅವುಗಳಿಗೆ ಕುತ್ತು ಬಂದಾಗ, ಜಾತಿ-ಧರ್ಮಗಳ ಮುಖ ನೋಡದೆ ನಮ್ಮನ್ನು ರಕ್ಷಿಸುತ್ತೀರ ಎಂದು ಆಶಿಸುವುದು ತಪ್ಪೇ? ನಮಗೆ ಅನ್ಯಾಯವಾದ ಪಕ್ಷದಲ್ಲಿ, ನ್ಯಾಯ ಕೊಡಿಸುತ್ತೀರೆಂದು ಅಪೇಕ್ಷಿಸುವುದು ತಪ್ಪೇ? ತಪ್ಪು ಎನ್ನುವುದಾದರೆ ದಯಮಾಡಿ ಹೇಳಿಬಿಡಿ. ಏಕೆಂದರೆ, ನಂದಿತಾ ಪೂಜಾರಿಯ ಸಾವಿನ ವಿಷಯದಲ್ಲಿ ನಿಮ್ಮ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನಮ್ಮಲ್ಲಿ ಹಲವು ಅನುಮಾನಗಳನ್ನು ಹುಟ್ಟಿಸುತ್ತಿದೆ.

ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ನಂದಿತಾಳನ್ನು ತೀರ್ಥಹಳ್ಳಿಯ ತುಂಗಾ ಕಾಲೇಜಿನ ಪಕ್ಕದಲ್ಲಿರುವ ಆನಂದಗಿರಿ ಗುಡ್ಡಕ್ಕೆ ಎಳೆದೊಯ್ದು ಕಿರುಕುಳ ನೀಡಿತ್ತು ಮುಸ್ಲಿಮ್ ಹುಡುಗರ ಗುಂಪು. ಘಟನೆ ಅಕ್ಟೋಬರ್ 29ರಂದೇ ನಡೆದಿದ್ದರೂ ಆರೋಪಿಗಳನ್ನು ಇನ್ನೂ ಏಕೆ ಬಂಧಿಸಿಲ್ಲ? ಅವರು ಕುಡಿಸಿದ್ದ ವಿಷಕ್ಕೋ, ಮತ್ತು ಬರಿಸುವ ಔಷಧಿಗೋ ಬಲಿಯಾಗಿ ಪ್ರಾಣ ಬಿಟ್ಟಿತಲ್ಲ ಆ ಮಗು, ಸಾಯುವ ಮುನ್ನ ಎಲ್ಲರ ವಿವರವನ್ನೂ ಹೇಳಿತ್ತು. ಅದನ್ನು ಏಕೆ ಪರಿಗಣಿಸಿಲ್ಲ? ಅವಳ ತಂದೆ-ತಾಯಿ ಕೊಟ್ಟ ದೂರಿಗೆ ಏಕೆ ಬೆಲೆಯಿಲ್ಲ? ಆರೋಪಿಗಳಲ್ಲಿ ಒಬ್ಬನಾದ ಇಮ್ರಾನ್‍ನ ಭಾವಚಿತ್ರ ನಮಗೇ ಸಿಕ್ಕಿದೆ, ನಿಮ್ಮ ಪೋಲೀಸರಿಗೆ ಮಾತ್ರ ಅವರನ್ನು ಪತ್ತೆ ಹಚ್ಚುವುದು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವು ನಂಬಬೇಕೇ? ಮುಸ್ಲಿಮರೆಂದ ಮಾತ್ರಕ್ಕೆ ಅವರ ಎಲ್ಲ ದುಷ್ಕೃತ್ಯಗಳನ್ನೂ ಮನ್ನಿಸುವ ನಿಮ್ಮದೆಂಥ ಪಕ್ಷಪಾತಿ ಸರ್ಕಾರ ಮುಖ್ಯಮಂತ್ರಿಗಳೇ? ಅವರ ಎಲ್ಲ ಅಪರಾಧಗಳನ್ನೂ ವೋಟ್‍ಬ್ಯಾಂಕ್ ರಾಜಕಾರಣದ ತಕ್ಕಡಿಯಲ್ಲಿಟ್ಟು ಏಕೆ ಅಳೆಯುತ್ತೀರಿ? ಅಲ್ಪಸಂಖ್ಯಾತರ ಓಲೈಕೆಯ ನಿಮ್ಮ ಚಟಕ್ಕೆ ನಮ್ಮ ಹೆಣ್ಣುಮಕ್ಕಳನ್ನೇಕೆ ಬಲಿಕೊಡುತ್ತೀರಿ? ನಿಮ್ಮ ಈ ಧೋರಣೆಯಿಂದಾಗಿ ಆ ಹೆಣ್ಣು ಮಗುವಿನ ಚಾರಿತ್ರ್ಯದ ಬಗ್ಗೆ ಇಲ್ಲದ ಕಥೆಗಳು ಹುಟ್ಟಿಕೊಳ್ಳುತ್ತಿವೆ. ಅವಳ ಶಾಲೆಯ ಮೇಷ್ಟರು ಹೇಳುವ ಸತ್ಯವನ್ನು ಕೇಳಿ. ಎಂಟನೆಯ ತರಗತಿಯವಳಾದರೂ ಅವಳ ಪ್ರೌಢಿಮೆ ಐದನೆಯ ತರಗತಿಯ ಮಗುವಿನಷ್ಟೇ ಎನ್ನುತ್ತಾರೆ ಅವರು. ಭಾವಚಿತ್ರದಲ್ಲಿನ ಅವಳ ಮುಗ್ಧತೆ ಮುಖಕ್ಕೆ ರಾಚುವುದಿಲ್ಲವೇ?

ಅದಿರಲಿ, ಅವಳು ಸತ್ತ ಎರಡು ದಿನಗಳ ನಂತರ ಡೆತ್ ನೋಟ್ ಎಲ್ಲಿಂದ ಹುಟ್ಟಿಕೊಂಡಿತು? ಅಪ್ಪ-ಅಮ್ಮಂದಿರಿಗೆ ಬರೆಯುವ ಕೊನೆಯ ಪತ್ರದಲ್ಲಿ 'ನನ್ನ ಹೆಸರು ನಂದಿತ' ಎಂದು ಯಾರಾದರೂ ಹೆಸರು ಕುಲ ಗೋತ್ರಗಳ ಪರಿಚಯ ಮಾಡಿಕೊಳ್ಳುತ್ತಾರೆಯೇ? ಅದು ಅವಳ ಕೈಬರಹವೇ ಅಲ್ಲ ಎಂದು ಅಲವತ್ತುಕೊಳ್ಳುತ್ತಿರುವ ಅವಳ ಶಾಲೆಯ ಮಾಸ್ತರರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನಿಮ್ಮ ತನಿಖಾಧಿಕಾರಿಗಳು ಸಿದ್ಧರೇ? ಇಲ್ಲಿ ಇಷ್ಟೆಲ್ಲ ನಡೆದಾಗಲೂ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರರು ಇತ್ತ ತಲೆಯನ್ನೂ ಹಾಕಲಿಲ್ಲ. ನಂದಿತಾಳ ತಂದೆ-ತಾಯಿಯರನ್ನು ಭೇಟಿಯಾಗಿ ನಾಲ್ಕು ಸಾಂತ್ವನದ ಮಾತುಗಳನ್ನಾಡಲಿಲ್ಲ. ಅವರು ಬಂದಿದ್ದು ನಂದಿತಾಳ ಹೆಣವನ್ನು ನೋಡಲು ಮಾತ್ರ. ಘಂಟೆಗೊಮ್ಮೆ ಇಂಟೆಲಿಜೆನ್ಸ್ ವರದಿ ಬರುತ್ತಿತ್ತಲ್ಲ, ಅದನ್ನಾಧರಿಸಿ ಸರಿಯಾದ ಸಮಯಕ್ಕೆ ಬಂದು ಹೆಣ ನೋಡಿಕೊಂಡು ಹೋಗಿ ದೊಡ್ದ ಉಪಕಾರ ಮಾಡಿದರು! ಪರಿಚಯದವರು ಕಾರಣ ಕೇಳಿದ್ದಕ್ಕೆ, ‘ನಾನು ಮೊದಲೇ ಬಂದಿದ್ದರೆ ಅವಳು ಬದುಕಿ ಬರುತ್ತಿದ್ದಳೇ?’ ಎಂದರಂತೆ! ಹಾಗಾದರೆ ಅವರು ಹೆಣ ನೋಡಲು ಬರುವ ಅಗತ್ಯವಾದರೂ ಏನಿತ್ತು? ಆಮೇಲಾದರೂ ಹೆಣ ಎದ್ದು ಕುಳಿತಿತೇ ಅಥವಾ ಅವರೊಡನೆ ಮಾತನಾಡಿತೇ? ಏಕಿಂಥ ಮನಸ್ಥಿತಿ ನಿಮ್ಮ ಸಚಿವರದ್ದು? ಜಾತಿ ರಾಜಕಾರಣ ಎಂದು ಉಳಿದವರನ್ನು ದೂರುವ ಅವರು ಮಾನವೀಯ ಅಂತಃಕರಣವನ್ನೂ ಮರೆತರೇಕೆ? ರಾಜ್ಯೋತ್ಸವದ ನಿಮಿತ್ತ ನಡೆವ ಧ್ವಜಾರೋಹಣ ಹಾಗೂ ಇತರೆ ಕಾರ್ಯಕ್ರಮಗಳು ಓರ್ವ ಅಮಾಯಕಳ ಸಾವಿಗಿಂತ ಹೆಚ್ಚೇ?

ಇಷ್ಟೆಲ್ಲಾ ಅವಾಂತರಗಳ ನಡುವೆಯೂ ಜಗ್ಗದೆ ನಿಂತಿದ್ದವರು ಶಿವಮೊಗ್ಗದ ಎಸ್‍ಪಿ ಕೌಶಲೇಂದ್ರ ಕುಮಾರ್. ನಿಷ್ಥಾವಂತ ಅಧಿಕಾರಿಯಾದ ಅವರಿಗೆ ಪ್ರಕರಣವನ್ನು ಭೇಧಿಸುವ ಸಂಪೂರ್ಣ ಸ್ವ್ಯಾತಂತ್ರ್ಯವನ್ನು ನೀವೇಕೆ ನೀಡಲಿಲ್ಲ? ಅವರ ಜೊತೆ ಸೇರಿ ಕಾರ್ಯನಿರ್ವಹಿಸಲು ಹೆಚ್ಚುವರಿಯಾಗಿ ಹಾವೇರಿ ಜಿಲ್ಲೆಯ ಎಸ್‍ಪಿಯವರನ್ನು ಬೇಕೆಂದೇ ನೇಮಿಸಿದ್ದು ಏಕೆ? ಸ್ಥಳೀಯ ಮುಸ್ಲಿಮರ ನೇತೃತ್ವದಲ್ಲಿರುವ ನ್ಯಾಷನಲ್ ಎಂಟರ್‍ಪ್ರೈಸಸ್‍, ತನ್ನ ಧರ್ಮದವರು ಎಸಗುವ ಅಪರಾಧಗಳಿಗೆ ಕುಮ್ಮಕ್ಕು ಕೊಡುತ್ತದೆ ಎಂಬ ಆಪಾದನೆ ಇದೆಯಲ್ಲ, ಆ ನಿಟ್ಟಿನಲ್ಲಿ ತನಿಖೆ ನಡೆಯುತ್ತಿಲ್ಲವೇಕೆ? ಒಟ್ಟಾರೆ ಗೋಜಲಾಗಿರುವ ಈ ಸೂಕ್ಷ್ಮ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವ ಜರೂರತ್ತೇನಿತ್ತು? ಪಾರದರ್ಶಕತೆಯ ಸಲುವಾಗಿ, ನಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳುವ ಸಲುವಾಗಿ ಸಿಬಿಐಗೆ ಒಪ್ಪಿಸಬಹುದಿತ್ತಲ್ಲವೇ?

ಮತ್ತೊಂದು ವಿಷಯ ಗಮನಿಸಿದಿರಾ? ನೀವೆಲ್ಲ ಕೈಬಿಟ್ಟರೂ ಅಲ್ಲಿಯ ಜನ ನಂದಿತಾಳ ಕುಟುಂಬದ ಕೈ ಬಿಡಲಿಲ್ಲ. ಶಾಂತಿಯುತವಾಗಿ ಮೆರವಣಿಗೆ ನಡೆಸಿದರು. ಅಗತ್ಯವೆನಿಸಿದಾಗ ರಸ್ತೆಗಿಳಿದು ಪ್ರತಿಭಟಿಸಿದರು. ಅವರನ್ನೇಕೆ ಎಳೆದಾಡಿ ಹೊಡೆಸಿಬಿಟ್ಟಿರಿ ಮೈಮೇಲೆ ಬಾಸುಂಡೆ ಬರುವ ಹಾಗೆ? 47 ಜನರನ್ನು ಬಳ್ಳಾರಿಯ ಜೈಲಿನಲ್ಲಿ ಕೂಡಿಹಾಕಿದ್ದೀರಲ್ಲ, ನಿಜವಾಗಿಯೂ ಜೈಲಿನಲ್ಲಿರಬೇಕಾಗಿದ್ದವರು ಎಲ್ಲಿದ್ದಾರೆ ಎಂಬುದು ನಿಮಗೆ ಬೇಡವೇ? ಅಥವಾ ಇಂಥ ಘಟನೆಗಳಲ್ಲಿ ಒಬ್ಬರು ಮತ್ತೊಬ್ಬರ ಬೆಂಬಲಕ್ಕೆ ನಿಲ್ಲಬಾರದು ಎಂಬುದು ನಿಮ್ಮ ದುರಾಲೋಚನೆಯೇ? ಹೇಗೆ ನೋಡಿದರೂ ನೀವು ಮಾಡುತ್ತಿರುವುದಕ್ಕೆ ಯಾವ ಸಮರ್ಥನೆಯೂ ದೊರಕುತ್ತಿಲ್ಲ. ಫೇಸ್‍ಬುಕ್ಕಿನಲ್ಲಿ ಕಾಮೆಂಟ್ ಹಾಕಿದ ಮಾತ್ರಕ್ಕೆ ವಿ.ಆರ್ ಭಟ್‍ರನ್ನು ಜೈಲಿಗೆ ತಳ್ಳಿದಿರಿ. ಯಾರೋ ದೂರಿದರೆಂದು ರಾಘವೇಶ್ವರ ಭಾರತಿಯವರನ್ನು ವಿಚಾರಣೆಗೆ ಒಳಪಡಿಸಲು ಹಿಂದೆ ಮುಂದೆ ನೋಡಲಿಲ್ಲ ನೀವು. ನಿಮ್ಮ ನ್ಯಾಯ ಪರತೆ ಬಹುಸಂಖ್ಯಾತರನ್ನು ಶಿಕ್ಷಿಸಲು ಮಾತ್ರ ಮೀಸಲೇ?

ಮತ್ತೊಂದಷ್ಟು ನಿಷ್ಠುರ ಸತ್ಯಗಳನ್ನೂ ಹೇಳಿಬಿಡುತ್ತೇವೆ ಕೇಳಿ. ನೀವು ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದಾಗ, ಮೂಢನಂಬಿಕೆಯ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದಾಗಲೇ ನಿಮ್ಮ ರಾಜ'ಕಾರಣ'ಗಳು ಬಯಲಾಗಿದ್ದವು. ಆದರೆ ಈಗ ಅದಕ್ಕಿಂತ ಹೆಚ್ಚಾಗಿ ನಮ್ಮನ್ನು ದಂಗು ಬಡಿಸುತ್ತಿರುವುದು ನಿಮ್ಮ ಅಧಿಕಾರಾವಧಿಯಲ್ಲಿ ಪೋಲೀಸ್ ಇಲಾಖೆಗೆ ಬಂದೊದಗಿರುವ ದುಸ್ಥಿತಿ. ಎಡಿಜಿಪಿ ರವೀಂದ್ರನಾಥ್ ಯಾರದೋ ಫೋಟೋ ಕ್ಲಿಕ್ಕಿಸಿದ ಆಪಾದನೆಗೆ ಒಳಗಾಗಿ, ಅಳುತ್ತಾ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟರಲ್ಲ ಆಗೇಕೆ ನಿಮ್ಮ ಸಚಿವರನ್ನು ಕಳಿಸಿ ಸಾರ್ವಜನಿಕವಾಗಿ ಅನುನಯಿಸಿದಿರಿ ಅವರನ್ನು? ದಲಿತರೆಂಬುದೇ ಎಲ್ಲಕ್ಕೂ ಸಮರ್ಥನೆಯೇ? ನಿಷ್ಠಾವಂತ ಕಮೀಷನರ್ ರಾಘವೇಂದ್ರ ಔರಾದ್‍ಕರ್‍ಗೆ ಆಗಬಹುದಾದ ಮುಜುಗರದ ಪರಿವೆ ಇರಲಿಲ್ಲವೆ ನಿಮಗೆ? ಅಥವಾ ಪ್ರಾಮಾಣಿಕತೆ, ನಿಷ್ಠೆ, ಕಾರ್ಯದಕ್ಷತೆಗಿಂತಲೂ ಜಾತಿಯೇ ಮುಖ್ಯ ಎಂಬುದು ನಮ್ಮ ಸಂವಿಧಾನದಲ್ಲಿ ಎಲ್ಲಾದರೂ ನಮೂದಾಗಿದೆಯೇ? ಪೋಲೀಸರ ಒಳಜಗಳಗಳು ಹೀಗೆ ಹಾದಿರಂಪವಾದರೆ ಸಾಮಾನ್ಯ ಜನರ ಸ್ಥೈರ್ಯ, ನಂಬಿಕೆಗಳು ಕುಗ್ಗುತ್ತವೆ ಎಂಬುದು ನಿಮಗೆ ತಿಳಿಯದ ವಿಷಯವೇ? ಅಷ್ಟೇ ಅಲ್ಲ, ನಿಮ್ಮ ಪಕ್ಷದ ಶಾಸಕ ವಿಜಯಾನಂದ ಕಾಶಪ್ಪನವರ್ ಬಾರ್ ಒಂದರಲ್ಲಿ ಇಬ್ಬರು ಪೋಲೀಸ್ ಪೇದೆಗಳನ್ನು ವಿನಾಕಾರಣ ಚಚ್ಚಿದರಲ್ಲ, ಅದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

ಚಲಿಸುತ್ತಿದ್ದ ಕಾರಿನಲ್ಲಿ ಅತ್ಯಾಚಾರಕ್ಕೀಡಾದ ಯುವತಿಯ ವಿಷಯ ನೆನಪಿರಬೇಕಲ್ಲ ನಿಮಗೆ? ಅತ್ಯಾಚಾರಿಯ ಅಪ್ಪ ರಾಜ್ಯದ ಬಿಎಸ್‍ಪಿ ಪಕ್ಷದ ಸ್ಥಳೀಯ ಮುಖಂಡ ಎಂಬ ಕಾರಣಕ್ಕೆ ಸರಿಯಾಗಿ ತನಿಖೆ ನಡೆಸಲಾಗದ ಪರಿಸ್ಥಿತಿ ಬಂದೊದಗಿತ್ತು ಠಾಣೆಯ ಎಸ್‍ಐಗೆ! ಇನ್ನು ಇತ್ತೀಚೆಗೆ ಶಾಲೆಗಳಲ್ಲಿ ಪುಟ್ಟ ಮಕ್ಕಳ ಮೇಲೆ ನಡೆಯುತ್ತಿರುವ ಸರಣಿ ಅತ್ಯಾಚಾರಗಳ ಬಗ್ಗೆ ನಿಮಗೆ ಗೊತ್ತಿಲ್ಲದ್ದು ಏನಿದೆ? ಅಪರಾಧಿಗಳ ಭಂಡತನ ಈ ಮಟ್ಟಿಗೆ ಹೆಚ್ಚಿರುವುದಕ್ಕೆ, ಪೋಲೀಸರ ಮನೋಬಲ ಕುಗ್ಗಿರುವುದೇ ಕಾರಣವಲ್ಲವೇ? ಒಂದಿಡೀ ವ್ಯವಸ್ಥೆಯ ಜುಟ್ಟನ್ನು ಕೈಲಿ ಹಿಡಿದು ಬುಗುರಿಯಂತೆ ಆಡಿಸಿದರೆ ಅವರೇನು ಮಾಡಿಯಾರು ಪಾಪ? ಇದು ಹೀಗೇ ಮುಂದುವರೆದು, ಅರಾಜಕತೆಯಲ್ಲಿ ನಮ್ಮ ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಉತ್ತರಪ್ರದೇಶಗಳನ್ನೂ ಮೀರಿಸಲಿ ಎಂಬುದು ನಿಮ್ಮ ಉದ್ದೇಶವೇ? ಉದ್ಯಾನ ನಗರಿ ಅಧ್ವಾನ ನಗರಿಯಾಗಬೇಕೇ? ನಿಮ್ಮ ವಿಳಂಬ ನೀತಿಯಿಂದಾಗಿ ಉದ್ಯಮಿಗಳು ಇಲ್ಲಿಂದ ಬಿಡಾರ ಎತ್ತುತ್ತಿದ್ದಾರೆ. ಅವಕಾಶಗಳನ್ನು ಏಕೆ ಕೈ ಚೆಲ್ಲುತ್ತಿದ್ದೀರಿ?

ಇಷ್ಟೆಲ್ಲಾ ಸಮಸ್ಯೆಗಳ ಜೊತೆಗೆ ನಿಮಗೆ ನಿದ್ದೆಯ ಕಾಟ ಬೇರೆ! ನಮಗೆ ಒಂದು ಸಣ್ಣ ಹೊಣೆ ಹೆಗಲೇರಿದರೂ ರಾತ್ರಿ ಹೊತ್ತಿನಲ್ಲೇ ಕಣ್ತುಂಬ ನಿದ್ದೆ ಬರುವುದಿಲ್ಲ. ಹಾಗಿರುವಾಗ, ಇಡೀ ರಾಜ್ಯದ ಹೊಣೆ ಹೊತ್ತ ನೀವು ಹಾಡಹಗಲೇ ಅದು ಹೇಗೆ ಕುಳಿತಲ್ಲಿಯೇ ನಿದ್ದೆಗೆ ಜಾರಿಬಿಡುತ್ತೀರಿ? ಎಲ್ಲ ಸಭೆ ಸಮಾರಂಭಗಳಲ್ಲಿಯೂ ಪೊಗದಸ್ತು ನಿದ್ದೆ ಜೊತೆಗೆ ಜೋರು ಗೊರಕೆ! ಇದೊಂದು ರೋಗವಾದರೆ ಗುಣಪಡಿಸಿಕೊಳ್ಳಬಾರದೇ? ಒಂದೆಡೆ ಸದನದಲ್ಲಿ ಅತ್ಯಾಚರದಂಥ ಗಂಭೀರ ವಿಷಯಗಳ ಚರ್ಚೆಯಾಗುತ್ತಿದ್ದರೆ ಮತ್ತೊಂದೆಡೆ ನಿಮ್ಮ ಗಡದ್ದು ನಿದ್ದೆ! ನೀವೇ ಲಘುವಾಗಿ ತೆಗೆದುಕೊಂಡರೆ ಗೃಹ ಸಚಿವ ಜಾರ್ಜ್ ಎಷ್ಟು ಬೆಲೆ ಕೊಟ್ಟಾರು? ಮಾಧ್ಯಮಗಳು ಟಿಆರ್‍ಪಿ ಹೆಚ್ಚಿಸಿಕೊಳ್ಳಲು ಮಾಡುತ್ತಿರುವ ಪ್ರಸಾರ ಇದು ಎನ್ನದೆ ಬಿಟ್ಟಾರೆಯೇ? ವಾಸ್ತವವಾಗಿಯೂ ಟಿಆರ್‍ಪಿ ಹೆಚ್ಚುತ್ತಿದೆಯೋ ಇಲ್ಲವೋ ಗೊತ್ತಿಲ್ಲ, ನಮ್ಮ ಬಿಪಿಯಂತೂ ಏರುತ್ತಿದೆ!

ನಿಮ್ಮಲ್ಲಿ ಒಂದೇ ಒಂದು ಮನವಿ. ಕತ್ತನ್ನು ಹಾಗೇ ಸ್ವಲ್ಪ ಮೇಲೆತ್ತಿ ನಿಮ್ಮ ಕಛೇರಿಯಲ್ಲಿರುವ, ಪ್ರಧಾನಿಯವರ ಚಿತ್ರಪಟವನ್ನೊಮ್ಮೆ ನೋಡಿ. ಅದೇನು ಲವಲವಿಕೆ ಅವರಲ್ಲಿ, ಅದೇನು ಆಸಕ್ತಿ ಕೆಲಸ ಕಾರ್ಯಗಳಲ್ಲಿ! ಅವರ ಕಾರ್ಯಾಲಯದ ವೈಖರಿಯೇ ಬದಲಾಗಿ ಹೋಗಿದೆ ಈ ಕೆಲ ತಿಂಗಳುಗಳಲ್ಲಿ! ಅವರಲ್ಲಿ ನಿಮಗೆ ಎಂದಾದರೂ ಜಡತ್ವ, ತೂಕಡಿಕೆಗಳು ಕಂಡಿವೆಯೇ? ಜನರೊಂದಿಗೆ ಸ್ಪಂದಿಸುತ್ತಾ, ಸಮಸ್ಯೆಗಳನ್ನು ಚರ್ಚಿಸುತ್ತಾ ಹೊಸ ಹೊಸ ಪರಿಹಾರಗಳನ್ನು ಸೂಚಿಸುತ್ತಾ ಬೆಸೆದುಕೊಳ್ಳುವ ಪರಿ ನಿಮ್ಮಲ್ಲಿ ಅಸೂಯೆ ಮೂಡಿಸಿಲ್ಲವೇ? ಒಳ್ಳೆಯದನ್ನು ಅನುಕರಿಸಲು ಯಾರಾದರೇನು? ಅಧೋಗತಿಗಿಳಿಯುತ್ತಿರುವ ಕರ್ನಾಟಕದ ಅಭಿವೃದ್ಧಿಗೆ ನೀವೇಕೆ ಹೊಸ ಮಾದರಿ ರಚಿಸಬಾರದು?

ಮತ್ತೆ ನಂದಿತಾ ವಿಷಯಕ್ಕೆ ಬರೋಣ. ನ್ಯಾಷನಲ್ ಎಂಟರಪ್ರೈಸಸ್‍ನ ಒಡೆಯರಲ್ಲಿ ಒಬ್ಬರಾದ ಅಬ್ದುಲ್ ಕಲಾಂ ಸ್ಥಳೀಯ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. 'ನಾನು ಮತ್ತು ಕೃಷ್ಣಪ್ಪ(ನಂದಿತಾಳ ಅಪ್ಪ) ಒಟ್ಟೊಟ್ಟಿಗೇ ಆಡಿ ಬೆಳೆದವರು. ನಂದಿತಾ ಸತ್ತರೂ ಒಂದೇ ನನ್ನ ಮಗಳು ಸತ್ತರೂ ಒಂದೇ' ಎಂದು. ಇಲ್ಲ ಅಬ್ದುಲ್‍ರವರೇ, ಎರಡೂ ಬಿಲ್‍ಕುಲ್ ಬೇರೆ ಬೇರೆ. ಬೆಲೆ ಇರುವುದು ನಿಮ್ಮ ಮಗಳ ಮಾನ, ಪ್ರಾಣಕ್ಕೆ ಮಾತ್ರ. ಸತ್ತಿರುವ ನಂದಿತಾಳಿಗಲ್ಲ.

ಇನ್ನಾದರೂ ಏಳಿ ಸಿದ್ಧರಾಮಯ್ಯನವರೇ, ನಿಮ್ಮ ತಲೆಯ ತುಂಬ ಕವಿದಿರುವ ಈ ಓಲೈಕೆಯ ಮಂಪರನ್ನು ಒಮ್ಮೆ ಝಾಡಿಸಿಬಿಡಿ. ಮುಂದೆ ಇಂಥವೇ ಸಾವಿರಾರು ಉದಾಹರಣೆಗಳು ಹುಟ್ಟಲು ಅನುವು ಮಾಡಿಕೊಡಬೇಡಿ. ನಾಡಿನ ತುಂಬೆಲ್ಲಾ ನೂರಾರು 'ನಂದಿತಾ'ಗಳಿದ್ದಾರೆ. ಅವರಿಗೆ ಬೇರಾವ ಭಾಗ್ಯಗಳು ದೊರಕದಿದ್ದರೂ ಪರವಾಗಿಲ್ಲ, ಕಡೇ ಪಕ್ಷ ರಕ್ಷಣೆಯ ಭಾಗ್ಯವನ್ನು ಕರುಣಿಸಬೇಕಾದ ಹೊಣೆ ನಿಮ್ಮದೇ ಅಲ್ಲವೇ?

12 comments:

  1. you can wake him up when he is sleeping in assembly,meetings and other places. when he is deliberately closing eyes ...for such incidents...you dont have a chance sahana.

    ReplyDelete
  2. ಕೋಣನ ಮುಂದೆ ಕಿನ್ನರಿ ಬಾರಿಸಿದಹಾಗಿದೆ ಲೇಖನ. ಸಹನಾರವರೆ ' ಸಹನೆ'ಯಿಂದಿರಿ ಎನ್ನುತ್ತಾರೆ ಮಾನ್ಯ ಸಿದ್ದಿಕ್ ರೆಹಮಾನಿಯರವರು. ಅಸಮರ್ಥರನ್ನು ಸಿಂಹಾಸನದಲ್ಲಿ ಕೂಡಿಸಿ ಅವರಲ್ಲಿ ಸಮರ್ಥ ಆಡಳಿತವನ್ನು ಅಪೇಕ್ಷೆಪಡಬಹುದೇ ನೀವು. ಸಹನೆ ಯಿಂದ ಬದಲಾವಣೆಯನ್ನು ಪ್ರಯತ್ನಪೂರ್ವಕವಾಗಿ ತರಬೇಕು. ಇಂತಹ ನೈತಿಕತೆಯ ದಾರಿದ್ರ್ಯ ತುಂಬಿದ ಜನರನ್ನು ಕಿತ್ತೊಗೆಯುವ ಕಾಲಕ್ಕೆ ಸಹನೆಯಿಂದ ಕಾಯಬೇಕು

    ReplyDelete
  3. ಖೇದಕರ ಬೆಳವಣಿಗೆ.

    ReplyDelete
  4. ಸರ್ಕಾರ ತನ್ನ ಇರುವಿಕೆಯನ್ನು ಸಾಪೀತುಪಡಿಸಲಿ. ನ್ಯಾಯ ಗೆಲ್ಲಲಿ.

    ReplyDelete
  5. ’ಹೈ ವೋಲ್ಟೇಜ್’ ಪತ್ರ...... ಬೆಂಕಿಯುಂಡೆಯಂತ ಮಾತುಗಳ ಮತಾಪು ಭಯಂಕರವಾಗಿದೆ..... ಇನ್ನಾದರು ನಿದ್ದೆರಾಮಯ್ಯ ನವರ ನಿದ್ರಾಭಂಗವಾದೀತೆ ..! ಕಾದು ನೋಡೊಣ... ಅದ್ಭುತ ಲೇಖನ ಅಕ್ಕ.

    ReplyDelete
  6. niginigi kendada kshatratejada lekhanakke bogasegayya namaskaara

    ReplyDelete
  7. Kettameladroo buddhi bandillavalla kattege !

    ReplyDelete
  8. wtever v do against thm and wtevr v protest against thm, they wont change, they wont gv justice, tht s karnataka politics

    ReplyDelete
  9. ಅವರು ಉಗುಳು ಮಾರಿ ದೇವರು ಹಾಗೆ. ದಿನಾ ಉಗಿಸಿಕೋಂಡ್ರೆನೆ ಸಮಾಧಾನ ಅವರಿಗೆ

    ReplyDelete
  10. ಧನ್ಯವಾದ ಎಲ್ಲರಿಗೂ..ನಿಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಕ್ಕೆ..

    ReplyDelete